Home / ಕವನ / ಕವಿತೆ / ಒಂದು ದಿನದ ಪಯಣ

ಒಂದು ದಿನದ ಪಯಣ

ದಿನಾ ಬರುವ ಪ್ಯಾಕೆಟ್ ಹಾಲಿನ
ವ್ಯಾನ್ ಈ ದಿನ ಓಣಿಯಲ್ಲಿ ಬಂದಿಲ್ಲ
ಎದುರು ಮನೆಯ ಬಾಡಿಗೆ ಹುಡುಗರ
ದಂಡು ಆಯಾ ಮಾಡುವ ಚಹಾಕ್ಕಾಗಿ
ಕಾದು ಕುಳಿತಿದ್ದಾರೆ. ಮೂಲೆ ಮನೆಯ
ಗೇಟಿಗೆ ಒರಗಿ ನಿಂತ ಅವ್ವಯಾಕೋ
ದಿಗಿಲಾಗಿದ್ದಾಳೆ ಉರಿವ ಒಲೆಯ ಒಳಗೆ ಹಾಗೇ ಬಿಟ್ಟು.

ಪೇಪರಿನ ಹುಡುಗ ಎಂದಿನಂತೆ
ಎಲ್ಲ ಬಾಗಿಲುಗಳಿಗೂ ಸುದ್ದಿ ಒಗೆದು
ಹೋಗಿದ್ದಾನೆ, ಹೂವಿನ ಹುಡುಗಿ ಬ್ರೆಡ್
ಮಾರುವ ಹುಡುಗ ತಮ್ಮಲ್ಲಿಯೇ ಮೆಲ್ಲಗೆ
ಮಾತನಾಡುತ್ತ ಉದ್ಯೋಗದ ಬೆಳಕು ಹೊತ್ತು
ತಂದಿದ್ದಾರೆ ರೆಕ್ಕೆ ಬಿಚ್ಚಿದ ಹಕ್ಕಿಗಳು ಹಾರಾಡಿ
ತೇಲುತ್ತ ಸಾಗಿವೆ ಕರ್ಮಯೋಗಕ್ಕೆ ಊದಿನ ಕಡ್ಡಿ
ಹಚ್ಚಿ ಫಡಕುಗಳ ತೆಗೆದ ಶೆಟ್ಟಿ
ಲೆಕ್ಕ ಹಾಕುವ ದಿನಗಳ ತೆರೆದಿದ್ದಾನೆ.

ಒಂದು ದಿನದ ಪಯಣ ಸಾಗಿದ ಅವರವರ
ಲೆಕ್ಕದಲಿ ಗಂಟೆಗಳು ಭಾರಿಸುತ್ತಲಿದೆ ಮತ್ತೆ
ಹಗಲಲ್ಲೂ ಉರಿಯುತ್ತದೆ ಬೀದಿ ದೀಪಗಳು.
ಬಿಳಿಗಡ್ಡದ ಮುದುಕರು ಕೆಮ್ಮುತ್ತ ಕುಳಿತಿದ್ದಾರೆ
ಚಹಾದಂಗಡಿಯ ಕಟ್ಟೇ ಮೇಲೆ ಬಿತ್ತಿದ್ದು ಬೆಳೆಯಾಗದ
ರೀತಿಗೆ ಬೆರಗಾಗಿ ಹೌಹಾರಿ.
ಮಕ್ಕಳು ಬಿಳಿ ಅಕ್ಷರವ ಗೀಚುತ್ತಲಿವೆ ಕರಿಪಾಠಿಯಲಿ,
ಅಡುಗೆ ಮನೆಯಿಂದ ಒಗ್ಗರಣೆ ವಾಸನೆ
ಹರಿದು ಬರದ ಹೊತ್ತಿನಲಿ, ಸುಕ್ಕಾಗಿವೆ
ಮುಖದ ನೆರಿಗೆಗಳು, ಮುಕ್ಕಾಗಿವೆ ಕೈ ಬಳೆಗಳು,
ಹಾದಿಯ ಮಣ್ಣಿನಲಿ ಮೂಡಿವೆ ಎಲ್ಲರ ಪಾದದಗುರುತು.

ಸೂರ್ಯ ಹೊತ್ತು ಸಾಗಿದ್ದಾನೆ ಬೆವರ ಹನಿಗಳ
ಭತ್ತದ ಗದ್ದೆಯಲಿ ತೇಲಿವೆ ಹಸಿರು ಚಿಟ್ಟೆಗಳು
ಸೀಮೆ ಎಣ್ಣೆಗಾಗಿ ನಿಂತ ಸಾಲಿನಲ್ಲಿ ಅಲ್ಪ ವಿರಾಮವಾಗಿ
ಕುಳಿತಿದ್ದಾಳೆ ಅಜ್ಜಿ ಮೊಮ್ಮಗನೊಂದಿಗೆ
ಸುಕ್ಕಾದ ಸೀರೆ ಉಟ್ಟ ನೀರೆಯರು ಸಾಗಿದ್ದಾರೆ
ಲೋಕಲ್ ಟ್ರೇನು ಬಸ್ಸು ಹಿಡಿದು ನೌಕರಿ ಎಂಬ
ಹುತ್ತದ ಒಳಗೆ ತುಂಬ ಇರುವೆ ಕಡಿಸಿಕೊಳ್ಳಲು.
ಹೋಟೆಲ್ಲುಗಳಲ್ಲಿ ದೋಸೆಗಳು ಗುಂಡಗಾಗಿವೆ
ಭೂಮಿಯ ಚಲನೆಯ ಗತಿಯಲಿ
ತಾಯಿ ಕಂದನ ಎದೆಗವಚಿಕೊಂಡು ಆಸ್ಪತ್ರೆಯ
ಮೆಟ್ಟಿಲು ಏರುತ್ತಿದ್ದಾಳೆ, ಪಿಕ್ಚರ್ ಫ್ರೆಮ್ನ ಶಾರ್ಟ ಅಂಗಲ
ವಿಸ್ತಾರ ಹರಡುತ್ತದೆ ಕೊನೆಯಲ್ಲಿ ನೀಲ ಆಕಾಶದ ಕ್ಯಾಮರಾ
ಕಣ್ಣುಗಳು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...