Home / ಕವನ / ಕವಿತೆ / ಚಂಡಿಗೆ ಮೊರೆ

ಚಂಡಿಗೆ ಮೊರೆ

ಚಂಡಿ! ನೀ ಗುಣವಂತೆ ಬರಿದೆ ದೂರಿದನವನು,
ಮುದಿಗೂಬೆ ಹೇಳಿದುದೆ ಲೋಕಮೆಚ್ಚಿಕೆಯಾಯ್ತು
ಕಂಡ ಕಂಡವರೆಲ್ಲ ಚಂಡಿತನವೆನಲಾಯ್ತು.
ನಿನ್ನಂಥ ಸುಗುಣಿಗಳು ಈಗೆಲ್ಲಿ ದೊರೆಯುವರು !
ವಿಧಿಯ ಕಾರ್ಪಣ್ಯವಂ ಸೃಷ್ಟಿ ವೈರಸ್ಯವಂ
ಈ ಯುಗದ ಹೆಂಗಳಂ ಬಣ್ಣಿಸಲುಮಳವಲ್ಲ.
ಬಾರೆಂದೊಡಂ ಇಲ್ಲ ಹೋಗೆಂದೊಡಂ ಇಲ್ಲ
ಬೇಕೆಂದೊಡಂ ಇಲ್ಲ ಬೇಡೆಂದೊಡಂ ಇಲ್ಲ
ಕಪ್ಪಕಾಣಿಕೆಗಿಲ್ಲ ನಲ್ನುಡಿಗೆ ಮೊದಲಿಲ್ಲ
ಕೋಪತಾಪಕುಮಿಲ್ಲ ಬೇಡಿಕೆಗೆ ಮುನ್ನಿಲ್ಲ
ಏನೇನ ಪೇಳ್ದೊಡಂ ಅವರಲ್ಲಿ ನಿಷ್ಪಲಂ
ಅವರ ಕೈವಿಡಿದರ್ಗೆ ಇಹದಿ ನಾಯಕ ನರಕ.
ಜಗದ ಮೊಂಡುಗಳೆಲ್ಲ ಒಳಸಂಚು ಮಾಡಿಹರೊ
ಹಿರಿಯ ಗುರು ಬೋಧಕಳು ಆವ ದೇವತೆಯಿಹಳೊ
ಇಂತಿರಲು ಮಾತಾಯಿ ಎಂತಿಹಳೊ
ಇದ್ದಿದ್ದು ಆಕೆಗೇನಪರಾಧ ಮಾಡಿದೆವೋ !
ನಿನ್ನ ಗುಣವರಿತರಿತು ವಿಪರೀತಮಂ ನುಡಿದು
ಬಾಳಲಾರದೆ ತಾನು ಕೋಪದಿಂ ಶಾಪಮಂ
ಕೊಟ್ಟ ತಾಪಸನನುದ್ದಾಲಕನ ಬುದ್ದಿಯಂ
ದುರ್ಬುದ್ದಿಯಂ ಜರೆದು ನಿನ್ನ ಮನ್ನಿ ಸರಮ್ಮ !
ಸೂರ್ಯೋದಯಕೆ ಚನ್ನ ಕೋವಳೆಯು ನಗಲೇನೊ
ಚಂದ್ರೋದಯಕೆ ಚನ್ನ ತಾವರೆಯು ನಗಲೇನೊ
ನಿಯಮ ಪಲ್ಲಟವಾಗಿ ಬೇರೊಂದು ವಿಧಿಯಾಗಿ
ಬೆಳಗಿದೊಡೆ ಸಾಲದೇಂ ? ನೀನಿಂದು ಬಾರಮ್ಮ !
ನಿನ್ನ ಸುಗುಣದ ಸಿರಿಯ, ನಿನ್ನ ಘನತರ ವಿಧಿಯ
ಈ ಹೆಂಗಳಿಗೆ ತೋರಿ ಗುಣವಂತೆಯೆನಿಸಮ್ಮ.
ಅವರಲ್ಪ ಸಂಸಾರವಂ ದುಃಖಸಾಗರವ
ನಿನ್ನೊಲುಮೆಯಂ ಬೀರಿ ಸುಖಜಲಧಿ ಮಾಡಮ್ಮ !
ಕಣ್ಣೀರ ಕೋಡಿಗಳು ಚಿಂತಾಗ್ನಿ ನಂದಿಲ್ಲ
ಕಲಿತ ವಿದ್ಯೆಗಳಿಂದ ಅಜ್ಞಾನವಳಿದಿಲ್ಲ
ಲೋಕವಾಳಿದೊಡೇನು ಆಳಾಗಲೊಪ್ಪುವರು
ಶಾಂತಿ ದೊರೆತೊಡೆ ಸಾಕು, ಏನಾದರಾಗುವರು ;
ಆಳಲ್ಲ ಅರಸ ಏನುಮಂ ಸೈರಿಸರು
ಪತಿಯ ಬಾಳ್ಕೆಯ ಲತೆಗೆ ವಿಷವಾಗಿ ಹರಿಯುವರು
ಅವರ ಹರುಷದ ಗುಡಿಗೆ ಸಿಡಿಲಾಗಿ ಎರಗುವರು
ಈ ಹೆಂಗಳನು ಕೋಟಿ ಕೌಂಡಿನ್ಯರರಿದಪರೆ
ಬ್ರಹ್ಮಂಗೆ ರುದ್ರಂಗೆ ವಿಷ್ಣುವಿಂಗಳವಲ್ಲ !
ವಿಪರೀತೆಯಾದೊಡಂ ಗುಣವಂತೆ ನೀನಮ್ಮ
ಚಂಡಿಯೆನಿಸಿರ್ದೊಡಂ ಹದಿಬದೆಯು ನೀನಮ್ಮ
ವೇದಜಡ ಛಾಂದಸಂ ಸುಖಿಸಿದಂ ದೂರಿದಂ
ಅರೆಯಾಗಿ ಹೋಗೆಂದು ನೆವಮಿಲ್ಲದುಸುರಿದಂ
ಲೋಕ ನಿನ್ನನು ಹಳಿದು ಮರುಗುವುದು ತಾಪಸಗೆ
ಲೋಕ ಮತವನು ನಚ್ಚಿ ನಡೆಯೆಂದು ನುಡಿಯುವರು
ಎಂತು ನಚ್ಚುವುದೆಂತು ಮೆಚ್ಚುವುದು ವಿಪರೀತ
ಲೋಕಮಂ, ಎಂತು ನಡೆಯುವುದು ನಾನರಿಯೆನಮ್ಮ.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...