ಬೂಟಾಟಿಕೆ

ನಾವು ಬಡಜೀವಿಗಳು ನೀವು ಮಾತಪಸ್ವಿಗಳು
ದೃಷ್ಟವನ್ನು ತೋರಿರಯ್ಯ ;
ಕಣ್ಕಟ್ಟು ಮಾಯೆಯೋ ಸೃಷ್ಟಿ ಸಾಮರ್ಥ್ಯವೋ
ಒಂದನ್ನು ತೋರಿರಯ್ಯ.

ಹಿರಿಯ ಮರಗಳನಾಳ್ವ ಯತಿವರರು ಕೆಲರುಂಟು
ಡಂಬದಲಿ ಮೆರೆವರುಂಟು;
ಉಪವಾಸ ನಿಯಮದಲಿ ಜಗವ ಜಯಿಸುವರುಂಟು
ಒಳಬೆಳಗ ಕಾಣ್ಬರುಂಟು.

ಗುಹೆಯಲ್ಲಿ ಅಡಗಿರ್ದು ವರ್ಷಗಳ ಕಳೆದಾಯ್ತು
ಹಿರಿಯ ರಿಸಿ ಎಂಬುದಾಯ್ತು;
ದಿಕ್ಕು ದಿಕ್ಕುಗಳಿಂದ ನೋಡಹೋಗುವರಾಯ್ತು
ಜಗವೆಲ್ಲ ಕೀರ್ತಿಯಾಯ್ತು.

ಏನು ಫಲವಾಯ್ತೆಂದು ಪಾಮರರು ಕೇಳುವೆವು
ತಿಳಿವನ್ನು ನೀಡಿರಯ್ಯ;
ಜ್ಞಾನ ಭಕ್ತಿಯುಮಿಲ್ಲ, ಮೂಢ ಭಕ್ತಿಯುಮಿಲ್ಲ
ಕಳವಳಕೆ ಸಿಕ್ಕೆವಯ್ಯ,

ಕವಿಯ ಸೋಲು ಭಕ್ತಿಯಿಂ ಸಾಧಿಸಿದ ಪೊಸ ಬಗೆಯ ಶಕ್ತಿಯಿಂ
ನಂಬುಗೆಯ ನೀಡಿರಯ್ಯ;
ಯೋಗದಿಂ ಗಳಿಸಿರುವ ದಿವ್ಯತರ ಶಕ್ತಿಯಂ
ಮೆರೆದೆಮ್ಮ ಸಲಹಿರಯ್ಯ.

ಕೌಶಿಕನ ಶಸ್ತ್ರಾಸ್ತ್ರಜಾಲಮಂ ವಾಸಿಷ್ಠ
ದಂಡವದು ನುಂಗಿತೆಂದು
ಹಿಂದಾದ ದೃಷ್ಟಗಳ ನಾವೆಲ್ಲ ಕೇಳಿಹೆವು
ಇಂದೇನು ಕಾಣೆನಯ್ಯ,

ಆಕಾಶಯಾನವಂ ಸುಟ್ಟು ಬಟ್ಟಿಡಬಹುದು
ಜಹಜುಗಳನದ್ದಬಹುದು
ಘೀಳಿಡುವ ಅಶನಿಗಳ ಬಾಯಿಮುಚ್ಚಿಸಬಹುದು
ಕತ್ತಿಗಳ ಮುರಿಸಬಹುದು.

ಕಲ್ಲನ್ನು ಜನರಾಗಿ ಜನರನ್ನು ಕಲ್ಲಾಗಿ
ಮಾರ್ಪಡಿಸಿ ತೋರಬಹುದು
ಏಕ ಕಾಲದಿ ನೀವು ಹಲವು ಕಡೆ ಕಾಣುತ್ತ
ಭೀತಿಯಂ ಬೀರಬಹುದು.

ಸತ್ತವರನೆಬ್ಬಿಸಲು ಬದುಕುವರ ಸಾಯಿಸಲು
ನೋಡಿ ನಂಬುವೆವಯ್ಯ,
ಮೂಢ ಮತಿಗಳು ನಾವು,
ಬಡ ಜೀವಿಗಳು ನಾವು
ನಂಬುಗೆಯು ಸಾಲದಯ್ಯ,

ನಮ್ಮಂತೆ ನೀವಿರಲು ನಿಸ್ಸತ್ವರಾಗಿರಲು
ಸೆರೆಯಲ್ಲಿ ಕೊಳೆಯುತಿರಲು
ನ್ಯಾಯದಲಿ ಧರ್ಮದಲಿ ದೈವದಲಿ ಯೋಗದಲಿ
ನಂಬುಗೆಯು ಬಾರದಯ್ಯ.

ಶುಷ್ಕ ವೇದಾಂತಕ್ಕೆ ಮಾತಿನಾ ಜಗಳಕ್ಕೆ
ಜೀವಗಳ ತೆತ್ತರೇಕೊ ?
ಯುಗಪುರುಷರವತಾರ ಬರಿಹೊಟ್ಟೆ ನಾಡಿನಲಿ
ಅಡಿಗಡಿಗೆ ಮಾಡಲೇಕೊ?

ರಾಮಕೃಷ್ಣರು ಬೇಡ ಘೋಷ ಗೀಷರು ಬೇಡ
ಬಂದ ಫಲ ಕಂಡೆವಯ್ಯ
ಇಂದ್ರಜಾಲಿಗನೊಬ್ಬ ನಮಗಿಂದು ಬೇಕಯ್ಯ
ಅವನೆನಗೆ ದೇವರಯ್ಯ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನಗೇನು ಗೊತ್ತು?
Next post ಆಕಾಶಕೆ ಕಲ್ಲೆಸೆದು

ಸಣ್ಣ ಕತೆ

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…