ಬೂಟಾಟಿಕೆ

ನಾವು ಬಡಜೀವಿಗಳು ನೀವು ಮಾತಪಸ್ವಿಗಳು
ದೃಷ್ಟವನ್ನು ತೋರಿರಯ್ಯ ;
ಕಣ್ಕಟ್ಟು ಮಾಯೆಯೋ ಸೃಷ್ಟಿ ಸಾಮರ್ಥ್ಯವೋ
ಒಂದನ್ನು ತೋರಿರಯ್ಯ.

ಹಿರಿಯ ಮರಗಳನಾಳ್ವ ಯತಿವರರು ಕೆಲರುಂಟು
ಡಂಬದಲಿ ಮೆರೆವರುಂಟು;
ಉಪವಾಸ ನಿಯಮದಲಿ ಜಗವ ಜಯಿಸುವರುಂಟು
ಒಳಬೆಳಗ ಕಾಣ್ಬರುಂಟು.

ಗುಹೆಯಲ್ಲಿ ಅಡಗಿರ್ದು ವರ್ಷಗಳ ಕಳೆದಾಯ್ತು
ಹಿರಿಯ ರಿಸಿ ಎಂಬುದಾಯ್ತು;
ದಿಕ್ಕು ದಿಕ್ಕುಗಳಿಂದ ನೋಡಹೋಗುವರಾಯ್ತು
ಜಗವೆಲ್ಲ ಕೀರ್ತಿಯಾಯ್ತು.

ಏನು ಫಲವಾಯ್ತೆಂದು ಪಾಮರರು ಕೇಳುವೆವು
ತಿಳಿವನ್ನು ನೀಡಿರಯ್ಯ;
ಜ್ಞಾನ ಭಕ್ತಿಯುಮಿಲ್ಲ, ಮೂಢ ಭಕ್ತಿಯುಮಿಲ್ಲ
ಕಳವಳಕೆ ಸಿಕ್ಕೆವಯ್ಯ,

ಕವಿಯ ಸೋಲು ಭಕ್ತಿಯಿಂ ಸಾಧಿಸಿದ ಪೊಸ ಬಗೆಯ ಶಕ್ತಿಯಿಂ
ನಂಬುಗೆಯ ನೀಡಿರಯ್ಯ;
ಯೋಗದಿಂ ಗಳಿಸಿರುವ ದಿವ್ಯತರ ಶಕ್ತಿಯಂ
ಮೆರೆದೆಮ್ಮ ಸಲಹಿರಯ್ಯ.

ಕೌಶಿಕನ ಶಸ್ತ್ರಾಸ್ತ್ರಜಾಲಮಂ ವಾಸಿಷ್ಠ
ದಂಡವದು ನುಂಗಿತೆಂದು
ಹಿಂದಾದ ದೃಷ್ಟಗಳ ನಾವೆಲ್ಲ ಕೇಳಿಹೆವು
ಇಂದೇನು ಕಾಣೆನಯ್ಯ,

ಆಕಾಶಯಾನವಂ ಸುಟ್ಟು ಬಟ್ಟಿಡಬಹುದು
ಜಹಜುಗಳನದ್ದಬಹುದು
ಘೀಳಿಡುವ ಅಶನಿಗಳ ಬಾಯಿಮುಚ್ಚಿಸಬಹುದು
ಕತ್ತಿಗಳ ಮುರಿಸಬಹುದು.

ಕಲ್ಲನ್ನು ಜನರಾಗಿ ಜನರನ್ನು ಕಲ್ಲಾಗಿ
ಮಾರ್ಪಡಿಸಿ ತೋರಬಹುದು
ಏಕ ಕಾಲದಿ ನೀವು ಹಲವು ಕಡೆ ಕಾಣುತ್ತ
ಭೀತಿಯಂ ಬೀರಬಹುದು.

ಸತ್ತವರನೆಬ್ಬಿಸಲು ಬದುಕುವರ ಸಾಯಿಸಲು
ನೋಡಿ ನಂಬುವೆವಯ್ಯ,
ಮೂಢ ಮತಿಗಳು ನಾವು,
ಬಡ ಜೀವಿಗಳು ನಾವು
ನಂಬುಗೆಯು ಸಾಲದಯ್ಯ,

ನಮ್ಮಂತೆ ನೀವಿರಲು ನಿಸ್ಸತ್ವರಾಗಿರಲು
ಸೆರೆಯಲ್ಲಿ ಕೊಳೆಯುತಿರಲು
ನ್ಯಾಯದಲಿ ಧರ್ಮದಲಿ ದೈವದಲಿ ಯೋಗದಲಿ
ನಂಬುಗೆಯು ಬಾರದಯ್ಯ.

ಶುಷ್ಕ ವೇದಾಂತಕ್ಕೆ ಮಾತಿನಾ ಜಗಳಕ್ಕೆ
ಜೀವಗಳ ತೆತ್ತರೇಕೊ ?
ಯುಗಪುರುಷರವತಾರ ಬರಿಹೊಟ್ಟೆ ನಾಡಿನಲಿ
ಅಡಿಗಡಿಗೆ ಮಾಡಲೇಕೊ?

ರಾಮಕೃಷ್ಣರು ಬೇಡ ಘೋಷ ಗೀಷರು ಬೇಡ
ಬಂದ ಫಲ ಕಂಡೆವಯ್ಯ
ಇಂದ್ರಜಾಲಿಗನೊಬ್ಬ ನಮಗಿಂದು ಬೇಕಯ್ಯ
ಅವನೆನಗೆ ದೇವರಯ್ಯ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನಗೇನು ಗೊತ್ತು?
Next post ಆಕಾಶಕೆ ಕಲ್ಲೆಸೆದು

ಸಣ್ಣ ಕತೆ

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…