Home / ಕವನ / ಕವಿತೆ / ಬೂಟಾಟಿಕೆ

ಬೂಟಾಟಿಕೆ

ನಾವು ಬಡಜೀವಿಗಳು ನೀವು ಮಾತಪಸ್ವಿಗಳು
ದೃಷ್ಟವನ್ನು ತೋರಿರಯ್ಯ ;
ಕಣ್ಕಟ್ಟು ಮಾಯೆಯೋ ಸೃಷ್ಟಿ ಸಾಮರ್ಥ್ಯವೋ
ಒಂದನ್ನು ತೋರಿರಯ್ಯ.

ಹಿರಿಯ ಮರಗಳನಾಳ್ವ ಯತಿವರರು ಕೆಲರುಂಟು
ಡಂಬದಲಿ ಮೆರೆವರುಂಟು;
ಉಪವಾಸ ನಿಯಮದಲಿ ಜಗವ ಜಯಿಸುವರುಂಟು
ಒಳಬೆಳಗ ಕಾಣ್ಬರುಂಟು.

ಗುಹೆಯಲ್ಲಿ ಅಡಗಿರ್ದು ವರ್ಷಗಳ ಕಳೆದಾಯ್ತು
ಹಿರಿಯ ರಿಸಿ ಎಂಬುದಾಯ್ತು;
ದಿಕ್ಕು ದಿಕ್ಕುಗಳಿಂದ ನೋಡಹೋಗುವರಾಯ್ತು
ಜಗವೆಲ್ಲ ಕೀರ್ತಿಯಾಯ್ತು.

ಏನು ಫಲವಾಯ್ತೆಂದು ಪಾಮರರು ಕೇಳುವೆವು
ತಿಳಿವನ್ನು ನೀಡಿರಯ್ಯ;
ಜ್ಞಾನ ಭಕ್ತಿಯುಮಿಲ್ಲ, ಮೂಢ ಭಕ್ತಿಯುಮಿಲ್ಲ
ಕಳವಳಕೆ ಸಿಕ್ಕೆವಯ್ಯ,

ಕವಿಯ ಸೋಲು ಭಕ್ತಿಯಿಂ ಸಾಧಿಸಿದ ಪೊಸ ಬಗೆಯ ಶಕ್ತಿಯಿಂ
ನಂಬುಗೆಯ ನೀಡಿರಯ್ಯ;
ಯೋಗದಿಂ ಗಳಿಸಿರುವ ದಿವ್ಯತರ ಶಕ್ತಿಯಂ
ಮೆರೆದೆಮ್ಮ ಸಲಹಿರಯ್ಯ.

ಕೌಶಿಕನ ಶಸ್ತ್ರಾಸ್ತ್ರಜಾಲಮಂ ವಾಸಿಷ್ಠ
ದಂಡವದು ನುಂಗಿತೆಂದು
ಹಿಂದಾದ ದೃಷ್ಟಗಳ ನಾವೆಲ್ಲ ಕೇಳಿಹೆವು
ಇಂದೇನು ಕಾಣೆನಯ್ಯ,

ಆಕಾಶಯಾನವಂ ಸುಟ್ಟು ಬಟ್ಟಿಡಬಹುದು
ಜಹಜುಗಳನದ್ದಬಹುದು
ಘೀಳಿಡುವ ಅಶನಿಗಳ ಬಾಯಿಮುಚ್ಚಿಸಬಹುದು
ಕತ್ತಿಗಳ ಮುರಿಸಬಹುದು.

ಕಲ್ಲನ್ನು ಜನರಾಗಿ ಜನರನ್ನು ಕಲ್ಲಾಗಿ
ಮಾರ್ಪಡಿಸಿ ತೋರಬಹುದು
ಏಕ ಕಾಲದಿ ನೀವು ಹಲವು ಕಡೆ ಕಾಣುತ್ತ
ಭೀತಿಯಂ ಬೀರಬಹುದು.

ಸತ್ತವರನೆಬ್ಬಿಸಲು ಬದುಕುವರ ಸಾಯಿಸಲು
ನೋಡಿ ನಂಬುವೆವಯ್ಯ,
ಮೂಢ ಮತಿಗಳು ನಾವು,
ಬಡ ಜೀವಿಗಳು ನಾವು
ನಂಬುಗೆಯು ಸಾಲದಯ್ಯ,

ನಮ್ಮಂತೆ ನೀವಿರಲು ನಿಸ್ಸತ್ವರಾಗಿರಲು
ಸೆರೆಯಲ್ಲಿ ಕೊಳೆಯುತಿರಲು
ನ್ಯಾಯದಲಿ ಧರ್ಮದಲಿ ದೈವದಲಿ ಯೋಗದಲಿ
ನಂಬುಗೆಯು ಬಾರದಯ್ಯ.

ಶುಷ್ಕ ವೇದಾಂತಕ್ಕೆ ಮಾತಿನಾ ಜಗಳಕ್ಕೆ
ಜೀವಗಳ ತೆತ್ತರೇಕೊ ?
ಯುಗಪುರುಷರವತಾರ ಬರಿಹೊಟ್ಟೆ ನಾಡಿನಲಿ
ಅಡಿಗಡಿಗೆ ಮಾಡಲೇಕೊ?

ರಾಮಕೃಷ್ಣರು ಬೇಡ ಘೋಷ ಗೀಷರು ಬೇಡ
ಬಂದ ಫಲ ಕಂಡೆವಯ್ಯ
ಇಂದ್ರಜಾಲಿಗನೊಬ್ಬ ನಮಗಿಂದು ಬೇಕಯ್ಯ
ಅವನೆನಗೆ ದೇವರಯ್ಯ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...