Home / ಕವನ / ಕವಿತೆ / ಬೂಟಾಟಿಕೆ

ಬೂಟಾಟಿಕೆ

ನಾವು ಬಡಜೀವಿಗಳು ನೀವು ಮಾತಪಸ್ವಿಗಳು
ದೃಷ್ಟವನ್ನು ತೋರಿರಯ್ಯ ;
ಕಣ್ಕಟ್ಟು ಮಾಯೆಯೋ ಸೃಷ್ಟಿ ಸಾಮರ್ಥ್ಯವೋ
ಒಂದನ್ನು ತೋರಿರಯ್ಯ.

ಹಿರಿಯ ಮರಗಳನಾಳ್ವ ಯತಿವರರು ಕೆಲರುಂಟು
ಡಂಬದಲಿ ಮೆರೆವರುಂಟು;
ಉಪವಾಸ ನಿಯಮದಲಿ ಜಗವ ಜಯಿಸುವರುಂಟು
ಒಳಬೆಳಗ ಕಾಣ್ಬರುಂಟು.

ಗುಹೆಯಲ್ಲಿ ಅಡಗಿರ್ದು ವರ್ಷಗಳ ಕಳೆದಾಯ್ತು
ಹಿರಿಯ ರಿಸಿ ಎಂಬುದಾಯ್ತು;
ದಿಕ್ಕು ದಿಕ್ಕುಗಳಿಂದ ನೋಡಹೋಗುವರಾಯ್ತು
ಜಗವೆಲ್ಲ ಕೀರ್ತಿಯಾಯ್ತು.

ಏನು ಫಲವಾಯ್ತೆಂದು ಪಾಮರರು ಕೇಳುವೆವು
ತಿಳಿವನ್ನು ನೀಡಿರಯ್ಯ;
ಜ್ಞಾನ ಭಕ್ತಿಯುಮಿಲ್ಲ, ಮೂಢ ಭಕ್ತಿಯುಮಿಲ್ಲ
ಕಳವಳಕೆ ಸಿಕ್ಕೆವಯ್ಯ,

ಕವಿಯ ಸೋಲು ಭಕ್ತಿಯಿಂ ಸಾಧಿಸಿದ ಪೊಸ ಬಗೆಯ ಶಕ್ತಿಯಿಂ
ನಂಬುಗೆಯ ನೀಡಿರಯ್ಯ;
ಯೋಗದಿಂ ಗಳಿಸಿರುವ ದಿವ್ಯತರ ಶಕ್ತಿಯಂ
ಮೆರೆದೆಮ್ಮ ಸಲಹಿರಯ್ಯ.

ಕೌಶಿಕನ ಶಸ್ತ್ರಾಸ್ತ್ರಜಾಲಮಂ ವಾಸಿಷ್ಠ
ದಂಡವದು ನುಂಗಿತೆಂದು
ಹಿಂದಾದ ದೃಷ್ಟಗಳ ನಾವೆಲ್ಲ ಕೇಳಿಹೆವು
ಇಂದೇನು ಕಾಣೆನಯ್ಯ,

ಆಕಾಶಯಾನವಂ ಸುಟ್ಟು ಬಟ್ಟಿಡಬಹುದು
ಜಹಜುಗಳನದ್ದಬಹುದು
ಘೀಳಿಡುವ ಅಶನಿಗಳ ಬಾಯಿಮುಚ್ಚಿಸಬಹುದು
ಕತ್ತಿಗಳ ಮುರಿಸಬಹುದು.

ಕಲ್ಲನ್ನು ಜನರಾಗಿ ಜನರನ್ನು ಕಲ್ಲಾಗಿ
ಮಾರ್ಪಡಿಸಿ ತೋರಬಹುದು
ಏಕ ಕಾಲದಿ ನೀವು ಹಲವು ಕಡೆ ಕಾಣುತ್ತ
ಭೀತಿಯಂ ಬೀರಬಹುದು.

ಸತ್ತವರನೆಬ್ಬಿಸಲು ಬದುಕುವರ ಸಾಯಿಸಲು
ನೋಡಿ ನಂಬುವೆವಯ್ಯ,
ಮೂಢ ಮತಿಗಳು ನಾವು,
ಬಡ ಜೀವಿಗಳು ನಾವು
ನಂಬುಗೆಯು ಸಾಲದಯ್ಯ,

ನಮ್ಮಂತೆ ನೀವಿರಲು ನಿಸ್ಸತ್ವರಾಗಿರಲು
ಸೆರೆಯಲ್ಲಿ ಕೊಳೆಯುತಿರಲು
ನ್ಯಾಯದಲಿ ಧರ್ಮದಲಿ ದೈವದಲಿ ಯೋಗದಲಿ
ನಂಬುಗೆಯು ಬಾರದಯ್ಯ.

ಶುಷ್ಕ ವೇದಾಂತಕ್ಕೆ ಮಾತಿನಾ ಜಗಳಕ್ಕೆ
ಜೀವಗಳ ತೆತ್ತರೇಕೊ ?
ಯುಗಪುರುಷರವತಾರ ಬರಿಹೊಟ್ಟೆ ನಾಡಿನಲಿ
ಅಡಿಗಡಿಗೆ ಮಾಡಲೇಕೊ?

ರಾಮಕೃಷ್ಣರು ಬೇಡ ಘೋಷ ಗೀಷರು ಬೇಡ
ಬಂದ ಫಲ ಕಂಡೆವಯ್ಯ
ಇಂದ್ರಜಾಲಿಗನೊಬ್ಬ ನಮಗಿಂದು ಬೇಕಯ್ಯ
ಅವನೆನಗೆ ದೇವರಯ್ಯ
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...