Home / ಕವನ / ಕವಿತೆ / ನನಗೇನು ಗೊತ್ತು?

ನನಗೇನು ಗೊತ್ತು?

ಚಿತ್ರ: ನಾದಿನೆ ಹಡ್ಸನ್
ಚಿತ್ರ: ನಾದಿನೆ ಹಡ್ಸನ್

ನಾ ಕೇರಿಯವ!
ನನಗೇನು ಗೊತ್ತು?
ಸತ್ತ ದನವ, ಕಿತ್ತು ಕಿತ್ತು…
ನಾಯಿ, ನರಿ, ಹಂದಿ, ಹದ್ದು, ಕಾಗೆಯಂತೇ…
ತಿನ್ನುವುದು ಗೊತ್ತು!
*

ಕೊಳೆಗೇರೀಲಿ
ಹರಕು ಜೋಪಡೀಲಿ
ಚಿಂದಿ ಬಟ್ಟೇಲಿ
ಹಸಿದ ಹೊಟ್ಟೇಲಿ
ಮುರುಕು ಮುದ್ದೆ ತಿಂದು,
ಮಗಿ ನೀರು ಕುಡಿದು,
ನೆಲಕೆ ತಲೆಕೊಟ್ಟು,
ಗೊರಕೆ ಹೊಡೆವುದು ಗೊತ್ತು!!
*

ನಾ ಕೇರಿಯವ!
ಬಾಲ ಕಾರ್‍ಮಿಕನೆಂಬುದೇನು ಗೊತ್ತು?
ಅಕ್ಷರ ಕಲಿಯದೆ,
ಲೋಕಜ್ಞಾನವಿಲ್ಲದೆ,
ಸಿಕ್ಕ ಸಿಕ್ಕಲ್ಲಿ, ಹೆಬ್ಬೆಟ್ಟು ಒತ್ತುವುದು
ಹಳಸಿದ್ದು, ಸೀಕುಪಾಕು, ಮುಸುರೆ,
ಕಲುಷಿತ ನೀರು, ಕುಡಿಬಾರದೆಂದೇನು ಗೊತ್ತು?

ಭಾಗ: ಒಂದು

ಕಂಡ ಕಂಡ ದೇವ್ರಿಗೆ, ಜೆಡ್ಡು ‘ಜಾಪತ್ರೆ’ಗಳಿಗೆ
ಹರಕೆ ಹೊತ್ತು, ಮುಡಿಕಟ್ಟಿ, ‘ಮಿಸಲಾಕಿ’…
ಕುರಿ, ಕೋಣ, ಬಲಿ ಕೊಡುವುದು, ಮಾತ್ರ ಗೊತ್ತು!
ಸಾಲ ಮಾಡಿ, ಜೀತ ಮಾಡಿ,
ಕತ್ತಲ ಕೂಪದಲಿ, ಬರೀ ನೆಲದಲಿ…
ಕೋಳಿ, ನಾಯಿ, ಹಂದಿ, ನೊಣಗಳೊಂದಿಗೆ,
ಈ ಹೊಲಗೇರಿಲಿ, ಪಾಪಕೂಪದಲಿ,
ಬಿದ್ದಿರಲು ವಿಧಿಬರಹ, ದೇವರ ಶಾಪವೆಂದು,
ನಂಬಿಸಿದ್ದು ಮಾತ್ರ, ನನಗೆ ಗೊತ್ತು!
*

ಬಸವನಿಂದೆ ಬಾಲವೆಂಬಂತೇ…
ನಮ್ಮಪ್ಪ, ಅಮ್ಮ, ಅಕ್ಕ, ಅಣ್ಣರ ಹಿಂದಿಂದೆ,
ಜಂಗ್ಳುದನ ಕಾದು, ಕೈಕಟ್ಟಿ, ನಡುಬಗ್ಗಿ…
ಧಣೀಗಳ ಕಸ, ಮುಸರೆ ಎತ್ತಿ,
ಸಗಣಿ, ಗಂಜು ಹೊತ್ತು, ಕತ್ತು ನೋಯಿಸಿಕೊಂಡು,
ಜೀತ ದುಡಿದು, ತಲೆತಗ್ಗಿ…
ಆಲದ ಮರಕೆ, ಕೊರಳೊಡ್ಡುವುದು ಗೊತ್ತು!
*

ಇನ್ನು ಊರು ಕೇರಿಗರ
ಹಳೇ ಮೂಗರ್ಧ ಕಾಲ್ಮಾರಿಗಳ ಹೊಲಿದು,
ಪುಡಿಗಾಸು ಪಡೆದು,
ಅಂಬ್ಲಿ ನೀರು ಕುಡಿದದ್ದು ಗೊತ್ತು!
ಬಿಸಿಲು, ಗಾಳಿ, ಮಳೆ, ಎನ್ನದೆ,
ಹಗಲಿರುಳು ರಟ್ಟೆ ಮುರಿದು,
ನಾಲ್ಕು ‘ದಮ್ಡಿ’ ಗಳಿಸಿ,
ಈಚ್ಲು ಹೆಂಡಾ, ಭಟ್ಟಿ ಸಾರಾಯಿ ‘ಸೆಂಡಿ’
ಹಾಡುತ್ತಾ… ಪಾಡುತ್ತಾ… ಕುಣಿದು… ಕುಪ್ಪಳಿಸಿ…
ಶತ ಶತಮಾನದ ದುಕ್ಕ, ದುಮ್ಮಾನ ಮರೆವುದು ಗೊತ್ತು!

ಭಾಗ: ಎರಡು

ಹೌದೌದು! ನಾ ಕೇರಿಯವ! ತಿಳಿಗೇಡಿ ಎನಬೇಡಿ ಇನ್ನು!
ಈ ಲೋಕದ ಡೊಂಕು, ಕೊಂಕು, ನನಗೆಲ್ಲ ಗೊತ್ತು ಬಿಡಿ!!
ಅಕ್ಷರ ಕಲಿಸದೆ, ಗುಡಿ ಗೋಪುರ, ಹೊಟೆಲ್‌ಗೆ ಸೇರಿಸದೆ,
ಊರಿಂದ ದೂರಿಟ್ಟು, ಮುಖ್ಯವಾಹಿನಿಗೆ ಸೇರಿಸದೆ,
ಹೊತ್ತು ಹೊತ್ತಿಗೆ ತುತ್ತಿಕ್ಕದೆ, ಬೊಗಸೆಗೆ ನೀರಾಕಿ,
ಬರೀ ಮೈಲಿಟ್ಟು, ಗಡ್ಡ, ಮೀಸೆ, ಕೂದಲು ‘ಮಳೆವರೆ’ ಬಿಡಿಸಿ,
ಹಗಲುರಾತ್ರಿ ಕತ್ತೇ ಸಾಕ್ರೀ, ಬಿಟ್ಟಿ ವಗ್ತಾನ ಮಾಡಿಸುವುದು ನಿಮಗೆ ಗೊತ್ತು!

ಭಾಗ: ಮೂರು

ಈಗೀಗ ಅದೇಗೋ… ಅಕ್ಷರ ಕಲಿತು, ಮನುಶ್ಯರಾಗಿದ್ದೇವೆ!
ಗುಡಿ, ಗೋಪುರಕೆ ಕಾಲಿಟ್ಟಿದ್ದೇವೆ! ಆತ್ಮವಿಶ್ವಾಸ ಬೆಳೆಸಿಕೊಂಡಿದ್ದೇವೆ!!
ನಿಮ ಸಮಕುಂತು, ಊಟ, ತಿಂಡಿ, ಕಾಫಿ ಕುಡಿದು,
ತಲೆಗೂದಲು ಕತ್ತಿರಿಸಿ, ಸೂಟು, ಬೂಟು, ಹಾಕಿಕೊಂಡು,
ನಿಮ್ಮಕತ್ತಿನ ಪಟ್ಟಿ ಹಿಡಿದು, ನ್ಯಾಯ ಕೇಳಿ, ಪ್ರತಿಭಟಿಸಿ,
ದೌರ್ಜನ್ಯಕೆ, ‘ಧಿಕ್ಕಾರ’ ಕೂಗಿ, ಸಂಪು ಹೂಡಿ,
ನಮ್ಮ ಹಕ್ಕು, ಪ್ರತಿಪಾದಿಸುವುದೂ ಗೊತ್ತು!!
ಈ ಊರುಕೇರಿನ ಒಂದೂಗೂಡಿಸಿ,
ದರ್ಜಿಯಾಗಿ, ಹರಿದ ಮನಗಳ, ಹೊಲಿವುದು ಗೊತ್ತು!
ಗಾರೆಯವನಾಗಿ, ಜಾತಿ, ಮತ, ಬಿರುಕಗಳ ಮುಚ್ಚಿ,
ಬಿದ್ದ ಮನೆ, ಮನಗಳ ಕಟ್ಟುವುದೂ ಗೊತ್ತು!
ಕೃಷಿಕನಾಗಿ; ಮಾನವೀಯತೆ, ಅನುಕಂಪ ಬಿತ್ತಿ,
ದಯೆ, ದಾನ, ಧರ್‍ಮಾ, ಕರ್‍ಮಾವೆಂಬಾ ಕಾಳು ಬೆಳೆದು,
ಹಸಿರು, ಉಸಿರು, ಹೆಸರುಗಳಿಸಿ, ನಿಮ್ಮ ಉದ್ಧರಿಸುವುದೂ ಗೊತ್ತು!!
ಮಾಲೀಕನಾಗಿ; ಈ ಹೊಲ, ಮನೆ, ಆಡುವು, ಆಸ್ತಿ, ಸಂಪತ್ತನ್ನು
ಹಂಚಿ, ಸಮಾಜಿಕ ನ್ಯಾಯ, ಒದಗಿಸುವುದೂ ಗೊತ್ತು!
ಗೊತ್ತು… ಗೊತ್ತು…! ನಿಮ್ಮನ್ನು ಮನುಶ್ಯರನ್ನಾಗಿಸುವ ಕಲೆ,
ಶ್ರಮ, ನಮಗೆಲ್ಲ ಗೊತ್ತು! ಗೊತ್ತು!!… ಬೆಚ್ಚಿಬೀಳಿಸುವುದೂ ಗೊತ್ತು!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...