Home / ಕವನ / ಕವಿತೆ / ನನಗೇನು ಗೊತ್ತು?

ನನಗೇನು ಗೊತ್ತು?

ಚಿತ್ರ: ನಾದಿನೆ ಹಡ್ಸನ್
ಚಿತ್ರ: ನಾದಿನೆ ಹಡ್ಸನ್

ನಾ ಕೇರಿಯವ!
ನನಗೇನು ಗೊತ್ತು?
ಸತ್ತ ದನವ, ಕಿತ್ತು ಕಿತ್ತು…
ನಾಯಿ, ನರಿ, ಹಂದಿ, ಹದ್ದು, ಕಾಗೆಯಂತೇ…
ತಿನ್ನುವುದು ಗೊತ್ತು!
*

ಕೊಳೆಗೇರೀಲಿ
ಹರಕು ಜೋಪಡೀಲಿ
ಚಿಂದಿ ಬಟ್ಟೇಲಿ
ಹಸಿದ ಹೊಟ್ಟೇಲಿ
ಮುರುಕು ಮುದ್ದೆ ತಿಂದು,
ಮಗಿ ನೀರು ಕುಡಿದು,
ನೆಲಕೆ ತಲೆಕೊಟ್ಟು,
ಗೊರಕೆ ಹೊಡೆವುದು ಗೊತ್ತು!!
*

ನಾ ಕೇರಿಯವ!
ಬಾಲ ಕಾರ್‍ಮಿಕನೆಂಬುದೇನು ಗೊತ್ತು?
ಅಕ್ಷರ ಕಲಿಯದೆ,
ಲೋಕಜ್ಞಾನವಿಲ್ಲದೆ,
ಸಿಕ್ಕ ಸಿಕ್ಕಲ್ಲಿ, ಹೆಬ್ಬೆಟ್ಟು ಒತ್ತುವುದು
ಹಳಸಿದ್ದು, ಸೀಕುಪಾಕು, ಮುಸುರೆ,
ಕಲುಷಿತ ನೀರು, ಕುಡಿಬಾರದೆಂದೇನು ಗೊತ್ತು?

ಭಾಗ: ಒಂದು

ಕಂಡ ಕಂಡ ದೇವ್ರಿಗೆ, ಜೆಡ್ಡು ‘ಜಾಪತ್ರೆ’ಗಳಿಗೆ
ಹರಕೆ ಹೊತ್ತು, ಮುಡಿಕಟ್ಟಿ, ‘ಮಿಸಲಾಕಿ’…
ಕುರಿ, ಕೋಣ, ಬಲಿ ಕೊಡುವುದು, ಮಾತ್ರ ಗೊತ್ತು!
ಸಾಲ ಮಾಡಿ, ಜೀತ ಮಾಡಿ,
ಕತ್ತಲ ಕೂಪದಲಿ, ಬರೀ ನೆಲದಲಿ…
ಕೋಳಿ, ನಾಯಿ, ಹಂದಿ, ನೊಣಗಳೊಂದಿಗೆ,
ಈ ಹೊಲಗೇರಿಲಿ, ಪಾಪಕೂಪದಲಿ,
ಬಿದ್ದಿರಲು ವಿಧಿಬರಹ, ದೇವರ ಶಾಪವೆಂದು,
ನಂಬಿಸಿದ್ದು ಮಾತ್ರ, ನನಗೆ ಗೊತ್ತು!
*

ಬಸವನಿಂದೆ ಬಾಲವೆಂಬಂತೇ…
ನಮ್ಮಪ್ಪ, ಅಮ್ಮ, ಅಕ್ಕ, ಅಣ್ಣರ ಹಿಂದಿಂದೆ,
ಜಂಗ್ಳುದನ ಕಾದು, ಕೈಕಟ್ಟಿ, ನಡುಬಗ್ಗಿ…
ಧಣೀಗಳ ಕಸ, ಮುಸರೆ ಎತ್ತಿ,
ಸಗಣಿ, ಗಂಜು ಹೊತ್ತು, ಕತ್ತು ನೋಯಿಸಿಕೊಂಡು,
ಜೀತ ದುಡಿದು, ತಲೆತಗ್ಗಿ…
ಆಲದ ಮರಕೆ, ಕೊರಳೊಡ್ಡುವುದು ಗೊತ್ತು!
*

ಇನ್ನು ಊರು ಕೇರಿಗರ
ಹಳೇ ಮೂಗರ್ಧ ಕಾಲ್ಮಾರಿಗಳ ಹೊಲಿದು,
ಪುಡಿಗಾಸು ಪಡೆದು,
ಅಂಬ್ಲಿ ನೀರು ಕುಡಿದದ್ದು ಗೊತ್ತು!
ಬಿಸಿಲು, ಗಾಳಿ, ಮಳೆ, ಎನ್ನದೆ,
ಹಗಲಿರುಳು ರಟ್ಟೆ ಮುರಿದು,
ನಾಲ್ಕು ‘ದಮ್ಡಿ’ ಗಳಿಸಿ,
ಈಚ್ಲು ಹೆಂಡಾ, ಭಟ್ಟಿ ಸಾರಾಯಿ ‘ಸೆಂಡಿ’
ಹಾಡುತ್ತಾ… ಪಾಡುತ್ತಾ… ಕುಣಿದು… ಕುಪ್ಪಳಿಸಿ…
ಶತ ಶತಮಾನದ ದುಕ್ಕ, ದುಮ್ಮಾನ ಮರೆವುದು ಗೊತ್ತು!

ಭಾಗ: ಎರಡು

ಹೌದೌದು! ನಾ ಕೇರಿಯವ! ತಿಳಿಗೇಡಿ ಎನಬೇಡಿ ಇನ್ನು!
ಈ ಲೋಕದ ಡೊಂಕು, ಕೊಂಕು, ನನಗೆಲ್ಲ ಗೊತ್ತು ಬಿಡಿ!!
ಅಕ್ಷರ ಕಲಿಸದೆ, ಗುಡಿ ಗೋಪುರ, ಹೊಟೆಲ್‌ಗೆ ಸೇರಿಸದೆ,
ಊರಿಂದ ದೂರಿಟ್ಟು, ಮುಖ್ಯವಾಹಿನಿಗೆ ಸೇರಿಸದೆ,
ಹೊತ್ತು ಹೊತ್ತಿಗೆ ತುತ್ತಿಕ್ಕದೆ, ಬೊಗಸೆಗೆ ನೀರಾಕಿ,
ಬರೀ ಮೈಲಿಟ್ಟು, ಗಡ್ಡ, ಮೀಸೆ, ಕೂದಲು ‘ಮಳೆವರೆ’ ಬಿಡಿಸಿ,
ಹಗಲುರಾತ್ರಿ ಕತ್ತೇ ಸಾಕ್ರೀ, ಬಿಟ್ಟಿ ವಗ್ತಾನ ಮಾಡಿಸುವುದು ನಿಮಗೆ ಗೊತ್ತು!

ಭಾಗ: ಮೂರು

ಈಗೀಗ ಅದೇಗೋ… ಅಕ್ಷರ ಕಲಿತು, ಮನುಶ್ಯರಾಗಿದ್ದೇವೆ!
ಗುಡಿ, ಗೋಪುರಕೆ ಕಾಲಿಟ್ಟಿದ್ದೇವೆ! ಆತ್ಮವಿಶ್ವಾಸ ಬೆಳೆಸಿಕೊಂಡಿದ್ದೇವೆ!!
ನಿಮ ಸಮಕುಂತು, ಊಟ, ತಿಂಡಿ, ಕಾಫಿ ಕುಡಿದು,
ತಲೆಗೂದಲು ಕತ್ತಿರಿಸಿ, ಸೂಟು, ಬೂಟು, ಹಾಕಿಕೊಂಡು,
ನಿಮ್ಮಕತ್ತಿನ ಪಟ್ಟಿ ಹಿಡಿದು, ನ್ಯಾಯ ಕೇಳಿ, ಪ್ರತಿಭಟಿಸಿ,
ದೌರ್ಜನ್ಯಕೆ, ‘ಧಿಕ್ಕಾರ’ ಕೂಗಿ, ಸಂಪು ಹೂಡಿ,
ನಮ್ಮ ಹಕ್ಕು, ಪ್ರತಿಪಾದಿಸುವುದೂ ಗೊತ್ತು!!
ಈ ಊರುಕೇರಿನ ಒಂದೂಗೂಡಿಸಿ,
ದರ್ಜಿಯಾಗಿ, ಹರಿದ ಮನಗಳ, ಹೊಲಿವುದು ಗೊತ್ತು!
ಗಾರೆಯವನಾಗಿ, ಜಾತಿ, ಮತ, ಬಿರುಕಗಳ ಮುಚ್ಚಿ,
ಬಿದ್ದ ಮನೆ, ಮನಗಳ ಕಟ್ಟುವುದೂ ಗೊತ್ತು!
ಕೃಷಿಕನಾಗಿ; ಮಾನವೀಯತೆ, ಅನುಕಂಪ ಬಿತ್ತಿ,
ದಯೆ, ದಾನ, ಧರ್‍ಮಾ, ಕರ್‍ಮಾವೆಂಬಾ ಕಾಳು ಬೆಳೆದು,
ಹಸಿರು, ಉಸಿರು, ಹೆಸರುಗಳಿಸಿ, ನಿಮ್ಮ ಉದ್ಧರಿಸುವುದೂ ಗೊತ್ತು!!
ಮಾಲೀಕನಾಗಿ; ಈ ಹೊಲ, ಮನೆ, ಆಡುವು, ಆಸ್ತಿ, ಸಂಪತ್ತನ್ನು
ಹಂಚಿ, ಸಮಾಜಿಕ ನ್ಯಾಯ, ಒದಗಿಸುವುದೂ ಗೊತ್ತು!
ಗೊತ್ತು… ಗೊತ್ತು…! ನಿಮ್ಮನ್ನು ಮನುಶ್ಯರನ್ನಾಗಿಸುವ ಕಲೆ,
ಶ್ರಮ, ನಮಗೆಲ್ಲ ಗೊತ್ತು! ಗೊತ್ತು!!… ಬೆಚ್ಚಿಬೀಳಿಸುವುದೂ ಗೊತ್ತು!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...