ಏನೇ ನೋವಿರಲಿ- ಯಾವುದೆ
ಭಾಧೆಯ ಕಾವಿರಲಿ,
ನಮ್ಮ ಮನೆಯೊಂದೇ – ಇದರಲಿ
ಪ್ರೀತಿ ಆರದಿರಲಿ.
ಸ್ನೇಹ ಪ್ರೀತಿ ಎಂತೋ-ವಿರಸವು
ಕೂಡ ಸಹಜ ಅಂತೆ,
ಚಿಂತೆ ಇಲ್ಲ ಇರಲಿ-ಎಲ್ಲೂ
ಗೋಡೆ ಬಿರಿಯದಂತೆ
ಬೇಸಿಗೆ ಉರಿಬೇಗೆ-ಜಡಿಮಳೆ
ಸಿಡಿಲು ರೇಗಿ ಕೂಗೆ
ಕದವು ಅಲುಗದಿರಲಿ-ಛಾವಣಿ
ಬಿರಿದು ಸೋರದಿರಲಿ
ಇತಿಹಾಸಕು ಹಿಂದೆ-ನೆರೆಹೊರೆ
ಕಣ್ಣು ಬಿಡುವ ಮುಂದೆ
ಮೂಡಿದ ಅರಿವಿಲ್ಲಿ-ಹಾಡಿದೆ
ಮನುಜರೆಲ್ಲ ಒಂದೇ.
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.