ಸ್ವಾಗತಿಸಿದೆ ಋತುರಾಜನನು
ರಾಗನಿರತ ಲೋಕ
ಕೋಗಿಲೆಗಳ ಸವಿಗೊರಲಿನಲಿ
ರಾಗಿಣಿಯರ ನಗೆ ಹೊರಳಿನಲಿ
ತೂಗಿ ತಲೆಯೊಲೆವ ತೆನೆಯಲಿ-ಹಕ್ಕಿಯ
ಮೋದಭರಿತ ಸವಿಗಾನದಲಿ
ದೂರದ ಇನಿಯಳ ಕನವರಿಸಿ
ಮಾತು ಮಾತಿಗೂ ಪರಿತಪಿಸಿ
ಕೊರಗುವ ವಿರಹಿಯ ತಾಪದಲಿ
ಪ್ರೀತಿಗೆ ಎತ್ತಿದ ಧೂಪದಲಿ
ಬೇಸಿಗೆ ಇರುಳಿನ ಗಾಳಿಯಲಿ
ಹಾಸಿದ ತಿಂಗಳ ಬೆಳಕಿನಲಿ
ಕೂತು ಕಥೆಗೆ ಗೋಗರೆವ ಚಿಣ್ಣರನು
ತಾತ ನಲಿಯಿಸುವ ಕಥೆಗಳಲಿ
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.