Home / ಕವನ / ಕವಿತೆ / ಆನೆಗಳು ಎರಡು ವಿಧ

ಆನೆಗಳು ಎರಡು ವಿಧ

ಆನೆಗಳು ಎರಡು ವಿಧ-ಕಾಡಾನೆಗಳೆಂದು ನೀರಾನೆಗ-
ಳೆಂದು. ಆದರೆ ಆರಂಭದಲ್ಲಿ ಮಾತ್ರ ಇಂಥ ವ್ಯತ್ಯಾ-
ಸವೇ ಇರಲಿಲ್ಲ- ಎಲ್ಲ ಆನೆಗಳೂ ನೀರೊಳಗೇ
ಇದ್ದುವು. ಜಲಾಂತರ್ಗಾಮಿಗಳಾಗಿ ತಿರುಗಾಡುತಿದ್ದುವು
ದೊಡ್ಡ ತೆರೆಗಳನೆಬ್ಬಿಸುತ್ತ ಈಜಾಡಿಕೊಂಡಿದ್ದುವು
ಪ್ರೀತಿ ಜಗಳ ಹೋರಾಟ ಜನನ ಮರಣ ಎಲ್ಲವೂ ಅಲ್ಲಿಯೇ
ಆಗ ಕೆಲವಾನೆಗಳೆಂದುವು-ಛೇ ಇದೆಂಥ ಬಾಳು!
ಕೇವಲ ಮೀನು ಕಪ್ಪೆಗಳಂತೆ ನಾವು ಯಾವಾಗಲೂ
ನೀರೊಳಗೆ ಅಡಗುವುದೇ ?! ಇಷ್ಟು ಭಾರೀ ದೇಹವನು
ಹೊತ್ತಿದ್ದು ಮಳೆಗೆ ನೆರೆಗೆ ಝಂಝಾವಾತಕ್ಕೆ
ಗುರಿಯಾಗಿ! ಆನೆಯ ವಂಶದವರೇ! ದಂಡೆಯೇರಲು
ಧೈರ್ಯವಿದ್ದವರೆಲ್ಲ ಬನ್ನಿ ಮುಂದೆ! ಅದೋ ಬಯಲು
ಅದೋ ಅರಣ್ಯ! ಅದೋ ಘಟ್ಟ! ಅದೋ ಅದೋ
ಪರ್ವತದ ಶಿಖರಗಳು!

ದೊಡ್ಡಾನೆ ಸಣ್ಣಾನೆ ಮರಿಯಾನೆಗಳೆಂದು ಅನೇಕ
ಆನೆಗಳು ತಾ ಮುಂದೆ ತಾ ಮುಂದೆ ಎನ್ನುತ್ತ
ಹತ್ತಿದುವು ದಂಡೆ ಹಾದುವು ಬಯಲು ಹೊಕ್ಕವು ಅರಣ್ಯ
ಏರಿದುವು ಘಟ್ಟ ಅಲೆದುವು ಪರ್ವತದ ಶಿಖರಗಳ
ಮೊದಮೊದಲು ತುಸು ಕಷ್ಟವೇ ಆಯಿತು ಅವಕ್ಕೆ
ಉಸಿರುಗಟ್ಟಿದಂತಾಯಿತು ದೇಹ ತೂಗಿ ತೊನೆ-
ದಂತಾಯಿತು ಎಲ್ಲ ಕೇವಲ ಕೆಲವೇ ವರ್ಷಗಳು
ಕ್ರಮೇಣ ಕಿವಿಗಳು ಗೆರಸೆಗಳಾದುವು ಪಾದಗಳು
ಗೊರಸೆಯಾದುವು ಎಲ್ಲಕ್ಕಿಂತ ಮುಖ್ಯ ಮೂಗು
ಮಹಾಸೊಂಡಿಲಾಯಿತು ಹಲ್ಲುಗಳು ಉಕ್ಕಿನ ಖಡ್ಗ –
ದಂತಾದುವು ಇಂಥ ಕಾಡಾನೆಗಳಿಗೆ ಮೃಗರಾಜನೆಂಬ
ಬಿರುದೂ ಬಂತು. ಅವು ಘೊಳ್ಳನೆ ಘೀಳಿಟ್ಟು
ನೀರಾನೆಗಳನ್ನು ಹಂಗಿಸಿದುವು. ನೀರಾನೆಗಳು ಪಾಪ!
ಹುಟ್ಟಾ ಆಲಸಿಗಳು ಇದ್ದಲ್ಲಿ ಇರುವಂಥ ಧಡ್ಡರು
ಯಾವ ಸಾಹಸವನ್ನೂ ಕೈಗೊಳ್ಳದ ದಪ್ಟಚರ್ಮದ
ಮೈಗಳ್ಳರು.

ಕಾಡಾನೆಗಳು ತಾನೆ ಎಷ್ಟು ಕಾಲ ಸ್ವೇಚ್ಛೆಯಿಂದ
ಇದ್ದಾವು? ಅವು ಖೆಡ್ಡಾದಲ್ಲಿ ಬಿದ್ದುವು. ಮನುಷ್ಯರ
ಕೈಯಲ್ಲಿ ಸಿಕ್ಕಿದುವು. ಮಾವುತರೆಂಬ ಜನರಿಂದ
ಅಂಕುಶದ ತಿವಿತ ಅನುಭವಿಸುತ್ತ ಭಾರವಾದ
ವಸ್ತುಗಳನ್ನು ಎಳೆಯತೊಡಗಿದುವು. ಜಾತ್ರೆಯಲ್ಲಿ
ದೇವರನ್ನು ಹೊರತೊಡಗಿದುವು ಈಗೀಗ ಅವು
ಸರ್ಕಸ್ಸಿನಲ್ಲಿ ಎಗರಾಡುತ್ತವೆ ಪಾರ್ಕುಗಳಲ್ಲಿ ಮಕ್ಕಳಿಗೆ
ಅಶ್ಚರ್ಯದ ಪ್ರಾಣಿಗಳಾಗಿ ನಿಲ್ಲುತ್ತವೆ-ಇತ್ತ ನೀರಾನೆಗಳು
ಜೀವವಿಕಾಸವನ್ನೆ ಧಿಕ್ಕರಿಸಿವೆಯೊ ಮರೆತಿವೆಯೊ
ಜಲದೊಳಗಿನ ನಾದಜಗತ್ತಿನಲ್ಲಿ ಮೈಮಮರೆತಿವೆಯೊ
ಹೇಳುವುದು ಹೇಗೆ ? ಅವುಗಳ ನಡುವೆ ಈಚೆಗೆ
ಮುಂದಾಳುಗಳು ಯಾರೂ ಬಂದಿಲ್ಲ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...