ಗಣ್ಯರು ಯಾರು ?

ಪ್ರಿಯ ಸಖಿ,
ಅವರ ಕಾರು ಭರ್ರನೆ ಓಡುತ್ತಿದೆ. ರಸ್ತೆ ಮಧ್ಯದಲ್ಲಿ ಸೌದೆ ಹೊರೆ ಕಟ್ಟು ಬಿಚ್ಚಿಕೊಂಡು ಚೆಲ್ಲಾಪಿಲ್ಲಿಯಾಗಿಬಿಟ್ಟಿದೆ. ಇದನ್ನು ಕಂಡ ಅವರು ಗಕ್ಕನೆ ನಿಲ್ಲಿಸುತ್ತಾರೆ. ಕಾರಿನಿಂದಿಳಿದ ಅವರು ಆ ಮುದುಕನಿಗೆ ಸೌದೆಯನ್ನು ಆಯ್ದು ಹೊರೆ ಕಟ್ಟಲು ಸಹಾಯ ಮಾಡುತ್ತಾರೆ. ಆ ಹೊರೆಯನ್ನು ತಮ್ಮ ಡಿಕ್ಕಿಯಲ್ಲಿರಿಸಿ ಆ ಮುದುಕನನ್ನು ಅವನು ಬೇಡವೆನ್ನುತ್ತಿದ್ದರೂ ಕೇಳದೆ ಕಾರಿನಲ್ಲಿ ಕೂರಿಸಿಕೊಂಡು ಅವನ ಗಮ್ಯವನ್ನು ತಲುಪಿಸಿ ಅವರು ತಮ್ಮ ಕೆಲಸಕ್ಕೆ ಹೋಗುತ್ತಾರೆ.

ಅವರು ಆ ಊರಿನ ಅತ್ಯಂತ ಗಣ್ಯವ್ಯಕ್ತಿ ಸರ್ಕಾರದಲ್ಲಿ ಮಂತ್ರಿ ಪದವಿಯನ್ನು ನಿರ್ವಹಿಸುತ್ತಿರುವವರು. ಆದರೆ ಅವರಿಗೆ ಅದರ ಬಗ್ಗೆ ಯಾವುದೇ ಅಹಂಕಾರ, ಗರ್ವಗಳಿಲ್ಲ. ಸಭೆಯಿರಲಿ, ಸಮಾರಂಭವಿರಲಿ, ಮನೆಯಲ್ಲಾಗಲಿ ಅತ್ಯಂತ ಸಾಮಾನ್ಯ ಮನುಷ್ಯನಂತೆ ಅವರ ವೇಷಭೂಷಣ ಹಾಗೇ ಅವರ ಅವಶ್ಯಕತೆಗಳೂ ತೀರ ಅಲ್ಪವಾದವು. ಸರ್ಕಾರದಿಂದ ಮಂತ್ರಿಯೊಬ್ಬನಿಗೆ ದೊರೆಯುವ ಎಲ್ಲ ಸವಲತ್ತುಗಳನ್ನು ನಿರಾಕರಿಸಿದ್ದಾರೆ. ಜೊತೆಗೆ ದೀನದಲಿತರಿಗೆ ತಮ್ಮಿಂದಾಗುವ ಎಲ್ಲಾ ಸಹಾಯ, ಸಹಕಾರಗಳನ್ನು ಮಾಡುತ್ತಾ ಬಂದಿದ್ದಾರೆ. ತನ್ನದೆನ್ನುವ ಪ್ರತಿ ಪೈಸೆಯಲ್ಲಿಯೂ ಸಮಾಜದ ಋಣವಿದೆ ಎಂದು ನಂಬಿದವರಿವರು. ಊರಿನಿಂದ ಪೇಟೆಗೆ ಒಬ್ಬರೇ ಕಾರಿನಲ್ಲಿ ಹೊರಟರೂ ದಾರಿಯಲ್ಲಿ ಪೇಟೆಗೆ ಹೋಗಲು ಸಿಕ್ಕವರನ್ನೆಲ್ಲಾ ಕಾರಿನಲ್ಲಿ ತುಂಬಿಸಿಕೊಂಡು  ಪೇಟೆ ತಲುಪಿಸಿದರೇ ಇವರಿಗೆ ಸಮಾಧಾನ.

ಸಖಿ, ಇದ್ಯಾವುದೋ ಕನಸೋ, ಕಲ್ಪನೆಯ ಬಗ್ಗೆಯೋ ನಾನು ಹೇಳುತ್ತಿದ್ದೇನೆ ಎಂದು ನೀನು ಅಂದುಕೊಂಡಿದ್ದರೆ ಅದು ತಪ್ಪು. ಇಂತಹ ಸರಳ ಮಾನವೀಯ ವ್ಯಕ್ತಿ ನಿಜವಾಗಿಯೂ ಇದ್ದಾರೆ. ತನ್ನ ಸ್ಥಾನದ ಬಗ್ಗೆ ಗರ್ವ ಪಡದೇ ಊರಿನ ಎಲ್ಲರಿಗೂ ಬೇಕಾಗಿರುವ ಎಲ್ಲರ ಕಷ್ಟ ನೋವುಗಳಿಗೆ ಸ್ಪಂದಿಸುವ ಈ ವ್ಯಕ್ತಿ ತನ್ನ ಅಧಿಕಾರ, ಅಂತಸ್ತು, ವಿದ್ಯೆ ಸ್ಥಾನಮಾನದಿಂದಲ್ಲ. ಗಣ್ಯರಾಗಿರುವುದು, ತಮ್ಮ ಮಾನವೀಯ ಸ್ಪಂದನೆಗಳಿಂದ.

ಒಬ್ಬ ವ್ಯಕ್ತಿ ಗಣ್ಯನೆನಿಸಿಕೊಳ್ಳಲು ಅವನಿಗೆ ಹಿರಿದಾದ ಅಧಿಕಾರ, ಸ್ಥಾನ ಅಂತಸ್ತು, ಅಪರಿಮಿತ ವಿದ್ಯೆ, ಹಿರಿಯ ವಯಸ್ಸು ಇತ್ಯಾದಿಗಳನ್ನು ನಾವು ಮಾನದಂಡವಾಗಿ ಬಳಸುತ್ತೇವೆ. ಆದರೆ ಇವೆಲ್ಲಾ ಇದ್ದೂ ಅವನಿಗೆ ಇತರ ವ್ಯಕ್ತಿಗಳ ದುಃಖ, ನೋವುಗಳ ಬಗೆಗೆ ಸ್ಪಂದನೆಯಿಲ್ಲದಿದ್ದರೆ ಅವನು ಗಣ್ಯ ಅಥವಾ ಹಿರಿಯ ಹೇಗಾಗುತ್ತಾನೆ ? ತನ್ನ ಸ್ಥಾನ, ಅಂತಸ್ತು, ವಿದ್ಯೆ ವಯಸ್ಸುಗಳಿಗೆ ಇತರರು ಗೌರವಕೊಡಬೇಕೆಂದು ಬಯಸುವ ವ್ಯಕ್ತಿ ಅವುಗಳನ್ನು ಹೊಂದಿರುವುದರ ಬಗೆಗೆ ಗರ್ವಪಡದೇ ತನ್ನ ಸುತ್ತಲಿನವರ ನೋವು, ದುಃಖಗಳಿಗೆ ಸ್ಪಂದಿಸಿದಾಗ ಸಮಾಜದಲ್ಲಿ ಗೌರವವನ್ನು ಪಡೆಯುತ್ತಾನೆ. ಹಿರಿಯನೆನಿಸುತ್ತಾನೆ, ಗಣ್ಯನಾಗುತ್ತಾನೆ ಅಲ್ಲವೇ ಸಖಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತುಂಟ
Next post ನಿನ್ನೊಳಗನಿಣುಕಿದವರೆಷ್ಟು ಮಂದಿ

ಸಣ್ಣ ಕತೆ

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

cheap jordans|wholesale air max|wholesale jordans|wholesale jewelry|wholesale jerseys