Home / ಲೇಖನ / ಇತರೆ / ಗಣ್ಯರು ಯಾರು ?

ಗಣ್ಯರು ಯಾರು ?

ಪ್ರಿಯ ಸಖಿ,
ಅವರ ಕಾರು ಭರ್ರನೆ ಓಡುತ್ತಿದೆ. ರಸ್ತೆ ಮಧ್ಯದಲ್ಲಿ ಸೌದೆ ಹೊರೆ ಕಟ್ಟು ಬಿಚ್ಚಿಕೊಂಡು ಚೆಲ್ಲಾಪಿಲ್ಲಿಯಾಗಿಬಿಟ್ಟಿದೆ. ಇದನ್ನು ಕಂಡ ಅವರು ಗಕ್ಕನೆ ನಿಲ್ಲಿಸುತ್ತಾರೆ. ಕಾರಿನಿಂದಿಳಿದ ಅವರು ಆ ಮುದುಕನಿಗೆ ಸೌದೆಯನ್ನು ಆಯ್ದು ಹೊರೆ ಕಟ್ಟಲು ಸಹಾಯ ಮಾಡುತ್ತಾರೆ. ಆ ಹೊರೆಯನ್ನು ತಮ್ಮ ಡಿಕ್ಕಿಯಲ್ಲಿರಿಸಿ ಆ ಮುದುಕನನ್ನು ಅವನು ಬೇಡವೆನ್ನುತ್ತಿದ್ದರೂ ಕೇಳದೆ ಕಾರಿನಲ್ಲಿ ಕೂರಿಸಿಕೊಂಡು ಅವನ ಗಮ್ಯವನ್ನು ತಲುಪಿಸಿ ಅವರು ತಮ್ಮ ಕೆಲಸಕ್ಕೆ ಹೋಗುತ್ತಾರೆ.

ಅವರು ಆ ಊರಿನ ಅತ್ಯಂತ ಗಣ್ಯವ್ಯಕ್ತಿ ಸರ್ಕಾರದಲ್ಲಿ ಮಂತ್ರಿ ಪದವಿಯನ್ನು ನಿರ್ವಹಿಸುತ್ತಿರುವವರು. ಆದರೆ ಅವರಿಗೆ ಅದರ ಬಗ್ಗೆ ಯಾವುದೇ ಅಹಂಕಾರ, ಗರ್ವಗಳಿಲ್ಲ. ಸಭೆಯಿರಲಿ, ಸಮಾರಂಭವಿರಲಿ, ಮನೆಯಲ್ಲಾಗಲಿ ಅತ್ಯಂತ ಸಾಮಾನ್ಯ ಮನುಷ್ಯನಂತೆ ಅವರ ವೇಷಭೂಷಣ ಹಾಗೇ ಅವರ ಅವಶ್ಯಕತೆಗಳೂ ತೀರ ಅಲ್ಪವಾದವು. ಸರ್ಕಾರದಿಂದ ಮಂತ್ರಿಯೊಬ್ಬನಿಗೆ ದೊರೆಯುವ ಎಲ್ಲ ಸವಲತ್ತುಗಳನ್ನು ನಿರಾಕರಿಸಿದ್ದಾರೆ. ಜೊತೆಗೆ ದೀನದಲಿತರಿಗೆ ತಮ್ಮಿಂದಾಗುವ ಎಲ್ಲಾ ಸಹಾಯ, ಸಹಕಾರಗಳನ್ನು ಮಾಡುತ್ತಾ ಬಂದಿದ್ದಾರೆ. ತನ್ನದೆನ್ನುವ ಪ್ರತಿ ಪೈಸೆಯಲ್ಲಿಯೂ ಸಮಾಜದ ಋಣವಿದೆ ಎಂದು ನಂಬಿದವರಿವರು. ಊರಿನಿಂದ ಪೇಟೆಗೆ ಒಬ್ಬರೇ ಕಾರಿನಲ್ಲಿ ಹೊರಟರೂ ದಾರಿಯಲ್ಲಿ ಪೇಟೆಗೆ ಹೋಗಲು ಸಿಕ್ಕವರನ್ನೆಲ್ಲಾ ಕಾರಿನಲ್ಲಿ ತುಂಬಿಸಿಕೊಂಡು  ಪೇಟೆ ತಲುಪಿಸಿದರೇ ಇವರಿಗೆ ಸಮಾಧಾನ.

ಸಖಿ, ಇದ್ಯಾವುದೋ ಕನಸೋ, ಕಲ್ಪನೆಯ ಬಗ್ಗೆಯೋ ನಾನು ಹೇಳುತ್ತಿದ್ದೇನೆ ಎಂದು ನೀನು ಅಂದುಕೊಂಡಿದ್ದರೆ ಅದು ತಪ್ಪು. ಇಂತಹ ಸರಳ ಮಾನವೀಯ ವ್ಯಕ್ತಿ ನಿಜವಾಗಿಯೂ ಇದ್ದಾರೆ. ತನ್ನ ಸ್ಥಾನದ ಬಗ್ಗೆ ಗರ್ವ ಪಡದೇ ಊರಿನ ಎಲ್ಲರಿಗೂ ಬೇಕಾಗಿರುವ ಎಲ್ಲರ ಕಷ್ಟ ನೋವುಗಳಿಗೆ ಸ್ಪಂದಿಸುವ ಈ ವ್ಯಕ್ತಿ ತನ್ನ ಅಧಿಕಾರ, ಅಂತಸ್ತು, ವಿದ್ಯೆ ಸ್ಥಾನಮಾನದಿಂದಲ್ಲ. ಗಣ್ಯರಾಗಿರುವುದು, ತಮ್ಮ ಮಾನವೀಯ ಸ್ಪಂದನೆಗಳಿಂದ.

ಒಬ್ಬ ವ್ಯಕ್ತಿ ಗಣ್ಯನೆನಿಸಿಕೊಳ್ಳಲು ಅವನಿಗೆ ಹಿರಿದಾದ ಅಧಿಕಾರ, ಸ್ಥಾನ ಅಂತಸ್ತು, ಅಪರಿಮಿತ ವಿದ್ಯೆ, ಹಿರಿಯ ವಯಸ್ಸು ಇತ್ಯಾದಿಗಳನ್ನು ನಾವು ಮಾನದಂಡವಾಗಿ ಬಳಸುತ್ತೇವೆ. ಆದರೆ ಇವೆಲ್ಲಾ ಇದ್ದೂ ಅವನಿಗೆ ಇತರ ವ್ಯಕ್ತಿಗಳ ದುಃಖ, ನೋವುಗಳ ಬಗೆಗೆ ಸ್ಪಂದನೆಯಿಲ್ಲದಿದ್ದರೆ ಅವನು ಗಣ್ಯ ಅಥವಾ ಹಿರಿಯ ಹೇಗಾಗುತ್ತಾನೆ ? ತನ್ನ ಸ್ಥಾನ, ಅಂತಸ್ತು, ವಿದ್ಯೆ ವಯಸ್ಸುಗಳಿಗೆ ಇತರರು ಗೌರವಕೊಡಬೇಕೆಂದು ಬಯಸುವ ವ್ಯಕ್ತಿ ಅವುಗಳನ್ನು ಹೊಂದಿರುವುದರ ಬಗೆಗೆ ಗರ್ವಪಡದೇ ತನ್ನ ಸುತ್ತಲಿನವರ ನೋವು, ದುಃಖಗಳಿಗೆ ಸ್ಪಂದಿಸಿದಾಗ ಸಮಾಜದಲ್ಲಿ ಗೌರವವನ್ನು ಪಡೆಯುತ್ತಾನೆ. ಹಿರಿಯನೆನಿಸುತ್ತಾನೆ, ಗಣ್ಯನಾಗುತ್ತಾನೆ ಅಲ್ಲವೇ ಸಖಿ?
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...