Home / ಕವನ / ಕವಿತೆ / ನಿವೇದನೆ

ನಿವೇದನೆ

ಕಾರುಣ್ಯದಾ ಬೆಳಕೆ ಬಾ ಬೇಗ ಬಾ
ನನ್ನೆದೆಯ ಬಾಂದಳವ ಬೆಳಗಿಸಲು ಬಾ
ನಿನ್ನಲ್ಲಿ ಆನಿಂದು ಬೇಡಿಕೊಳ್ಳುವೆ ನಿನ್ನು
ಕೃಪೆಯಿಟ್ಟು ಆಲಿಸೆನ್ನೀ ಮೊರೆಯನ್ನು

ಮುಗಿಲಗಲ ಜಗಕೆಲ್ಲ
ರಸವೃಷ್ಟಿ ಸುರಿಸು,
ರವಿ ಶಶಿ ತಾರಾಹೊಳಪನ್ನು
ನಮ್ಮ ಕಣ್ಣುಗಳೊಳಗಿರಿಸು,

ಮೇದಿನಿಯ ಕಣ ಕಣದಲ್ಲೂ
ಫಲ ಫಲದೆನೆಯ ನಿರಿಸು,
ಜೀವ, ಜೀವ ಸಂಕುಲಕೆಲ್ಲ
ಉಲ್ಲಸದ ನೆಮ್ಮದಿಯ ಹರಸು,

ನದಿ ನದದ ಜುಳ ಜುಳದ
ಸಿರಿ ಬತ್ತದಂತಿರಿಸು,
ಅಂಬುಧಿಯ ಸಡಗರವ
ಜೀವಿತದಿ ಬೆರೆಸು,

ಪ್ರಾಣ ವಾಯುವಿನಲೆಯಲ್ಲಿ
ಸಂಜೀವಿನಿಯನಿರಿಸು
ಸುಮಸುಮದ ನಂದನದ
ಚೆಲ್ವ ಬಾಳ್ವೆಯಲಿ ಬೆರೆಸು

ಹಾರೋಹಕ್ಕಿಯ ಪಂಜರದ
ಪಾರತಂತ್ರ್‍ಯ ಧಿಕ್ಕರಿಸು
ಜಗದ ಜನಮನಕೆಲ್ಲ ಮುದದ
ಸ್ವಾತಂತ್ರ್‍ಯ ಕೊಡಿಸು

ಕ್ರೂರ ಕ್ರೌರ್ಯ ಮೃಗದ ರಣ
ದ್ವೇಷವನು ದಹಿಸು,
ಪ್ರೀತಿ ವಾತ್ಸಲ್ಯ ನೇಹ ಸಗ್ಗವನು
ಬಿತ್ತಿ ಬೆಳೆಸುತಾ ಬೆಸೆಸು.

ದುರಾಸೆಯಾಸೆಗಳಗ್ಗಳದ
ಕುತಂತ್ರವನೆ ಕೆಡಿಸು,
ಶ್ರಮದ ಅನ್ನವ ಸಮದಿ
ಉಣ್ಣುವುದ ತಿಳಿಸು.

ಶಸ್ತ್ರ ಶಾಸ್ತ್ರದ ಭಯದ
ಭೀತಿಯನು ಬಿಡಿಸು,
ವರ್ಣ ವರ್ಣದ ವರ್ಗ
ಕ್ಷುದ್ರತೆಯ ನಳಿಸು

ರಂಗು ರಂಗಿನರಂಗು
ಬೆಳ್ಮುಗಿಲ ರಂಗಿನ ಸೊಗಸು
ಭಿನ್ನ ಭಿನ್ನದ ಜನದ
ದೇಹ-ಗೇಹ ಒಂದೆಂದು ತಿಳಿಸು

ಆ ಧರ್ಮ ಈ ಧರ್ಮ ಕರ್ಮ
ಮೌಢ್ಯ ನಿಯತಿಗಳನಳಿಸು
ಈ ವಿಶ್ವ ವೀದೇಶ ನಾಡು ನುಡಿ
ನಿಜ ಧರ್ಮ ಸಾರ ತಿಳಿಸು

ಮತ ಪಥದ ಕುಲ ಕುಲದ
ಹುಚ್ಚು ಸಹವಾಸ ಬಿಡಿಸು
ಮಾನವತೆಯರಿವರಿವು
ನೆಚ್ಚಿ ಬದುಕಲೋಲೈಸು

ಗುಡಿ ಚರ್ಚು ಮಸೀದಿ ಬಸದಿಗಳ
ಕಟ್ಟುವುದ ಬಿಡಿಸು
ನಮ್ಮ ನಿಮ್ಮಯ ನಿಜ ತಿಳಿವು
ದೇವರಿರವೆಂದು ಕಲಿಸು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...