Home / ಕವನ / ಕವಿತೆ / ಕ್ಷಿತಿಜದೆಡೆಗೆ

ಕ್ಷಿತಿಜದೆಡೆಗೆ

ಮುಗಿದುಹೋಯ್ತು ಬಂದ ಕೆಲಸ
ಇನ್ನು ಹೊರಡಬೇಕು
ದಿಗಂತದೆಡೆಗೆ ಪಯಣ
ಮುಗಿದು ಹೋದ
ಬಾಳಿಗರ್ಥ ಹುಡುಕಿ
ವ್ಯರ್ಥವಾದ ಮೇಲೆ
ಹೋಗಿ ಸೇರುವ ಕಡಲ ತಡಿಯ

ಕ್ಷಿತಿಜದಂಚಿನ ಬೆಳ್ಳಿ ರೇಖೆಯ
ಮೇಲೆ ಬಾನಿರಬಹುದು ಶೂನ್ಯ
ಶೂನ್ಯ ಶೂನ್ಯವ ಮೀರಿ ನಿಲ್ಲುವ
ಕೆಚ್ಚೆದೆ ಬಂದಿದೆ,
ಬೆಚ್ಚದೇ ನಡೆಯಬೇಕೀಗ

ಕಳೆದು ಹೋಗಿಹ
ಅನಂತ ಸಂಬಂಧಗಳ ಮೇಲೆ
ಎಳೆಯಬೇಕೀಗ ಕಲ್ಲಿನಾಗೋಡೆ
ನೆನೆವೂ ಬರದಂತೆ
ಅನುಭವವೂ ಇರದಂತೆ
ಕಪ್ಪಾಗಬೇಕು ಎಲ್ಲಾ ಹಿಂದಿನ ಚಿತ್ರ!

ಹೊರಟಿಹ ಕಾರ್ಯ ಹಿರಿದೇನಲ್ಲಾ
ಆದರೆ ಮಾಡಲಿರುವುದೆಲ್ಲಾ ದೊಡ್ಡದೇ
ಬಾನಿನಾಚೆಯಲಿ ಬೆಳಕಿದೆಯೋ?
ಕತ್ತಲಿದೆಯೋ?
ಬರಿಯ ಬೆತ್ತಲಿದೆಯೋ? ನಮಗೆ ತಿಳಿದಿಲ್ಲ.

ಹೊರಟಿರುವೆವು ನಿರಾಶ್ರಿತರಾಗಿ
ಭುವಿಯಿಂದ ಕ್ಷಿತಿಜದೆಡೆಗೆ
ನಾವಾರೂ ಸ್ವಾರ್ಥಿಗಳಲ್ಲ
ಕ್ಷಿತಿಜ ನಮ್ಮದೂ ಅಲ್ಲ
ಬೇರಾರದೂ ಆಗಿರಲಿಲ್ಲ!

ತಲುಪಬೇಕಿರುವ ಗುರಿ ಒಂದೇ ಈಗ
ತಲುಪುವುದೂ ಮುಖ್ಯವಲ್ಲ
ದಾರಿ ಸಾಗುವುದೇ ಮುಂದೆ?
ಎಂಬುದೇ ಮೊದಲ ಪ್ರಶ್ನೆ-

ಹೆಚ್ಚಾಗೇ ಇರಲಿ ಎಂದು
ಬುತ್ತಿ ತಂದಿದ್ದೇವೆ ಜಾಸ್ತಿಯೇ
ಅದು ಮುಗಿದು ಹೋಗುವ ಮುನ್ನ
ಸೇರಬೇಕು ದಿಗಂತವನ್ನ
ಆಸೆ ಹಿರಿದೇನಲ್ಲಾ
ಆದರೆ ಗುರಿ ಮಾತ್ರ ಹಿರಿದೇ
ಸಾಗುತಿರುವೆವು ನಾವು ಕ್ಷಿತಿಜದೆಡೆಗೆ
ನಿರಂತರ ಯಾತ್ರಿಕರು ನಾವು
ಗುರಿ ಸೇರಬಲ್ಲೆವೇ?
ಇಲ್ಲ ನಮ್ಮ ಗುರಿಯೇ ಮರೀಚಿಕೆಯೇ?
ಎಂಬುದೇ ಉಳಿದ ಪ್ರಶ್ನೆ ಈಗ!
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...