Home / ಕವನ / ಕವಿತೆ / ಕನ್ನಡದ ಏಳಿಗೆ

ಕನ್ನಡದ ಏಳಿಗೆ

ಕನ್ನಡದ ತಿಳಿನೀರ ನಾನೊಂದು ಬೊಗಸೆಯಲಿ
ಕುಡಿದು ನೋಡಿದೆನದರ ಸವಿಯನ್ನು ನಾನೊ;
ಕುಡಿಕುಡಿದು ಮುದವಾಂತು ನಲ್ಗಬ್ಬ ಸಾರವನು
ಬಾಯ್ದುದಿಯೊಳನವರತ ಇರಿಸಲೆಳಸಿದೆನೊ!

ಎಷ್ಟು ತತ್ವದ ಗೀತ?  ಎಷ್ಟು ಮೋಹದ ಮಾತು?
ವಚನರಾಶಿಯ ಸಾರ, ಪುರಾಣಗಳ ಮೇಳ!
ಗದ್ಯ ಪದ್ಯದ ವಾದ, ಶರಣ ಹಾಡಿನ ನಾದ;
ಕನ್ನಡಾಂಬೆಯ ಕೊರಳ ಮುತ್ತುಮಣಿ ಮಾಲಾ-

ವೃತ್ತಕಂದಗಳೋಟ, ಚಂಪುಕಾವ್ಯದ ಕೂಟ,
‘ಝೇಂಕರಿಪ ಷಟ್ಪದಿ’ಗಳಾ ವೇಗ ಮಾರ್ಗ;
ಶಾಸ್ತ್ರಗ್ರಂಥದ ಸಾಲು, ವ್ಯಾಕರಣಗಳ ಬಾಳು,
ಹಾಸು ಹೊಕ್ಕಾಗಿಯೇ ತಾಳಿ ಬಾಳಿದೆ ಕೇಳ!

ದಾಸ ಪದಗಳು ಹರಡಿ ಹಳ್ಳಿ ಜನಗಳು ಉಬ್ಬಿ
ಲಾವಣಿಗಳಾ ದನಿಯ ಇಂಪಿನಿಂ ಹಿಗ್ಗಿ;
ಹೊಸಕವನ ಕೊಳದ ದನಿ, ಶ್ರೋತೃಗಳ ಬಿಲ್ಲದನಿ,
ಕನ್ನಡದ ಹಲತರದಲೇಳಿಗೆಯ ಸುಗ್ಗಿ!

ದಶಮಾನ ಶತವಾಗಿ, ಶತಮಾನ ದಶವಾಗಿ
ತಿಳಿನೀರ ಬುಗ್ಗೆಯದು ಎಷ್ಟು ಸಿಹಿ ಚೆಲುವು!
ತಿಳಿಯದಿಹ ಕವಿವರ್ಯರೇಸು ಜನ ಏತರದಿ
ಕನ್ನಡದ ತೋಟದಲಿ ಬೆಳೆಸಿದರು ಹೂವು!!

ಆಳಿದರು ಚೋಳ ಚಾಳುಕ್ಯ ಗಂಗ ಕದಂಬ
ವಿಜಯನಗರದ ರಾಜ್ಯ ವೈಭವದ ಗೂಡು;
ನೃಪತುಂಗ ಪಂಪರೂ ಪೊನ್ನರನ್ನರ ತಂಡ
ಗುಣವರ್ಮ ಆ ಜನ್ನ ನಾಗಚಂದ್ರರ ದಂಡು.

ಲಕ್ಷಣವ ಸಾರಿದ ಸಾಳ್ವ ಭಟ್ಟಾಕಳಂಕರು
ಕೇಶಿರಾಜರದಂತು ನಾಗವರ್ಮರದೊ!
ತಾಯಂದಿರಾ ಕಂತಿ ಅಕ್ಕದೇವಿಯರಿಹರು
ಕನ್ನಡಿತಿ ಹೊನ್ನಮ್ಮ ಕವಿಕೋಕಿಲವಳೊ!

ಮಧ್ಯಯುಗ ಬಸವಣ್ಣ ರಾಘವಾಂಕರ ಸಾಲು
ವ್ಯಾಸಕುವರನ ಒಂದು ಭಾರತದ ಹಾಡೊ;
ಪದ್ಮರಸ ಲಕ್ಷ್ಮೇಶ ತಿಮ್ಮಕವಿ ಹರಿಹರರು
ಕವಿವರರು ಅಗಣಿತವೆ ಕನ್ನಡದ ಬಾಳೊ!

ಷಡಕ್ಷರಿಯ ಬಿರುನುಡಿಯು, ಮುದ್ದಣನ ಇನಿವಾತು
ಕನಕಾಪುರಂದರರ ಲಲ್ಲೆ ಹಾಡಿನ ನುಣ್ಪು;
ಕೃಷ್ಣರಾಜರ ಸೇವೆ, ತಿರುಮಲಾರ್‍ಯರ ಸೊಲ್ಲು
ಒಡನಾಡಿ ಬಳೆಯಿತೊ ಕನ್ನಡದ ಹುರುಪು

ನೃಸಿಂಹ ಅಳಸಿಂಗರ ವಿದ್ವತ್ಸೇವೆಯ ಮೇರೆ
ಬಸಪ್ಪಶಾಸ್ತ್ರಿಗಳೊ ಪಂಜೇ ಶ್ರೀಕಂಠರು!
ಹಲವಾರು ನುಡಿಸೇವೆ ಸ್ಪೂರ್ತಿಯಿಕ್ಕಿದ ಜನವೆ
ಕಣ್ಮುಂದು ನಿಲ್ಲುವರು ಇನ್ನು ಬಾಳುವರು!

ಕನ್ನಡದ ಕರ್ಣಾಟಕಿಂದು ಅಂದಿನದಂತೆ
ಒಂದಾಗಿ ಇಲ್ಲವೆಂದೊಕ್ಕೊರಲ ಕೂಗು,
ಒಂದಾಪ ಸವಿಗನಸು ಕಾಣಲಿವೆ ಅದರಂತೆ
ನುಡಿಸೇವೆ ವೃಂದದಾ ಉತ್ಸುಕದ ದಂಡು!

ಮೈಸೂರು ಮಂಗ್ಳೂರು ಧಾರ್ವಾಡ ಎಂದೆಂದು
ಸೀಮಾ ಮಹತ್ವವನು ಕೊಟ್ಟು ಮೂಲೆಯೊಳಿರಿಸಿ,
ಕನ್ನಡಾಂಬೆಯ ಕುವರರಂದಿನಾ ಪ್ರಭೆಯೊಂದು
ಮಾಸಿಹೋಗಿದೆ ಇಂದು ಚೈತನ್ಯವಳಿಸಿ!

ಕವನಗಳ ಕಂತೆಗಳು, ಸಣ್ಣ ಕಥೆ ಬೊಂತೆಗಳು,
ಹಲಕಾದಂಬರಿಗಳೂ ತುಂಬುವುದು ಹಿತವೆ!
ಭಾಷಾಭಿಮಾನವೂ ಸ್ವಜನಾನುರಾಗವೂ
ಬಳೆಯುತ್ತಿವೆ ಜನರಲ್ಲಿ ಫಲಬಿಟ್ಟಿವೆ!!
*     *     *

ನನ್ನಿಚ್ಚೆ, ನನ್ಗನಸು, ನನ್ನೊಲುಮೆ ಇದು ಒಂದು-
ಕನ್ನಡವು ಭಾರತದ ಹಸುಗೂಸಂತಿರದೆ;
ಮುನ್ನಡೆವೆ ಮುನ್ನೋಡ್ವ ಘನಭಾಷೆಯೆಂದೆನಿಸಿ
ಬಾಳಲೆಂಬುವ ಕಾಂಕ್ಷೆ ಮುನ್ನಿಟ್ಟು ನಡೆವೆ!
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...