Home / ಕವನ / ಕವಿತೆ / ಕನ್ನಡದ ಏಳಿಗೆ

ಕನ್ನಡದ ಏಳಿಗೆ

ಕನ್ನಡದ ತಿಳಿನೀರ ನಾನೊಂದು ಬೊಗಸೆಯಲಿ
ಕುಡಿದು ನೋಡಿದೆನದರ ಸವಿಯನ್ನು ನಾನೊ;
ಕುಡಿಕುಡಿದು ಮುದವಾಂತು ನಲ್ಗಬ್ಬ ಸಾರವನು
ಬಾಯ್ದುದಿಯೊಳನವರತ ಇರಿಸಲೆಳಸಿದೆನೊ!

ಎಷ್ಟು ತತ್ವದ ಗೀತ?  ಎಷ್ಟು ಮೋಹದ ಮಾತು?
ವಚನರಾಶಿಯ ಸಾರ, ಪುರಾಣಗಳ ಮೇಳ!
ಗದ್ಯ ಪದ್ಯದ ವಾದ, ಶರಣ ಹಾಡಿನ ನಾದ;
ಕನ್ನಡಾಂಬೆಯ ಕೊರಳ ಮುತ್ತುಮಣಿ ಮಾಲಾ-

ವೃತ್ತಕಂದಗಳೋಟ, ಚಂಪುಕಾವ್ಯದ ಕೂಟ,
‘ಝೇಂಕರಿಪ ಷಟ್ಪದಿ’ಗಳಾ ವೇಗ ಮಾರ್ಗ;
ಶಾಸ್ತ್ರಗ್ರಂಥದ ಸಾಲು, ವ್ಯಾಕರಣಗಳ ಬಾಳು,
ಹಾಸು ಹೊಕ್ಕಾಗಿಯೇ ತಾಳಿ ಬಾಳಿದೆ ಕೇಳ!

ದಾಸ ಪದಗಳು ಹರಡಿ ಹಳ್ಳಿ ಜನಗಳು ಉಬ್ಬಿ
ಲಾವಣಿಗಳಾ ದನಿಯ ಇಂಪಿನಿಂ ಹಿಗ್ಗಿ;
ಹೊಸಕವನ ಕೊಳದ ದನಿ, ಶ್ರೋತೃಗಳ ಬಿಲ್ಲದನಿ,
ಕನ್ನಡದ ಹಲತರದಲೇಳಿಗೆಯ ಸುಗ್ಗಿ!

ದಶಮಾನ ಶತವಾಗಿ, ಶತಮಾನ ದಶವಾಗಿ
ತಿಳಿನೀರ ಬುಗ್ಗೆಯದು ಎಷ್ಟು ಸಿಹಿ ಚೆಲುವು!
ತಿಳಿಯದಿಹ ಕವಿವರ್ಯರೇಸು ಜನ ಏತರದಿ
ಕನ್ನಡದ ತೋಟದಲಿ ಬೆಳೆಸಿದರು ಹೂವು!!

ಆಳಿದರು ಚೋಳ ಚಾಳುಕ್ಯ ಗಂಗ ಕದಂಬ
ವಿಜಯನಗರದ ರಾಜ್ಯ ವೈಭವದ ಗೂಡು;
ನೃಪತುಂಗ ಪಂಪರೂ ಪೊನ್ನರನ್ನರ ತಂಡ
ಗುಣವರ್ಮ ಆ ಜನ್ನ ನಾಗಚಂದ್ರರ ದಂಡು.

ಲಕ್ಷಣವ ಸಾರಿದ ಸಾಳ್ವ ಭಟ್ಟಾಕಳಂಕರು
ಕೇಶಿರಾಜರದಂತು ನಾಗವರ್ಮರದೊ!
ತಾಯಂದಿರಾ ಕಂತಿ ಅಕ್ಕದೇವಿಯರಿಹರು
ಕನ್ನಡಿತಿ ಹೊನ್ನಮ್ಮ ಕವಿಕೋಕಿಲವಳೊ!

ಮಧ್ಯಯುಗ ಬಸವಣ್ಣ ರಾಘವಾಂಕರ ಸಾಲು
ವ್ಯಾಸಕುವರನ ಒಂದು ಭಾರತದ ಹಾಡೊ;
ಪದ್ಮರಸ ಲಕ್ಷ್ಮೇಶ ತಿಮ್ಮಕವಿ ಹರಿಹರರು
ಕವಿವರರು ಅಗಣಿತವೆ ಕನ್ನಡದ ಬಾಳೊ!

ಷಡಕ್ಷರಿಯ ಬಿರುನುಡಿಯು, ಮುದ್ದಣನ ಇನಿವಾತು
ಕನಕಾಪುರಂದರರ ಲಲ್ಲೆ ಹಾಡಿನ ನುಣ್ಪು;
ಕೃಷ್ಣರಾಜರ ಸೇವೆ, ತಿರುಮಲಾರ್‍ಯರ ಸೊಲ್ಲು
ಒಡನಾಡಿ ಬಳೆಯಿತೊ ಕನ್ನಡದ ಹುರುಪು

ನೃಸಿಂಹ ಅಳಸಿಂಗರ ವಿದ್ವತ್ಸೇವೆಯ ಮೇರೆ
ಬಸಪ್ಪಶಾಸ್ತ್ರಿಗಳೊ ಪಂಜೇ ಶ್ರೀಕಂಠರು!
ಹಲವಾರು ನುಡಿಸೇವೆ ಸ್ಪೂರ್ತಿಯಿಕ್ಕಿದ ಜನವೆ
ಕಣ್ಮುಂದು ನಿಲ್ಲುವರು ಇನ್ನು ಬಾಳುವರು!

ಕನ್ನಡದ ಕರ್ಣಾಟಕಿಂದು ಅಂದಿನದಂತೆ
ಒಂದಾಗಿ ಇಲ್ಲವೆಂದೊಕ್ಕೊರಲ ಕೂಗು,
ಒಂದಾಪ ಸವಿಗನಸು ಕಾಣಲಿವೆ ಅದರಂತೆ
ನುಡಿಸೇವೆ ವೃಂದದಾ ಉತ್ಸುಕದ ದಂಡು!

ಮೈಸೂರು ಮಂಗ್ಳೂರು ಧಾರ್ವಾಡ ಎಂದೆಂದು
ಸೀಮಾ ಮಹತ್ವವನು ಕೊಟ್ಟು ಮೂಲೆಯೊಳಿರಿಸಿ,
ಕನ್ನಡಾಂಬೆಯ ಕುವರರಂದಿನಾ ಪ್ರಭೆಯೊಂದು
ಮಾಸಿಹೋಗಿದೆ ಇಂದು ಚೈತನ್ಯವಳಿಸಿ!

ಕವನಗಳ ಕಂತೆಗಳು, ಸಣ್ಣ ಕಥೆ ಬೊಂತೆಗಳು,
ಹಲಕಾದಂಬರಿಗಳೂ ತುಂಬುವುದು ಹಿತವೆ!
ಭಾಷಾಭಿಮಾನವೂ ಸ್ವಜನಾನುರಾಗವೂ
ಬಳೆಯುತ್ತಿವೆ ಜನರಲ್ಲಿ ಫಲಬಿಟ್ಟಿವೆ!!
*     *     *

ನನ್ನಿಚ್ಚೆ, ನನ್ಗನಸು, ನನ್ನೊಲುಮೆ ಇದು ಒಂದು-
ಕನ್ನಡವು ಭಾರತದ ಹಸುಗೂಸಂತಿರದೆ;
ಮುನ್ನಡೆವೆ ಮುನ್ನೋಡ್ವ ಘನಭಾಷೆಯೆಂದೆನಿಸಿ
ಬಾಳಲೆಂಬುವ ಕಾಂಕ್ಷೆ ಮುನ್ನಿಟ್ಟು ನಡೆವೆ!
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...