Home / ಕವನ / ಕವಿತೆ / ಹರಸು, ಹೇ! ಭಾರತದ ಭಾಗ್ಯದೈವ

ಹರಸು, ಹೇ! ಭಾರತದ ಭಾಗ್ಯದೈವ

ಸ್ವಾತಂತ್ರ್‍ಯ ಸೌಧವನು ರಚಿಸತೊಡಗಿಹರದೋ
ನಾಡ ನಾಯಕರೆಲ್ಲರೊಂದುಗೂಡಿ;
ಸೌಧವನ್ನಾಗಿಸುತ ಅದಕೆ ಕಲಶವನಿಟ್ಟು
ಹರಸು, ಹೇ! ಭಾರತದ ಭಾಗ್ಯದೈವ!

ಮತದ ಮೈಲಿಗೆ ಕಳೆದು ಒಮ್ಮತದ ಮಡಿಯುಟ್ಟು
ಸ್ವಾತಂತ್ರ್‍ಯ ಮಂದಿರದೊಳೆಲ್ಲ ನೆರೆದು
ಭಾರತಾಂಬೆಯನೇಕನಿಷ್ಠೆಯಲಿ ಭಜಿಪಂತೆ
ಹರಸು, ಹೇ! ಭಾರತದ ಭಾಗ್ಯದೈವ!

ಮೇಲು ಕೀಳುಗಳೆಂಬ ಬಡವ ಬಲ್ಲಿದನೆಂಬ
ಭೇದಭಾವನೆಯ ಮೋಡಗಳು ಚೆದರಿ
ಸ್ವಾತಂತ್ರ್‍ಯ ಸೂರ್‍ಯನೆಲ್ಲೆಡೆಯು ಬೆಳಗುವ ತೆರದಿ
ಹರಸು, ಹೇ! ಭಾರತದ ಭಾಗ್ಯದೈವ!

ಮನೆಯೊಳಗೆ ಇರವೆ ಹಲವಾರು ವಾಸದ ಕೋಣೆ?
ಭಾರತದ ಹೊಸಮನೆಯೊಳಿರಲಿ ನೂರು.
ಮನೆಯೊಂದೆ, ಮನೆದೇವರೊಂದೆ ತಾನಪ್ಪಂತೆ
ಹರಸು, ಹೇ! ಭಾರತದ ಭಾಗ್ಯದೈವ!

ಸತ್ಯ ಸರ್ವಪ್ರೇಮ ಸಮಭಾವನೆ ಅಹಿಂಸೆ
ಇವೆ ನವ್ಯ ಭಾರತದ ಮನೆ ದೇವರು;
ಮನೆ ದೇವರನ್ನೊಲಿದು ಎಲ್ಲರರ್ಚಿಸುವಂತೆ
ಹರಸು, ಹೇ! ಭಾರತದ ಭಾಗ್ಯದೈವ!

ಸ್ವಾತಂತ್ರ್‍ಯದರಮನೆಯ ಸಮ್ರಾಜ್ಞಿ ತಾನೆನಿಸಿ
ಮಾತೆ ಮಕ್ಕಳ ಏಳ್ಗೆ ಕಂಡು ನಲಿದು,
ಅವಳ ಮನೆ ಮಂಗಳದ ಮನೆಯಾಗಿ ಮೆರೆವಂತೆ
ಹರಸು, ಹೇ! ಭಾರತದ ಭಾಗ್ಯದೈವ!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...