Home / ಕವನ / ಕವಿತೆ / ಕವಿಗಳ ಕಷ್ಟ

ಕವಿಗಳ ಕಷ್ಟ

ಅಯ್ಯೋ ಈ ಕವಿಗಳ ಕೆಲಸ ಬಲು ಕಷ್ಟ
ಹಿಡಿಯಷ್ಟು ಸಾಮಗ್ರಿಯಿಂದ
ಪೂರೈಸಬೇಕು ಎಲ್ಲರ ಇಷ್ಟ
ಇಲ್ಲಿ ಇಲ್ಲದ್ದನ್ನು ಸೃಷ್ಟಿಸಬೇಕು
ಬ್ರಹ್ಮನಿಗೆ ಸವಾಲಿನಂತೆ ಪ್ರತಿ ಸೃಷ್ಟಿಸಬೇಕು
ಕಪ್ಪು ಕರಾಳ ಕುರೂಪದೊಳಗೇ
ಸುಂದರ ಲೋಕ ತೆರೆದು ತೋರಿಸಬೇಕು
ದಿನದಿನವೂ ಹೊಸಹೂಸದನ್ನೇ ಕಾಣಬೇಕು
ಮೂರನೆ ಕಣ್ಣಿಂದ
ಕಂಡದ್ದು ಶಬ್ದಜಾಲದ ಮೋಡಿಯಲ್ಲಿ
ಬಣ್ಣಿಸಬೇಕು ಬಣ್ಣ ಬಣ್ಣ
ಅವರ ಕೈಯಲ್ಲೇನಿದೆ ಬಂಡವಾಳ

ಅದೇ ಹಿಡಿಯಷ್ಟು ಚಿಕ್ಕಿಗಳು
ತಟ್ಟೆಗಳಂಥ ಸೂರ್ಯಚಂದ್ರರು
ಅದೇ ಗಿಡ ಮರ ಬಳ್ಳಿಗಳು
ಅವುಗಳಲೊಂದಿಷ್ಟು ಮೊಗ್ಗು ಕಾಯಿ ಹೀಚು ಹಣ್ಣು
ಅವುಗಳ ಸುತ್ತಾಡುವ ಚಿಟ್ಟೆಗಳು
ಗಿಳಿ ಕೋಗಿಲೆ ಕಾಜಾಣ ಪಾರಿವಾಳ ನವಿಲುಗಳು
ಕೊಳದಲ್ಲಿ ನೀರಿದ್ದರೆ ಅಲ್ಲೊಂದಿಷ್ಟು
ಕಮಲಗಳು ಹಂಸಗಳು (ಈಗೀಗ ಇವು ಕನಸುಗಳು)
ಇವನೆಲ್ಲ ಅಂಗಾಂಗಗಳಲ್ಲಿ
ಮೆತ್ತಿಕೊಂಡ ಮಾನಿನಿಯರು ಚೆಲುವೆಯರು
ಕವಿಗಳ ನಿರಂತರ ಸ್ಪೂರ್ತಿಯ ಚಿಲುಮೆಗಳು
ಇವರ ಬಿಟ್ಟರೆ ಅಥವಾ ಇವಳ ಬಿಟ್ಟರೆ
ಕವಿಗಳಿಗೆ ಉಳಿಯುವುದೇನು ಮಣ್ಣು

ಸ್ವಲ್ಪ ಕಣ್ಣು ಆಚೆ ಹಾಯಿಸಿದರೆ
ನದಿಗಳ ಬಳುಕೋ ಕಡಲಿನ ಮಿಡುಕೋ
ಅದೇ ನೆಲ ಜಲ ಅದೇ ಭೂಮಿ ಬಾನು
ಗಿರಿಸಾನು- ಬಾನಲ್ಲಷ್ಟು ಗಾಳಿಯ ಗೊಂದಲ

ಮೋಡ ಮಿಂಚುಗಳ ಗದ್ದಲ ಅಪರೂಪಕ್ಕೆ
ಅದೇ ಅರುಣೋದಯ ಸೂರ್ಯೋದಯ
ಸೂರ್ಯಾಸ್ತಗಳ ತಿರುಗು ಮುರುಗು
ಇನ್ನೇನಿದೆ ಕವಿಗಳ ಕೈಗಳಲ್ಲಿ ಮಣ್ಣು ಮಸಿ
ಉಪಮೆ ರೂಪಕಾದಿಗಳ ನುಣ್ಣು ನುಸಿ
ವೇದಗಳ ಕಾಲದ ಉಷೆ ಸೂರ್ಯೋಪಾಸನೆ
ಗಿಡಮರಗಳ ನಡುವೆ ಬೆಂಕಿ ತುಪ್ಪದ ವಾಸನೆ
ಅಲ್ಲಿಂದ ಹಿಡಿದು ಇಲ್ಲಿಯವರೆಗೂ
ಕವಿಗಳಿಗೆ ಅವೇ ಸಾಮಗ್ರಿಗಳು
ನಿಸರ್ಗ ನೀಡುವ ಪರಿಕರಣಗಳು
ಅವುಗಳಿಂದಲೇ ಹೆಣೆಯಬೇಕು
ನವರಸಾದಿಗಳ ಕುಣಿಕೆಗಳ
ಮಾನವನ ನೂರಾರು ಭಾವಭಣಿತೆಗಳ
ಅಯ್ಯೋ ಈ ಕವಿಗಳ ಕೆಲಸ ಬಲು ಕಷ್ಟ
ಹಿಡಿಯಷ್ಟು ಅವೇ ಹಳಸಲು ವಸ್ತುಗಳಿಂದ
ಪೂರೈಸಬೇಕು ಎಲ್ಲರ ಇಷ್ಟ

*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...