Home / ಕವನ / ಕವಿತೆ / ಕವಿಗಳ ಕಷ್ಟ

ಕವಿಗಳ ಕಷ್ಟ

ಅಯ್ಯೋ ಈ ಕವಿಗಳ ಕೆಲಸ ಬಲು ಕಷ್ಟ
ಹಿಡಿಯಷ್ಟು ಸಾಮಗ್ರಿಯಿಂದ
ಪೂರೈಸಬೇಕು ಎಲ್ಲರ ಇಷ್ಟ
ಇಲ್ಲಿ ಇಲ್ಲದ್ದನ್ನು ಸೃಷ್ಟಿಸಬೇಕು
ಬ್ರಹ್ಮನಿಗೆ ಸವಾಲಿನಂತೆ ಪ್ರತಿ ಸೃಷ್ಟಿಸಬೇಕು
ಕಪ್ಪು ಕರಾಳ ಕುರೂಪದೊಳಗೇ
ಸುಂದರ ಲೋಕ ತೆರೆದು ತೋರಿಸಬೇಕು
ದಿನದಿನವೂ ಹೊಸಹೂಸದನ್ನೇ ಕಾಣಬೇಕು
ಮೂರನೆ ಕಣ್ಣಿಂದ
ಕಂಡದ್ದು ಶಬ್ದಜಾಲದ ಮೋಡಿಯಲ್ಲಿ
ಬಣ್ಣಿಸಬೇಕು ಬಣ್ಣ ಬಣ್ಣ
ಅವರ ಕೈಯಲ್ಲೇನಿದೆ ಬಂಡವಾಳ

ಅದೇ ಹಿಡಿಯಷ್ಟು ಚಿಕ್ಕಿಗಳು
ತಟ್ಟೆಗಳಂಥ ಸೂರ್ಯಚಂದ್ರರು
ಅದೇ ಗಿಡ ಮರ ಬಳ್ಳಿಗಳು
ಅವುಗಳಲೊಂದಿಷ್ಟು ಮೊಗ್ಗು ಕಾಯಿ ಹೀಚು ಹಣ್ಣು
ಅವುಗಳ ಸುತ್ತಾಡುವ ಚಿಟ್ಟೆಗಳು
ಗಿಳಿ ಕೋಗಿಲೆ ಕಾಜಾಣ ಪಾರಿವಾಳ ನವಿಲುಗಳು
ಕೊಳದಲ್ಲಿ ನೀರಿದ್ದರೆ ಅಲ್ಲೊಂದಿಷ್ಟು
ಕಮಲಗಳು ಹಂಸಗಳು (ಈಗೀಗ ಇವು ಕನಸುಗಳು)
ಇವನೆಲ್ಲ ಅಂಗಾಂಗಗಳಲ್ಲಿ
ಮೆತ್ತಿಕೊಂಡ ಮಾನಿನಿಯರು ಚೆಲುವೆಯರು
ಕವಿಗಳ ನಿರಂತರ ಸ್ಪೂರ್ತಿಯ ಚಿಲುಮೆಗಳು
ಇವರ ಬಿಟ್ಟರೆ ಅಥವಾ ಇವಳ ಬಿಟ್ಟರೆ
ಕವಿಗಳಿಗೆ ಉಳಿಯುವುದೇನು ಮಣ್ಣು

ಸ್ವಲ್ಪ ಕಣ್ಣು ಆಚೆ ಹಾಯಿಸಿದರೆ
ನದಿಗಳ ಬಳುಕೋ ಕಡಲಿನ ಮಿಡುಕೋ
ಅದೇ ನೆಲ ಜಲ ಅದೇ ಭೂಮಿ ಬಾನು
ಗಿರಿಸಾನು- ಬಾನಲ್ಲಷ್ಟು ಗಾಳಿಯ ಗೊಂದಲ

ಮೋಡ ಮಿಂಚುಗಳ ಗದ್ದಲ ಅಪರೂಪಕ್ಕೆ
ಅದೇ ಅರುಣೋದಯ ಸೂರ್ಯೋದಯ
ಸೂರ್ಯಾಸ್ತಗಳ ತಿರುಗು ಮುರುಗು
ಇನ್ನೇನಿದೆ ಕವಿಗಳ ಕೈಗಳಲ್ಲಿ ಮಣ್ಣು ಮಸಿ
ಉಪಮೆ ರೂಪಕಾದಿಗಳ ನುಣ್ಣು ನುಸಿ
ವೇದಗಳ ಕಾಲದ ಉಷೆ ಸೂರ್ಯೋಪಾಸನೆ
ಗಿಡಮರಗಳ ನಡುವೆ ಬೆಂಕಿ ತುಪ್ಪದ ವಾಸನೆ
ಅಲ್ಲಿಂದ ಹಿಡಿದು ಇಲ್ಲಿಯವರೆಗೂ
ಕವಿಗಳಿಗೆ ಅವೇ ಸಾಮಗ್ರಿಗಳು
ನಿಸರ್ಗ ನೀಡುವ ಪರಿಕರಣಗಳು
ಅವುಗಳಿಂದಲೇ ಹೆಣೆಯಬೇಕು
ನವರಸಾದಿಗಳ ಕುಣಿಕೆಗಳ
ಮಾನವನ ನೂರಾರು ಭಾವಭಣಿತೆಗಳ
ಅಯ್ಯೋ ಈ ಕವಿಗಳ ಕೆಲಸ ಬಲು ಕಷ್ಟ
ಹಿಡಿಯಷ್ಟು ಅವೇ ಹಳಸಲು ವಸ್ತುಗಳಿಂದ
ಪೂರೈಸಬೇಕು ಎಲ್ಲರ ಇಷ್ಟ

*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...