Home / ಕವನ / ಕವಿತೆ / ಕವಿಗಳ ಕಷ್ಟ

ಕವಿಗಳ ಕಷ್ಟ

ಅಯ್ಯೋ ಈ ಕವಿಗಳ ಕೆಲಸ ಬಲು ಕಷ್ಟ
ಹಿಡಿಯಷ್ಟು ಸಾಮಗ್ರಿಯಿಂದ
ಪೂರೈಸಬೇಕು ಎಲ್ಲರ ಇಷ್ಟ
ಇಲ್ಲಿ ಇಲ್ಲದ್ದನ್ನು ಸೃಷ್ಟಿಸಬೇಕು
ಬ್ರಹ್ಮನಿಗೆ ಸವಾಲಿನಂತೆ ಪ್ರತಿ ಸೃಷ್ಟಿಸಬೇಕು
ಕಪ್ಪು ಕರಾಳ ಕುರೂಪದೊಳಗೇ
ಸುಂದರ ಲೋಕ ತೆರೆದು ತೋರಿಸಬೇಕು
ದಿನದಿನವೂ ಹೊಸಹೂಸದನ್ನೇ ಕಾಣಬೇಕು
ಮೂರನೆ ಕಣ್ಣಿಂದ
ಕಂಡದ್ದು ಶಬ್ದಜಾಲದ ಮೋಡಿಯಲ್ಲಿ
ಬಣ್ಣಿಸಬೇಕು ಬಣ್ಣ ಬಣ್ಣ
ಅವರ ಕೈಯಲ್ಲೇನಿದೆ ಬಂಡವಾಳ

ಅದೇ ಹಿಡಿಯಷ್ಟು ಚಿಕ್ಕಿಗಳು
ತಟ್ಟೆಗಳಂಥ ಸೂರ್ಯಚಂದ್ರರು
ಅದೇ ಗಿಡ ಮರ ಬಳ್ಳಿಗಳು
ಅವುಗಳಲೊಂದಿಷ್ಟು ಮೊಗ್ಗು ಕಾಯಿ ಹೀಚು ಹಣ್ಣು
ಅವುಗಳ ಸುತ್ತಾಡುವ ಚಿಟ್ಟೆಗಳು
ಗಿಳಿ ಕೋಗಿಲೆ ಕಾಜಾಣ ಪಾರಿವಾಳ ನವಿಲುಗಳು
ಕೊಳದಲ್ಲಿ ನೀರಿದ್ದರೆ ಅಲ್ಲೊಂದಿಷ್ಟು
ಕಮಲಗಳು ಹಂಸಗಳು (ಈಗೀಗ ಇವು ಕನಸುಗಳು)
ಇವನೆಲ್ಲ ಅಂಗಾಂಗಗಳಲ್ಲಿ
ಮೆತ್ತಿಕೊಂಡ ಮಾನಿನಿಯರು ಚೆಲುವೆಯರು
ಕವಿಗಳ ನಿರಂತರ ಸ್ಪೂರ್ತಿಯ ಚಿಲುಮೆಗಳು
ಇವರ ಬಿಟ್ಟರೆ ಅಥವಾ ಇವಳ ಬಿಟ್ಟರೆ
ಕವಿಗಳಿಗೆ ಉಳಿಯುವುದೇನು ಮಣ್ಣು

ಸ್ವಲ್ಪ ಕಣ್ಣು ಆಚೆ ಹಾಯಿಸಿದರೆ
ನದಿಗಳ ಬಳುಕೋ ಕಡಲಿನ ಮಿಡುಕೋ
ಅದೇ ನೆಲ ಜಲ ಅದೇ ಭೂಮಿ ಬಾನು
ಗಿರಿಸಾನು- ಬಾನಲ್ಲಷ್ಟು ಗಾಳಿಯ ಗೊಂದಲ

ಮೋಡ ಮಿಂಚುಗಳ ಗದ್ದಲ ಅಪರೂಪಕ್ಕೆ
ಅದೇ ಅರುಣೋದಯ ಸೂರ್ಯೋದಯ
ಸೂರ್ಯಾಸ್ತಗಳ ತಿರುಗು ಮುರುಗು
ಇನ್ನೇನಿದೆ ಕವಿಗಳ ಕೈಗಳಲ್ಲಿ ಮಣ್ಣು ಮಸಿ
ಉಪಮೆ ರೂಪಕಾದಿಗಳ ನುಣ್ಣು ನುಸಿ
ವೇದಗಳ ಕಾಲದ ಉಷೆ ಸೂರ್ಯೋಪಾಸನೆ
ಗಿಡಮರಗಳ ನಡುವೆ ಬೆಂಕಿ ತುಪ್ಪದ ವಾಸನೆ
ಅಲ್ಲಿಂದ ಹಿಡಿದು ಇಲ್ಲಿಯವರೆಗೂ
ಕವಿಗಳಿಗೆ ಅವೇ ಸಾಮಗ್ರಿಗಳು
ನಿಸರ್ಗ ನೀಡುವ ಪರಿಕರಣಗಳು
ಅವುಗಳಿಂದಲೇ ಹೆಣೆಯಬೇಕು
ನವರಸಾದಿಗಳ ಕುಣಿಕೆಗಳ
ಮಾನವನ ನೂರಾರು ಭಾವಭಣಿತೆಗಳ
ಅಯ್ಯೋ ಈ ಕವಿಗಳ ಕೆಲಸ ಬಲು ಕಷ್ಟ
ಹಿಡಿಯಷ್ಟು ಅವೇ ಹಳಸಲು ವಸ್ತುಗಳಿಂದ
ಪೂರೈಸಬೇಕು ಎಲ್ಲರ ಇಷ್ಟ

*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...