Home / ಕಥೆ / ಜನಪದ / ಹೂಂ ಅಂದರೆ ಒಂದೇ ಉಂಡಿ

ಹೂಂ ಅಂದರೆ ಒಂದೇ ಉಂಡಿ

ಚಿತ್ರ: ಸರಿನಾ
ಚಿತ್ರ: ಸರಿನಾ

ಗಂಡ ಹೆಂಡಿರಿಬ್ಬರು. ಒಂದುದಿನ ಹೆಂಡತಿ ಮಾಲಾದಿ ಮಾಡಿ ಮೂರು ಉಂಡಿ ಕಟ್ಟಿಟ್ಟಳು. “ಮಾಲಾದಿ ನಾ ಮಾಡೀನು. ಎರಡು ನನಗೆ ಒಂದು ನಿನಗ”
ಎಂದಳು ಹೆಂಡತಿ.

“ಇಲ್ಲ. ನಾ ಮಾಡಿಸಂದಾಂವ. ನನಗೆ ಎರಡು ಉಂಡಿ ನಿನಗೆ ಒಂದು ಉಂಡಿ” ಎಂದು ಗಂಡನವಾದ.

ಒಂದು ತಾಸು ಜಗಳಾಡಿದರು. ಯಾರೂ ಉಣ್ಣಲಿಲ್ಲ. ಕಡೆಯಲ್ಲಿ ಒಂದು ನಿರ್ಧಾರಕ್ಕೆ ಬಂದರು – “ಯಾರು ಹೂಂ ಅಂತಾರೊ ಅವರು ಒಂದು
ತಿನ್ನಬೇಕು. ಸುಮ್ಮನೆ ಮನಗಿದವರಿಗೆ ಎರಡು.”

ನಾಯಿ ಬಂದು ಮಾಲಾದಿ ತಿನ್ನ ಹತ್ತಿತು. ನಾಯಿಯನ್ನು ಹೊಡೆಯುವರಾರು? ಹೊಡೆದರೆ ಹೂಂ ಅನ್ನಬೇಕಾಗುತ್ತದೆ. ಹೂಂ ಅಂದವರಿಗೆ ಒಂದಽ ಉಂಡಿ. ಅದಕ್ಕಾಗಿ ಅವನೂ ಹೂಂ ಅನಲಿಲ್ಲ. ಅವಳೂ ಹೂಂ ಅನಲಿಲ್ಲ. ಹಾಗೇ ಮಲಗಿದರು.

ಹೊತ್ತು ಹೊರಟಿತು. ಸೂರ್ಯನು ಮಾರು ಮೇಲೆ ಏರಿ ಬಂದನು. ಅವರ ಮುಚ್ಚಿದ ತಟ್ಟಿ ಮುಚ್ಚಿದ ಹಾಗೆಯೇ ಇತ್ತು. ನೆರೆಹೊರೆಯವರು ತಟ್ಟಿ
ಬಡಿದರು. ಹೂಂ ಅನಲಿಲ್ಲ; ಹಾಂ ಅನಲಿಲ್ಲ. ನಾಲ್ಕು ಮಂದಿ ನೆರೆದರು. ತಟ್ಟಿ ಮುರಿದರು. ಒಳಗೆ ಹೊಕ್ಕರು. ಇಬ್ಬರಿಗೂ ಮಾತಾಡಿಸಿ ನೋಡಿದರು. ಅಗಳಾಡಿಸಿ ನೋಡಿದರು. ಮಿಸುಕಲೇ ಇಲ್ಲ ಯಾರೂ.

ಇಬ್ಬರೂ ಸತ್ತಿದ್ದಾರೆಂದು ನಿರ್ಧರಿಸಿ ಕುಳ್ಳುಕಟ್ಟಿಗೆಗಳನ್ನು ಹೊತ್ತೊಯ್ದು ಸುಡುಗಾಡಿನಲ್ಲಿ ಒಗೆದು ಬಂದರು. ಇಬ್ಬರನ್ನೂ ನಾಲ್ಕು ನಾಲ್ಕು ಜನ ಹೊತ್ತರು.
ಇಬ್ಬರೊಳಗಾರೂ ಹೂಂ ಅನಲಿಲ್ಲ. ಹೂಂ ಅಂದರೆ ಒಂದೇ ಉಂಡಿ ಅಲ್ಲವೇ?

ಕುಳ್ಳು ಕಟ್ಟಿಗೆಯ ತಾಳಿಯ ಮೇಲೆ ಹೆಣ ಒಗೆದರು. ಉರಿ ಹಚ್ಚಿದರು. ಚೌಕೀದಾರನನ್ನು ಅಲ್ಲಿ ನಿಲ್ಲಿಸಿ ಮಂದಿಯೆಲ್ಲ ತಂತಮ್ಮ ಮನೆಗೆ ಹೋದರು.
ಬೆಂಕಿ ಹೊತ್ತಿದಂತೆ ಮೈಯೆಲ್ಲ ಸುಡುತ್ತ ಬಂತು. ಇಬ್ಬರಲ್ಲಿ ಒಬ್ಬರೂ ಸೋಲಲಿಲ್ಲ. ಕಿರಿ ಬೆರಳೊಂದು ಛಟ್ ಎಂದು ಸಿಡಿದು ಬಂದು ಬಿತ್ತು. “ಥೂ ! ನೀನೇ ಎರಡು ಉಂಡಿ ತಿನ್ನು” ಎಂದನು ಗಂಡ. ಮೈಮೇಲಿನ ಬಟ್ಟೆಬರೆಗಳೆಲ್ಲ ಸುಟ್ಟಿದ್ದರಿಂದ ಇಬ್ಬರೂ ಬರಿ ಬತ್ತಲೆಯೇ ಜಿಗಿದು ಕಡೆಗೆ ಬಂದರು. “ದೆವ್ವ ಬಂದವೆಂದು ಚೌಕಿದಾರ ಓಡಿಹೋದನು.

ಊರ ಗೌಡನು ತನ್ನ ಅರಿವೆ ಒಗೆದು ತರಲಿಕ್ಕೆ ಅಗಸನಿಗೆ ಹೇಳಿದನು. ಆದರೆ ಅಗಸನು ಹಳ್ಳಕ್ಕೆ ಹೋಗಲು ಸಿದ್ದನಾಗಲಿಲ್ಲ. ಹಳ್ಳದ ದಂಡೆಯಲ್ಲಿಯೇ
ಸುಡುಗಾಡು ಇತ್ತು. ದೆವ್ವ ಬೆನ್ನುಹತ್ತುವವೆಂದು ಚೌಕಿದಾರನು ಉರಲ್ಲೆಲ್ಲ ಹೇಳಿದ್ದನು. ಗೌಡನು ಅಗಸನಿಗೆ ಒತ್ತಾಯದಿಂದ ಅರಿವೆಗಳನ್ನು ಕೊಟ್ಟು ತಾನೂ ಕುದುರೆ ಹತ್ತಿ ಬೆನ್ನ ಹಿಂದೆ ಹೋದನು. ಬಟ್ಟಿ ಒಗೆದು ದಡದಲ್ಲಿ ಒಣಹಾಕಲಾಯಿತು. ಆ ಬಟ್ಟೆಗಳನ್ನು ತೆಗೆದುಕೊಳ್ಳಲು ಇಬ್ಬರೂ ಆ ಗಂಡಹೆಂಡತಿ ಓಡುತ್ತ ಬಂದರು.

“ಅಯ್ಯಯ್ಯೋ ದೆವ್ವ ಹಿಡಿಯುತ್ತವೆ” ಎನ್ನುತ್ತ ಅಗಸ ಮತ್ತು ಗೌಡ ಇಬ್ಬರೂ ಓಡಿದರು. ಅಂದು ಆ ಗಂಡ ಹೆಂಡತಿ ಅಗಸನ ಬಟ್ಟೆ ಹಾಕಿಕೊಂಡು ಬಂದಂದಿನಿಂದ ಹಾರುವರು, ಲಮಾಣಿಗರಾದರಂತೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...