ಹೂಂ ಅಂದರೆ ಒಂದೇ ಉಂಡಿ

ಹೂಂ ಅಂದರೆ ಒಂದೇ ಉಂಡಿ

ಚಿತ್ರ: ಸರಿನಾ
ಚಿತ್ರ: ಸರಿನಾ

ಗಂಡ ಹೆಂಡಿರಿಬ್ಬರು. ಒಂದುದಿನ ಹೆಂಡತಿ ಮಾಲಾದಿ ಮಾಡಿ ಮೂರು ಉಂಡಿ ಕಟ್ಟಿಟ್ಟಳು. “ಮಾಲಾದಿ ನಾ ಮಾಡೀನು. ಎರಡು ನನಗೆ ಒಂದು ನಿನಗ”
ಎಂದಳು ಹೆಂಡತಿ.

“ಇಲ್ಲ. ನಾ ಮಾಡಿಸಂದಾಂವ. ನನಗೆ ಎರಡು ಉಂಡಿ ನಿನಗೆ ಒಂದು ಉಂಡಿ” ಎಂದು ಗಂಡನವಾದ.

ಒಂದು ತಾಸು ಜಗಳಾಡಿದರು. ಯಾರೂ ಉಣ್ಣಲಿಲ್ಲ. ಕಡೆಯಲ್ಲಿ ಒಂದು ನಿರ್ಧಾರಕ್ಕೆ ಬಂದರು – “ಯಾರು ಹೂಂ ಅಂತಾರೊ ಅವರು ಒಂದು
ತಿನ್ನಬೇಕು. ಸುಮ್ಮನೆ ಮನಗಿದವರಿಗೆ ಎರಡು.”

ನಾಯಿ ಬಂದು ಮಾಲಾದಿ ತಿನ್ನ ಹತ್ತಿತು. ನಾಯಿಯನ್ನು ಹೊಡೆಯುವರಾರು? ಹೊಡೆದರೆ ಹೂಂ ಅನ್ನಬೇಕಾಗುತ್ತದೆ. ಹೂಂ ಅಂದವರಿಗೆ ಒಂದಽ ಉಂಡಿ. ಅದಕ್ಕಾಗಿ ಅವನೂ ಹೂಂ ಅನಲಿಲ್ಲ. ಅವಳೂ ಹೂಂ ಅನಲಿಲ್ಲ. ಹಾಗೇ ಮಲಗಿದರು.

ಹೊತ್ತು ಹೊರಟಿತು. ಸೂರ್ಯನು ಮಾರು ಮೇಲೆ ಏರಿ ಬಂದನು. ಅವರ ಮುಚ್ಚಿದ ತಟ್ಟಿ ಮುಚ್ಚಿದ ಹಾಗೆಯೇ ಇತ್ತು. ನೆರೆಹೊರೆಯವರು ತಟ್ಟಿ
ಬಡಿದರು. ಹೂಂ ಅನಲಿಲ್ಲ; ಹಾಂ ಅನಲಿಲ್ಲ. ನಾಲ್ಕು ಮಂದಿ ನೆರೆದರು. ತಟ್ಟಿ ಮುರಿದರು. ಒಳಗೆ ಹೊಕ್ಕರು. ಇಬ್ಬರಿಗೂ ಮಾತಾಡಿಸಿ ನೋಡಿದರು. ಅಗಳಾಡಿಸಿ ನೋಡಿದರು. ಮಿಸುಕಲೇ ಇಲ್ಲ ಯಾರೂ.

ಇಬ್ಬರೂ ಸತ್ತಿದ್ದಾರೆಂದು ನಿರ್ಧರಿಸಿ ಕುಳ್ಳುಕಟ್ಟಿಗೆಗಳನ್ನು ಹೊತ್ತೊಯ್ದು ಸುಡುಗಾಡಿನಲ್ಲಿ ಒಗೆದು ಬಂದರು. ಇಬ್ಬರನ್ನೂ ನಾಲ್ಕು ನಾಲ್ಕು ಜನ ಹೊತ್ತರು.
ಇಬ್ಬರೊಳಗಾರೂ ಹೂಂ ಅನಲಿಲ್ಲ. ಹೂಂ ಅಂದರೆ ಒಂದೇ ಉಂಡಿ ಅಲ್ಲವೇ?

ಕುಳ್ಳು ಕಟ್ಟಿಗೆಯ ತಾಳಿಯ ಮೇಲೆ ಹೆಣ ಒಗೆದರು. ಉರಿ ಹಚ್ಚಿದರು. ಚೌಕೀದಾರನನ್ನು ಅಲ್ಲಿ ನಿಲ್ಲಿಸಿ ಮಂದಿಯೆಲ್ಲ ತಂತಮ್ಮ ಮನೆಗೆ ಹೋದರು.
ಬೆಂಕಿ ಹೊತ್ತಿದಂತೆ ಮೈಯೆಲ್ಲ ಸುಡುತ್ತ ಬಂತು. ಇಬ್ಬರಲ್ಲಿ ಒಬ್ಬರೂ ಸೋಲಲಿಲ್ಲ. ಕಿರಿ ಬೆರಳೊಂದು ಛಟ್ ಎಂದು ಸಿಡಿದು ಬಂದು ಬಿತ್ತು. “ಥೂ ! ನೀನೇ ಎರಡು ಉಂಡಿ ತಿನ್ನು” ಎಂದನು ಗಂಡ. ಮೈಮೇಲಿನ ಬಟ್ಟೆಬರೆಗಳೆಲ್ಲ ಸುಟ್ಟಿದ್ದರಿಂದ ಇಬ್ಬರೂ ಬರಿ ಬತ್ತಲೆಯೇ ಜಿಗಿದು ಕಡೆಗೆ ಬಂದರು. “ದೆವ್ವ ಬಂದವೆಂದು ಚೌಕಿದಾರ ಓಡಿಹೋದನು.

ಊರ ಗೌಡನು ತನ್ನ ಅರಿವೆ ಒಗೆದು ತರಲಿಕ್ಕೆ ಅಗಸನಿಗೆ ಹೇಳಿದನು. ಆದರೆ ಅಗಸನು ಹಳ್ಳಕ್ಕೆ ಹೋಗಲು ಸಿದ್ದನಾಗಲಿಲ್ಲ. ಹಳ್ಳದ ದಂಡೆಯಲ್ಲಿಯೇ
ಸುಡುಗಾಡು ಇತ್ತು. ದೆವ್ವ ಬೆನ್ನುಹತ್ತುವವೆಂದು ಚೌಕಿದಾರನು ಉರಲ್ಲೆಲ್ಲ ಹೇಳಿದ್ದನು. ಗೌಡನು ಅಗಸನಿಗೆ ಒತ್ತಾಯದಿಂದ ಅರಿವೆಗಳನ್ನು ಕೊಟ್ಟು ತಾನೂ ಕುದುರೆ ಹತ್ತಿ ಬೆನ್ನ ಹಿಂದೆ ಹೋದನು. ಬಟ್ಟಿ ಒಗೆದು ದಡದಲ್ಲಿ ಒಣಹಾಕಲಾಯಿತು. ಆ ಬಟ್ಟೆಗಳನ್ನು ತೆಗೆದುಕೊಳ್ಳಲು ಇಬ್ಬರೂ ಆ ಗಂಡಹೆಂಡತಿ ಓಡುತ್ತ ಬಂದರು.

“ಅಯ್ಯಯ್ಯೋ ದೆವ್ವ ಹಿಡಿಯುತ್ತವೆ” ಎನ್ನುತ್ತ ಅಗಸ ಮತ್ತು ಗೌಡ ಇಬ್ಬರೂ ಓಡಿದರು. ಅಂದು ಆ ಗಂಡ ಹೆಂಡತಿ ಅಗಸನ ಬಟ್ಟೆ ಹಾಕಿಕೊಂಡು ಬಂದಂದಿನಿಂದ ಹಾರುವರು, ಲಮಾಣಿಗರಾದರಂತೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಮುದ್ರ
Next post ಮಿಂಚುಳ್ಳಿ ಬೆಳಕಿಂಡಿ – ೯

ಸಣ್ಣ ಕತೆ

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…