Home / ಕವನ / ಕವಿತೆ / ನರ್ತಕಿ ಬಂದಳು

ನರ್ತಕಿ ಬಂದಳು

ನರ್ತಕಿ ಬಂದಳು ಛಲ್‌ಝಲ್ ನಾದದಿ
ಠಮ ಢಮ ತಾಳಕೆ ಕುಣಿಯುತ್ತ
ಪಾತರಗಿತ್ತಿಯ ಆ ಕುಣಿತ.
ಪಾರ್ಥ ಸುಭದ್ರೆಯ ರಾಧಾಕೃಷ್ಣರ-
ನೊಬ್ಬಳೆ ತಾನೆಂದೆಣಿಸುತ್ತ
ರಂಗಸ್ಥಳದಲಿ ತಿರುಗುತ್ತ.

ತುಟಿಯಿಂದುರುಳುವ ಹಾಡಿನ ತನಿರಸ
ಮೌಕ್ತಿಕ ಮಣಿಯಂತುರುಳುವುದು;
ತಾಳದ ಓಜೆಗೆ ಜಾರುವುದು!
ಕತ್ತಲೆ ನಡುವಣ ಚಂದ್ರನ ಬಿಂಬವೊ
ಕೆದರಿತ ಹೆರಳದು ಇಕ್ಕೆಡೆಯು
ಸುಂದರ ಮುಖವೊ ಮಿನುಗೆಲೆಯು.

ಕಣ್ಣಾಲಿಗಳನು ಹೊರಳಿಸಿ ಉರುಳಿಸಿ
ದುಂಡನೆ ರುಂಡವನಲುಗಾಡಿ;
ಕಣ್ಣನು ಮೂಗಿನ ಮೇಲಿರಿಸಿ
ಕುಣುಕುಣು ಮೊಣಕಾಲಾಟದಿ ನೋಟದಿ
ಕೊಂಕಿಸಿ ನಡುವನು ಆ ಮಳ್ಳಿ
ಚಂಚಲ ಮಿಂಚಿನ ಬಾನ್‌ಬಳ್ಳಿ!

ಫಾರಸಿ ಹಿಂದೀ ವಂಗೀಯ ಕಲೆ
ಒಂದಾಯಿತು ಇಂದೀ ಮೇಳ!
ಬೃಂದಾವನದ ಆ ಲೀಲಾ!
ಬಂದಳು ನರ್ತಕಿ ಕೈಗಳ ಬೀಸುತ
ಕೆಳಮೇಲಾಂಗಗಳಾಡಿಸುತ
ಮೆಟ್ಟುತ ಬೆಟ್ಟಲಿ ಆ ಕುಣಿತ.

ಓಹೋ ಓಹೋ ಕನ್ನಡ ಗಾನ
‘ಕಥಕಳಿ’ಯಾಟದ ಬಯಲಾಟ
ಭರತನ ನಾಟ್ಯದ ಮನನೋಟ.
ಲಾಸ್ಯಾನರ್ತನ ನಟಕೇಸರಿ ಮನ
ಜುಂ ಝುಂ ಛಲ್ ಛಲ್ ಈ ಓಜ,
ನರ್ತನ ತೋರಿದ ನಟರಾಜ.

ಹೊರಳುವ ಅಂಗಗಳಾಟವ ನೋಡಿರೊ
ಬೆರಳನು ತೋರವ ತಿರುಳನ್ನು
ಕೊಂಕಿಸಿ ಕಾಲಿನ ನಿಲುವನ್ನು!
ದುಂಡನೆ ತಲೆಯನಲುಗಿಸಿ ತೋರುವ
ಮನ್ಮಥ ಕರೆಯೊ ಅದು ಕೇಳೊ!
ಚಕ ಚಕ ಎದೆಯ ಗೆಲುನೋಡೊ.

ಬಗ್ಗಿದಳೆದ್ದಳು ಹಾರಿದಳೋಡಿದ-
ಳೆಂತೀ ಆಟದ ಈ ಬಲ್ಮೆ
ಕುಲುಕಿತ ಅಂಗಗಳೀ ನಲ್ಮೆ.
ಊರ್ವಶಿ ರಂಭೆಯರಾದಿನದಾಟವ
ತೋರುತ ನರ್ತಕಿ ಬಂದಳದೊ,
ಕುಡಿನೋಟಾಡಿಸಿ ಕುಣಿವಳದೊ!

ಗಿರಿಗಿಟ ತಿರುಗಿದ ತೆರದಲಿ ತಿರುಗಿತು,
ಧಕಥಕ ಧೀಂಕಿಟ ಹಾರಿದಳು
ಗಾಳಿಯ ನರ್ತನ ತೋರಿದಳು.
ವಾನರ ಚೇಷ್ಟಾ ಗೋಷ್ಠಿಯಲಿರಿತಳು
ಹಿಂದೂ ಮುಂದೂ ಜೋಲಾಡಿ
ತನಗೇ ತಾನೇ ತೂಗಾಡಿ.

ಸೂರ್ಯನ ಕಾಂತಿಯ ನೋಡುತ ಭ್ರಾಂತಿಯಿಂ
ಥೈ ಥೈ ಹಾರಿತು-ಆ ರಭಸ
ಲೇ ಲೇ ತಟ್ಟುವ ಪದನ್ಯಾಸ!
ಢಮರುಗ ಭಾರಿಸಿ ಲೋಕವ ತಿರುಗಿಸಿ
ನರ್ತನ ತೋರಿದ ಪರಮೇಶ;
ಬಂದಳು ನರ್ತಕಿ-ಆ ವೇಷ!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...