ನರ್ತಕಿ ಬಂದಳು

ನರ್ತಕಿ ಬಂದಳು ಛಲ್‌ಝಲ್ ನಾದದಿ
ಠಮ ಢಮ ತಾಳಕೆ ಕುಣಿಯುತ್ತ
ಪಾತರಗಿತ್ತಿಯ ಆ ಕುಣಿತ.
ಪಾರ್ಥ ಸುಭದ್ರೆಯ ರಾಧಾಕೃಷ್ಣರ-
ನೊಬ್ಬಳೆ ತಾನೆಂದೆಣಿಸುತ್ತ
ರಂಗಸ್ಥಳದಲಿ ತಿರುಗುತ್ತ.

ತುಟಿಯಿಂದುರುಳುವ ಹಾಡಿನ ತನಿರಸ
ಮೌಕ್ತಿಕ ಮಣಿಯಂತುರುಳುವುದು;
ತಾಳದ ಓಜೆಗೆ ಜಾರುವುದು!
ಕತ್ತಲೆ ನಡುವಣ ಚಂದ್ರನ ಬಿಂಬವೊ
ಕೆದರಿತ ಹೆರಳದು ಇಕ್ಕೆಡೆಯು
ಸುಂದರ ಮುಖವೊ ಮಿನುಗೆಲೆಯು.

ಕಣ್ಣಾಲಿಗಳನು ಹೊರಳಿಸಿ ಉರುಳಿಸಿ
ದುಂಡನೆ ರುಂಡವನಲುಗಾಡಿ;
ಕಣ್ಣನು ಮೂಗಿನ ಮೇಲಿರಿಸಿ
ಕುಣುಕುಣು ಮೊಣಕಾಲಾಟದಿ ನೋಟದಿ
ಕೊಂಕಿಸಿ ನಡುವನು ಆ ಮಳ್ಳಿ
ಚಂಚಲ ಮಿಂಚಿನ ಬಾನ್‌ಬಳ್ಳಿ!

ಫಾರಸಿ ಹಿಂದೀ ವಂಗೀಯ ಕಲೆ
ಒಂದಾಯಿತು ಇಂದೀ ಮೇಳ!
ಬೃಂದಾವನದ ಆ ಲೀಲಾ!
ಬಂದಳು ನರ್ತಕಿ ಕೈಗಳ ಬೀಸುತ
ಕೆಳಮೇಲಾಂಗಗಳಾಡಿಸುತ
ಮೆಟ್ಟುತ ಬೆಟ್ಟಲಿ ಆ ಕುಣಿತ.

ಓಹೋ ಓಹೋ ಕನ್ನಡ ಗಾನ
‘ಕಥಕಳಿ’ಯಾಟದ ಬಯಲಾಟ
ಭರತನ ನಾಟ್ಯದ ಮನನೋಟ.
ಲಾಸ್ಯಾನರ್ತನ ನಟಕೇಸರಿ ಮನ
ಜುಂ ಝುಂ ಛಲ್ ಛಲ್ ಈ ಓಜ,
ನರ್ತನ ತೋರಿದ ನಟರಾಜ.

ಹೊರಳುವ ಅಂಗಗಳಾಟವ ನೋಡಿರೊ
ಬೆರಳನು ತೋರವ ತಿರುಳನ್ನು
ಕೊಂಕಿಸಿ ಕಾಲಿನ ನಿಲುವನ್ನು!
ದುಂಡನೆ ತಲೆಯನಲುಗಿಸಿ ತೋರುವ
ಮನ್ಮಥ ಕರೆಯೊ ಅದು ಕೇಳೊ!
ಚಕ ಚಕ ಎದೆಯ ಗೆಲುನೋಡೊ.

ಬಗ್ಗಿದಳೆದ್ದಳು ಹಾರಿದಳೋಡಿದ-
ಳೆಂತೀ ಆಟದ ಈ ಬಲ್ಮೆ
ಕುಲುಕಿತ ಅಂಗಗಳೀ ನಲ್ಮೆ.
ಊರ್ವಶಿ ರಂಭೆಯರಾದಿನದಾಟವ
ತೋರುತ ನರ್ತಕಿ ಬಂದಳದೊ,
ಕುಡಿನೋಟಾಡಿಸಿ ಕುಣಿವಳದೊ!

ಗಿರಿಗಿಟ ತಿರುಗಿದ ತೆರದಲಿ ತಿರುಗಿತು,
ಧಕಥಕ ಧೀಂಕಿಟ ಹಾರಿದಳು
ಗಾಳಿಯ ನರ್ತನ ತೋರಿದಳು.
ವಾನರ ಚೇಷ್ಟಾ ಗೋಷ್ಠಿಯಲಿರಿತಳು
ಹಿಂದೂ ಮುಂದೂ ಜೋಲಾಡಿ
ತನಗೇ ತಾನೇ ತೂಗಾಡಿ.

ಸೂರ್ಯನ ಕಾಂತಿಯ ನೋಡುತ ಭ್ರಾಂತಿಯಿಂ
ಥೈ ಥೈ ಹಾರಿತು-ಆ ರಭಸ
ಲೇ ಲೇ ತಟ್ಟುವ ಪದನ್ಯಾಸ!
ಢಮರುಗ ಭಾರಿಸಿ ಲೋಕವ ತಿರುಗಿಸಿ
ನರ್ತನ ತೋರಿದ ಪರಮೇಶ;
ಬಂದಳು ನರ್ತಕಿ-ಆ ವೇಷ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೯
Next post ತೇರು ಬಂತು, ದಾರಿ

ಸಣ್ಣ ಕತೆ

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

cheap jordans|wholesale air max|wholesale jordans|wholesale jewelry|wholesale jerseys