Home / ಕವನ / ಕವಿತೆ / ನರ್ತಕಿ ಬಂದಳು

ನರ್ತಕಿ ಬಂದಳು

ನರ್ತಕಿ ಬಂದಳು ಛಲ್‌ಝಲ್ ನಾದದಿ
ಠಮ ಢಮ ತಾಳಕೆ ಕುಣಿಯುತ್ತ
ಪಾತರಗಿತ್ತಿಯ ಆ ಕುಣಿತ.
ಪಾರ್ಥ ಸುಭದ್ರೆಯ ರಾಧಾಕೃಷ್ಣರ-
ನೊಬ್ಬಳೆ ತಾನೆಂದೆಣಿಸುತ್ತ
ರಂಗಸ್ಥಳದಲಿ ತಿರುಗುತ್ತ.

ತುಟಿಯಿಂದುರುಳುವ ಹಾಡಿನ ತನಿರಸ
ಮೌಕ್ತಿಕ ಮಣಿಯಂತುರುಳುವುದು;
ತಾಳದ ಓಜೆಗೆ ಜಾರುವುದು!
ಕತ್ತಲೆ ನಡುವಣ ಚಂದ್ರನ ಬಿಂಬವೊ
ಕೆದರಿತ ಹೆರಳದು ಇಕ್ಕೆಡೆಯು
ಸುಂದರ ಮುಖವೊ ಮಿನುಗೆಲೆಯು.

ಕಣ್ಣಾಲಿಗಳನು ಹೊರಳಿಸಿ ಉರುಳಿಸಿ
ದುಂಡನೆ ರುಂಡವನಲುಗಾಡಿ;
ಕಣ್ಣನು ಮೂಗಿನ ಮೇಲಿರಿಸಿ
ಕುಣುಕುಣು ಮೊಣಕಾಲಾಟದಿ ನೋಟದಿ
ಕೊಂಕಿಸಿ ನಡುವನು ಆ ಮಳ್ಳಿ
ಚಂಚಲ ಮಿಂಚಿನ ಬಾನ್‌ಬಳ್ಳಿ!

ಫಾರಸಿ ಹಿಂದೀ ವಂಗೀಯ ಕಲೆ
ಒಂದಾಯಿತು ಇಂದೀ ಮೇಳ!
ಬೃಂದಾವನದ ಆ ಲೀಲಾ!
ಬಂದಳು ನರ್ತಕಿ ಕೈಗಳ ಬೀಸುತ
ಕೆಳಮೇಲಾಂಗಗಳಾಡಿಸುತ
ಮೆಟ್ಟುತ ಬೆಟ್ಟಲಿ ಆ ಕುಣಿತ.

ಓಹೋ ಓಹೋ ಕನ್ನಡ ಗಾನ
‘ಕಥಕಳಿ’ಯಾಟದ ಬಯಲಾಟ
ಭರತನ ನಾಟ್ಯದ ಮನನೋಟ.
ಲಾಸ್ಯಾನರ್ತನ ನಟಕೇಸರಿ ಮನ
ಜುಂ ಝುಂ ಛಲ್ ಛಲ್ ಈ ಓಜ,
ನರ್ತನ ತೋರಿದ ನಟರಾಜ.

ಹೊರಳುವ ಅಂಗಗಳಾಟವ ನೋಡಿರೊ
ಬೆರಳನು ತೋರವ ತಿರುಳನ್ನು
ಕೊಂಕಿಸಿ ಕಾಲಿನ ನಿಲುವನ್ನು!
ದುಂಡನೆ ತಲೆಯನಲುಗಿಸಿ ತೋರುವ
ಮನ್ಮಥ ಕರೆಯೊ ಅದು ಕೇಳೊ!
ಚಕ ಚಕ ಎದೆಯ ಗೆಲುನೋಡೊ.

ಬಗ್ಗಿದಳೆದ್ದಳು ಹಾರಿದಳೋಡಿದ-
ಳೆಂತೀ ಆಟದ ಈ ಬಲ್ಮೆ
ಕುಲುಕಿತ ಅಂಗಗಳೀ ನಲ್ಮೆ.
ಊರ್ವಶಿ ರಂಭೆಯರಾದಿನದಾಟವ
ತೋರುತ ನರ್ತಕಿ ಬಂದಳದೊ,
ಕುಡಿನೋಟಾಡಿಸಿ ಕುಣಿವಳದೊ!

ಗಿರಿಗಿಟ ತಿರುಗಿದ ತೆರದಲಿ ತಿರುಗಿತು,
ಧಕಥಕ ಧೀಂಕಿಟ ಹಾರಿದಳು
ಗಾಳಿಯ ನರ್ತನ ತೋರಿದಳು.
ವಾನರ ಚೇಷ್ಟಾ ಗೋಷ್ಠಿಯಲಿರಿತಳು
ಹಿಂದೂ ಮುಂದೂ ಜೋಲಾಡಿ
ತನಗೇ ತಾನೇ ತೂಗಾಡಿ.

ಸೂರ್ಯನ ಕಾಂತಿಯ ನೋಡುತ ಭ್ರಾಂತಿಯಿಂ
ಥೈ ಥೈ ಹಾರಿತು-ಆ ರಭಸ
ಲೇ ಲೇ ತಟ್ಟುವ ಪದನ್ಯಾಸ!
ಢಮರುಗ ಭಾರಿಸಿ ಲೋಕವ ತಿರುಗಿಸಿ
ನರ್ತನ ತೋರಿದ ಪರಮೇಶ;
ಬಂದಳು ನರ್ತಕಿ-ಆ ವೇಷ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...