Home / ಕವನ / ಕವಿತೆ / ತೇರು ಬಂತು, ದಾರಿ

ತೇರು ಬಂತು, ದಾರಿ


ಗಾಲಿ ಉರುಳಿದಂತೆ-ಕಾಡಿನ
ಗಾಳಿ ಹೊರಳಿದಂತೆ-
ಬಾನ ದೇಗುಲದ
ಬೆಳ್ಳಿ ಗೋಪುರದ
ಘಂಟೆ ಮೊಳಗಿದಂತೆ,
ಹಾಲು ಕಂಚಿನ
ಹೊನ್ನ ಮಿಂಚಿನ
ಘಂಟೆ ಮೊಳಗಿದಂತೆ,
ಊರ ದಾರಿಯಲಿ
ಹೂವ ತೇರಿನಲಿ
ಕೃಷ್ಣ ಬರುವನಂತೆ!


ಎತ್ತಿ ನೋಡು ಕಣ್ಣ, ಬಾನಿಗೆ
ಹತ್ತಿ ಹೊಳೆವ ಬಣ್ಣ!
ಬೆಳದ ಭಕ್ತಿಯೇ ಊರ ದೇವರಿಗೆ
ತೇರು ಆಯಿತಣ್ಣ!
ಗುಡಿಯ ಮಟ್ಟದ
ಗುಡುಗು ಹುಟ್ಟುವ
ನಡೆದು ಬರುವ ಬೆಟ್ಟ!
ಗಿರಿಯನೆತ್ತಿದ
ಕೊಳಲ ಬಿತ್ತಿದ
ಕೃಷ್ಣ ಬಂದುಬಿಟ್ಟ,
ಚೆಲುವ ಬಂದುಬಿಟ್ಟ!


ಗೋಪಿ ನೀನೆ ಧನ್ಯೆ! – ಕೃಷ್ಣ
ನಿನ್ನ ಕಂದನೇನೆ?
ಇಲ್ಲಿ ನೋಡು ತಾನೇ ತನ್ನ
ತೇರನೇರಿದಾನೆ!
ಕೊಳಲ ಬಾರಿಸದೆ
ಜಗವ ತೋರಿಸದೆ
ಹಿಗ್ಗಿ ಬರುತಿದಾನೆ.
ಚರಣ ಚಂದ್ರಿಕೆಗೆ
ಜೀವ ಹಿಗ್ಗುತಿದೆ
ಕೃಷ್ಣ ಬರುತಿದಾನೆ-
ತೇರಮೇಲೆ ತಾನೆ.


ತೇರು ಬಂತು ದಾರಿ-ದಾರಿ!
ಹಣ್ಣು ದವನ ಬೀರಿ!
ಬೀದಿ ತಿರುಗಿನಲಿ
ಜನದ ಕರಗಿನಲಿ
ತೇರು ಬಂತು ದಾರಿ!
ತಡೆದು ಗುಡುಗಿ ಬಹ
ದೊಡ್ಡ ತೇರು, ಅಹ!
ಬಿಡಿರಿ ಬಿಡಿರಿ, ದಾರಿ!
ಮುತ್ತ ಮೆಟ್ಟಿರುವ
ಮಕುಟವಿಟ್ಟಿರುವ
ಕೃಷ್ಣ ಬಂದ, ದಾರಿ!


ಸೆರಗ ಸೆಳೆದರಿಯ, ಬೆಣ್ಣೆ ಕದ್ದರಿಯ;
ಚೆಲುವ ಬಂದ, ದಾರಿ!
ಹಣೆಯ ಕತ್ತುರಿಯ, ತಿಲಕದಚ್ಚರಿಯ
ಕಂದ ಬಂದ, ದಾರಿ!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...