Home / ಕವನ / ಕವಿತೆ / ನಮ್ಮ ಹೂವುಗಳು

ನಮ್ಮ ಹೂವುಗಳು

ಹೂವರಳಿ ನಿಂತು ಕಾಯಾಗಲೆಂದು
ಕಾದೂ ಕಾದೂ ಕಣ್ಣು ಬೆಳ್ಳಗಾಗುತ್ತವೆ
ಮೊಗ್ಗಿದ್ದಾಗಿದ್ದ ಮುರುಕ ಮೊನಚೆಲ್ಲಾ
ಬಿಚ್ಚಿಟ್ಟ ಎಸಳಿನೊಳಗೆ ಮುದುರಿ ಹೋಗುತ್ತದೆ
ಅದೇ ಅರಳಿದಾಗ ನಕ್ಕಿದ್ದು ಅರುಣೋದಯದಂತೆ ಕ್ಷಣಿಕ
ಬಿಸಿಲೇರಿದಂತೆಲ್ಲಾ ಈ ಹೂಗಳಿಗೆ ಅಗ್ನಿದಿವ್ಯ ಕಾಲ
ಕಾಯಲು ಹೆದರಿ ಕೆಲವು ಉದುರಿಯೇ ಹೋಗುತ್ತವೆ
ಹಣ್ತನ ಅವಕ್ಕೊಂದು ಕಲ್ಪನೆಯ ಕಗ್ಗ

ಕೆಲವು ಎಲೆಮರೆಯೊಳಗೇ ತುಂಬಿಗಳಿಂದ
ಮಬ್ಬು ತುಂಬಿಸಿಕೊಳ್ಳುತ್ತವೆ

ಕಾಯಿ-ಹಣ್ಣಾಗುವ ಬದಲು ಕಾತದ್ದು ಕೀತ ಹುಣ್ಣಾಗುತ್ತದೆ
ಹಾಡಾ ಹಗಲೆ ಕಾವಳ ಮುಚ್ಚಿಕೊಳ್ಳುತ್ತದೆ
ಕೆಂಪು ದೀಪದ ಕೆಳಗೆ ಹದ್ದು ನಾಯಿಗಳಿಗೆ ತಿಪ್ಪೆಭೋಜನವಾಗುತ್ತವೆ.

ಕೆಲವು ಕವಿದ ನೆರಳನ್ನು ಕಳಚಿಕೊಂಡು
ಹೊಸ ಮುಖದ ವೇಷ ತಳೆಯುತ್ತವೆ
ಮತ್ತೆ ಕಾದಿದ್ದ ಹೂಗಳ ಸಾಲು ಸೇರಿ ಹಲ್ಲು ಬಿರಿಯುತ್ತವೆ.
ಜೋಲುವ ಪಕಳೆಗಳ ಸಾವರಿಸಿಕೊಳ್ಳುತ್ತಾ
ಹಿಗ್ಗಿರುವುವು ಕುಗ್ಗಿ, ಕುಗ್ಗಿಯೂ ಹಿಗ್ಗಿದಂತೆ ಮಾಡಿ
ಅಂತೂ ಹಿಗ್ಗಾಮುಗ್ಗಾ ತಿಕ್ಯಾಡಿ
ಮೇಣ ಪಡಿಯಚ್ಚಿನಲ್ಲಿ ಕರಗಿ ಹಣ್ಣುಕಾಯಾಗಲು
ಹವಣಿಸುತ್ತವೆ

ಕಾಯಿಯ ಮುದ್ರೆಯೊತ್ತಿಸಿಕೊಂಡು
ತಾಯಾಗಲು ತಾಯತ ಕಟ್ಟಿಸಿಕೊಂಡು
ಎಲ್ಲರೆದುರು ಲಿಂಗಪೂಜೆಗಣಿಯಾದಾಗ
ಜನ್ಮಸಾರ್ಥಕತೆಯ ಹೂಮಳೆ
ಬಾಷ್ಪದೊಡನೆ ಬೆರೆತು ಹೋಗುತ್ತದೆ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...