Home / ಕವನ / ಕವಿತೆ / ದೇಶಾವರಿ

ದೇಶಾವರಿ

ಬರ್ರಿ ಹೀಗೇ ದೇಶಾವರಿ, ಮಾತಾಡಾಣ,
ನಿಮ್ಮ ಕಡೆ ಮಳೆ ಬೆಳಿ ಹೆಂಗೆ? ಅಷ್ಟೇ! ಎಲ್ಲಾ ಕಡಿಗೂ
ದೇಶಾದಾಗೆಷ್ಟು ಪಾರ್ಟಿಗಳನಾ ಇರಲಿ
ನಮ್ಮೂರಗೆಳ್ಡೆ ಪಾರ್ಟಿ ನೋಡ್ರಿ ಎಂದೆಂದಿಗೂ,
ನಿಮ್ಮೂರಾನ ಪಾರ್ಟಿಗಳು ಎಷ್ಟು ಮನಿ ಮುರದುವು?
ಎಷ್ಟು ಬಣವಿ ಸುಟ್ಟು ಎಷ್ಟು ಪಂಪಸೆಟ್ ಕಳವು ಮಾಡಿಸಿದುವು?
ಎಷ್ಟು ಕಳವು ಮಾಡಿಸಿದುವು, ಎಷ್ಟು ತಾಳಿ ಕಿತ್ತವು?
ಎಷ್ಟು ಮನಿ ದೀಪಾ ತಗದುವು?

ನಿಮ್ಮೂರ ದೇವ್ರುಗಳು ಎಷ್ಟು ಸಾಲಾ ಮಾಡಿಸಿದುವು?
ಹಳೆ ಬಾವಿಗಳಾಗೆಷ್ಟು ಹಳಸು ಗ್ವಾತ ಹಾಕಿದುವು?
ಜಾತಿ ಭೇದದ ಬೇರಿಗೆಷ್ಟು ನೀರು ಹಾಕಿದುವು?
ನಿಮ್ಮೂರ ರಾಕ್ಷಸರು ಎಷ್ಟು ಬಾಳ್ವೆ ಕೆಡಿಸಿದರು?
ಎಷ್ಟು ರಂಡೇರ ಎಷ್ಟು ಗರ್ಭಪಾತ ಮಾಡಿಸಿದುವು?
ಹೊಸಗಾಳಿಗಳಾಗೆ ಎಷ್ಟು ತೂರಿಕೊಂಡು ಗೂಳ್ಯಾಗಿ ಮೆರದರು?
ಹುಚ್ಚು ಮುಂಡೇ ಮದುವ್ಯಾಗೆಷ್ಟು ಜಾಣರುಂಡರು?

ಎಷ್ಟು ಹರೇವುಗಳು ಹದ್ದುಮೀರಿ ಓಡಿದುವು?
ಎಷ್ಟು ಹಾದರಾ ಬಾವ್ಯಾಗೆ ತೇಲಿದುವು? ತಿಪ್ಯಾಗೆ ಹೂಳಿದುವು?
ಎಷ್ಟು ಮಣಕಾ ಹಳೇ ಎತ್ತುಗಳ ಕಾಲಾಗೆ ಬಿದ್ವು?

ಇನ್ನು ದೇಶದ ದೇಶಾವರೀನಾ!
ಊರುಡಾಳರ ಆಡಳಿತಾ, ಕಳ್ಳ ಕದೀಮರ ಮೆರೆತಾ
ಹಸಗೆಟ್ಟ ದೇಶದ ದೇಹಸ್ಥಿತಿಗೆ ಹೊಸ ಕಂತ್ರಿ ಔಷಧ,
ದಿನದಿನಕೆ ರೋಗ ಉಲ್ಬಣ, ದೇಹ ಬರೀ ಮೂಳೆ ತೊಗಲು
ಕೆಲವು ಕಡಿಗೆ ಹಣದುಬ್ಬರದ ಕೀವು ಬಾವು

ಪೊಳ್ಳು ಆಶ್ವಾಸನಗಳ ಗುಳ್ಳೆ ತೇಲ್ತಾವೆ,
ಐದು ವರ್ಷದಾಗೆಷ್ಟು ಬೇಕೋ ಅಷ್ಟು ಕಾರಭಾರ
ಅವರ ಮನೆತನ ಕಳಬಳ್ಳೆಲ್ಲ ನಾಕೈದು ತಲೆಮಾರ ಹಾರಭಾರಾ
ಇವತ್ತು ಕೈಕೈ ಮಿಲಾಪು ನಾಳೆ ಕುತ್ತಿಗೆ ಕುತ್ತಿಗೆ ರೋಪು
ಹೀಂಗೇ ನಾಟಕಾ ನಡದಾದ ಸ್ವಾಮೀ!
ದೇಶದಾಗ ದೇಶ ಉಳಿದಿಲ್ಲ ಬರೀ ದೇಶಾವರೀನೇ ನಡದಾದ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...