Home / ಕಥೆ / ಕಿರು ಕಥೆ / ಎರಡು ಪರಿವಾರಗಳು

ಎರಡು ಪರಿವಾರಗಳು

ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು.

ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ ಹಸಿರಾದ ಎಲೆ ಚಿಗುರು; ಒತ್ತು ಒತ್ತಾಗಿ ಬೆಳೆದ ಗಿಡಗಳಲ್ಲಿ ಬಣ್ಣ ಬಣ್ಣದ ಹೂವುಗಳು, ಕಾಯಿಗಳು, ತೋಟಕ್ಕೆ ಬೇಲಿ ಇಲ್ಲ ಗೇಟು, ಬಾಗಿಲು ಇಲ್ಲ. ಅದು ಹಕ್ಕಿಯ ಪರಿವಾರದ ಪ್ರಕೃತಿದತ್ತ ಮನೆ ದಶ ದಿಕ್ಕುಗಳಿಂದಲೂ ಹಾರಿಹಾರಿ ಹಾಡಿಬರುವ ನಾನಾ ವಿದಧ ಸುಂದರ ಹಕ್ಕಿಗಳ ಚಿಲಿಪಿಲಿಯಲ್ಲಿ ಸ್ನೇಹ ಸಂಬಂಧಗಳ ಆತ್ಮೀಯ ಆಲಾಪಗಳು, ಎಲ್ಲಾ ನಿರಾತಂಕದ ವಾತಾವರಣ, ಕಿವಿಗೊಟ್ಟರೆ ಚಿಲಿಪಿಲಿಯ ಶಾಂತಿಮಂತ್ರ. ಹಕ್ಕಿಗಳ ರೆಕ್ಕೆ ಪುಕ್ಕದ ಅವರ್ಣನೀಯ ವರ್ಣಸಿಂಧುವಿನ ಸೊಬಗು ನಯನಮನೋಹರ. ಹಕ್ಕಿ ಪರಿವಾರಗಳಲ್ಲಿ ಅದೆಂತಹ ಶಿಸ್ತು, ಅದೇನು ಸೊಗಸು. ತಾಯಿ ಹಕ್ಕಿ ಪರಿವಾರದಲ್ಲಿ ಮರಿಗಳನ್ನು ನೋಡಿಕೊಂಡರೆ ಇನ್ನೊಂದರಲ್ಲಿ ಅದು ತಂದೆ ಹಕ್ಕಿಯ ಕೆಲಸ. ತಾಯಿಕೋಗಿಲೆ ಮೊಟ್ಟೆ ಇಟ್ಟು ಹೋದರೆ ಅಪರಿಚಿತ ಕಾಗೆಯ ಶುಶ್ರೂಷೆ. ಇದೆಂತಹಾ ಸೇವಾ ಮನೋಭಾವ! ಗೂಡು ಕಟ್ಟುವುದರಲ್ಲಿ ಗಂಡು ಹೆಣ್ಣು ಹಕ್ಕಿಯ ಸಹಕಾರ, ಕೌಶಲ್ಯ ಎಲ್ಲ ಬೆರಗು ತರುವಂತಹುದು. ಇನ್ನು ಉದಯ ರವಿಕಿರಣದೊಂದಿಗೆ ಸುಪ್ರಭಾತದ ನವೋದಯದ ಸಂದೇಶ, ಮತ್ತೆ ಆಹಾರ ವಿಹಾರ, ಮಕ್ಕಳಿಗೆ ಹುಳು ಹುಪ್ಪಟೆಗಳ ಫಲಹಾರ. ಎಲ್ಲದರಲ್ಲೂ ಒಂದು ಸೈನಿಕ ಶಿಸ್ತು ಒಂದು ಛಂದೋಬದ್ಧತೆ, ಬಿಗಿ ಬಾಂಧವ್ಯ, ಸರಾಗ ಸಂಸಾರ ಲೀಲೆ ಸಂಗೀತಮಯ ಚಿಲಿಪಿಲಿಯ ಸಂಸಾರ ಈ ಹಕ್ಕಿಗಳ ಪರಿವಾರದ್ದು. ಹಗುರವಾಗಿ ನೆರೆನೆರಿಗೆಯಲ್ಲಿ ಹರಡಿದ ಹಕ್ಕಿಯ ರೆಕ್ಕೆ ಪುಕ್ಕದ ಗರಿಗಳಲ್ಲಿ ಅದೆಷ್ಟು ಕಾರ್ಯಕ್ಷಮತೆ. ಎತ್ತರ ಎತ್ತರಕ್ಕೆ ಹಾರುವ ಆ ಭವ್ಯತೆ ಎಲ್ಲವೂ ಬೆರಗು ತರುವಂತಹುದು.

ಮರಿಗಳ ರೆಕ್ಕೆ ಬಲಿತ ಮೇಲೆ ಅವು ಹಾರಿ ಹೋಗುವಾಗ ತಾಯಿ ತಂದೆ ಹಕ್ಕಿಗೆ ಅದೆಷ್ಟು ಸಂತಸ? ಅವುಗಳ, ಆರೈಕೆ, ಪ್ರೀತಿಯಲ್ಲಿ ನಿರೀಕ್ಷೆಯಿಲ್ಲ, ಫಲಾಪೇಕ್ಷೆಯಿಲ್ಲ. ಹಾರುವ ಹಕ್ಕಿಗಳಲ್ಲಿ ಆಗಸದ ಮನೋವೈಶಾಲ್ಯ. ಮರದ ರೆಂಬೆಗಳಿಗೆ ಅಂಟಿ ಅಂಟಿಕೊಳ್ಳದ ಸ್ವಾತಂತ್ರಮಯ ಹಾರಾಟ. ಇದೇ ನನ್ನ ಮರ, ಇದೇ ನನ್ನ ರೆಂಬೆ ಎನ್ನುವ ಮಮಕಾರವಿಲ್ಲ. ಯಾವ ಗಿಡವಾದರೇನು? ಯಾವ ಮರವಾದರೇನು? ರೆಂಬೆ ಒಣಗಿದ್ದರೇನು? ಹಸಿರಾಗಿದ್ದರೇನು? ಬಂದು ಕುಳಿತು ಇತರ ಹಕ್ಕಿಗಳೊಂದಿಗೆ ಒಡನಾಡಿ ಹಾಡಿ ಹಾರಿ ಹೋಗುವ ಹಕ್ಕಿಗಳೆಲ್ಲಿ, ನಾವೆಲ್ಲಿ?

ಈಗ ಬರೋಣ ಮಾನವ ಪರಿವಾರದ ದೊಡ್ಡ ಮನೆಗೆ. ಇಲ್ಲಿ ಎಲ್ಲಿ ನೋಡಿದರೂ ಸಿಮೆಂಟಿನ, ಇಟ್ಟಿಗೆ, ಕಲ್ಲಿನ ಗೋಡೆಗಳು, ಇದಕ್ಕೆ ಜೋಡಿಸಿದ ಕಿಡಿಕಿಗಳು, ಬಾಗಿಲುಗಳು, ಅವುಗಳಿಗೆ ಭದ್ರಪಡಿಸುವ ಚಿಲಕಗಳು, ಅಗುಳಿಗಳು, ಬೋಲ್ಟುಗಳು, ಬೇಲಿಗಳು ಒಂದೇ ಎರಡೇ? ಇಲ್ಲಿ ಇರುವುದು ದುಡಿಯುವ ಅಪ್ಪ, ಬೆನ್ನು ಬಗ್ಗಿ ಹೃದಯ ಕೊಟ್ಟು ಮನೆಯ ಶ್ರೇಯಸ್ಸಿಗೆ ದುಡಿಯುವ ಅಮ್ಮ, ಬೆಳ್ಳಿ ಕೂದಲಿನಿಂದ ಹೊಳೆಯುವ ಜೋಲು ಚರ್ಮದ ಅಜ್ಜಿ, ತಾತ, ಪ್ರೀತಿಸಿದರೂ ಜಗಳ ಕದನ ಮಾಡುವ ಅಣ್ಣ ತಮ್ಮಂದಿರು. ಒಡಹುಟ್ಟಿದ್ದರು ಹೊಟ್ಟೆ ಕಿಚ್ಚಿನ ಅಕ್ಕ ತಂಗಿಯರು. ಬಾಂಧವ್ಯದ ಬಿಗಿಯರಿಯದ ಕೊಂಕು ಮಾತಿನ ಅತ್ತೆ ಮಾವಂದಿರು. ಅಪ್ಪ ಅಮ್ಮ ಮಕ್ಕಳ ನಡುವೆ ಪ್ರೀತಿಸೆರೆ ಹರಿದರೂ ಮುಂದೆ ತಮ್ಮ ಮುದಿತನದ ಕಾಲಕ್ಕೆ ಆಶ್ರಯರಾಗುತ್ತಾರೆಂಬ ಪ್ರತಿಫಲಾಪೇಕ್ಷೆ ಮತ್ತು ನಿರೀಕ್ಷೆಯ ಸ್ವಾರ್ಥ. ಮಕ್ಕಳು ನಾವು ಹೇಳಿದಂತೆ ಕೇಳಬೇಕೆಂಬ ಹಿರಿಯರ ಒತ್ತಡ. ಇಲ್ಲಿ ಸ್ವಚ್ಛಂದಕ್ಕೆ ಎಡೆಕೊಡುವ ಅತಿಯಾದ ಪ್ರೀತಿ. ಪರಿವಾರದಲ್ಲಿ ಈ ತೆರನಾದ ಉಸಿರು ಕಟ್ಟುವ ವಾತಾವರಣ ಮಕ್ಕಳಿದ್ದಾಗ ಮಮತೆಯ ಮಡಿಲಿನಲ್ಲಿ ಬೆಳೆದು ದೊಡ್ಡವರಾಗಿ ವಿದ್ಯೆಗಾಗಿ, ಉದ್ಯೋಗಕ್ಕಾಗಿ ದೂರ ದಡಗಳನ್ನು ಸೇರಿದಾಗ ಮನವನ್ನು ಕಾಡುವ ಭಾವಗಳು. ಇನ್ನು ಮಕ್ಕಳು ಮದುವೆಯಾಗಿ ಸಂಸಾರ ಹೂಡಿ ಸೊಸೆ ಒಡಗೂಡಿ ನಡೆದಾಗ ಅದೇಕೊ ಅನುಭವಿಸುವ ಹೃದಯದ ಅಧೀರತೆ, ಎಂದೂ ಪ್ರೀತಿಯ ಸೆರೆಹಾಕುವ ಮನದ ತೀವ್ರತೆ. ಹಕ್ಕಿ ಬಲಿತ ರೆಕ್ಕೆಯ ಮರಿಹಾರುವುದನ್ನು ನೋಡಿ ಪಡುವ ಸಂತಸ ನಮಗೇಕೆ ಆಗಲಾರದು?

ನಮ್ಮ ಪರಿವಾರಕ್ಕೂ ಹಕ್ಕಿಯ ಪರಿವಾರಕ್ಕೂ ಅದೆಷ್ಟು ಅಜಗಜಾಂತರ!
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್‍ ಚಂದ್ರ