Home / ಕವನ / ಕವಿತೆ / ನೆಮ್ಮದಿಯೆಲ್ಲೆಡೆಗೆ

ನೆಮ್ಮದಿಯೆಲ್ಲೆಡೆಗೆ

ನೆಮ್ಮದಿಯು ಸರ್ವರಿಗೆ ನೆಮ್ಮದಿಯು ಎಲ್ಲೆಡೆಗೆ
ನೆಮ್ಮದಿಯು ಭೂತಳದ ದೇಶಗಳಿಗೆಲ್ಲ

ಆನಂದವೆಲ್ಲರಿಗೆ ಆನಂದವೆಲ್ಲೆಡೆಗೆ
ಆನಂದವಿರಲೆಲ್ಲ ರಾಷ್ಟ್ರಗಳಲೆಲ್ಲ
ನೆಮ್ಮದಿಯು ಚೆಂಗುಲಾಬಿಯ ಬೆಳಗಿನಂತೆ
ಆನಂದ ನಸುನಗುವ ವಸಂತನಂತೆ

ಒಬ್ಬನಿಗೆ ಎಲ್ಲರೂ ಪ್ರತಿಯೊಬ್ಬನೆಲ್ಲರಿಗೆ
ಇದುವೆ ಬಾಳುವೆಯಲ್ಲೆ ಬಂಗಾರ ನಿಯಮ
ಜೀವನವು ಬೆಳಕು ಮೇಣ್ ಪ್ರೀತಿಗಳು ಎಲ್ಲರಿಗೆ
ಜೀವಿಗಳಿಗೆಲ್ಲರಿಗೆ ಪ್ರೇಮ ನಿಸ್ಸೀಮ

ಎಲ್ಲರಿಗೆ ಕಾಯಕವು ಅನ್ನ ಬಟ್ಟೆಗಳಿರಲಿ
ಸರಿಸಮತೆ ನೆಲಗೊಳ್ಳಲೆಲ್ಲರಲ್ಲಿ
ಮನೆ ಶಾಲೆ ಆರೋಗ್ಯವನುಕೂಲವೆಲ್ಲರಿಗೆ
ಸಂತಸದ ಜಗವಿರಲಿ ಎಲ್ಲೆಡೆಯಲಿ

ಸೋಮಾರಿ ಸಿರಿತನವು ಬರಿಹೊಟ್ಟೆ ಭಿಕ್ಷುಕರು
ಬೇಡವೈ ಎಲ್ಲರೂ ಸಮ ಕೆಲಸದಲ್ಲಿ
ಕಣ್ಣೀರ ಕರೆಬೇಡ ಅಂಜಿಕೆಯ ಪರಿಬೇಡ
ನಗುವುಕ್ಕಿ ಹರಿಯಲೀ ಎಲ್ಲರೆದೆಯಲ್ಲಿ

ಅಣುಶಕ್ತಿ ಭಯಬೇಡ ಸಿರಿರಾಷ್ಟ್ರ ಬಲಬೇಡ
ಯುದ್ಧ ರಾಕ್ಷಸನಿಗೋ ಸ್ಥಳವೆ ಬೇಡ
ಮರದ ಎಲೆಗಳ ರೀತಿ ಸೂರ್ಯಕಿರಣಗಳಂತೆ
ನಾವೆಲ್ಲ ದಿವ್ಯ ಮಾನವರು ನೋಡ

ನಿನ್ನೊಳಗಿನೊಳತಿರುಳು ಎಲ್ಲರೊಳಿತಿಗೆ ತುಡಿದು
ನಿನ್ನ ಜೀವವು ಎಲ್ಲ ಜೀವಗಳಿಗಾಗಿ
ನಿನ್ನ ದೇವರು ಎಲ್ಲ ಜನರಲ್ಲು ತುಂಬಿಹನು
ನಿನ್ನ ಪ್ರೀತಿಯು ಎಲ್ಲ ಮಾನವರಿಗಾಗಿ

ಅವನಿಗೋ ಅವಳಿಗೋ ಪ್ರತಿಯೊಬ್ಬ ವ್ಯಕ್ತಿಗೋ
ಸಹಬಾಳ್ವೆಯೇ ಬೆಳಕು ಅತ್ಯುತ್ತಮಾ
ಪಾಶ್ಚಾತ್ಯ ಪೌರಾತ್ಯ ಭೂಬಂಧುಗಳಿಗೆಲ್ಲ
ವಿಶ್ವ ಮಾನವ ಧರ್ಮ ಅತ್ಯುತ್ತಮ

ಸಸ್ಯ ಸಂತತಿಗೆಲ್ಲ ಪ್ರಾಣಿ ಪಕ್ಷಿಗಳಿಗೂ
ಗಿರಿಗಳಿಗೆ ವನಗಳಿಗೆ ಕಳಕಳದ ಹೊಳೆಗೆ
ನೆಲ ಜಲಕೆ ತಿರೆ ವಾಯು ಪಂಚಭೂತದ ಜಗಕೆ
ಚೈತನ್ಯ ನೆಮ್ಮದಿಯು ತುಂಬಿ ಬೆಳಗೆ

ಎಲ್ಲರಿಗೂ ನೆಮ್ಮದಿಯು ಎಲ್ಲೆಡೆಗು ನೆಮ್ಮದಿಯು
ಅಮರ ಶಾಂತಿಯ ದಿವ್ಯ ಭವ್ಯ ನೆಮ್ಮದಿಯು
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...