ಭಯ ಪುರಾಣ

ಭಯಕೆ ನಾನಾ ರೂಪಗಳ ಕೊಟ್ಟು
ಬಂಗಾರ ಬೆರಳುಗಳಿಂದ ಅಲಂಕರಿಸಿ
ಕಳ್ಳರ ಭಯಕ್ಕೆ ಭದ್ರವಾಗಿ ಬೀಗ ಜಡಿದು ಕುಳ್ಳರಿಸಿ
ಮಾರಿ ಕಾಲರಾ ಭಯ, ರೋಗ ರುಜಿನ ಭಯ
ಸಾವು ವೈರಿಗಳ ಭಯ ಮೊದಲಾದ ಅನೇಕ ಭಯಗಳು
ದೂರಾಗಲೆಂದು ಭಯದಿಂದ ಅಡ್ಡ ದಿಡ್ಡ ಬೋರಲು
ಬಿದ್ದು ಬೇಡುತ್ತೇವೆ
ಕತ್ತಲೆಯು ಕತ್ತಲೆಯನ್ನು ಹಡೆದಂತೆ
ಭಯವು ಭಯವನ್ನೇ ಹಡೆಯುತ್ತ ಹಡೆಯುತ್ತ
ದೇಶದಲ್ಲೆಲ್ಲಾ ಭಯದ ಹುಳುಗಳೇ ತುಂಬಿವೆ
ಭಯದ ಕೊಳ ಪಾಚಿಗಟ್ಟಿದೆ
ಅದರಲ್ಲೇ ಶಾಶ್ವತ ಕೊಳೆಯಲು
ಭಯಾನಕ ಅದ್ಭುತ ಗೊಳ್ಳು ಪುರಾಣಗಳು ಸಂಕೀರ್ತನೆಗಳು
ಕೊಳೆ ಹೊಳೆ ನಿರಂತರ ಹರಿದಿವೆ
ಭಯದಿಂದ ಅದನ್ನು ಕೇಳುತ್ತ ಕೇಳುತ್ತ
ಪ್ರಶ್ನೆ ಮಾಡುವ ಶಕ್ತಿ ಸತ್ತು ಹೋಗಿದೆ
ಭಯದ ಪಾಳುಬಾವಿ ಎಂದೆಂದೂ ಬತ್ತದಂತೆ
ವಟಗುಟ್ಟುವ ಕಪ್ಪೆಗಳು ಹೊಟ್ಟೆ ಬೆಳೆಸಿಕೊಳ್ಳುತ್ತವೆ
ಶರಣಾಗಿ ತಲೆಬಾಗದವರನ್ನು
ರಕ್ತ ಕಾರಿಸಿ ಕೊಲ್ಲುತ್ತವೆ
ಅವರ ಮಕ್ಕಳ ಮರಿ ಕಬಳಿಸುತ್ತವೆ
ಎಂದೇನೇನೋ ನಿಗೂಢ ಭಯಗಳು
ರಾಜ ಮರ್ಯಾದೆಯ ಷೋಡಶೋಪಚಾರ ಶೃಂಗಾರಗಳೆಲ್ಲ
ದೇವರೆಂಬ ಗೊಂಬೆಗಳಿಗೆ ಬೇಕು
ಹೆಣ ಸಿಂಗಾರವಲ್ಲದೆ ಬೇರೆ ಫಲವಿಲ್ಲ
ಹೊಗಳಿಕೆಗೆ ಬಾಯಿ ಬಿಡುವ ಅವು
ತೆಗಳುವವರ ಶಿಕ್ಷಸದೆ ಬಿಡುವುದಿಲ್ಲ
ಅವನ್ನು ಒಲಿಸಿಕೊಳ್ಳಲು ಪ್ರಾರ್ಥನೆ ಕೀರ್ತನೆ
ವಾದ್ಯಗಳ ಮೊರೆತ ಬೆಂಕಿಹಾರಾಟ
ಮುಂತಾದ ಭಯಾನಕಗಳು
ಕುರಿ ಕೋಣಗಳ ಬಲಿಯನ್ನು
ಕೆಲವು ಕೇಳುತ್ತವೆ ಶಾಖಾಹಾರಿಗಳು
ಇನ್ನೂ ಕೆಲವು ಸಸ್ಥಾಹಾರಿಗಳು
ಅವಕ್ಕೆ ನವರಸ ಭಕ್ಷ್ಯ ಭೋಜ್ಯಗಳು ಬೇಕು
ದೈವ ಸಾಕ್ಷಾತ್ಕಾರಕ್ಕೆ ತಾವೇ ಪರವಾನಿಗೆದಾರರೆಂದು
ಮೆರೆಯುವ ಬಗೆಬಗೆಯ ಗುರು ಜಗದ್ಗುರುಗಳಿಗೆ
ಬುದ್ದೀ ಸ್ಥಾಮೀ ಎಂದು ಭಯದಿಂದ ಅಡ್ಡ ಬೀಳಬೇಕು
ರಾಜರ ಮೆರೆದಾಟ ವೈಭವಗಳೆಲ್ಲ ಈ ಸನ್ಯಾಸಿಗಳಿಗೂ ಬೇಕು
ಯಾವುದೋ ಪುಣ್ಯಾತ್ಮನ ಹೆಸರಿನಲ್ಲಿ ಮಠಗಳು
ಅವುಗಳಲ್ಲಿ ಗದ್ದುಗೆಯೇರಿದ ಹದ್ದುಗಳು ಮರ್ಕಟಗಳು
ಹೀಗೆ ಗುಡಿ ಮಠ ಜಾತ್ರೆ ಪೂಜೆ ಪುರಾಣಾದಿ
ಕೊಳಚೆಯ ಪ್ರವಾಹದಲ್ಲಿ ಮುಳಿಗೇಳುತ್ತ
ಮತ್ತೆ ಮತ್ತೆ ಮತ್ತೇರಿ ಮುಳುಗಿ
ಹೆಣಗಳಾಗಿ ಹೋಗಿರುವ ನನ್ನ ಜನರೇ
ಸಾಕಿನ್ನು ಭಯಾವಳಿ ಭವಾವಳಿಗಳ
ಬೆಂಡು ಬೆಂಡಾದ ತುಂಡು ತುಂಡಾದ ಬೀಳು ಬಾಳುಗಳು
ಭಯವನ್ನೇ ತುಂಬಿ ಬೆಳಸುತ್ತಾ ಬಂದ
ಪುರಾಣ ಕಂತೆಗಳ ಕಟ್ಟಿಟ್ಟು ಬಿಡಿ
ಇಲ್ಲಾ ತಿಪ್ಪೆಗೆಸೆದು ಬಿಡಿ
ಭಯದ ಕೋಟೆಗಳಂತಿರುವ ಗುಡಿ ಗುಂಡಾರಗಳ
ಮ್ಯೂಜಿಯಮ್ಮುಗಳಾಗಿ ಮಾಡಿ
ಗೊಂಬೆಗಳ ಮಕ್ಕಳಿಗೆ ಕಲೆಗಾಗಿ ತೋರಿಸಿ
ಜನರ ಭಯದ ಆಧಾರದ ಮೇಲೆ ಬೊಚ್ಚು ಬೆಳೆಸಿರುವ
ಮಠಾಧೀಶ್ವರ ಪೂಜಾರಿ ಬಾಬಾಗಳನ್ನಲ್ಲ
ಹೊಲ ಗದ್ದೆ ತೋಟ ಕಟ್ಟಡ ಕಾರ್ಖಾನೆಗಳಿಗೆ
ಎಳೆ ತಂದು ದುಡಿಯ ಹಚ್ಚಿರಿ ನಮ್ಮ ನಿಮ್ಮಂತೆ
ಜಾತ್ರೆ ಪರಿಷೆಗಳನ್ನೆಲ್ಲ ಜನ ಬಾಳಲು ನೆರವಾಗುವ
ಜಾನಪದ ಕುಶಲ ಕಲಾಮೇಳಗಳನ್ನಾಗಿ ಮಾಡಿ
ದೇವರು ಮೈಯಲ್ಲಿ ಬರುವ ಭಕ್ತಿಯಾವೇಶದ ಭ್ರಮಿಷ್ಟರನ್ನು
ಹುಚ್ಚಾಸ್ಪತ್ರೆಗಳಿಗೆ ಸೇರಿಸಿ ತಲೆ ಸರಿಮಾಡಿ
ಮಠಗಳನ್ನೆಲ್ಲಾ ಕಾಯಕ ಕೇಂದ್ರಗಳನ್ನಾಗಿ ಪರಿವರ್ತಿಸಿ
ಮಾನವ, ಮಾನವ ಚೈತನ್ಯ, ಮಾನವತೆಯನ್ನು ಬಿಟ್ಟು
ಬೇರೆ ದೇವರಿಲ್ಲ ಕಾಣಿರೋ .

ಭಯದ ಕೂಸುಗಳಾದ ಚಿಲ್ಲರೆ ದೇವರುಗಳನ್ನು
ಆ ಚಿಲ್ಲರೆಗಳ ಮೇಲೆ ಹೊಟ್ಟೆ ಹೊರೆಯುವ
ಪರೋಪಜೀವಿ ಬುರುಸುಗಳನ್ನು ಕೊಳೆಯನ್ನೆಲ್ಲ
ಸಾರಾಸಗಟಾಗಿ ತೊಳೆಯಿರಿ
ಭಯವಿಲ್ಲದ ಮಾನವರಾಗಿ ಬೆಳೆಯಿರಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post “ಕಲಾ ವಿನ್ಯಾಸಗಳು”
Next post ಟೋಸ್ಟರಿನ ಗರಂ

ಸಣ್ಣ ಕತೆ

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…