Home / ಕವನ / ಕವಿತೆ / ಅರೇಬಿಯಾದ ಅರುಣೋದಯ

ಅರೇಬಿಯಾದ ಅರುಣೋದಯ

ಸುಪ್ರಭಾತ ಗೀತಗಳಿಲ್ಲದೆ
ಅಂಗಳಕೆ ಹೆಂಗಳೆಯರ ರಂಗವಲ್ಲಿಗಳಿಲ್ಲದೆ
ಓಡಾಡಿ ಹಾಲು ಕೊಡುವ
ಪೇಪರ ಒಗೆಯುವ
ತರಕಾರಿ ಎಂದು ಕೂಗುವ ಹುಡುಗರಿಲ್ಲದೆ
ಘಮಘಮಿಸುವ ಹೂಮೊಗ್ಗುಗಳ
ಯಾವೊಂದೂ ಸ್ವಾಗತವಿಲ್ಲದೆ
ಸಿಟ್ಟಿಗೆದ್ದ ಸೂರ್ಯ ಧಗಧಗಿಸುತ್ತಲೇ ಹುಟ್ಟುತ್ತಾನೆ.

ಸೂರ್ಯಪೂಜೆ
ಸೂರ್ಯ ನಮಸ್ಕಾರಗಳಿಲ್ಲದೆ
ಜನರ ನಡುವೆ ಏಳುತ್ತಾನೆ
ಗಿಡಗಳ ನೆರಳಿಲ್ಲದ ಅರಮನೆಗಳಿಗೆ
ಬಡವರ ತುಂಬಿದ ದೊಡ್ಡಿಗಳಿಗೆ
ಮುನ್ನುಗ್ಗುತ್ತಾನೆ.

ಬಿಳಿಯರ ಬೆತ್ತಲೆ ತೊಗಲಿಗೆ ಮುದ್ದಿಸಿ
(ಸನ್‍ಬಾಥ್) ಪ್ರೀತಿಸಿಕೊಳ್ಳುವ
ಕರಿಯರಿಂದ ಸಿಟ್ಟಿಗೆಬ್ಬಿಸಿಕೊಳ್ಳುವ
ಬುರ್ಕಾದ ಅರೇಬಿಯರಿಗೆ ಮುಟ್ಟದೆ
ಎತ್ತರೆತ್ತರಕ್ಕೇರುತ್ತಾನೆ.
ತನ್ನ ದೇಹದೊಳಗೆ
ದಿಗಂಬರ ಬಂಜರು ಮರುಭೂಮಿಗೆ
ತೆಕ್ಕೆಯಾಗಿ
ಅವಳೊಳಗೆ ಇವನೋ
ಇವನೊಳಗೆ ಅವಳೋ ಆಗಿ
ಕುರುಹುಗಳು ಮೊಳಕೆಯೊಡೆಯುತ್ತವೆ

ಪರಿಶುದ್ಧ ಸ್ಫಟಿಕ ಜಲ (ಓಯಸಿಸ್)
ಕಣ್ಣು ಮುಚ್ಚಾಲೆಯಾಡುತ್ತದೆ
ಅಲ್ಲೊಂದು ಇಲ್ಲೊಂದು
ಕ್ಯಾಕ್ಟಸ್‌ಗಳು ಬಿಚ್ಚಿಕೊಳ್ಳುತ್ತವೆ.
ಪ್ರೀತಿಯ ಜೀನು ಮುತ್ತಿನ
ಖರ್ಜೂರಗಳ ಮಳೆಯುದುರುತ್ತದೆ.
ಸುಖ ದುಃಖಗಳ ಸೋಂಕು ಮರೆತು
ಈಗೀಗ ಅರೇಬಿಯದ ಸೂರ್ಯ
ಬರೆಯವವರಿಗೆ ಜೀವಂತ ಕಾವ್ಯವಾಗುತ್ತಿದ್ದಾನೆ.

“ಬಿಸಿಲಿನ ಧಗೆಯಲ್ಲೂ
ಹರಿದ್ವರ್ಣಿಸಿದ ಕ್ಷಣಗಳಿಗೆ
ಬೆಲೆ ಕಟ್ಟಲಾದೀತೆ?
ಉಸುಕಿನ ಕಣಗಳೊಡನೆ
ಓಯಸಿಸ್ ಹನಿಗಳೊಡನೆ
ಬೆಳೆಸಿದ ಕ್ಯಾಕ್ಟಸ್‌ಗಳೂಡನೆ
ಕಡಲಾಳ ಕಡಲಿತ್ತರದೊಡನೆ
ಬೆರೆಸಿದ ಉಸುರಿಗೆ
ಬೆಲೆ ಕಟ್ಟಲಾದೀತೆ?”
*****

ಗಾಂಜಾ ಡಾಲಿ

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...