Home / ಕವನ / ಕವಿತೆ / ಬೆಳಗಿನ ವಾಯುವಿಹಾರ

ಬೆಳಗಿನ ವಾಯುವಿಹಾರ

ಇನ್ನೊಂದಿಷ್ಟು ದೂರದೂರ ಅಡ್ಡಾಡಿದರಾಯಿತೆಂದು
ನಸುಕಿನಲ್ಲಿಯೇ ವಾಕಿಂಗಿಗೆ ಹೊರಡುತ್ತೇನೆ
ಪುಕ್ಕಟೆಯಾಗಿ ನಾಯಿಮರಿಕೊಟ್ಟ
ಆಚೆ ಮನೆಯ ~ಆಂಥೋನಿ ಅವನ ಹೆಂಡತಿ ಮಕ್ಕಳು
ಗೇಟಿನ ಹತ್ತಿರ ನಿಂತು ನಯವಾಗಿ ಮಾತಿಗೆಳೆಯುತ್ತಾರೆ
ನಾಯಿಮರಿ ಊಟ ತಿಂಡಿಗೆ ಹೊಂದಿಕೊಂಡಿದೆಯೇ?
ಟಿನ್‌ಫುಡ್ ಮಾತ್ರಕೊಡಿ ಪ್ರೀತಿ ಹೆಚ್ಚು ಕೊಡಿ
ಇಂಜೆಕ್ಶನ್ ಹಾಕಿಸಿದ್ರಾ, ಈಗ ಸ್ವಲ್ಪ ದೊಡ್ಡದಾಗಿರಬೇಕಲ್ಲ !

ಹೀಗೆ ಇನ್ನೂ ಇನ್ನೂ
ನಾಯಿಮರಿ ಬೆಳೆಸುವ ಪಾಠಗಳು ಪ್ರಶ್ನೆಗಳು
ಪುಕ್ಕಟೆಯಾಗಿಯೇ ನಾಯಿಮರಿ ತೆಗೆದುಕೊಂಡಿದ್ದಕ್ಕೆ
ಅವರೊಂದಿಗೆ ಮಾತನಾಡುತ್ತಿದ್ದಂತೆಯೇ
ಬಿಸಿಲೇರುತ್ತದೆ ಮನೆಗೆ ಮರಳುತ್ತೇನೆ.

ಅಪರೂಪಕ್ಕೆ ಆಗಾಗ ನಮ್ಮ ಬಡಾವಣೆಯಲ್ಲಿಯೇ
ವಾಕಿಂಗಿಗೆ ಹೊರಡುತ್ತೇನೆ
ಎದುರಾಗುತ್ತಾರೆ ಸಾಕಿದ ತಮ್ಮ ನಾಯಿಗಳನು
ಬೆರೆಯವರ ಮನೆಗಳ ಮುಂದೆ ಏನೆಲ್ಲ ಮಾಡಲು ಬಿಟ್ಟು
ಮಾತು ಹರಟೆ ಹೊಡೆಯುವ ಪರಿಚಿತರು
ಸಾಹಿತ್ಯಾಸಕ್ತರೋ ಎನ್ನುವಂತೆ
ಹೇಗೆ ನಡೆದಿದೆ ನಿಮ್ಮ ಬರವಣಿಗೆ?
ನಡೆಸಬೇಡಿ ಓಡಿಸಿ ಓಡಿಸಿ
ಭಾಷಣ ಕೊರೆಯುತ್ತಲೇ ಇರುತ್ತಾರೆ
ಬಿಸಿಲೇರುತ್ತದೆ ಮನೆಗೆ ಮರಳುತ್ತೇನೆ.

ಪಶ್ಚಿಮದ ಕಡೆಗೆ ತುಂಬಿದ ಕೆರೆ
ಕೆಂಪು ಬಿಳಿ ನೈದಿಲೆಗಳ ಸಂಭ್ರಮ ತಂಗಾಳಿ
ಆರೋಗ್ಯಕ್ಕೆ ಇನ್ನೂ ಒಳ್ಳೆಯದೆಂದು
ಚುಮುಚುಮು ನಸುಕಿನಲ್ಲಿಯೇ ಹೊರಡುತ್ತೇನೆ
ನೈದಿಲೆಗಳ ಕದ್ದ ಕಳ್ಳರು ಪೇಟೆಗೆ ಓಡುವ ಭರಾಟೆ
ಸೆರೆಮನೆ ದಿನಗಳು ಕಳೆದು ಬಂದವರ
ಕತ್ತೆ ಮಸೆಯುವ ಮಾತುಕತೆಗಳು
ಕೂಲಿಕಾರರು ಚೊಂಬು ಖಾಲಿಮಾಡಿ ಎದುರಾಗುವ ದೃಶ್ಯ
ನೆಮ್ಮದಿಯೆನಿಸುವುದಿಲ್ಲ; ಮನೆಗೆ ಮರಳುತ್ತೇನೆ.

ಪೂರ್ವದ ಬೆಟ್ಟದ ಬದಿಯಲೊಂದು ದೇವಾಲಯ
ಮನಸ್ಸಿಗೆ ಪ್ರಶಾಂತವೆಂದು ಹೊರಡುತ್ತೇನೆ
ಆಗಲೇ ದೇವರನ್ನೆಬ್ಬಿಸುವ ಕ್ಯಾಸೆಟ್ಟುಗಳ ಕಿರುಚಾಟ
ಇರಲಿ ಹೇಗೋ ಬಂದಿದ್ದೆನಲ್ಲಾ
ದೇವರಿಗೊಂದು ಸೆಲ್ಯೂಟ್ ಹೊಡೆದರಾಯಿತೆಂದು
ಮೆಟ್ಟಲೇರುತ್ತಿದ್ದಂತೆಯೇ ಪೂಜಾರಿ
ಕರ್ಪೂರ ಹಾಕಿ ತಟ್ಟೆ ಹಿಡಿದೇ ಬಿಡುತ್ತಾನೆ
ಬರಿಗೈಯಲ್ಲಿ ಹೋದ ನಾನು ಒಳಗೆ ಹೋಗದೆ
ಇನ್ನೊಂದೆರಡು ಸುತ್ತೂ ಹೊಡೆಯದೆ ಮನೆಗೆ ಮರಳುತ್ತೇನೆ.

ಬೆಳಗಿನ ವಾಯುವಿಹಾರ ಯಾಕೋ ಒಮ್ಮೊಮ್ಮೆ
ಹೀಗೆ ಕಿರಿ ಕಿರಿ ಅದಕ್ಕೆಂದೇ ಈಗ-
ರೂಮಿನಲ್ಲಿ ಹುಲ್ಲಿನಂತೆ ಕಾಣುವ ಹಸಿರು ಕಾರ್ಪೆಟ್ ಹಾಸಿ
ಮೇಲೆ ಟ್ರೆಡ್‌ಮಿಲ್ (ವಾಕಿಂಗ್ ಬೆಲ್ಟ್) ಇಟ್ಟು
ಗೋಡೆಗಳಿಗೆಲ್ಲ ಸುರ್ಯೋದಯ, ಕೆರೆ, ನದಿ ಗಾರ್ಡನ್
ಗಿಡಗಂಟೆಗಳ ಪೋಸ್ಟರ್ ಹಚ್ಚಿ ಇದೇ ಸೂಕ್ತ ಜಾಗವೆಂದು
ಟ್ರೆಡ್ಮಿಲ್‌ನಲ್ಲಿಯೇ ಬೆಳಗಿನ ವಾಕಿಂಗಿಗೆ ಹೊರಡುತ್ತೇನೆ.
*****

ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...