Home / ಕವನ / ಕವಿತೆ / ಬೆಳಗಿನ ವಾಯುವಿಹಾರ

ಬೆಳಗಿನ ವಾಯುವಿಹಾರ

ಇನ್ನೊಂದಿಷ್ಟು ದೂರದೂರ ಅಡ್ಡಾಡಿದರಾಯಿತೆಂದು
ನಸುಕಿನಲ್ಲಿಯೇ ವಾಕಿಂಗಿಗೆ ಹೊರಡುತ್ತೇನೆ
ಪುಕ್ಕಟೆಯಾಗಿ ನಾಯಿಮರಿಕೊಟ್ಟ
ಆಚೆ ಮನೆಯ ~ಆಂಥೋನಿ ಅವನ ಹೆಂಡತಿ ಮಕ್ಕಳು
ಗೇಟಿನ ಹತ್ತಿರ ನಿಂತು ನಯವಾಗಿ ಮಾತಿಗೆಳೆಯುತ್ತಾರೆ
ನಾಯಿಮರಿ ಊಟ ತಿಂಡಿಗೆ ಹೊಂದಿಕೊಂಡಿದೆಯೇ?
ಟಿನ್‌ಫುಡ್ ಮಾತ್ರಕೊಡಿ ಪ್ರೀತಿ ಹೆಚ್ಚು ಕೊಡಿ
ಇಂಜೆಕ್ಶನ್ ಹಾಕಿಸಿದ್ರಾ, ಈಗ ಸ್ವಲ್ಪ ದೊಡ್ಡದಾಗಿರಬೇಕಲ್ಲ !

ಹೀಗೆ ಇನ್ನೂ ಇನ್ನೂ
ನಾಯಿಮರಿ ಬೆಳೆಸುವ ಪಾಠಗಳು ಪ್ರಶ್ನೆಗಳು
ಪುಕ್ಕಟೆಯಾಗಿಯೇ ನಾಯಿಮರಿ ತೆಗೆದುಕೊಂಡಿದ್ದಕ್ಕೆ
ಅವರೊಂದಿಗೆ ಮಾತನಾಡುತ್ತಿದ್ದಂತೆಯೇ
ಬಿಸಿಲೇರುತ್ತದೆ ಮನೆಗೆ ಮರಳುತ್ತೇನೆ.

ಅಪರೂಪಕ್ಕೆ ಆಗಾಗ ನಮ್ಮ ಬಡಾವಣೆಯಲ್ಲಿಯೇ
ವಾಕಿಂಗಿಗೆ ಹೊರಡುತ್ತೇನೆ
ಎದುರಾಗುತ್ತಾರೆ ಸಾಕಿದ ತಮ್ಮ ನಾಯಿಗಳನು
ಬೆರೆಯವರ ಮನೆಗಳ ಮುಂದೆ ಏನೆಲ್ಲ ಮಾಡಲು ಬಿಟ್ಟು
ಮಾತು ಹರಟೆ ಹೊಡೆಯುವ ಪರಿಚಿತರು
ಸಾಹಿತ್ಯಾಸಕ್ತರೋ ಎನ್ನುವಂತೆ
ಹೇಗೆ ನಡೆದಿದೆ ನಿಮ್ಮ ಬರವಣಿಗೆ?
ನಡೆಸಬೇಡಿ ಓಡಿಸಿ ಓಡಿಸಿ
ಭಾಷಣ ಕೊರೆಯುತ್ತಲೇ ಇರುತ್ತಾರೆ
ಬಿಸಿಲೇರುತ್ತದೆ ಮನೆಗೆ ಮರಳುತ್ತೇನೆ.

ಪಶ್ಚಿಮದ ಕಡೆಗೆ ತುಂಬಿದ ಕೆರೆ
ಕೆಂಪು ಬಿಳಿ ನೈದಿಲೆಗಳ ಸಂಭ್ರಮ ತಂಗಾಳಿ
ಆರೋಗ್ಯಕ್ಕೆ ಇನ್ನೂ ಒಳ್ಳೆಯದೆಂದು
ಚುಮುಚುಮು ನಸುಕಿನಲ್ಲಿಯೇ ಹೊರಡುತ್ತೇನೆ
ನೈದಿಲೆಗಳ ಕದ್ದ ಕಳ್ಳರು ಪೇಟೆಗೆ ಓಡುವ ಭರಾಟೆ
ಸೆರೆಮನೆ ದಿನಗಳು ಕಳೆದು ಬಂದವರ
ಕತ್ತೆ ಮಸೆಯುವ ಮಾತುಕತೆಗಳು
ಕೂಲಿಕಾರರು ಚೊಂಬು ಖಾಲಿಮಾಡಿ ಎದುರಾಗುವ ದೃಶ್ಯ
ನೆಮ್ಮದಿಯೆನಿಸುವುದಿಲ್ಲ; ಮನೆಗೆ ಮರಳುತ್ತೇನೆ.

ಪೂರ್ವದ ಬೆಟ್ಟದ ಬದಿಯಲೊಂದು ದೇವಾಲಯ
ಮನಸ್ಸಿಗೆ ಪ್ರಶಾಂತವೆಂದು ಹೊರಡುತ್ತೇನೆ
ಆಗಲೇ ದೇವರನ್ನೆಬ್ಬಿಸುವ ಕ್ಯಾಸೆಟ್ಟುಗಳ ಕಿರುಚಾಟ
ಇರಲಿ ಹೇಗೋ ಬಂದಿದ್ದೆನಲ್ಲಾ
ದೇವರಿಗೊಂದು ಸೆಲ್ಯೂಟ್ ಹೊಡೆದರಾಯಿತೆಂದು
ಮೆಟ್ಟಲೇರುತ್ತಿದ್ದಂತೆಯೇ ಪೂಜಾರಿ
ಕರ್ಪೂರ ಹಾಕಿ ತಟ್ಟೆ ಹಿಡಿದೇ ಬಿಡುತ್ತಾನೆ
ಬರಿಗೈಯಲ್ಲಿ ಹೋದ ನಾನು ಒಳಗೆ ಹೋಗದೆ
ಇನ್ನೊಂದೆರಡು ಸುತ್ತೂ ಹೊಡೆಯದೆ ಮನೆಗೆ ಮರಳುತ್ತೇನೆ.

ಬೆಳಗಿನ ವಾಯುವಿಹಾರ ಯಾಕೋ ಒಮ್ಮೊಮ್ಮೆ
ಹೀಗೆ ಕಿರಿ ಕಿರಿ ಅದಕ್ಕೆಂದೇ ಈಗ-
ರೂಮಿನಲ್ಲಿ ಹುಲ್ಲಿನಂತೆ ಕಾಣುವ ಹಸಿರು ಕಾರ್ಪೆಟ್ ಹಾಸಿ
ಮೇಲೆ ಟ್ರೆಡ್‌ಮಿಲ್ (ವಾಕಿಂಗ್ ಬೆಲ್ಟ್) ಇಟ್ಟು
ಗೋಡೆಗಳಿಗೆಲ್ಲ ಸುರ್ಯೋದಯ, ಕೆರೆ, ನದಿ ಗಾರ್ಡನ್
ಗಿಡಗಂಟೆಗಳ ಪೋಸ್ಟರ್ ಹಚ್ಚಿ ಇದೇ ಸೂಕ್ತ ಜಾಗವೆಂದು
ಟ್ರೆಡ್ಮಿಲ್‌ನಲ್ಲಿಯೇ ಬೆಳಗಿನ ವಾಕಿಂಗಿಗೆ ಹೊರಡುತ್ತೇನೆ.
*****

ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...