ಗಿಡಬೆಳೆದು ಹುಡಿಗೂಡುತಿದೆ ಗುಡಿಯ ಗೋಪುರ
ಮುಟ್ಟೆ ಮೈಲಿಗೆಯೆನ್ನೆ ಪಾಚೆಗಟ್ಟಿದೆ ತೀರ್ಥ
ಅಟ್ಟ ಮಿಷ್ಟಾನ್ನವನು ತೊರೆದು ಹೆರಮನೆತಿರಿವ
ಜಡಮತಿಯ ವರ್ತನೆಯ ತೋರುತಿದೆ ಯುವಚಿತ್ತ.
ವಿಶ್ವಾತ್ಮನೊಳಕೊಂಡ ನುಡಿಗಳಕ್ಷಯಪಾತ್ರೆ
ಗಳಿತಸತ್ವರ ಕರದಿ ವೃತ್ತಿಭಿಕ್ಷಾಪಾತ್ರೆ.
ನೆಲದಿರವಿನುಚ್ಛೈತಿಯ ಮೆರೆದ ಸುಮನೋಗಂಧ-
ವಿಶ್ವಾಸವಿಂದಿಲ್ಲವೀ ಸಿದ್ಧರಾಶ್ರಮದಿ.
ಎಲೆ ಜೀವಕಾಮವೇ, ನಿನ್ನ ತುಳಿತುಳಿದುತ್ತು
ಬಗೆಬಿತ್ತಿ ಕರಣೋಪಭೋಗಗಳ ಕಳೆಕಿತ್ತು
ಮಿಗೆ ಕಷ್ಟದೊಳು ಸಾಧುಮುನಿಸಂತರೊಲವಿಂ ತೆಗೆದ
ಬೆಳೆಯ ದೇವಕ್ಷೇತ್ರ, ಅಂದಿನುಪಪೀಡನಕೆ
ಮುಯ್ಯಿ ತೀರಿಸುತಿಹೆಯ ಸ್ವೈರಿತೆಗೆ ಮರಳುತಿಂತೆ
ಚದುರಂಗಿ* ಯುಬ್ಬರಣೆಗಿಂಬಿನೀ ತೋಟದಂತೆ?
*****
* ಚದುರಂಗಿ-Lantana

















