Home / ಕವನ / ಕವಿತೆ / ಬೇರುಗಳು

ಬೇರುಗಳು

ಈಗಷ್ಟೆ ಪತ್ರ ಬಂತು
ಮಿ. ಪ್ಯಾಟ್ರಿಕ್‌ನ ಬರವಣಿಗೆ
ಕತ್ತೆ ಕಾಲು ನಾಯಿಕಾಲು ಆನೆಕಾಲು
ಎಲ್ಲಿಂದ ಓದುವುದು ಎಲ್ಲಿ ನಿಲ್ಲಿಸುವುದು – ಛೇ-
ಅರ್ಥವಾಗುವುದೇ ಇಲ್ಲ ಬೇಗ ಅಮೆರಿಕದವ
ಮಾತುಗಳು ಸ್ಪಷ್ಟ ಸಾಕಷ್ಟು ಮಾತನಾಡಬಹುದು
ಜೋಕ್ಸು ಮಾತುಕತೆಗಳೇನೇ ಇರಲಿ ದೊಡ್ಡ ಬಾಯಿಯವ

ಬರೆದಿದ್ದಾನೆ
೫೦ ಡಿಗ್ರಿ ಬಿಸಿಲಿನ ಹೊಡೆತಕ್ಕೂ
ತೆಂಗಿನ ಮರ ಬೆಳೆದುನಿಂತಿದೆ ಆಕಾಶದೆತ್ತರ
ಹಣ್ಣುಗಳು ಬಿಡುತಿವೆ ಪಪಾಯಿ ಗಿಡದಲಿ
ಸೊಂಪಾಗಿ ಹಬ್ಬಿದೆ ಮಲ್ಲಿಗೆ ಬಳ್ಳಿ
ಅದೇಕೋ ಮುನಿಸಿಕೊಂಡಿದೆ ಮಾವಿನಗಿಡ
ಮೇಲೆಳುತ್ತಲೇ ಇಲ್ಲ ಸಲಹೆ ಏನಾದರೂ….
ಸ್ಯಾಂಡಲ್‌ವುಡ್ ಆನೆಗಳ ಹಿಂಡು
ಹೆಂಡತಿಗೆ ಕೊಟ್ಟ ಬಿಂದಿ ಪೊಟ್ಟಣ
ರೇಶ್ಮೆ ಸೀರೆ ನಿಮ್ಮೂರಿಗೆ ಏಳೆಯುತ್ತವೆ.
ಜೊತೆಗೆ ಕಳಿಸಿದ್ದಾನೆ ಇವುಗಳೆಲ್ಲದರ ಫೋಟೋ.

ಭಾವಪರವಶಳಾಗಿ ಹೃದಯ ತುಂಬಿತು
ವಿದೇಶಕ್ಕೆ ಹೊರಟ ಅಂದು
ನೆಲದಿಂದ ಹೆಜ್ಜೆ ಕೀಳುವಾಗ
ನೆಲ-ಜಲದ ಋಣ ನೆನಪಿಗಿರಲೆಂದು
ಬೊಗಸೆ ಮಣ್ಣು ನಾಲ್ಕಾರು ಬೇರುಗಳು
ನನ್ನೊಂದಿಗಿರಲೆಂದು ನೀರಿನಲ್ಲೆದ್ದೆದ್ದಿ ಒಯ್ದಿದ್ದೆ

ಕಿಡಕಿಯಾಚೆ ಸೊಂಪಾದ ಗಿಡಬಳ್ಳಿಗಳು
ಕೈತೋಟದ ತುಂಬ ಹೂವುಗಳು
ವರ್ಷಗಳುರುಳುರುಳಿ ಬೆಳೆಯತೊಡಗಿದವು
ಮನೆಗೆ ಹೊಸದಾಗಿ ಬರುತ್ತಿರುವ
ಮಿ. ಪ್ಯಾಟ್ರಿಕ್‌ನಿಗೆ ಹಸಿರು ಹಸ್ತಾಂತರಿಸಿ
ಇವು ನಮ್ಮ ಮಕ್ಕಳೆಂದು ಹೇಳಿ ಬಂದಾಗಿತ್ತು.

ಮತ್ತೆ ಮುಂದುವರೆಸಿದ್ದಾನೆ-
ಹಾಲೆಂಡಿನ ಫರ್ಟಿಲೈಸರ್
ಅಮೆರಿಕದ ಇನ್‌ಸೆಕ್ಟಿಸೈಡ್
ಫಿಲಿಪೈನಿನ ಗಾರ್ಡನರ್
ಇಲ್ಲಿಯ ಡಿಸ್ಟಿಲ್ಡ್ ವಾಟರ್
ನಿಮ್ಮ ಬೇರುಗಳು ಇನ್ನೂ ಇನ್ನೂ ನೆಲದಾಳಕ್ಕಿಳಿಯುತ್ತಿವೆ
ಟೊಂಗೆಗಳೆಲ್ಲ ದಿಕ್ಕು ದಿಕ್ಕಿಗೂ ಚಾಚಿ
ಕೊಡುತಿವೆ ಚಿಗುರು ಹೂವು ಕಾಯಿ ಹಣ್ಣು
ಸುಂದರ ಅತೀ ಸುಂದರ

ಈ ನೆಲದ ಮಣ್ಣು ಬೇರು ಆ ನೆಲದ ನೀರು ಗಾಳಿ
ಬಾಯಿಪಾಠವಾಗಿ ಹೋಗಿದೆ ಪತ್ರ
ದೂರದೇಶಕೆ ಹೊರಡುವ ಮಕ್ಕಳಿಗೂ
ಭಾರವಾದರೂ ಇರಲೆಂದು
ಬೊಗಸೆಮಣ್ಣು ನಾಲ್ಕಾರು ಬೇರು ಕಳಿಸಿಬಿಡುತ್ತೇನೆ.
*****
ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...