೧
ಭುವಿಯಲ್ಲಿ ಹಿಮದ ಖುತು ಅರೆಗಣ್ಣ ತೆರದಿತ್ತು
ರವಿ ಮೂಡಿ ಮೇಲ್ಬಂದು ಇರ್ಗಳಿಗೆ ಸ೦ದಿತ್ತು
ಮುಚ್ಚಿದ್ದ ಬೆಳ್ಮಂಜು ತೆರೆಯುಗಿದ ತೆರನಿತ್ತು
ಹೆಚ್ಚಿದ್ದ ಕುಳಿರೊರತೆ ಕಾವಿಂಗೆ ಬಾಗಿತ್ತು
ನೇಸರಿನ ಎಳೆಗದಿರು ಹಿಮ ಮಣಿಯ ಮಾಲೆಯನು
ನೇಯ್ದು, ನಲಿಯುತಲಿತ್ತು ರಿಂಗಣಂಗುಣಿತವನು
ದಿನಕರನ ಸಂಖ್ಯಾತ ಕಿರಣಗಳು ಪೂರ್ವದಿಂ
ಸುಸ್ಪಷ್ಟತೆಯನಾಂತು, ವಿವಿಧ ವಿಧ ವರ್ಣದಿ೦-
ಹರಿತಂದು ಮೋದದಿಂ ತಿರೆವೆಣ್ಣನಪ್ಪುತ್ತ,
ಮೃದು ಚುಂಬನವನಿತ್ತು ಪುಲಕವನ್ನಾಗಿಸುತ.-
ಮಿರುಗಿರೆ, ‘ಸಹಸ್ರಕರ’ ನೆಂಬ ಸಂಕುಚಿತಾಖ್ಯೆ
ಮಿಥ್ಯವಾಗಲಸಂಖ್ಯಕರನೆಂಬ ನವ್ಯಾಖ್ಯೆ-
ಸಮನಿಸಿದ ತೆರನಾಯ್ತು! ಹೂಬಿಸಿಲು ಹೂಗಳಗೆ
ಎಸಳೆವೆಯನಲರಿಸಲು, ಹಿಮಬಿಂದು ಜೇನ್ಪನಿಗೆ-
ಬೆರೆದೊಂದು ಗೂಡುತ್ತ, ತುಂಬಿಗಳಿಗಾಹ್ವಾನ-
ವೀಯಲವು ಬ೦ದೊಲಿದು ಮಾಡಿದುವು ಮಧುಪಾನ,
ಸೌಸವದ ತನಿಜೇನನೊಲಿದೀಂಟಿ, ಸೊಕ್ಕೇರಿ,
ಅಳಿಗಳೊಂದೇ ಸರದಿ ಸೂಸಿದುವು ಹಾಡ ಸರಿ.
ಹಕ್ಕಿಗಳ ಕೊರಲುಲಿಯು ಕಟ್ಟೊಡೆದು, ಹೊನಲಾಗಿ,
ಬಾನ ದನಿಯಲೆಯಿ೦ದ ದುಂದುಮಿಸಿತಿ೦ಪಾಗಿ
೨
ಬಯಲಿನೊಂದರೆಯಲ್ಲಿ ನಾನಾಗ ನಿಂದಿರಲು,
ಮೂಡಣದ ಬಾನ್ ಚೆಲುವು ಚೆಲುಮೆಯಲಿ ಚಿಮ್ಮಿರಲು,-
ಬಾಲಾರ್ಕನಿದಿರಾಗಿ ನನ್ನ ಕಣ್ಣೆವೆಗಳನು
ಅರಳಿಸುತ, ಮುಗುಳಿಸುತ, ನನ್ನೆಲ್ಲ ದೇಹವನು-
ಎಳೆಬಿಸಿಲ ಮಳೆಯಿಂದ ತೋಯಿಸುತ, ಸ್ವರ್ಗೀಯ
ಸಂತೋಷ ಸಾಗರದಿ ತೇಲಿಸುತಲಾತ್ಮೀಯ-
ಭಾವವನು ಬೆಳಗಿಸುತ, ಮುಗಿಲೋಳಿಗಳ ಮೇಲೆ
ಇರುವೆನಡಿಗೆಯ ನಡೆದು, ಬರುತಿದ್ದ ಮೇಲ್ಮೇಲೆ!
ಗಿಡ ಬಳ್ಳಿಯೆಲೆಗಳಲಿ ನೆಯ್ದಿರುವ ಜೇಡ ಬಲೆ
ನೂಲಿನೆಳೆಗಳು ಚಿನ್ನ ಸರಿಗೆಯಂತಿಹವು ಸಲೆ.
ಭೂದೇವಿಯುಟ್ಟಿರುವ ಹಸುರುಡಿಗೆಯ೦ತೆಸೆವ
ಎಳೆಗಳವೆ ಮಡಿಗಳಿಗೆ ಹೊ೦ಬಣ್ಣ ರವಿಯೀವ.
ಎತ್ತೆತ್ತಲೂ ತಿರೆಯು ಹೊನ್ನ ಹೊಳೆಯಲಿ ತೇಲಿ.
ತನ್ನತನವನು ಮರೆತು, ಹರಿದು ಸೊಗಗಡಲಿನಲಿ-
ಸಂಗಮ೦ಗೊಂಡಂತೆ ಭಾಸವಾಗುತ್ತಲಿತ್ತು.
ಒಂದಿನಿತು ಚಣ ಕಳೆಯಲೊಪ್ಪವೇ ಬೇರಾಯ್ತು:-
ಸ್ವರ್ಣ ಲೇಪದ ಮೇಲೆ ರಜತ ರಸ ಬೆರೆದಂತೆ.
ಬಿಸಿಲೊಸರು ಕಣ್ಗೂಟವನ್ನೂಡಿಸಿತು ಮುಂತೆ!
*****
೧೯೪೦

















