Home / ಕವನ / ಕವಿತೆ / ಸಂಜೆಗೆ

ಸಂಜೆಗೆ

(ಒಂದು ಪ್ರಗಾಥ)

ಹೃದಯ ಕಂಪಿಸುತಿಹುದು ಆನಂದ ದೂರ್ಮಿಯಲಿ
ತುಂಬಿ ಮೈಮನವನ್ನು ಬಂಧಿಸಿಹುದು
ಇಹುದೆ ಇಂತಹ ಚೆಲುವು ಲೋಕದಲಿ ನಾಕದಲಿ
ನಿನ್ನವೊಲು, ಶ್ಯಾಮಲೆಯೆ, ಮಾಗಿದೊಲವು
ಹರಣಗಳ ನಯನದಲಿ ಅರಳಿಸುತ ನೋಡುವೆನು.
ಕಡಲನ್ನೆ ಕುಡಿಯುವೊಲು ದಿಟ್ಟಿಸುವೆನು.

ಹಗಲಿರುಳು ತೆರೆ ಸರಿಸಿ ಬಂದೆ ಮಂಥರೆ, ಮಧುರೆ
ನಿಮಿಷಾರ್ಧವೇ ನಿಂತು ನಡುವೆ ಮರೆಗೆ
ಆದರೆಲ್ಲೆಡೆ ನೀನು ಮಂತ್ರ ಮೌಕ್ತಿಕ ಜಲವ
ತೂರುತಿರೆ ದೇಶ ದಿಶೆ ಹೂ ಹಾಸಿಗೆ.
ಜರೆಯ ಮರೆಯಿತು ಗಿರಿಯು ಹೆರೆಯತಳೆದಿತು ತಿರೆಯು
ನನ್ನ ಕರಳೂ ಅರಳ ಗಮಗಮಿಸಿತು.

ಸ್ವರ್ಗಲೋಕದ ಮಾರ್ಗ ದುರ್ಗಮವೆ ಈ ಕ್ಷಣದಿ
ನಾಕವೇ ನಗುತಿರಲು ನಿನ್ನುಡಿಯಲಿ
ಚೆಲುವಿನಾ ಬಲೆಯಾಗಿ ಒಲವಿನಾ ಸೆಲೆಯಾಗಿ
ಮುಣ್ಣಿಗೂ ಬಣ್ಣನೆಯ ಲೀಲೆ ದೋರೆ
ನೆಲದಿ ನೆಲೆಯಾಗಿರುವ ನನ್ನ ನನ್ನಿಗಳೆಲ್ಲ
ನಿನ್ನ ತೇಜೋರಥದಿ ಸಾಗುತಿಹವು.

ಬಲ್ಲೆಯಾ ನನ್ನೆದೆಯ ಏಕತಾರಿಯ ಮೇಲೆ
ಅಸೆಮಿಡಿಯುವ ಭಗ್ನಗೀತಗಳನು
ಮನದ ಮಂಗಲವನ್ನು ಮೃತಿಗೊಳಿಸಿ ಜೀವನದ
ಹಸಿವೆಯನೆ ಬತ್ತಿಸುವ ರಾಗಗಳನು.
ಚೆಲುವಾಗಿ ಚಣವರಳಿ ಅಳಿದ ನನ್ನೊಲವಿನಲಿ
ನೆನಹು ನೋವಿಗೆ ನೀರನುಣಿಸುತಿಹುದು.

ಬಾನ್ನೆಲದ ಬೇಟಕ್ಕೆ ಬೆಳೆದ ಸಂಧ್ಯಾ ಕುವರಿ
ದಿನದಗ್ನಿತಪ ಹೂತ ಪುಣ್ಯ ನೀನು
ನೋವು ನನೆಕೊನೆಯೇರಿ ನಲಿವಾಯಿತೆನ್ನುವೊಲು
ಬಾಂಬಸಿರ ಕಿಚ್ಚಿ ನಿಂದೆದ್ದೆ ನೀನು.
ಪಡುವಣದ ಮಡುವಿನಲಿ ನೂರೆಸಳನೈದಿಲೆಯು
ಅರಳಿದೊಲು ಹರಿಸಿರುವೆ ಕಾಂತಿಯನ್ನು

ಸಾಂಧ್ಯ ಸುಂದರಿ ನಿನ್ನ ಸೊಬಗಿನಾರಾಧನೆಗೆ
ನನ್ನ ಮನವೇ ಬಾಗಿ ನಿಂತಿರುವುದು
ಕೋಟಲೆಯ ಕದಡನ್ನು ತಿಳಿದು ಪಾವನವಾಗಿ
ಆತುರದಿ ಕಲ್ಯಾಣ ಬಯಸುತಿಹುದು.
ಸೋತೆದೆಯ ಸರಸಿಯಲಿ ಅರಳಿರುವುದರವಿಂದ
ಶಾಂತಿಯಲಿ ತೋಷವನು ತಳೆದಿರುವುದು.

ಮರೆಯಾದೆಯಾ ದೇವಿ! ಮನವು ಮುಕುಲಿತವಾಯ್ತು
ತಿರೆಯು ಕಣ್ಣಿಂಗಿದೊಲು ಮುಗ್ಗುರಿಸಿತ್ತು.
ಆದರೂ ನಿಮಿಷದಲಿ ಜೀವನವನರಳಿಸಿದ
ನಿನ್ನ ಪ್ರೀತಿಯ ರೀತಿ ಅನೃತವೆಂತು?
ವಿಲಯ ತಾಳಲಯಕ್ಕೆ ಕುಣಿವ ಬಾಳಿನ ಕತೆಗೆ
ಅಮೃತ ಗತದ ರಸವು ತುಂಬಿಬಂತು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...