Home / ಕವನ / ಕವಿತೆ / ಪ್ರಣಯಗುರು

ಪ್ರಣಯಗುರು

ಗೋಳನಂಜಿನ ಗಾಳಿ ಬೀಸೆ, ಬಾಳಿನಬಳ್ಳಿ,
ಮುರುಟಿರಲು ಗಾಸಿಗೊಂಡು
ಶಾಪದೊಲು ಚಂಡಾಶು ಶಾಂತಿಯನ್ನೇ ತಳ್ಳಿ
ತಾಂಡವವ ನಾಡಿತಂದು
ಆಸೆಗಳು ಕನಸುಗಳು ಮನದೆಲ್ಲ ಉಸಿರುಗಳು
ಹಳೆತು ಕೊಳೆ ಕಹಿಯಾದವು
ಬಾಳ ಬೆಳೆಸಲು ಬಗೆದ ಭಾವಗಳು ರಾಗಗಳು
ಇರಿವ ಕೂರಲಗಾದವು.

ನನ್ನ ತಾಯ್ನೆಲೆಯಾದ ನೆಲವು ಕಲ್ಲಾಗಿತ್ತು
ಕಸವೆ ನನಗಾಯಿತನ್ನ
ಕೂಸು ಬಾಯ್ದೆರೆದಾಗ ತಾಯ ಮೊಲೆ ಮುಚ್ಚಿತ್ತು
ಅದಕಿಹುದೆ ಮಿಗಿಲು ಬನ್ನ
ಬೇರಿಳಿಸಿ ಆರಸಿದರು ನೀರ ಸುಳಿವೇ ಇಲ್ಲ.
ಕಂಬನಿಯೊಳಾಂತೆ ತಣಿವು
ನಭಕೆತ್ತಿ ಕೈಚಾಚಿ ಕರುಣೆ ಕೇಳಿದರಿಲ್ಲ
ಇನಿಸಾದರಲ್ಲಿ ಒಲವು.

ಎಲೆಯೆಲ್ಲ ಉದುರಿದವು ನಲಿವೆಲ್ಲ ಚದರಿದವು
ನಿಂತೆ ನಾ ಕೊರಡಿನಂತೆ
ಸ್ಮೃತಿಯ ವಿಕೃತ ಛಾಯೆಗಳು ಸುತ್ತಿಕೊಂಡವು
ನನ್ನನ್ನು ಗೋರಿಯಂತೆ
ಇರುಳ ಕರಿಯೆದೆ ಯರಳಿ ಇನಬಿಂಬ ಬೆಳಗಿದೊಲು
ನನ್ನ ಬಾಳ್‌ ಬಾನಿನಲ್ಲಿ
ಇನಿಯಳೇ ನಿನ್ನೊಲವು ಮೂಡೆ ತೊಳಗಿತು ಮನವು
ಹೂಬಿಸಿಲ ಜೇನಿನಲ್ಲಿ

ನನ್ನೆದೆಯ ಹೊದರಲ್ಲಿ ಹರುಷ ಹಕ್ಕಿಯ ಹಿಂಡು
ಹೊಮ್ಮಿಸಿತು ಹಾಡು ಹೊಳೆಯ
ಮಧುಮಾಸ ಮುದಮಾಸ ಬಂದಿರುವ ತೆರದಲ್ಲಿ
ಚಿಮ್ಮಿಸಿತು ಹಸಿರ ಬೆಳೆಯ
ಪುಣ್ಯಪಾವನ ಗಂಗೆ ಶುದ್ಧ ಪ್ರೀತಿ ತರಂಗೆ
ಹರಿದೆ ನೀ ಮಸಣದಲ್ಲಿ
ಕಸವ ರಸವಾಗಿಸಿದೆ ವಿಷವ ಸೊದೆಯಾಗಿಸಿದೆ
ಸೇರಿ ಈ ಹೃದಯದಲ್ಲಿ

ಪತಿತಪಾವನ ಮೂರ್ತಿ ನನ್ನ ಜೀವನ ಸ್ಫೂರ್ತಿ
ಪ್ರೀತಿಯೇ ಸತ್ಯ ನಿಜವು.
ಪ್ರೀತಿಯೊಂದೇ ತಥ್ಯ ಉಳಿದುದೆಲ್ಲಾ ಮಿಥ್ಯ
ಅದರ ರೀತಿಯೆ ನೀತಿಯು
ಎಂದು ಕಲಿಸಿದ ಗುರುವೆ ನನ್ನ ಬಾಳಿನ ಗುರಿಯೆ
ನಮಿಸುವೆನು ನಾನು ನಿನಗೆ
ಪರದ ಪರತತ್ವವನು ಇಹದ ಸುಖ ಸತ್ತವನು
ನೀಡಿರಲು ನೀನು ನನಗೆ!
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್