Home / ಕವನ / ಕವಿತೆ / ಪ್ರಣಯಗುರು

ಪ್ರಣಯಗುರು

ಗೋಳನಂಜಿನ ಗಾಳಿ ಬೀಸೆ, ಬಾಳಿನಬಳ್ಳಿ,
ಮುರುಟಿರಲು ಗಾಸಿಗೊಂಡು
ಶಾಪದೊಲು ಚಂಡಾಶು ಶಾಂತಿಯನ್ನೇ ತಳ್ಳಿ
ತಾಂಡವವ ನಾಡಿತಂದು
ಆಸೆಗಳು ಕನಸುಗಳು ಮನದೆಲ್ಲ ಉಸಿರುಗಳು
ಹಳೆತು ಕೊಳೆ ಕಹಿಯಾದವು
ಬಾಳ ಬೆಳೆಸಲು ಬಗೆದ ಭಾವಗಳು ರಾಗಗಳು
ಇರಿವ ಕೂರಲಗಾದವು.

ನನ್ನ ತಾಯ್ನೆಲೆಯಾದ ನೆಲವು ಕಲ್ಲಾಗಿತ್ತು
ಕಸವೆ ನನಗಾಯಿತನ್ನ
ಕೂಸು ಬಾಯ್ದೆರೆದಾಗ ತಾಯ ಮೊಲೆ ಮುಚ್ಚಿತ್ತು
ಅದಕಿಹುದೆ ಮಿಗಿಲು ಬನ್ನ
ಬೇರಿಳಿಸಿ ಆರಸಿದರು ನೀರ ಸುಳಿವೇ ಇಲ್ಲ.
ಕಂಬನಿಯೊಳಾಂತೆ ತಣಿವು
ನಭಕೆತ್ತಿ ಕೈಚಾಚಿ ಕರುಣೆ ಕೇಳಿದರಿಲ್ಲ
ಇನಿಸಾದರಲ್ಲಿ ಒಲವು.

ಎಲೆಯೆಲ್ಲ ಉದುರಿದವು ನಲಿವೆಲ್ಲ ಚದರಿದವು
ನಿಂತೆ ನಾ ಕೊರಡಿನಂತೆ
ಸ್ಮೃತಿಯ ವಿಕೃತ ಛಾಯೆಗಳು ಸುತ್ತಿಕೊಂಡವು
ನನ್ನನ್ನು ಗೋರಿಯಂತೆ
ಇರುಳ ಕರಿಯೆದೆ ಯರಳಿ ಇನಬಿಂಬ ಬೆಳಗಿದೊಲು
ನನ್ನ ಬಾಳ್‌ ಬಾನಿನಲ್ಲಿ
ಇನಿಯಳೇ ನಿನ್ನೊಲವು ಮೂಡೆ ತೊಳಗಿತು ಮನವು
ಹೂಬಿಸಿಲ ಜೇನಿನಲ್ಲಿ

ನನ್ನೆದೆಯ ಹೊದರಲ್ಲಿ ಹರುಷ ಹಕ್ಕಿಯ ಹಿಂಡು
ಹೊಮ್ಮಿಸಿತು ಹಾಡು ಹೊಳೆಯ
ಮಧುಮಾಸ ಮುದಮಾಸ ಬಂದಿರುವ ತೆರದಲ್ಲಿ
ಚಿಮ್ಮಿಸಿತು ಹಸಿರ ಬೆಳೆಯ
ಪುಣ್ಯಪಾವನ ಗಂಗೆ ಶುದ್ಧ ಪ್ರೀತಿ ತರಂಗೆ
ಹರಿದೆ ನೀ ಮಸಣದಲ್ಲಿ
ಕಸವ ರಸವಾಗಿಸಿದೆ ವಿಷವ ಸೊದೆಯಾಗಿಸಿದೆ
ಸೇರಿ ಈ ಹೃದಯದಲ್ಲಿ

ಪತಿತಪಾವನ ಮೂರ್ತಿ ನನ್ನ ಜೀವನ ಸ್ಫೂರ್ತಿ
ಪ್ರೀತಿಯೇ ಸತ್ಯ ನಿಜವು.
ಪ್ರೀತಿಯೊಂದೇ ತಥ್ಯ ಉಳಿದುದೆಲ್ಲಾ ಮಿಥ್ಯ
ಅದರ ರೀತಿಯೆ ನೀತಿಯು
ಎಂದು ಕಲಿಸಿದ ಗುರುವೆ ನನ್ನ ಬಾಳಿನ ಗುರಿಯೆ
ನಮಿಸುವೆನು ನಾನು ನಿನಗೆ
ಪರದ ಪರತತ್ವವನು ಇಹದ ಸುಖ ಸತ್ತವನು
ನೀಡಿರಲು ನೀನು ನನಗೆ!
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...