Home / ಕವನ / ಕವಿತೆ / ಪ್ರಣಯಗುರು

ಪ್ರಣಯಗುರು

ಗೋಳನಂಜಿನ ಗಾಳಿ ಬೀಸೆ, ಬಾಳಿನಬಳ್ಳಿ,
ಮುರುಟಿರಲು ಗಾಸಿಗೊಂಡು
ಶಾಪದೊಲು ಚಂಡಾಶು ಶಾಂತಿಯನ್ನೇ ತಳ್ಳಿ
ತಾಂಡವವ ನಾಡಿತಂದು
ಆಸೆಗಳು ಕನಸುಗಳು ಮನದೆಲ್ಲ ಉಸಿರುಗಳು
ಹಳೆತು ಕೊಳೆ ಕಹಿಯಾದವು
ಬಾಳ ಬೆಳೆಸಲು ಬಗೆದ ಭಾವಗಳು ರಾಗಗಳು
ಇರಿವ ಕೂರಲಗಾದವು.

ನನ್ನ ತಾಯ್ನೆಲೆಯಾದ ನೆಲವು ಕಲ್ಲಾಗಿತ್ತು
ಕಸವೆ ನನಗಾಯಿತನ್ನ
ಕೂಸು ಬಾಯ್ದೆರೆದಾಗ ತಾಯ ಮೊಲೆ ಮುಚ್ಚಿತ್ತು
ಅದಕಿಹುದೆ ಮಿಗಿಲು ಬನ್ನ
ಬೇರಿಳಿಸಿ ಆರಸಿದರು ನೀರ ಸುಳಿವೇ ಇಲ್ಲ.
ಕಂಬನಿಯೊಳಾಂತೆ ತಣಿವು
ನಭಕೆತ್ತಿ ಕೈಚಾಚಿ ಕರುಣೆ ಕೇಳಿದರಿಲ್ಲ
ಇನಿಸಾದರಲ್ಲಿ ಒಲವು.

ಎಲೆಯೆಲ್ಲ ಉದುರಿದವು ನಲಿವೆಲ್ಲ ಚದರಿದವು
ನಿಂತೆ ನಾ ಕೊರಡಿನಂತೆ
ಸ್ಮೃತಿಯ ವಿಕೃತ ಛಾಯೆಗಳು ಸುತ್ತಿಕೊಂಡವು
ನನ್ನನ್ನು ಗೋರಿಯಂತೆ
ಇರುಳ ಕರಿಯೆದೆ ಯರಳಿ ಇನಬಿಂಬ ಬೆಳಗಿದೊಲು
ನನ್ನ ಬಾಳ್‌ ಬಾನಿನಲ್ಲಿ
ಇನಿಯಳೇ ನಿನ್ನೊಲವು ಮೂಡೆ ತೊಳಗಿತು ಮನವು
ಹೂಬಿಸಿಲ ಜೇನಿನಲ್ಲಿ

ನನ್ನೆದೆಯ ಹೊದರಲ್ಲಿ ಹರುಷ ಹಕ್ಕಿಯ ಹಿಂಡು
ಹೊಮ್ಮಿಸಿತು ಹಾಡು ಹೊಳೆಯ
ಮಧುಮಾಸ ಮುದಮಾಸ ಬಂದಿರುವ ತೆರದಲ್ಲಿ
ಚಿಮ್ಮಿಸಿತು ಹಸಿರ ಬೆಳೆಯ
ಪುಣ್ಯಪಾವನ ಗಂಗೆ ಶುದ್ಧ ಪ್ರೀತಿ ತರಂಗೆ
ಹರಿದೆ ನೀ ಮಸಣದಲ್ಲಿ
ಕಸವ ರಸವಾಗಿಸಿದೆ ವಿಷವ ಸೊದೆಯಾಗಿಸಿದೆ
ಸೇರಿ ಈ ಹೃದಯದಲ್ಲಿ

ಪತಿತಪಾವನ ಮೂರ್ತಿ ನನ್ನ ಜೀವನ ಸ್ಫೂರ್ತಿ
ಪ್ರೀತಿಯೇ ಸತ್ಯ ನಿಜವು.
ಪ್ರೀತಿಯೊಂದೇ ತಥ್ಯ ಉಳಿದುದೆಲ್ಲಾ ಮಿಥ್ಯ
ಅದರ ರೀತಿಯೆ ನೀತಿಯು
ಎಂದು ಕಲಿಸಿದ ಗುರುವೆ ನನ್ನ ಬಾಳಿನ ಗುರಿಯೆ
ನಮಿಸುವೆನು ನಾನು ನಿನಗೆ
ಪರದ ಪರತತ್ವವನು ಇಹದ ಸುಖ ಸತ್ತವನು
ನೀಡಿರಲು ನೀನು ನನಗೆ!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...