Home / ಕವನ / ಕವಿತೆ / ಕಲ್ಪನಾ ವಿಲಾಸ

ಕಲ್ಪನಾ ವಿಲಾಸ

ವಿಶ್ವಜನ್ಮ ಪೂರ್ವದಲ್ಲಿ
ಅನಾದಿ ಕಾಲದಾದಿಯಲ್ಲಿ
ಬ್ರಹ್ಮನಿರಲು ತಪಸಿನಲ್ಲಿ
ಕುಣಿದೆಯವನ ಎದುರಿನಲ್ಲಿ
ಕೊನರಿತೆನಲು ಮಿಂಚುಬಳ್ಳಿ
ಹೇ ಸುಂದರಕಲ್ಪನೆ
ಚಿರ ಜೆಲುವಿನ ಚೇತನೆ!

ಸುರಪ್ರಜ್ಞೆಯು ಉನ್ಮೇಷಿತ
ಲೀಲಾತುರ ಮನಸ್ಫೂರ್ತಿತ
ಈ ವಿಶ್ವವು ಉಲ್ಲೇಖಿತ-
ವಾಯ್ತು ಕಾಲಪಟದಲಿ
ನಿನ್ನ ಭವ್ಯ ಕಲೆಯಲಿ!

ನೀ ಬ್ರಹ್ಮನ ಕಮಲಾಸನ
ವಿಶ್ವ ಕವಿಯ ನವಿಲಾಸನ
ಕ್ಷಣ ಕ್ಷಣಗಳ ಪದ ಬಂಧನ
ಓಂಕಾರದ ಸ್ವರ ಸ್ಯಂದನ
ರಚಿತ ಕಾವ್ಯನಂದನ
ಚೆಲುವು ನೀ ಚಿರಂತನ!

ನೆಲಜಲಗಳ ಈ ಪರಿಸರ
ಜ್ಯೋತಿರ್ಮಯ ನೀಲಾಂಬರ
ದಿಗ್ದಂತಿಯ ತಟ ಸುಂದರ.
ತುಂಬಿ ಹರಿಯೆ ಸುಖ ಸಮೀರ
ಈ ಜೀವನವೇ ನಿರಂತರ
ದೇವ ನಾಟ್ಯಚಾಲಕ
‘ನಟಿ’ಯು ನೀನು ಕಲ್ಪಕ!

ಏಕಂ ಸತ್‌ ಹಲವಾಯಿತು
ಬಣ್ಣದ ಬಗೆ ಚೆಲುವಾಯಿತು
ಇಳೆನೇಸರ ಸುತ್ತರಿಯಿತು
ಹಗಲಿರುಳಿನ ಬೆಂಬತ್ತಿತು
ಋತುಋತುಗಳ ಕಳೆಯರಳಿತು
ಸೊಗದುಟಿಯಲಿ ಕಹಿಯಿಳಿಯಿತು
ಮುನ್ನಡೆಯಿತು ನಾಟಕ
ನವರಸಗಳ ಪೋಷಕ!

ನೀ ಚೆಲುವಿನ ಮೂಲ ಕಿರಣ
ಮನದಾಸೆಯ ಮಿಂಚಿನ ಕಣ
ಎದೆಯೊಲವಿಗೆ ಪ್ರಾಣಪವನ
ನೀನದಮ್ಯ ಚೇತನೆ
ಭಾವಸ್ಫುರಣ ಕಾರಣೆ!

ಅಳಿದು ಹೋದ ಜಗದೋರುವೆ
ನಾಳೆ ಬರುವ ಯುಗ ತೆರಿಯುವೆ
ಇಂದಿಗು ಚೆಲುವಿತ್ತು ಮೆರೆವೆ
ಲೋಕಕೆ ಸವಿದೋರುವೆ
ಮೋಹದಿ ಜನ ಬಿಗಿಯುವೆ!

ಹೇ ಕಲ್ಪನೆ ನೀನು ಮಮತೆ
ಸಾನುಭೂತಿ ಜಲದ ಒರತೆ
ಜನದೆದೆಯಲಿ ಕೊರೆವ ಕೊರತೆ
ನೀನು ತುಂಬಿ ತುಳುಕುವೆ
ಹಣೆಗೊಲವನು ಸವರುವೆ!

ಇದು ಮರಣದ ಘೋರ ಶಯ್ಯೆ
ಅಲ್ಲಿ ನಿಲಲು ನಿನ್ನ ಛಾಯೆ
ಯಮನೆಸಿಪನು ಮೋಹ ಮಾಯೆ
ನಮೋ ನಿನಗೆ ಕಾವ ತಾಯೆ!
ನಿಲ್ಲು ನಮ್ಮ ಹೃದಯದಿ
ಭಾವಸರಸ್ತೀರದಿ!

ನೀ ಕೆತ್ತಿದೆ ದೇವ ಮೂರ್ತಿ
ಮನದಿ ಬಿತ್ತಿ ಭಾವ ಭಕ್ತಿ
ದೇವನೊಲಿಪ ಸುಧಾಸೂಕ್ತಿ
ತೆರೆದು ತೋರೆ ಕೊನೆಯ ಮುಕ್ತಿ
ವೇದವೆಲ್ಲಿ ‘ನೇತಿ, ನೇತಿ’
ಅಲ್ಲಿ ಮಾರ್ಗದರ್ಶಿನಿ
ಮಂತ್ರ ಮುಗ್ಧ ಹಾಸಿನಿ!

ಜನವಾಗಿದೆ ಹಾಳು ಹೋಳು
ಕಹಿಯಾಗಿದೆ ಜಗದ ಬಾಳು
ಬರಡಾಗಿದೆ ಕೊರಡು ಕರುಳು
ತೆರೆ ನಿನ್ನಯ ತಾಯ ತೋಳು
ಒಲವಿನ ಸಿರಿ ತುಳುಕಲಿ
ಕೆಳೆಯ ಚೆಲುವು ಅರಳಲಿ!

ಎರಡಾಗಿರೆ ಹೆಣ್ಣು ಗಂಡು
ಜಗದಿರವಿನ ಕುಟಿಲ ಕಂಡು
ತೆರೆಯೆ ತಾಯೆ ಸ್ನೇಹಸದನ
ಎದೆ ಬೆರೆಯುವ ಬಂಧನ
ದೇವಿ ನಿನಗೆ ವಂದನ
ದೇವಲೋಕ ನಂದನ!

ನಾ ವಿರಹಿತ ದೈವಹೀನ
ಶೋಕ ವಿದ್ಧ ವಿಕಲ ದೀನ
ಬಾ ಕಲ್ಪನೆ, ಭಾಗ್ಯಕಿರಣ
ಪದ್ಮರಾಗ ನಿನ್ನ ಚರಣ
ನನ್ನೆದೆಯಲಿ ನಿಲ್ಲಲಿ
ಭಾವ ಭಕುತಿ ಬೆಳೆಯಲಿ!

ಬಾಳೆಂಬುದು ಮುಳ್ಳ ಕಂಟಿ
ಬೆಳೆಯಿತೆನ್ನ ರಕ್ತವೀಂಟಿ
ಬಾ ಕಲ್ಪನೆ, ಸ್ವರ್ಗ ದಾಂಟಿ
ನನ್ನೆದುರಲಿ ನಿಂದಿರೆ
ಹೇ ದೇವನ ಇಂದಿರೆ!

ಈ ಅಲುಗಿನ ಬಾಳಿನಲ್ಲಿ
ಮೊನೆ ಮುರಿಯುವ ಚೆಲುವ ಚೆಲ್ಲಿ
ಸಪ್ತ ವರ್ಣ ನೃತ್ಯ ಕೆರಳಿ
ಕಂಪು ತಂಪು ಹೊಮ್ಮಿ ಬರಲಿ
ಒಲವಿನ ಹೂ ಹರುಷ ನಿಲಲಿ
ಜ್ವಲದ್ದೀಪ ಮಲ್ಲಿಕೆ
ಬಾರೆ ಹೃದಯ ತಲ್ಪಕೆ!

ನಿನ್ನ ಒಲವು ನಿನ್ನ ಚೆಲುವು
ಸ್ವಪ್ನಲೋಕದಮಿತ ನಲಿವು
ನಮ್ಮ ಬಾಳಿಗಿದೇ ಬಲವು
ನಿನ್ನೆಡೆಯಲಿ ಜಗದ ಇರವು
ಬಾ ನಿಂದಿರು ಕಲ್ಪನೆ
ಇದೆಯೊಂದೇ ಪ್ರಾರ್ಥನೆ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...