Home / ಕವನ / ಕವಿತೆ / ಹರೆಯ

ಹರೆಯ

ಹುಟ್ಟಿನಿಂದ ಆ ಚಟ್ಟ ಮಟ್ಟ ಈ ಬಟ್ಟ ಬಯಲಿನಾಟ
ಜಗದ ಸೊಗದ ಬೇರಾದ ಬಂಧವಿದು ಸೃಷ್ಟಿಕರ್ತನಾಟ

ಹೆಣ್ಣು: ಕಾಯಿ ಬೆಳೆದು ದೊರೆಗಾಯಿಯಾಗುತಿರುವಾಗ ಬೇರೆ ಬಣ್ಣ
ಯಾರ ಕಣ್ಣು ತಾಕೀತು ಎಂದು ಅಡಗುವಾ ನಡುವು ಸಣ್ಣ

ಅಂಗ ಅಂಗದಲಿ ಆ ಅನಂಗನಾಡುವನು ಮಂಗನಾಟ
ಉಬ್ಬು ತಗ್ಗುಗಳ ಹೊಳಪು ಮಿಂಚುಗಳ ಎಂಥ ಮಾಯ ಮಾಟ

ಅಂಕು ಡೊಂಕುಗಳ ರಂಟೆ ಹೊಡೆವ ಕಾಮಣ್ಣ ರೈತನಂತೆ
ಹರೆಯ ಬಂದು ಹರಗುವುದು ನೆಲವ ಅರಳುವದು ಹೂವಿನಂತೆ

ಕುಂಟು ಕುರುಡು ಕಪ್ಪೆಂಬ ಕರಿಕೆ ಕಳೆದಿಡುವ ಕಾಲವಣ್ಣ
ಕತ್ತೆ ಕೂಡ ಸೆಳೆಯುವುದು ಕೆಳೆಯ ಮೈತುಂಬಿ ಮೋಡಿ ಬಣ್ಣ

ಕಾಯುತಿಹುದು ಹಗಲಿರುಳು ನೆಲವು ಕಾಮನೆಯ ಬೇಸಗೆಯಲಿ
ಕಾಯುತಿಹಳು ತಾ ಕೆಂಪು ಕರಿಯ ಹೊಲಪಟ್ಟೆ ಹಾಸುಗೆಯಲಿ

ರವ ಸಿಂಚಿಸುವ ಸೊಗದ ಮಿಂಚಿಸುವ ಧಾರೆಧಾರೆ ಸುರಿಸಿ
ಎನುತ ತೆರೆದು ಎದೆಬಟ್ಟಲನ್ನು ರಾತ್ರಿ ದೀಪವುರಿಸಿ

ಕತ್ತಲಿನ ಮೋಡ ಹಿತ್ತಲಲ್ಲಿ ಮಿಂಚಿನಲಿ ಕಣ್ಣು ಹೊಡೆದು
ಗಾಳಿಯಲಿ ಸುದ್ದಿ ಕಳಿಸುವನು ರಾಯ ಗುಡುಗಿಂದ ಕದವ ಬಡಿದು

ಗಂಡು: ಬಲಿತಂಥ ಬೀಜ ಹೊರ ಬರುವ ತವಕ ಜಿಗಿಯುತಿಹುದು
ಆ ನೆಲವು ಹಸನು ಈ ಮಣ್ಣು ಬಣ್ಣ ಮಣ್ಣಾಗೆ ಅವಸರಿಹುದು

ಈ ಹೂವು ಚೆಂದ ಆ ಹೂವು ಗಂಧ ಮುತ್ತಿಡಲು ಹಾರುತಿಹುದು
ಈ ಹಣ್ಣು ಸವಿಯು ಆ ಹಣ್ಣು ಜೇನು ರಸಗಡಲಲೀಜುತಿಹುದು

ಕಾಯಿಯಲಿ ಒಗರು ಬಾಯಿಯಲಿ ನೀರು ನನ್ನನ್ನು ಮುಟ್ಟಬೇಡ
ದೋರೆಯಲಿ ಹುಳಿಯು ಬಾಯಿಯಲಿ ನೀರು ಚಪ್ಪರಿಸಿ ನೋಡಬೇಡ

ಮಾಗಿ ಮಲೆತು ಗಮಗಮಿಸಿ ಕರೆಯೆ ಓಗೊಡದ ರಸಿಕನಾರು
ಹಣ್ಣು ಬಂದು ಕಣ್ಣಿನಲಿ ಕುಣಿಯೆ ಬಾಯ್ತೆರೆಯದವನು ಯಾರು

ಹುಚ್ಚು ಹಸಿವು ಇದು ಹಚ್ಚ ಹಸಿರು ಹುಚ್ಚಾಗಿ ಬಿಡುವುದಾಗ
ಬಯಕೆಯಲ್ಲೆ ಕಚ್ಚಾಡಿ ಮೆಚ್ಚಿ ಅದು ದಾರಿ ಬಿಡುವುದಾಗ

ಹಸಿರು ಹಸಿರು ಆಯೆಂದು ನೂರು ಕಡೆ ಹರಿಯುತಿಹುದು ಹರೆಯ
ದಾರಿ ತಪ್ಪಿ ಅಡವಿಯಲಿ ಅಲೆದು ತಾ ಮರೆಯುತಿಹುದು ಪರಿಯ

ಒಂದೆ ಹಣ್ಣು ಹಸಿವಿಂಗಿಸಲಿಕೆ ಸಾಕಾದರೇನು ಬಾಯಿ
ಬಣ್ಣ ಬಣ್ಣ ನೂರಾರ ಕಂಡು ಸುರಿಸಿಹುದು ಜೊಲ್ಲು ನಾಯಿ

ದುಂಬಿಯಾಗಿ ಹೂ ಹೂವ ತಿರುಗಿ ಮೂಸೇನು ಗಂಧಗಾಳಿ
ಚೆಂದ ನೋಡಿ ಮರುಳಾಗಿ ಮತ್ತಿನಲಿ ಮುತ್ತೇನು ಹೊರಳಿ ಹೊರಳಿ

ಹೂವಿನೊಡಲ ನಾ ಸೇರಿ ಜೇನ ಹೀರೇನು ಪ್ರೇಮದಿಂದ
ಕಾವಿನಲ್ಲಿ ಕಳೆಗೂಡಿ ಹೂವು ಹುಡಿ ಮೈಗೆ ಬಳಿಯುವಂದ

ಹಳದಿ ಕೆಂಪು ನೇರಳೆಯು ಕಿತ್ತಿಳೆಯು ನೀಲಿ ಚೆಂಗುಲಾಬಿ
ಬಣ್ಣದೋಕುಳಿಯು ಕಣ್ಣ ತುಂಬುತಿರೆ ತೋಟದಲ್ಲಿ ಹರವಿ
****

ನೀರ ಬಂದು ತಬ್ಬುವನು ನೀರೆಯನು ಸೃಷ್ಟಿಗಾಯ್ತು ನಾಂದಿ
ಕಾದ ಒಡಲು ತಾ ತಣ್ಣಗಾಗಿ ರಸ ಜೇನಿನೂಟ ಹೊಂದಿ

ಆಗೀಗ ಮಳೆಯ ಋತು ಸ್ಪರ್ಶದಿಂದ ಮಾಗಿತ್ತು ಮಾಂಸ ಮೈಯಿ
ಪ್ರಿಯತಮನು ಬರಲು ಒಂದೊಂದು ಬಾಗಿಲನು ತೆರೆದು ನಿಂತ ಮೈಯಿ

ಒಡಲಿನೊಡೆಯ ಬರುತಾನೆ ಬಂದು ಬೀಜವನು ಬಿತ್ತುತಾನೆ
ಹದಬೆದೆಯ ನೋಡಿ ಹೃದಯವನೆ ತೋಡಿ ಮುಖವನ್ನು ಮುತ್ತುತಾನೆ

ಹೆಣ್ಣು ಗಂಡು ಹಣ್ಣಾಗುತಾವೆ ತಿನುತಾವೆ ಯಾವೊ ಬಾಯಿ
ಮಣ್ಣಿನೊಡೆಯ ಕಣ್ಣಾಗುತಾನೆ ಕುಣದಾವೆ ಮನಸು ಮೈಯಿ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...