Home / ಕವನ / ಕವಿತೆ / ಹರೆಯ

ಹರೆಯ

ಹುಟ್ಟಿನಿಂದ ಆ ಚಟ್ಟ ಮಟ್ಟ ಈ ಬಟ್ಟ ಬಯಲಿನಾಟ
ಜಗದ ಸೊಗದ ಬೇರಾದ ಬಂಧವಿದು ಸೃಷ್ಟಿಕರ್ತನಾಟ

ಹೆಣ್ಣು: ಕಾಯಿ ಬೆಳೆದು ದೊರೆಗಾಯಿಯಾಗುತಿರುವಾಗ ಬೇರೆ ಬಣ್ಣ
ಯಾರ ಕಣ್ಣು ತಾಕೀತು ಎಂದು ಅಡಗುವಾ ನಡುವು ಸಣ್ಣ

ಅಂಗ ಅಂಗದಲಿ ಆ ಅನಂಗನಾಡುವನು ಮಂಗನಾಟ
ಉಬ್ಬು ತಗ್ಗುಗಳ ಹೊಳಪು ಮಿಂಚುಗಳ ಎಂಥ ಮಾಯ ಮಾಟ

ಅಂಕು ಡೊಂಕುಗಳ ರಂಟೆ ಹೊಡೆವ ಕಾಮಣ್ಣ ರೈತನಂತೆ
ಹರೆಯ ಬಂದು ಹರಗುವುದು ನೆಲವ ಅರಳುವದು ಹೂವಿನಂತೆ

ಕುಂಟು ಕುರುಡು ಕಪ್ಪೆಂಬ ಕರಿಕೆ ಕಳೆದಿಡುವ ಕಾಲವಣ್ಣ
ಕತ್ತೆ ಕೂಡ ಸೆಳೆಯುವುದು ಕೆಳೆಯ ಮೈತುಂಬಿ ಮೋಡಿ ಬಣ್ಣ

ಕಾಯುತಿಹುದು ಹಗಲಿರುಳು ನೆಲವು ಕಾಮನೆಯ ಬೇಸಗೆಯಲಿ
ಕಾಯುತಿಹಳು ತಾ ಕೆಂಪು ಕರಿಯ ಹೊಲಪಟ್ಟೆ ಹಾಸುಗೆಯಲಿ

ರವ ಸಿಂಚಿಸುವ ಸೊಗದ ಮಿಂಚಿಸುವ ಧಾರೆಧಾರೆ ಸುರಿಸಿ
ಎನುತ ತೆರೆದು ಎದೆಬಟ್ಟಲನ್ನು ರಾತ್ರಿ ದೀಪವುರಿಸಿ

ಕತ್ತಲಿನ ಮೋಡ ಹಿತ್ತಲಲ್ಲಿ ಮಿಂಚಿನಲಿ ಕಣ್ಣು ಹೊಡೆದು
ಗಾಳಿಯಲಿ ಸುದ್ದಿ ಕಳಿಸುವನು ರಾಯ ಗುಡುಗಿಂದ ಕದವ ಬಡಿದು

ಗಂಡು: ಬಲಿತಂಥ ಬೀಜ ಹೊರ ಬರುವ ತವಕ ಜಿಗಿಯುತಿಹುದು
ಆ ನೆಲವು ಹಸನು ಈ ಮಣ್ಣು ಬಣ್ಣ ಮಣ್ಣಾಗೆ ಅವಸರಿಹುದು

ಈ ಹೂವು ಚೆಂದ ಆ ಹೂವು ಗಂಧ ಮುತ್ತಿಡಲು ಹಾರುತಿಹುದು
ಈ ಹಣ್ಣು ಸವಿಯು ಆ ಹಣ್ಣು ಜೇನು ರಸಗಡಲಲೀಜುತಿಹುದು

ಕಾಯಿಯಲಿ ಒಗರು ಬಾಯಿಯಲಿ ನೀರು ನನ್ನನ್ನು ಮುಟ್ಟಬೇಡ
ದೋರೆಯಲಿ ಹುಳಿಯು ಬಾಯಿಯಲಿ ನೀರು ಚಪ್ಪರಿಸಿ ನೋಡಬೇಡ

ಮಾಗಿ ಮಲೆತು ಗಮಗಮಿಸಿ ಕರೆಯೆ ಓಗೊಡದ ರಸಿಕನಾರು
ಹಣ್ಣು ಬಂದು ಕಣ್ಣಿನಲಿ ಕುಣಿಯೆ ಬಾಯ್ತೆರೆಯದವನು ಯಾರು

ಹುಚ್ಚು ಹಸಿವು ಇದು ಹಚ್ಚ ಹಸಿರು ಹುಚ್ಚಾಗಿ ಬಿಡುವುದಾಗ
ಬಯಕೆಯಲ್ಲೆ ಕಚ್ಚಾಡಿ ಮೆಚ್ಚಿ ಅದು ದಾರಿ ಬಿಡುವುದಾಗ

ಹಸಿರು ಹಸಿರು ಆಯೆಂದು ನೂರು ಕಡೆ ಹರಿಯುತಿಹುದು ಹರೆಯ
ದಾರಿ ತಪ್ಪಿ ಅಡವಿಯಲಿ ಅಲೆದು ತಾ ಮರೆಯುತಿಹುದು ಪರಿಯ

ಒಂದೆ ಹಣ್ಣು ಹಸಿವಿಂಗಿಸಲಿಕೆ ಸಾಕಾದರೇನು ಬಾಯಿ
ಬಣ್ಣ ಬಣ್ಣ ನೂರಾರ ಕಂಡು ಸುರಿಸಿಹುದು ಜೊಲ್ಲು ನಾಯಿ

ದುಂಬಿಯಾಗಿ ಹೂ ಹೂವ ತಿರುಗಿ ಮೂಸೇನು ಗಂಧಗಾಳಿ
ಚೆಂದ ನೋಡಿ ಮರುಳಾಗಿ ಮತ್ತಿನಲಿ ಮುತ್ತೇನು ಹೊರಳಿ ಹೊರಳಿ

ಹೂವಿನೊಡಲ ನಾ ಸೇರಿ ಜೇನ ಹೀರೇನು ಪ್ರೇಮದಿಂದ
ಕಾವಿನಲ್ಲಿ ಕಳೆಗೂಡಿ ಹೂವು ಹುಡಿ ಮೈಗೆ ಬಳಿಯುವಂದ

ಹಳದಿ ಕೆಂಪು ನೇರಳೆಯು ಕಿತ್ತಿಳೆಯು ನೀಲಿ ಚೆಂಗುಲಾಬಿ
ಬಣ್ಣದೋಕುಳಿಯು ಕಣ್ಣ ತುಂಬುತಿರೆ ತೋಟದಲ್ಲಿ ಹರವಿ
****

ನೀರ ಬಂದು ತಬ್ಬುವನು ನೀರೆಯನು ಸೃಷ್ಟಿಗಾಯ್ತು ನಾಂದಿ
ಕಾದ ಒಡಲು ತಾ ತಣ್ಣಗಾಗಿ ರಸ ಜೇನಿನೂಟ ಹೊಂದಿ

ಆಗೀಗ ಮಳೆಯ ಋತು ಸ್ಪರ್ಶದಿಂದ ಮಾಗಿತ್ತು ಮಾಂಸ ಮೈಯಿ
ಪ್ರಿಯತಮನು ಬರಲು ಒಂದೊಂದು ಬಾಗಿಲನು ತೆರೆದು ನಿಂತ ಮೈಯಿ

ಒಡಲಿನೊಡೆಯ ಬರುತಾನೆ ಬಂದು ಬೀಜವನು ಬಿತ್ತುತಾನೆ
ಹದಬೆದೆಯ ನೋಡಿ ಹೃದಯವನೆ ತೋಡಿ ಮುಖವನ್ನು ಮುತ್ತುತಾನೆ

ಹೆಣ್ಣು ಗಂಡು ಹಣ್ಣಾಗುತಾವೆ ತಿನುತಾವೆ ಯಾವೊ ಬಾಯಿ
ಮಣ್ಣಿನೊಡೆಯ ಕಣ್ಣಾಗುತಾನೆ ಕುಣದಾವೆ ಮನಸು ಮೈಯಿ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...