Home / ಕವನ / ಕವಿತೆ / ಉಷಃಕಾಲದಲ್ಲಿ

ಉಷಃಕಾಲದಲ್ಲಿ

ಉಷೆಯ ಕಾಲ ಸೋಂಕಿನಿಂದ
ಬಾನು ತಳಿತಿದೆ;
ನಿಶೆಯ ಮಡಿಲನುಳಿದು ಜಗವು
ಜೀವಗೊಳುತಿದೆ;
ಕತ್ತಲಂಜುತೋಡುತಿಹುದು,
ಬೆಳಕು ತಿರೆಯ ತುಂಬುತಿಹುದು;
ನಾಡು ಮೇಡು ಕಾಡೊಳೆಲ್ಲು
ಸೊಗವು ಮೂಡಿ ಬರುತಿದೆ.

ತರುಗಳಿನಗೆ ಮಂಜುಹನಿಗ-
ಳರ್‍ಘ್ಯ ಹಿಡಿದಿವೆ;
ಅಲರ ಸುರಿದು ಸ್ವಾಗತವನು
ಬಾಗಿ ಬಯಸಿವೆ;
ಪಿಕದ ತೂರ್‍ಯ ಮೊಳಗುತಿಹುದು,
ಪದ್ಮಗಂಧ ಪಸರಿಸಿಹುದು,
ಖಗಗಳುಲಿವ ವಿವಿಧ ಸ್ವನದ
ಮೇಳ ತೋಪ ತುಂಬಿದೆ.

ಗರಿಯ ತಿದ್ದೆ ಬೆಡಗಿ ಶುಕಿಯು
ಕೊರಲ ಕೊಂಕಿದೆ;
ಇನಿಯಳೊಡನೆ ಪಾರಿವಾಳ
ಬೇಟ ಹೂಡಿದೆ ;
ಮೀಂಗಳೆದ್ದು ನೆಗೆಯುತಿಹುವು,
ತೆರೆಗಳೆದ್ದು ಕುಣಿಯುತಿಹುವು,
ವಿಶ್ವಶಿವದ ಪಥದೊಳಡಿಯ-
ನಿಟ್ಟು ಸೃಷ್ಟಿ ನಗುತಿದೆ.

ಮನುಜ?- ಮನುಜನೇನುಗೈವ-
ನಿಂಥ ಸಮಯದಿ?
ಜಗವು ಜೀವಗೊಳುತಲಿಂತು
ನಲಿವ ಉದಯದಿ?
ಬೆಳಕು ಬಾಳ ಬಿಚ್ಚುತಿರಲು,
ಜೀವ ಕರ್‍ಮಕೇಳುತಿರಲು,
ಆತ್ಮವಂತ, ಕರಣಪಟುವು-
ಏನ ಗೈವನುದಯದಿ?

ಹಕ್ಕಿ ಹೂಗಳಂತೆ ತಾನೂ
ಎದ್ದು ನಲಿವನೊ?
ಮಿಕ್ಕ ಸೃಷ್ಟಿಯಂತೆ ತಾನೂ
ನಲವಿಗೇಳ್ವನೊ?
ವಿಶ್ವಶಿವದ ಮರ್‍ಮವರಿತು,
ಆತ್ಮಕರ್‍ಮ ಧರ್‍ಮವರಿತು,
ಬಾಳ ಬಟ್ಟೆ ಕಂಡು, ದೃಢದಿ
ಹಾದಿ ನಡೆಯಲೇಳ್ವನೊ ?

ಇರುಳಿನತಿಗೆ ಬಳಲಿ ಬೆಳಗ
ಮಲಗಿ ಕಳೆವನೊ?
ಮಾಗದಳಲಿಗೆದ್ದು ಕಣ್ಣ-
ನೀರ ಮಿಡಿವನೊ ?
ಶಿವವ ಜರೆವ ಸ್ವಾರ್‍ಥಗಳನು
ಪಾಪಕೊಯ್ವ, ಮೋದಗಳನು
ಅರಸಿ, ಕರ್‍ಮತುಮುಲದೊಳಗೆ
ಸಿಲುಕಿ, ಅಂಜಿ, ಸುಯ್ವನೊ?

ದೀನ ಮನುಜನೇನು ಬಲ್ಲ
ಕರ್‍ಮ ಧರ್‍ಮವ?
ಕರಣದಾಳು ಬಲ್ಲನೇನು
ಶಿವದ ಮರ್‍ಮವ?
ಸೊಗದ ಹೊನ್ನಿನುದಯದಲ್ಲಿ
ಸೃಷ್ಟಿ ನಲಿವ ವೇಳೆಯಲ್ಲಿ
ಮನುಜಗೊಬ್ಬಗಲ್ತೆ ಶರಣು-
ಹೊಂದಿ ನುತಿಪ ಕಜ್ಜವು!

ವಿಶ್ವದೊಡೆಯ ದುರಿತಗಳನು
ದೂರ ಮಾಡಿಸೈ.
ಆವುದೆಮ್ಮ ಶಿವವೊ, ತಂದೆ,
ಅದನು ಕರುಣಿಸೈ.
ಜ್ಞಾನದೀಪ ಹೊತ್ತಿಸೈ,
ಬಾಳ ಬಟ್ಟೆ ಕಾಣಿಸ್ಯೆ,
ಆತ್ಮಶಿವಕೆ – ನಿನ್ನ ಇಚ್ಛೆ-
ಗೆನ್ನ ಬಾಳ ಹೊಂದಿಸೈ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...