Home / ಕವನ / ಕವಿತೆ / ಉಷಃಕಾಲದಲ್ಲಿ

ಉಷಃಕಾಲದಲ್ಲಿ

ಉಷೆಯ ಕಾಲ ಸೋಂಕಿನಿಂದ
ಬಾನು ತಳಿತಿದೆ;
ನಿಶೆಯ ಮಡಿಲನುಳಿದು ಜಗವು
ಜೀವಗೊಳುತಿದೆ;
ಕತ್ತಲಂಜುತೋಡುತಿಹುದು,
ಬೆಳಕು ತಿರೆಯ ತುಂಬುತಿಹುದು;
ನಾಡು ಮೇಡು ಕಾಡೊಳೆಲ್ಲು
ಸೊಗವು ಮೂಡಿ ಬರುತಿದೆ.

ತರುಗಳಿನಗೆ ಮಂಜುಹನಿಗ-
ಳರ್‍ಘ್ಯ ಹಿಡಿದಿವೆ;
ಅಲರ ಸುರಿದು ಸ್ವಾಗತವನು
ಬಾಗಿ ಬಯಸಿವೆ;
ಪಿಕದ ತೂರ್‍ಯ ಮೊಳಗುತಿಹುದು,
ಪದ್ಮಗಂಧ ಪಸರಿಸಿಹುದು,
ಖಗಗಳುಲಿವ ವಿವಿಧ ಸ್ವನದ
ಮೇಳ ತೋಪ ತುಂಬಿದೆ.

ಗರಿಯ ತಿದ್ದೆ ಬೆಡಗಿ ಶುಕಿಯು
ಕೊರಲ ಕೊಂಕಿದೆ;
ಇನಿಯಳೊಡನೆ ಪಾರಿವಾಳ
ಬೇಟ ಹೂಡಿದೆ ;
ಮೀಂಗಳೆದ್ದು ನೆಗೆಯುತಿಹುವು,
ತೆರೆಗಳೆದ್ದು ಕುಣಿಯುತಿಹುವು,
ವಿಶ್ವಶಿವದ ಪಥದೊಳಡಿಯ-
ನಿಟ್ಟು ಸೃಷ್ಟಿ ನಗುತಿದೆ.

ಮನುಜ?- ಮನುಜನೇನುಗೈವ-
ನಿಂಥ ಸಮಯದಿ?
ಜಗವು ಜೀವಗೊಳುತಲಿಂತು
ನಲಿವ ಉದಯದಿ?
ಬೆಳಕು ಬಾಳ ಬಿಚ್ಚುತಿರಲು,
ಜೀವ ಕರ್‍ಮಕೇಳುತಿರಲು,
ಆತ್ಮವಂತ, ಕರಣಪಟುವು-
ಏನ ಗೈವನುದಯದಿ?

ಹಕ್ಕಿ ಹೂಗಳಂತೆ ತಾನೂ
ಎದ್ದು ನಲಿವನೊ?
ಮಿಕ್ಕ ಸೃಷ್ಟಿಯಂತೆ ತಾನೂ
ನಲವಿಗೇಳ್ವನೊ?
ವಿಶ್ವಶಿವದ ಮರ್‍ಮವರಿತು,
ಆತ್ಮಕರ್‍ಮ ಧರ್‍ಮವರಿತು,
ಬಾಳ ಬಟ್ಟೆ ಕಂಡು, ದೃಢದಿ
ಹಾದಿ ನಡೆಯಲೇಳ್ವನೊ ?

ಇರುಳಿನತಿಗೆ ಬಳಲಿ ಬೆಳಗ
ಮಲಗಿ ಕಳೆವನೊ?
ಮಾಗದಳಲಿಗೆದ್ದು ಕಣ್ಣ-
ನೀರ ಮಿಡಿವನೊ ?
ಶಿವವ ಜರೆವ ಸ್ವಾರ್‍ಥಗಳನು
ಪಾಪಕೊಯ್ವ, ಮೋದಗಳನು
ಅರಸಿ, ಕರ್‍ಮತುಮುಲದೊಳಗೆ
ಸಿಲುಕಿ, ಅಂಜಿ, ಸುಯ್ವನೊ?

ದೀನ ಮನುಜನೇನು ಬಲ್ಲ
ಕರ್‍ಮ ಧರ್‍ಮವ?
ಕರಣದಾಳು ಬಲ್ಲನೇನು
ಶಿವದ ಮರ್‍ಮವ?
ಸೊಗದ ಹೊನ್ನಿನುದಯದಲ್ಲಿ
ಸೃಷ್ಟಿ ನಲಿವ ವೇಳೆಯಲ್ಲಿ
ಮನುಜಗೊಬ್ಬಗಲ್ತೆ ಶರಣು-
ಹೊಂದಿ ನುತಿಪ ಕಜ್ಜವು!

ವಿಶ್ವದೊಡೆಯ ದುರಿತಗಳನು
ದೂರ ಮಾಡಿಸೈ.
ಆವುದೆಮ್ಮ ಶಿವವೊ, ತಂದೆ,
ಅದನು ಕರುಣಿಸೈ.
ಜ್ಞಾನದೀಪ ಹೊತ್ತಿಸೈ,
ಬಾಳ ಬಟ್ಟೆ ಕಾಣಿಸ್ಯೆ,
ಆತ್ಮಶಿವಕೆ – ನಿನ್ನ ಇಚ್ಛೆ-
ಗೆನ್ನ ಬಾಳ ಹೊಂದಿಸೈ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...