Home / ಕವನ / ಕವಿತೆ / ಮತ್ತೆ ಮಳೆ ಹೊಯ್ಯಲಿದೆ

ಮತ್ತೆ ಮಳೆ ಹೊಯ್ಯಲಿದೆ

ಮತ್ತೆ ಮಳೆ ಹೊಯ್ಯುವದೆ ? ಬಾಯಾರಿ ಬಿದ್ದ
ಬಾವಿಗಳು ತುಂಬುವವೆ ? ಬಾಡಿ ಬಸವಳಿದ
ನನ್ನ ಹಿತ್ತಲ ಗಿಡದ ಎಲೆಗಳು ಚಿಗುರುವವೆ ?
ಬರಲಿದೆಯೆ ಮೋಡಗಳ ಸಾಲು ? ಕಣ್ತುಂಬಲಿದೆಯೆ
ಮಿಂಚುಗಳ ಆಟ ? ಮೊದಲ ಮಳೆ ಬಿದ್ದು
ಮಣ್ಣು ಘಮ್ಮೆಂದ ಸಂಭ್ರಮ ? ಹರಕು ಕೊಡೆಗಳ
ಹೊಲಿಗೆ ? ತಟ್ಟಿ ಕಟ್ಟುವುದು ? ನೀರು ಸೋರುವಲ್ಲೆಲ್ಲ
ತಕ್ಕ ವ್ಯವಸ್ಥೆ ? ನಿಜ ಇವೆಲ್ಲ ಕಳೆದಿದ್ದೇ ದಾರಿ
ಈ ದಾರಿ ದಾಟಿದ್ದು ಅದೆಷ್ಟೋ ಬಾರಿ ಆದರೂ
ಕಳೆದಿದ್ದು ಕಟ್ಟುವುದು ಮತ್ತೆ ಮತ್ತೆ ಕಟ್ಟುವುದು
ಇದು ನಮ್ಮ- ನಿಮ್ಮ- ಭಾಗ್ಯ ಅದೆಲ್ಲಾ ಸರಿ ಗೆಳೆಯ
ಈಗ ಹೇಗಿದೆ ನಿನ್ನ ಆರೋಗ್ಯ ?

ಮನುಷ್ಯರ ಮಿತಿಗಳ ದಾಟಿ ನನ್ನ ಜ್ವರ ಇನ್ನು ಕೈ
ಬಿಟ್ಟೆವೋ ಎಂಬಂತೆ ಕ್ಷೀಣ ಸ್ವರ ಹೋದ ಹೋದ
ಕಣ್ಣುಗಳು ತುಂಬಿ ಬಂದವು ಜೀವದ ಕನಸುಗಳೆಲ್ಲ
ಕುತ್ತಿಗೆಗೆ ಬಂದವು ಉಕ್ಕಿ ಹರಿಯಿತು ಅಘನಾಶಿನಿ
ಈಸುತ್ತ ಬಂದವು ನೆನಪುಗಳು ಆ ನೆನಪುಗಳಿಗೆ
ನಾನಾ ಸ್ವರೂಪ ಕಲಸಿ ಕಲಸಿ
ಕಣ್ಣೊತ್ತಿ ನಿಂತಿದ್ದು ಮಂಗಳದ ಕುಂಕುಮ ಹೇಳು
ಆ ತಾಯಿ ಯಾರು ? ಅನಿಸುವುದು ನಾನು ಬದುಕುಳಿದಿದ್ದು
ಸಂಕಲ್ಪ ಮಾತ್ರದಿಂದ

ಮತ್ತೆ ಮಳೆ ಹೊಯ್ಯುವುದೆ ? ನನ್ನೂರು ಹಿರೇಗುತ್ತಿ
ಸ್ನಾನದ ಪುಳಕಕ್ಕೆ ಅರಳಿ ಹೂವಾಗುವುದೆ ? ಈಶ್ವರ ಕೆರೆ
ತುಂಬಿ ಎಬ್ಬಿಸುವುದೆ ರೋಮಾಂಚನ ? ಇದೇ ರೀತಿ
ಚೌತಿಯ ತನಕ ಇದ್ದು ಬಿಟ್ಟರೆ ಬಹಳ ಆರಾಮು
ಅನಂತರವೇನೂ ಬೇಡ ಎಂದಲ್ಲ …………….

ಮೃತ್ಯು ಲೋಕ ಬಾ ಎಂದಾಗ ಬದುಕು ಸಿಹಿ ಅನಿಸಿತು
ಇಲ್ಲಿ ಬದುಕುವೆ ಮಾನವನಾಗಿ ಈ ಬದುಕು ನನ್ನದು
ಇದರ ಸೋಲೂ ಗೆಲುವೂ ಸಂಪೂರ್ಣ ನನ್ನದು ಒಮ್ಮೆ
ಕೊಟ್ಟು ನೋಡು ಅವಕಾಶ- ಆಗ
ಎತ್ತರಿಸುವೆ ಆಕಾಶ

ಸ್ವಲ್ಪ ಸಾವಕಾಶ ಬಿದ್ದ ಮಳೆ ಪೂರಾ ನೋಡಿದ್ದೇ ಕೀರ್ತಿ
ಅಲ್ಲ. ನಮ್ಮೂರ ಕೆರೆಗಳ ಪಾಲೂ ಉಂಟಲ್ಲ ? ಬಾ ಎಂದು ಕರೆಯುವ
ಬೆಟ್ಟಗಳು ನವಿಲುಗಳು ಕಪ್ಪೆಗಳು ಇವುಗಳಿಗೆ ಅಭಾರ
ಸಲ್ಲಲೇಬೇಕಲ್ಲ ? ಮುಖ್ಯವಾಗಿ ಇವೆಲ್ಲ ಪ್ರಕೃತಿ ನಿಯಮ
ಇದು ಸತ್ಯ. ಇದು ಸತ್ಯ ನಂಬು

ನಾನಾಗ ಚಿಕ್ಕವನು ಆಗ ಇದ್ದಿದ್ದು ಈ ಮನೆಯಲ್ಲಲ್ಲ ಇದೇ
ಕೇರಿಯಲ್ಲಿ ಕೆಳಗೆ ಎಂಥ ಮಳೇ ಹೇಗೆ ಹರಿಯುತ್ತಿತ್ತು, ನೀರು !
ಆ ನೀರಿನ ಎದುರು ಎದ್ದ ಗುಳ್ಳೆಗಳ ಎದುರು ದಂಗು ದುಗುಡದ ನಾ
ಮನೆ ಅಂಗಳದ ಎರಡನೇ ಮೆಟ್ಟಿಲ ಮೇಲೆ ಆ ಗುಳ್ಳೆಗಳಿಗೆ
ಕೈ ಬೀಸುತ್ತಿದ್ದೆ. ಆ ಗುಳ್ಳೆಗಳದು ಅನಿಯಂತ್ರಿತ ಪ್ರವಾಹ
ಇಂದಿಗೂ ನಾನು ಅದೇ ಹುಡುಗ ಗಡ್ಡ ಮೀಸೆ ಬಂದಿದ್ದು
ನನಗಲ್ಲ ನನ್ನ ದೇಹಕ್ಕೆ

ಮತ್ತೆ ಮಳೆ ಹೊಯ್ಯಲಿದೆ. ಕಲ್ಪನೆಯ ಕಡಲುಗಳು
ತುಂಬಿ ತುಳುಕಲಿವೆ ಹಡಗುಗಳು ಬರಲಿವೆ ದೋಣಿಗಳು
ಬರಲಿವೆ ಆಚೆ ದಡದಿಂದ ಬರುವರು ಹೊಸ ಅತಿಥಿಗಳು
ಬಾ – ಅವರನ್ನು ಸ್ವಾಗತಿಸು ಕುಡಿಯಲು ಬಿಸಿಯೋ ತಣ್ಣಗೋ
ಬನ್ನಿ ಬಟ್ಟೆ ಬದಲಿಸಿ ನಮ್ಮದೂ ನಿಮ್ಮದೂ ಒಂದೇ ಬದುಕು
ಇರುವಷ್ಟು ದಿವಸ ಇದ್ದೇ ಬಿಡುವ ಬಿಡದೇ ಬಿರುಕು
ಇಲ್ಲದಿದ್ದಾಗಲೂ ಇದ್ದಿದ್ದ ಎಂದು ಎದೆ ತುಂಬಿ ಹೇಳಿದರೆ ಸಾಕು
ಅಷ್ಟೇ ಸಾಕು ; ಈ ಮಣ್ಣಿನ ಜೀವಕ್ಕೆ ಇನ್ನೇನು ಬೇಕು ?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...