Home / ಕವನ / ಕವಿತೆ / ಮತ್ತೆ ಮಳೆ ಹೊಯ್ಯಲಿದೆ

ಮತ್ತೆ ಮಳೆ ಹೊಯ್ಯಲಿದೆ

ಮತ್ತೆ ಮಳೆ ಹೊಯ್ಯುವದೆ ? ಬಾಯಾರಿ ಬಿದ್ದ
ಬಾವಿಗಳು ತುಂಬುವವೆ ? ಬಾಡಿ ಬಸವಳಿದ
ನನ್ನ ಹಿತ್ತಲ ಗಿಡದ ಎಲೆಗಳು ಚಿಗುರುವವೆ ?
ಬರಲಿದೆಯೆ ಮೋಡಗಳ ಸಾಲು ? ಕಣ್ತುಂಬಲಿದೆಯೆ
ಮಿಂಚುಗಳ ಆಟ ? ಮೊದಲ ಮಳೆ ಬಿದ್ದು
ಮಣ್ಣು ಘಮ್ಮೆಂದ ಸಂಭ್ರಮ ? ಹರಕು ಕೊಡೆಗಳ
ಹೊಲಿಗೆ ? ತಟ್ಟಿ ಕಟ್ಟುವುದು ? ನೀರು ಸೋರುವಲ್ಲೆಲ್ಲ
ತಕ್ಕ ವ್ಯವಸ್ಥೆ ? ನಿಜ ಇವೆಲ್ಲ ಕಳೆದಿದ್ದೇ ದಾರಿ
ಈ ದಾರಿ ದಾಟಿದ್ದು ಅದೆಷ್ಟೋ ಬಾರಿ ಆದರೂ
ಕಳೆದಿದ್ದು ಕಟ್ಟುವುದು ಮತ್ತೆ ಮತ್ತೆ ಕಟ್ಟುವುದು
ಇದು ನಮ್ಮ- ನಿಮ್ಮ- ಭಾಗ್ಯ ಅದೆಲ್ಲಾ ಸರಿ ಗೆಳೆಯ
ಈಗ ಹೇಗಿದೆ ನಿನ್ನ ಆರೋಗ್ಯ ?

ಮನುಷ್ಯರ ಮಿತಿಗಳ ದಾಟಿ ನನ್ನ ಜ್ವರ ಇನ್ನು ಕೈ
ಬಿಟ್ಟೆವೋ ಎಂಬಂತೆ ಕ್ಷೀಣ ಸ್ವರ ಹೋದ ಹೋದ
ಕಣ್ಣುಗಳು ತುಂಬಿ ಬಂದವು ಜೀವದ ಕನಸುಗಳೆಲ್ಲ
ಕುತ್ತಿಗೆಗೆ ಬಂದವು ಉಕ್ಕಿ ಹರಿಯಿತು ಅಘನಾಶಿನಿ
ಈಸುತ್ತ ಬಂದವು ನೆನಪುಗಳು ಆ ನೆನಪುಗಳಿಗೆ
ನಾನಾ ಸ್ವರೂಪ ಕಲಸಿ ಕಲಸಿ
ಕಣ್ಣೊತ್ತಿ ನಿಂತಿದ್ದು ಮಂಗಳದ ಕುಂಕುಮ ಹೇಳು
ಆ ತಾಯಿ ಯಾರು ? ಅನಿಸುವುದು ನಾನು ಬದುಕುಳಿದಿದ್ದು
ಸಂಕಲ್ಪ ಮಾತ್ರದಿಂದ

ಮತ್ತೆ ಮಳೆ ಹೊಯ್ಯುವುದೆ ? ನನ್ನೂರು ಹಿರೇಗುತ್ತಿ
ಸ್ನಾನದ ಪುಳಕಕ್ಕೆ ಅರಳಿ ಹೂವಾಗುವುದೆ ? ಈಶ್ವರ ಕೆರೆ
ತುಂಬಿ ಎಬ್ಬಿಸುವುದೆ ರೋಮಾಂಚನ ? ಇದೇ ರೀತಿ
ಚೌತಿಯ ತನಕ ಇದ್ದು ಬಿಟ್ಟರೆ ಬಹಳ ಆರಾಮು
ಅನಂತರವೇನೂ ಬೇಡ ಎಂದಲ್ಲ …………….

ಮೃತ್ಯು ಲೋಕ ಬಾ ಎಂದಾಗ ಬದುಕು ಸಿಹಿ ಅನಿಸಿತು
ಇಲ್ಲಿ ಬದುಕುವೆ ಮಾನವನಾಗಿ ಈ ಬದುಕು ನನ್ನದು
ಇದರ ಸೋಲೂ ಗೆಲುವೂ ಸಂಪೂರ್ಣ ನನ್ನದು ಒಮ್ಮೆ
ಕೊಟ್ಟು ನೋಡು ಅವಕಾಶ- ಆಗ
ಎತ್ತರಿಸುವೆ ಆಕಾಶ

ಸ್ವಲ್ಪ ಸಾವಕಾಶ ಬಿದ್ದ ಮಳೆ ಪೂರಾ ನೋಡಿದ್ದೇ ಕೀರ್ತಿ
ಅಲ್ಲ. ನಮ್ಮೂರ ಕೆರೆಗಳ ಪಾಲೂ ಉಂಟಲ್ಲ ? ಬಾ ಎಂದು ಕರೆಯುವ
ಬೆಟ್ಟಗಳು ನವಿಲುಗಳು ಕಪ್ಪೆಗಳು ಇವುಗಳಿಗೆ ಅಭಾರ
ಸಲ್ಲಲೇಬೇಕಲ್ಲ ? ಮುಖ್ಯವಾಗಿ ಇವೆಲ್ಲ ಪ್ರಕೃತಿ ನಿಯಮ
ಇದು ಸತ್ಯ. ಇದು ಸತ್ಯ ನಂಬು

ನಾನಾಗ ಚಿಕ್ಕವನು ಆಗ ಇದ್ದಿದ್ದು ಈ ಮನೆಯಲ್ಲಲ್ಲ ಇದೇ
ಕೇರಿಯಲ್ಲಿ ಕೆಳಗೆ ಎಂಥ ಮಳೇ ಹೇಗೆ ಹರಿಯುತ್ತಿತ್ತು, ನೀರು !
ಆ ನೀರಿನ ಎದುರು ಎದ್ದ ಗುಳ್ಳೆಗಳ ಎದುರು ದಂಗು ದುಗುಡದ ನಾ
ಮನೆ ಅಂಗಳದ ಎರಡನೇ ಮೆಟ್ಟಿಲ ಮೇಲೆ ಆ ಗುಳ್ಳೆಗಳಿಗೆ
ಕೈ ಬೀಸುತ್ತಿದ್ದೆ. ಆ ಗುಳ್ಳೆಗಳದು ಅನಿಯಂತ್ರಿತ ಪ್ರವಾಹ
ಇಂದಿಗೂ ನಾನು ಅದೇ ಹುಡುಗ ಗಡ್ಡ ಮೀಸೆ ಬಂದಿದ್ದು
ನನಗಲ್ಲ ನನ್ನ ದೇಹಕ್ಕೆ

ಮತ್ತೆ ಮಳೆ ಹೊಯ್ಯಲಿದೆ. ಕಲ್ಪನೆಯ ಕಡಲುಗಳು
ತುಂಬಿ ತುಳುಕಲಿವೆ ಹಡಗುಗಳು ಬರಲಿವೆ ದೋಣಿಗಳು
ಬರಲಿವೆ ಆಚೆ ದಡದಿಂದ ಬರುವರು ಹೊಸ ಅತಿಥಿಗಳು
ಬಾ – ಅವರನ್ನು ಸ್ವಾಗತಿಸು ಕುಡಿಯಲು ಬಿಸಿಯೋ ತಣ್ಣಗೋ
ಬನ್ನಿ ಬಟ್ಟೆ ಬದಲಿಸಿ ನಮ್ಮದೂ ನಿಮ್ಮದೂ ಒಂದೇ ಬದುಕು
ಇರುವಷ್ಟು ದಿವಸ ಇದ್ದೇ ಬಿಡುವ ಬಿಡದೇ ಬಿರುಕು
ಇಲ್ಲದಿದ್ದಾಗಲೂ ಇದ್ದಿದ್ದ ಎಂದು ಎದೆ ತುಂಬಿ ಹೇಳಿದರೆ ಸಾಕು
ಅಷ್ಟೇ ಸಾಕು ; ಈ ಮಣ್ಣಿನ ಜೀವಕ್ಕೆ ಇನ್ನೇನು ಬೇಕು ?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...