Home / ಕವನ / ಕವಿತೆ / ನಿರ್‍ದಯಿಗಳು

ನಿರ್‍ದಯಿಗಳು

ಹೆಣ್ಣು ಹುಟ್ಟಿತೆಂದು ಮುಖ ಇಳಿಸಿದರು
ಸಂತೋಷದ ತಮಟೆ ಬಾರಿಸಲಿಲ್ಲ
ಸಮಾಧಾನಕ್ಕೆ ಮನೆಯಲಕ್ಷ್ಮಿ ಎಂದರೆ ಹೊರತಾಗಿ
ಖರ್‍ಚು ಜಾಸ್ತಿ ಎಂದು ನೊಂದರು

ರ್‍ಯಾಂಕ್ ಪಡೆದಳೆಂದು ಬೀಗಿ
ತಮಟೆ ಬಾರಿಸಲಿಲ್ಲ
ಹೆಚ್ಚು ಓದಿದವನನ್ನು ಹುಡುಕಬೇಕಲ್ಲ
ಬೆವರಿಳಿಸತೊಡಗಿದರು.

ಮಗಳ ಮದುವೆ ಎಂದೇನು
ಸಂಭ್ರಮದ ತಮಟೆ ಬಾರಿಸಲಿಲ್ಲ
ವಸ್ತ್ರ ಒಡವೆ ಹಾಕಿ ಅಕ್ಷತೆ ಉದುರಿಸಿ
ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆಂದು
ಆರತಿ ಎತ್ತಿದರು.


ಮಗನನ್ನು ಕಸಿದುಕೊಂಡಳೆಂದು
ಉರಿಯ ತಮಟೆ ಬಾರಿಸಿದರಿಲ್ಲಿ
ಗಳಿಸಿದ್ದೆಲ್ಲ ಇವಳ ಬೆಡಗು ಬಿನ್ನಾಣಕ್ಕೆಂದು
ಚುಚ್ಚಿದರು ಕಣ್ಣೀರು ಹರಿಸಿದರು.

ಬಂದವಳು ಹೆಣ್ಣೆ ಹಡೆದಳೆಂದು
ವಂಶೋದ್ಧಾರಕರಿವರು ತಮಟೆ ಬಾರಿಸಿದರು
ಗಂಡುಮಗಳ ಹೆರಲಾರದ ಬಂಜೆ
ಎಂದೇ ಬಿರುದುಕೊಟ್ಟು ಬೆಂಕಿಹಚ್ಚಿದರು.
ಬೈಕು ಕಾರು ಓಡಿಸುವ ಗಂಡುಬೀರಿ
ಮನೆಯವರ ಸೇವೆಮಾಡದ ಸೊಕ್ಕಿನಾಕೆ
ಎಲ್ಲೆಲ್ಲೂ ತಮಟೆ ಬಾರಿಸುವವರು
ಅಡುಗೆಮನೆಯ ಕಟಕಟೆಯಲ್ಲಿ ನಿಲ್ಲಿಸಿ
ನೂರುಬೈಗುಳ ಹೂವೇರಿಸುತ
ಮನೆಮುರುಕಿ ಹಣೆಪಟ್ಟಿ ಕಟ್ಟುವರು

ತನ್ನದೇ ಕರುಳಿನ ಕುಡಿಯ ಹೆಮ್ಮೆಗೆ
ತಮಟೆ ಬಾರಿಸದ ಅಪ್ಪ ಅಮ್ಮ
ಕ್ಷಣಕ್ಷಣಕೂ ಅಪರಾಧಿ ಇವಳೆಂದು
ತಮಟೆ ಬಾರಿಸುವ ಮಾವ ಅತ್ತೆ


ಪ್ರೀತಿವಾತ್ಸಲ್ಯದ ಹೆಣ್ಣು ಜೀವ
ಸ್ವಾರ್‍ಥಿಗಳ ಕೈಗೊಂಬೆಯಾಗಿ
ನೊಂದು ಬೆಂದು ತಳಮಳಿಸಿ
ಒಂದೊಮ್ಮೆ ಅರ್ಥೈಸಿಕೊಳ್ಳದ
ಕಿವುಡ ನಾಟಕಕಾರರನು ದಾಟಿ
ಮರುಭೂಮಿಯಾಗಿಯೋ
ಜಲಪಾತವಾಗಿಯೋ
ಹೀಗೆ ಕಣ್ಮರೆಯಾಗುವಳು

ಆದರೂ ಮತ್ತೆ ಮತ್ತೆ ತಮಟೆಗಳು
ಹಲಗೆ ಕಹಳೆಯಾಗಿ ಬಾರಿಸುತ್ತಲೇ ಇರುತ್ತವೆ
ನಿರ್‍ದಯಿಗಳ ಬಾಯಲ್ಲಿ
ಇವಳು ಹೀಗೆ ಹಾಗೆ ಎಂದಾಗಲಿ
ಹೆಣ್ಣುಜೀವ ಮುತ್ತೈದೆಸಾವು ಎಂದಾಗಲಿ….
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...