Home / ಕಥೆ / ಕಾದಂಬರಿ / ರಂಗಣ್ಣನ ಕನಸಿನ ದಿನಗಳು – ೩೦

ರಂಗಣ್ಣನ ಕನಸಿನ ದಿನಗಳು – ೩೦

ತಿಮ್ಮರಾಯಪ್ಪನ ಮೆಚ್ಚಿಕೆ

ರಂಗಣ್ಣ ಬೆಂಗಳೂರನ್ನು ತಲುಪಿದ್ದಾಯಿತು; ಮನೆಯನ್ನು ಸೇರಿದ್ದಾಯಿತು. ರೈಲ್ ಸ್ಟೇಷನ್ನಿಗೆ ಗೋಪಾಲನೂ ಶಂಕರಪ್ಪ ನೂ ಬಂದಿದ್ದುದರಿಂದ ಹೆಚ್ಚು ತೊಂದರೆಯನ್ನು ಪಡದೆ, ಹೆಚ್ಚು ಗಾಡಿಗಳನ್ನು ಮಾತ್ರ ಮಾಡಿಕೊಂಡು ಮನೆಯನ್ನು ಸೇರಿದನು. ಮಾರನೆಯ ದಿನ ಶಂಕರಪ್ಪನಿಗೆ ಬಹಳವಾಗಿ ಸಮಾಧಾನ ಮಾಡಬೇಕಾಯಿತು. ಅವನು, `ಸ್ವಾಮಿ! ನನ್ನ ಜೀವಮಾನದಲ್ಲಿ ಅಂಥ ಸುಖ ಸಂತೋಷದ ದಿನಗಳನ್ನು ಮತ್ತೆ ನಾನು ಕಾಣುವುದಿಲ್ಲ. ನಾನೂ ಹಲವು ಅಪರಾಧಗಳನ್ನು ಮಾಡಿದೆ. ತಾವು ಒಳ್ಳೆಯ ಮಾತಿನಲ್ಲಿಯೇ ಬುದ್ದಿ ಹೇಳಿ ತಿದ್ದಿ ನಡೆಸಿ ಕೂ೦ಡುಬ೦ದಿರಿ. ಊಟದ ಹೊತ್ತಿನಲ್ಲಿ ಪಕ್ಕದಲ್ಲಿಯೇ ಮಣೆಹಾಕಿಸಿ ಕೂಡಿಸಿಕೊಂಡು ಸ್ನೇಹಿತನಂತೆ ಉಪಚಾರ ಮಾಡುತ್ತ ಆದರಿಸಿದಿರಿ. ನಾನು ಸಲಿಗೆಯಿಂದ ಏನಾದರೂ ಹೆಚ್ಚು ಕಡಮೆ ನಡೆದುಕೊಂಡಿದ್ದರೆ ಮನ್ನಿಸಬೇಕು’ ಎಂದು ಹೇಳಿದನು. ರಂಗಣ್ಣ ಯಥೋಚಿತವಾಗಿ ಅವನಿಗೆ ಉತ್ತರ ಹೇಳಿ ಗೋಪಾಲನ ಕೈಗೆ ಐದು ರುಪಾಯಿಗಳನ್ನು ಇನಾಮಾಗಿ ಕೊಟ್ಟನು. ಅವರಿಬ್ಬರ ರೈಲು ಖರ್ಚಿಗೆ ಬೇರೆ ಹಣವನ್ನೂ ಕೊಟ್ಟು ಕಳಿಸಿದನು.

ಭಾನುವಾರ ಬೆಳಗ್ಗೆ ಹತ್ತು ಗಂಟೆಗೆ ತಿಮ್ಮರಾಯಪ್ಪ ತನ್ನ ಹೆಂಡತಿ ಮತ್ತು ಮಕ್ಕಳೊಡನೆ ರಂಗಣ್ಣನ ಮನೆಗೆ ಬಂದನು. ಆ ದಿನ ಅವರಿಗೆ ಭೋಜನ ರಂಗಣ್ಣನ ಮನೆಯಲ್ಲೇ ಏರ್ಪಾಟಾಗಿತ್ತು. ರಂಗಣ್ಣನು ಬಹಳ ಸಂತೋಷದಿಂದಲೂ ಸಂಭ್ರಮದಿಂದಲೂ ಅವರನ್ನೆಲ್ಲ ಸ್ವಾಗತಿಸಿದನು. ರಂಗಣ್ಣನ ಹೆಂಡತಿ ತಿಮ್ಮರಾಯಪ್ಪನ ಹೆಂಡತಿಯನ್ನು ಕರೆದುಕೊಂಡು ಒಳ ಕೊಟಡಿಗೆ ಹೋದಳು. ಸ್ವಲ್ಪ ಕಾಫಿ ಸಮಾರಾಧನೆ ಆಗಿ ಆ ಬಳಿಕ ಊಟಗಳಾಗಿ ಹಾಲಿನಲ್ಲಿ ಎರಡು ಸಂಸಾರದವರೂ ಸೇರಿ ತಾಂಬೂಲವನ್ನು ಹಾಕಿಕೊಳ್ಳುತ್ತಾ ಮಾತನಾಡತೊಡಗಿದರು. ಎಲ್ಲವೂ ಜನಾರ್ದನಪುರದಲ್ಲಿ ರ೦ಗಣ್ಣ ನಡೆಸಿದ ಇನ್ಸ್ಪೆಕ್ಟರ್ ಗಿರಿಯ ಮಾತುಗಳೇ ಆಗಿದ್ದುವು. ಮಧ್ಯೆ ಮಧ್ಯೆ ತಿಮ್ಮರಾಯಪ್ಪ ತಾನು ನಡೆಸಿದ ಇನ್ಸ್ಪೆಕ್ಟರ್ ಗಿರಿಯ ಕೆಲವು ಕಥೆಗಳನ್ನೂ ಹೇಳುತ್ತಿದ್ದನು. ರಂಗಣ್ಣನು ಉಗ್ರಪ್ಪನ ವಿಚಾರವನ್ನೂ, ಅವನ ವಾದವನ್ನೂ, ಅವನಲ್ಲಾದ ಪರಿವರ್ತನೆಯನ್ನೂ , ಶಾಂತವೀರ ಸ್ವಾಮಿಯಾಗಿ ತನಗೆ ಮಾಡಿದ ಆತಿಥ್ಯವನ್ನೂ, ಕಲ್ಲೇಗೌಡ ಮತ್ತು ಕರಿಯಪ್ಪ ನವರೊಡನೆ ಆದ ಶಾಂತಿ ಸಂಧಾನವನ್ನೂ-ಎಲ್ಲವನ್ನೂ ಹೇಳಿದಾಗ ತಿಮ್ಮರಾಯಪ್ಪನು,

`ಅಯ್ಯೋ ಶಿವನೇ! ಎಂತಹ ಮಾರ್ಪಾಟು!’ ಎಂದು ಉದ್ಗಾರ ತೆಗೆದನು.

‘ನೋಡಿದೆಯಾ ತಿಮ್ಮರಾಯಪ್ಪ! ನನ್ನ ಇನ್ ಸ್ಪೆಕ್ಟರ್‌ಗಿರಿ! ಮಧ್ಯೆ ಮಧ್ಯೆ ಮನಸ್ಸಿಗೆ ಬೇಜಾರಾಗಿ ಹಾಳು ಇನ್ ಸ್ಪೆಕ್ಟರ್ ಗಿರಿ ನನಗೆ ಸಾಕಪ್ಪ! ಎಂದು ನಿನಗೆ ನಾನು ಬರೆಯುತ್ತಿದ್ದೆ, ಆದರೂ ಕೊನೆಯಲ್ಲಿ ನನಗೆ ಜನಾರ್ದನಪುರವನ್ನು ಬಿಟ್ಟು ಬರುವುದಕ್ಕೆ ಬಹಳ ವ್ಯಥೆಯಾಯಿತು. ಒಟ್ಟಿನಲ್ಲಿ ನನ್ನ ದರ್ಬಾರು ನಿನಗೆ ಮೆಚ್ಚಿಕೆಯಾಯಿತೇ?’ ಎಂದು ರಂಗಣ್ಣ ಕೇಳಿದನು.

`ಶಿವನಾಣೆ ರಂಗಣ್ಣ! ಶಿವನಾಣೆ! ನಿನಗೆ ಪ್ರಮಾಣವಾಗಿ ಹೇಳುತ್ತೇನೆ. ನಾವುಗಳೂ ಹಲವರು ಇನ್ಸ್ಪೆಕ್ಟರ್ ಗಿರಿ ಮಾಡಿದೆವು. ಹತ್ತರಲ್ಲಿ ಹನ್ನೊಂದು! ಲೆಕ್ಕವೇ ಪಕ್ಕವೇ! ನಿನ್ನ ಇನ್ ಸ್ಪೆಕ್ಟರ್ ಗಿರಿ ಒ೦ದು ಮಹಾಕಾವ್ಯ! ಚಂದ್ರಾರ್ಕವಾಗಿ ನಿಂತು ಹೋಯಿತು! ನನಗೆ ಬಹಳ ಸಂತೋಷ ರಂಗಣ್ಣ !’ ಎಂದು ಹೇಳುತ್ತಾ ತಿಮ್ಮರಾಯಪ್ಪ ರಂಗಣ್ಣನನ್ನು ಆಲಿಂಗನ ಮಾಡಿಕೊಂಡನು.

`ದೇವರೇ! ನಾನು ನೂರತೊಂಬತ್ತು ಪೌಂಡು ತೂಕ ಇಲ್ಲ! ನಾನು ಅಪ್ಪಚ್ಚಿಯಾಗಿ ಹೋಗ್ತೇನೆ! ಬಿಡು, ತಿಮ್ಮರಾಯಪ್ಪ! ಅವರಿಬ್ಬರೂ ನೋಡಿ ನಗುತ್ತಿದಾರೆ! ನನ್ನ ಇನ್ ಸ್ಪೆಕ್ಟರ್‌ಗಿರಿ ಇರಲಿ, ನಿನ್ನ ಸ್ನೇಹ ನಿಜವಾಗಿಯೂ! ಒಂದು ಮಹಾಕಾವ್ಯ! ಅದು ಆಚಂದ್ರಾರ್ಕವಾಗಿ ನಿಂತಿರುತ್ತದೆ!’ ಎಂದು ರಂಗಣ್ಣ ನಗುತ್ತಾ ಹೇಳಿದನು.
*****
ಮುಗಿಯಿತು

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...