Home / ಕಥೆ / ಕಾದಂಬರಿ / ರಂಗಣ್ಣನ ಕನಸಿನ ದಿನಗಳು – ೩೦

ರಂಗಣ್ಣನ ಕನಸಿನ ದಿನಗಳು – ೩೦

ತಿಮ್ಮರಾಯಪ್ಪನ ಮೆಚ್ಚಿಕೆ

ರಂಗಣ್ಣ ಬೆಂಗಳೂರನ್ನು ತಲುಪಿದ್ದಾಯಿತು; ಮನೆಯನ್ನು ಸೇರಿದ್ದಾಯಿತು. ರೈಲ್ ಸ್ಟೇಷನ್ನಿಗೆ ಗೋಪಾಲನೂ ಶಂಕರಪ್ಪ ನೂ ಬಂದಿದ್ದುದರಿಂದ ಹೆಚ್ಚು ತೊಂದರೆಯನ್ನು ಪಡದೆ, ಹೆಚ್ಚು ಗಾಡಿಗಳನ್ನು ಮಾತ್ರ ಮಾಡಿಕೊಂಡು ಮನೆಯನ್ನು ಸೇರಿದನು. ಮಾರನೆಯ ದಿನ ಶಂಕರಪ್ಪನಿಗೆ ಬಹಳವಾಗಿ ಸಮಾಧಾನ ಮಾಡಬೇಕಾಯಿತು. ಅವನು, `ಸ್ವಾಮಿ! ನನ್ನ ಜೀವಮಾನದಲ್ಲಿ ಅಂಥ ಸುಖ ಸಂತೋಷದ ದಿನಗಳನ್ನು ಮತ್ತೆ ನಾನು ಕಾಣುವುದಿಲ್ಲ. ನಾನೂ ಹಲವು ಅಪರಾಧಗಳನ್ನು ಮಾಡಿದೆ. ತಾವು ಒಳ್ಳೆಯ ಮಾತಿನಲ್ಲಿಯೇ ಬುದ್ದಿ ಹೇಳಿ ತಿದ್ದಿ ನಡೆಸಿ ಕೂ೦ಡುಬ೦ದಿರಿ. ಊಟದ ಹೊತ್ತಿನಲ್ಲಿ ಪಕ್ಕದಲ್ಲಿಯೇ ಮಣೆಹಾಕಿಸಿ ಕೂಡಿಸಿಕೊಂಡು ಸ್ನೇಹಿತನಂತೆ ಉಪಚಾರ ಮಾಡುತ್ತ ಆದರಿಸಿದಿರಿ. ನಾನು ಸಲಿಗೆಯಿಂದ ಏನಾದರೂ ಹೆಚ್ಚು ಕಡಮೆ ನಡೆದುಕೊಂಡಿದ್ದರೆ ಮನ್ನಿಸಬೇಕು’ ಎಂದು ಹೇಳಿದನು. ರಂಗಣ್ಣ ಯಥೋಚಿತವಾಗಿ ಅವನಿಗೆ ಉತ್ತರ ಹೇಳಿ ಗೋಪಾಲನ ಕೈಗೆ ಐದು ರುಪಾಯಿಗಳನ್ನು ಇನಾಮಾಗಿ ಕೊಟ್ಟನು. ಅವರಿಬ್ಬರ ರೈಲು ಖರ್ಚಿಗೆ ಬೇರೆ ಹಣವನ್ನೂ ಕೊಟ್ಟು ಕಳಿಸಿದನು.

ಭಾನುವಾರ ಬೆಳಗ್ಗೆ ಹತ್ತು ಗಂಟೆಗೆ ತಿಮ್ಮರಾಯಪ್ಪ ತನ್ನ ಹೆಂಡತಿ ಮತ್ತು ಮಕ್ಕಳೊಡನೆ ರಂಗಣ್ಣನ ಮನೆಗೆ ಬಂದನು. ಆ ದಿನ ಅವರಿಗೆ ಭೋಜನ ರಂಗಣ್ಣನ ಮನೆಯಲ್ಲೇ ಏರ್ಪಾಟಾಗಿತ್ತು. ರಂಗಣ್ಣನು ಬಹಳ ಸಂತೋಷದಿಂದಲೂ ಸಂಭ್ರಮದಿಂದಲೂ ಅವರನ್ನೆಲ್ಲ ಸ್ವಾಗತಿಸಿದನು. ರಂಗಣ್ಣನ ಹೆಂಡತಿ ತಿಮ್ಮರಾಯಪ್ಪನ ಹೆಂಡತಿಯನ್ನು ಕರೆದುಕೊಂಡು ಒಳ ಕೊಟಡಿಗೆ ಹೋದಳು. ಸ್ವಲ್ಪ ಕಾಫಿ ಸಮಾರಾಧನೆ ಆಗಿ ಆ ಬಳಿಕ ಊಟಗಳಾಗಿ ಹಾಲಿನಲ್ಲಿ ಎರಡು ಸಂಸಾರದವರೂ ಸೇರಿ ತಾಂಬೂಲವನ್ನು ಹಾಕಿಕೊಳ್ಳುತ್ತಾ ಮಾತನಾಡತೊಡಗಿದರು. ಎಲ್ಲವೂ ಜನಾರ್ದನಪುರದಲ್ಲಿ ರ೦ಗಣ್ಣ ನಡೆಸಿದ ಇನ್ಸ್ಪೆಕ್ಟರ್ ಗಿರಿಯ ಮಾತುಗಳೇ ಆಗಿದ್ದುವು. ಮಧ್ಯೆ ಮಧ್ಯೆ ತಿಮ್ಮರಾಯಪ್ಪ ತಾನು ನಡೆಸಿದ ಇನ್ಸ್ಪೆಕ್ಟರ್ ಗಿರಿಯ ಕೆಲವು ಕಥೆಗಳನ್ನೂ ಹೇಳುತ್ತಿದ್ದನು. ರಂಗಣ್ಣನು ಉಗ್ರಪ್ಪನ ವಿಚಾರವನ್ನೂ, ಅವನ ವಾದವನ್ನೂ, ಅವನಲ್ಲಾದ ಪರಿವರ್ತನೆಯನ್ನೂ , ಶಾಂತವೀರ ಸ್ವಾಮಿಯಾಗಿ ತನಗೆ ಮಾಡಿದ ಆತಿಥ್ಯವನ್ನೂ, ಕಲ್ಲೇಗೌಡ ಮತ್ತು ಕರಿಯಪ್ಪ ನವರೊಡನೆ ಆದ ಶಾಂತಿ ಸಂಧಾನವನ್ನೂ-ಎಲ್ಲವನ್ನೂ ಹೇಳಿದಾಗ ತಿಮ್ಮರಾಯಪ್ಪನು,

`ಅಯ್ಯೋ ಶಿವನೇ! ಎಂತಹ ಮಾರ್ಪಾಟು!’ ಎಂದು ಉದ್ಗಾರ ತೆಗೆದನು.

‘ನೋಡಿದೆಯಾ ತಿಮ್ಮರಾಯಪ್ಪ! ನನ್ನ ಇನ್ ಸ್ಪೆಕ್ಟರ್‌ಗಿರಿ! ಮಧ್ಯೆ ಮಧ್ಯೆ ಮನಸ್ಸಿಗೆ ಬೇಜಾರಾಗಿ ಹಾಳು ಇನ್ ಸ್ಪೆಕ್ಟರ್ ಗಿರಿ ನನಗೆ ಸಾಕಪ್ಪ! ಎಂದು ನಿನಗೆ ನಾನು ಬರೆಯುತ್ತಿದ್ದೆ, ಆದರೂ ಕೊನೆಯಲ್ಲಿ ನನಗೆ ಜನಾರ್ದನಪುರವನ್ನು ಬಿಟ್ಟು ಬರುವುದಕ್ಕೆ ಬಹಳ ವ್ಯಥೆಯಾಯಿತು. ಒಟ್ಟಿನಲ್ಲಿ ನನ್ನ ದರ್ಬಾರು ನಿನಗೆ ಮೆಚ್ಚಿಕೆಯಾಯಿತೇ?’ ಎಂದು ರಂಗಣ್ಣ ಕೇಳಿದನು.

`ಶಿವನಾಣೆ ರಂಗಣ್ಣ! ಶಿವನಾಣೆ! ನಿನಗೆ ಪ್ರಮಾಣವಾಗಿ ಹೇಳುತ್ತೇನೆ. ನಾವುಗಳೂ ಹಲವರು ಇನ್ಸ್ಪೆಕ್ಟರ್ ಗಿರಿ ಮಾಡಿದೆವು. ಹತ್ತರಲ್ಲಿ ಹನ್ನೊಂದು! ಲೆಕ್ಕವೇ ಪಕ್ಕವೇ! ನಿನ್ನ ಇನ್ ಸ್ಪೆಕ್ಟರ್ ಗಿರಿ ಒ೦ದು ಮಹಾಕಾವ್ಯ! ಚಂದ್ರಾರ್ಕವಾಗಿ ನಿಂತು ಹೋಯಿತು! ನನಗೆ ಬಹಳ ಸಂತೋಷ ರಂಗಣ್ಣ !’ ಎಂದು ಹೇಳುತ್ತಾ ತಿಮ್ಮರಾಯಪ್ಪ ರಂಗಣ್ಣನನ್ನು ಆಲಿಂಗನ ಮಾಡಿಕೊಂಡನು.

`ದೇವರೇ! ನಾನು ನೂರತೊಂಬತ್ತು ಪೌಂಡು ತೂಕ ಇಲ್ಲ! ನಾನು ಅಪ್ಪಚ್ಚಿಯಾಗಿ ಹೋಗ್ತೇನೆ! ಬಿಡು, ತಿಮ್ಮರಾಯಪ್ಪ! ಅವರಿಬ್ಬರೂ ನೋಡಿ ನಗುತ್ತಿದಾರೆ! ನನ್ನ ಇನ್ ಸ್ಪೆಕ್ಟರ್‌ಗಿರಿ ಇರಲಿ, ನಿನ್ನ ಸ್ನೇಹ ನಿಜವಾಗಿಯೂ! ಒಂದು ಮಹಾಕಾವ್ಯ! ಅದು ಆಚಂದ್ರಾರ್ಕವಾಗಿ ನಿಂತಿರುತ್ತದೆ!’ ಎಂದು ರಂಗಣ್ಣ ನಗುತ್ತಾ ಹೇಳಿದನು.
*****
ಮುಗಿಯಿತು

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...