ಕೊನೆಯಾಶೆ

ಹೊಲಮನೆ, ಬೆಳ್ಳಿ ಬಂಗಾರ ಸಾಕಷ್ಟು ಗಳಿಸಿದ ಒಬ್ಬ ದೈವುಳ್ಳ ಗೃಹಸ್ಥನು ಕಾಯಿಲೆಯಿಂದ ಹಾಸಿಗೆ ಹಿಡಿದನು. ಆ ಗೃಹಸ್ಥನು ಸಾಧ್ಯವಾದ ಸೌಮ್ಯೋಪಾಯಗಳಿಂದ ತನ್ನ ಕಾಯಿಲೆ ಕಳಕೊಳ್ಳುವ ಎತ್ತುಗಡೆ ನಡೆಸಿದನು. ಅದಕ್ಕನುಗುಣವಾದ ಔಷಧಿ-ಚಿಕಿತ್ಸೆಗಳನ್ನು ಅನುಸರಿಸಬೇಕಾಯಿತು.

ಸೌಮ್ಯವಾದ ಔಷಧಿ-ಚಿಕಿತ್ಸೆಗಳಿಗೆ ಹಣಿಯದೆ ಕಾಯಿಲೆಯು ದಿನದಿನಕ್ಕೆ ಅಸಾಧ್ಯವಾಗುತ್ತಲೇ ಬಂದಿತು. ಯಜಮಾನನು ಬಿದ್ದಲ್ಲಿಯೇ ಬಿದ್ದುಕೊಳ್ಳುವ ಸ್ಥಿತಿಯು ಪ್ರಾಪ್ತವಾಯಿತು. ಮಾತನಾಡುವುದಕ್ಕೆ ತ್ರಾಣವಿಲ್ಲದಂತಾಯಿತು. ಕೊನೆಗೆ ಮಾತೂ ನಿಂತುಹೋದವು. ಸನ್ನೆಯಿಂದಲೇ ಹೇಳಲು ಕೇಳಲು ತೊಡಗಿದರು. ತಂದೆಯ ದುರವಸ್ಥೆ ಕಂಡು, ಮಕ್ಕಳೆಲ್ಲ ಸುತ್ತಲು ನೆರೆದು ಕುಳಿತು – “ನನಗೇನು ಹೇಳುತ್ತೀ” ಎಂದು ಕಣ್ಣೀರು ಸುರಿಸತೊಡಗಿದರು. ತಂದೆಗೆ ಮಾತಾಡಲು ಸಾಧ್ಯವಿರದಿದ್ದರೂ ಸ್ಮೃತಿಯಿತ್ತು. ಆದ್ದರಿಂದ ಕೈಸನ್ನೆಯಿಂದಲೇ ಅವರಿಗೆ ಸಾಂತ್ವನ ಹೇಳಿದನು. ಮರುಕ್ಷಣದಿಂದಲೇ ಬೆರಳಿನಿಂದ ಸೂಚಿಸುತ್ತ ಏನೋ ತೋರಿಸಹತ್ತಿದನು. ಮಕ್ಕಳಿಗೆ ಅನುಮಾನವಾಯಿತು – “ಹುಗಿದಿಟ್ಟ ದ್ರವ್ಯವನ್ನೇ ತೋರಿಸುತ್ತಾನೋ ಏನೋ” ಎಂದು. ತಂದೆಯ ಅಭಿಪ್ರಾಯವನ್ನು ಸರಿಯಾಗಿ ತಿಳಕೊಳ್ಳುವ ಆಸೆಯುಂಟಾಯಿತು ಅವರಿಗೆ. ಅದಕ್ಕೇನು ಮಾಡುವುದು? ಅದೆಷ್ಟು ಹಣ ಖರ್ಚಾದರೂ ಚಿಂತೆಯಿಲ್ಲ. ಒಂದು ಕ್ಷಣದ ಮಟ್ಟಗಾದರೂ ಆತನು ಎದ್ದು ಕುಳಿತು ಮಾತಾಡುವಷ್ಟು ತ್ರಾಣಬರುವಂತೆ ಉಪಾಯ ಮಾಡಲೇಬೇಕೆಂದು ಯೋಚಿಸಿ, ಬಲ್ಲವರ ಬಳಿಗೆ ಓಡಿಹೋಗಿ ಕೇಳಿಕೊಂಡರು.

ನೂರಿನ್ನೂರು ರೂಪಾಯಿ ಖರ್ಚುಮಾಡಿ. ವೈದ್ಯರ ಬಳಿಯಲ್ಲಿರುವ ಒಂದು ಮಾತ್ರೆಯನ್ನು ತಂದು, ತೇದು. ಆಸನ್ನ ಮರಣನಾದ ತಂದೆಯ ನಾಲಗೆಗೆ ಸವರಿದರು. ಅದರ ಪರಿಣಾಮವಾಗಿ ರೋಗಿಯು ಚೇತರಿಸಿಕೊಂಡು ಎದ್ದು ಕುಳಿತನು. ಅಲಕ್ಕನೇ ಸ್ಮರಣಶಕ್ತಿ ಸುಳಿದು ಬಂದಿತು. ಬಾಯಿಗೆ ಮಾತು ಬಂದವು. ಮಕ್ಕಳು ಹಿಗ್ಗಿ ತಂದೆಗೆ ಕೇಳಿದರು – “ಆಗಲೇ ಕೈಮಾಡಿ ಎನೋ ಸೂಚಿಸುತ್ತಿದ್ದೆಯಲ್ಲ ! ಏನು ಹೇಳಬೇಕೆಂದು ಮಾಡಿದ್ದೀ.”

“ಅಹುದೇ ? ಅದೋ. ಈಗ ಸಹ ನೋಡಿರಿ. ಆ ಸುಟ್ಟ ಮುಸಡಿಯ ಎಮ್ಮೆ ಕರುವು ಮೊಂಡ ಕಸಬರಿಗೆ ತಿನ್ನುತ್ತಿದೆ. ಅದನ್ನು ಈಗಲಾದರೂ ಕಸಿದಿಡಿರೋ.”

ಇಷ್ಟು ಹೇಳುವದಕ್ಕೆ ಅವನ ಅವಸಾನ ತೀರಿತು. ನೆಲಕ್ಕರುಳಿದನು. ಬಾಯಲ್ಲಿ ನೀರು ಹನಿಸುವಷ್ಟರಲ್ಲಿ ಪ್ರಾಣಹೋಯಿತು.

ನೂರಿನ್ನೂರು ಖರ್ಚು ಮಾಡಿ ಮಾತ್ರೆ ತಂದು ತೇದುಹಾಕಿದ ಮಕ್ಕಳು ಉಳಿಸಿಕೊಂಡಿದ್ದೇನು ? ಮೊಂಡ ಕಸಬರಿಗೆ ಮಾತ್ರ.
*****

ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೯೧
Next post ಜಿಗಳೆಗಳು

ಸಣ್ಣ ಕತೆ

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…