Home / ಕವನ / ಕವಿತೆ / ಮಣ್ಣಿನ ಒಲವು

ಮಣ್ಣಿನ ಒಲವು

ಮಣ್ಣು ಹೊನ್ನಿನ ಗೂಡು
ಮಣ್ಣು ಜೀವದ ಸೂಡು
ಮಣ್ಣು ಹೆಣ್ಣಿನ ಬೀಡು
ಮಣ್ಣು ಗಂಡಿನ ನಾಡು.

ಮಣ್ಣು ಪಾವನಮೆದು
ತುಳಸಿ ಮೈತ್ರಿಕೆಯಾಯ್ತು
ಬಣ್ಣ ಬಣ್ಣದ ಮಣ್ಣು
ಮೈಗೆ ಪೂಸುವ ಗಂಧ.

ಉಪ್ಪು ಸಿಹಿಕಾರಗಳ
ಷಡ್ರಸಾಹಾರಗಳ
ಜೀವಕೇ ತವರಿದುವು
ಮಣ್ಣು ಸಂಜೀವನವು.

ಮಣ್ಣಿಂದ ಸಾಗರವು
ಸಾಗರದಿ ಮುತ್ತುಗಳು
ಹೊನ್ನು ರನ್ನಗಳೆಲ್ಲ
ಮಣ್ಣಿಂದಮೈಶ್ವರ್ಯ.

ಈ ರಾಜ್ಯ ಸಂಪದವು
ಈ ಸೌಧವರಮನೆಯು
ಸಾಮ್ರಾಜ್ಯ ಸಿಂಹಾಸ
ನಗಳು ಮಾಯದ ಮಣ್ಣು.

ನೀರೊಳಗೆ ಮುಳುಗಿಪುದು
ಆಗಸದಿ ಹಾರಿಪುದು
ನೆಲದಲ್ಲಿ ನಡೆಸುವುದು
ಶಕ್ತಿಗೇ ಗಣಿಯಿದುವು.

ದೇವ ಸೃಷ್ಟಿಯ ಮಣ್ಣು
ಬ್ರಹ್ಮಾಂಡಮಾಯ್ತಿಂದು
ಚಣ ಚಣಕೆ ಹೊಸ ಯುಗವ
ಕರೆಯುತಿದೆ ತೋರುತಿದೆ.

ಸಕಲ ಬಗೆಗಳ ಜೀವ
ಖನಿಜ ಸಂಪದ ಭಾವ
ದೈವಶಕ್ತಿಯು ತೀವಿ
ತುಂಬಿರುವ ವರ ಕಣಜ

ಈ ನಾಡು ಈ ಕಾಡು
ಎಂಬ ಭಾವದ ಮಾಯೆ
ಆಸೆ ಕಲಹದಸೂಯೆ
ಮಣ್ಗುಂಟಿ ಪರಿಕಿಸಲು.

ಮಣ್ಣಿಲ್ಲದಿನ್ನಿಲ್ಲ
ನಿತ್ಯವಸ್ತುವೆ ಮಣ್ಣು
ಮನವರಿಯದಿರ್ದೊಡೀ
ಕಣ್ಣರಿಯದೇ ನಿಜವ.

ದೇವರ್ಗೆ ಮಣ್ಣೆಂದ
ರೇನು ಪ್ರೇಮವೊ ಕಾಣೆ
ಅಮೃತವನೆ ಬಿತ್ತಿಹನು
ಜೀವಕಳೆ ತುಂಬುವನು.

ಮಣ್ಣಿಗಿಹ ಸುತ್ಯಾಗ
ಶುಚಿ ಪ್ರೀತಿ ವಾತ್ಸಲ್ಯ
ವೈರಾಗ್ಯಮುಪಕಾರ
ಗುಣವೊಲಿಯಲೆಮಗಿಂದು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...