Home / ಕವನ / ಕವಿತೆ / ದುಶ್ಯಾಸನರು

ದುಶ್ಯಾಸನರು

ದ್ರೌಪದೀ,
ಅಂದು
ಋತುಮತಿಯಾಗಿದ್ದ ನಿನ್ನನ್ನು
ದರದರ ಎಳೆದು ತಂದು
ತುಂಬಿದ ಸಭೆಯಲ್ಲಿ
ದುಶ್ಯಾಸನ ನಿನ್ನ ಸೆರಗಿಗೆ ಕೈ ಹಾಕಿದಾಗ,
ನೀನೇಕೆ ಅವನ ದಹಿಸದೆ
ನಿನ್ನ ಪಣ ಒಡ್ಡಿದವರ ಬೇಡಿದೆ?
ಅವರು ಅಸಹಾಯಕರಾಗಿ ತಲೆತಗ್ಗಿಸಿ ಕುಳಿತಾಗ
ನಿನ್ನ ಕೂಗಿಗೆ ಓಗೊಡಲು ಶ್ರೀಕೃಷ್ಣನಿದ್ದ,
ನಿನ್ನ ಸೀರೆಯ ಅಕ್ಷಯವಾಗಿಸಿದ.
ನಾವೇನ ಮಾಡಲಿ ಹೇಳು?
ನೀನಂದು ಒಬ್ಬ ದುಶ್ಯಾಸನನ ದಹಿಸಿದ್ದರೆ
ಇಂದು ಮತ್ತೆ ಮತ್ತೆ ದುಶ್ಯಾಸನರು
ಹೆಡೆ ಎತ್ತುತ್ತಿರಲಿಲ್ಲ.
ಈಗ ಎಲ್ಲೆಲ್ಲೂ ದುಶ್ಯಾಸನರೇ
ಶ್ರೀಕೃಷ್ಣ ಮಾತ್ರ ಇಲ್ಲ.
ಹೆಣ್ಣಿನ ಸೀರೆ ಎಳೆಯುವಾಗ
ಅಂದಿನಂತೆ ಇಂದೂ
ಎಲ್ಲ ನಿಂತು ನೋಡುವವರೇ;
ಅಕ್ಷಯ ವಸನವಿಲ್ಲದೆ ಬೆತ್ತಲಾಗುವುದೇ
ಇಂದಿನ ಸ್ಥಿತಿ, ಇಂದಿನ ಗತಿ.
ರಕ್ಷಿಸಲು ಯಾರು ಬರುತ್ತಾರೆ ಹೇಳು?
ನೀನು ದುಶ್ಯಾಸನನ ಹಿಂದೆ ಬಿಟ್ಟು ಹೋದ ಹಾಗೆ
ನಿನ್ನ ಮರ್ಯಾದೆಯ ಕಾಯ್ದ
ಶ್ರೀಕೃಷ್ಣನ ಬಿಟ್ಟು ಹೋಗಲಿಲ್ಲವೇಕೆ?
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...