Home / ಕವನ / ಕವಿತೆ / ಚೈತ್ಯಾಲಯ

ಚೈತ್ಯಾಲಯ


ಶಿವನುಂಡ ನಂಜು ತಿಳಿಗೊಂಡು ಮಂಜು-
ಮಂಜಾಗಿದೆ ಈ ಸಂಜಿಗೆ.
ಇದು ಉಷಾಮಿಷದ ಪೊಸನೇಹ ಸೇರಿ ಕಳೆ
ಏರಿದೆ ಹುರಿಮಂಜಿಗೆ.
ಭೌಮಾತ್ಮಭೂತಿ ಚೈತನ್ಯದೂತಿ, ಊ-
ರ್ಜಿತದಾ ಸಿರಿವಂತಿಗೆ.
ಕಥಕ್ಕಳಿಯ ಪುತ್ಥಳಿಯೆ ! ಪೃಥಕ್ ಥತ್
ತಳಿಸಿದೆ ಜೀವಂತಿಗೆ.
ಜಡೆತುಂಬ ಕಣ್ಣು, ಇದು ಯಾವ ಹೆಣ್ಣು ? ಮಾ-
ಪ್ರಾಣದ ಸ್ಯಾವಂತಿಗೆ !


ಯಾವ ಅಚ್ಚರಸಿ ? ಯಾವ ಋಷಿಯರಸಿ ?
ಯಾವ ಭಾವಸರಸಿ ?
ಯಾವ ಘಟ್ಟದಲಿ ? ಯಾವ ಪಟ್ಟದಲಿ ?
ಯಾವ ಮುಹೂರ್ತವಿರಿಸಿ ?
ಯಾವ ನಕ್ಷತ್ರ ? ಯಾವ ಸುಕ್ಷೇತ್ರ ?
ಯಾವ ಪಾತ್ರ ಧರಿಸಿ ?
ಝಂಝಣಣ ಝಣಣ, ಝಂಝುಣತ್ ಝಣಣ, ಜೀ-
ವಾಣುವೃಂದ ಮೆರೆಸಿ,
ಛಂದಛಂದ ನವಬಂಧ ಪಡೆದು ಬಂ-
ದಿಹವು ಹಳತ ಮರೆಸಿ.


ಛಿಳಿಲ್ ಛಟಿಲೆಂದು ಭುಕ್ಕ್ ಭುಗಿಲೆಂದು
ತಟಿತ್ ತಟ್ಟಿತೆಂದೂ
ಕಣ್ಣ ಮುಚ್ಚಣಿಕೆ ಕಣ್ಣ ತೆರೆವಣಿಕೆ
ಕಣ್ಣ ಕಟ್ಟಿತೆಂದೂ
ನವೋನವದ ಭವಭವದ ತವದ ವೈ-
ಭವವ ಒಟ್ಟಿತಂದು
ಕುರುಡು ಬಯಲಿಗಿಗೊ ಕಣ್ಣು ಬರೆವ ಕೈ-
ವಾಡ ಚಿಗುರ್ತಿಂದು
ದುಂದುದುಂದು ದುಂದುಭಿಸುತಿಹುದು ಇಕೊ!
ಹಲವು ಮುಖದಲೊಂದು.


ಬಾರೊ ಇಲ್ಲಿ ಬೈರಾಗಿ ಬಾರೊ, ಬಾ
ಇಲ್ಲಿದೆ ತಂಗುವ ಸ್ಥಲಾ-
ತಣಿವನರಿಯದೇ ದಣಿದುಹೋದೆ, ಬಾ
ಇಲ್ಲಿದೆ ಇಂಗದ ಜಲಾ-
ಏಕೆ ರೋಸಿ, ಭಯಗೊಂಡು ಹೇಸಿ, ನೀ
ಆಕ್ರೋಶಿಸುತಿಹೆ ಎಲಾ !
ಶಿವದ ಭಕ್ತಿಗವತಾರಶಕ್ತಿಗಿಗೊ
ಇದುವೇ ಇಂಗಿತವಲಾ!
ಬ್ರಹ್ಮಸ್ಫುರಣಕೆ ಮರಣವೆಂತು ? ಅದು
ಅದುವೇ ಅಮೃತದ ಬಲಾ.


ಹಿಮಾಲಯದ ಒಳಬಸಿರಲೆ ಕೊರೆದಿದೆ
ಯಾವುದೊ ಬ್ರಹ್ಮಾಭಯಾ-
ಚಿತ್ರನೇತ್ರಗಳು ಉನ್ಮೀಲಿಸುತಿವೆ
ಓಹೊ ತಾರಕಾಮಯಾ !
ಸೃಷ್ಟಿಯ ಕಲೆಯಾ, ಮಾಯೆಯ ಬಲೆಯಾ
ಬೀಸಿದೆ ಉದಯದ ನಯಾ
ಅರವಿಂದ ಮಿಂದ ಅರವಿಂದ ಗಂಧ ಆರಿ-
ವಿಂದಲೆ ಬಂದಿದೆ ಜಯಾ.
ಚಿತ್ತ ಚಿತ್ತಗಳ ಪಾತ್ರ ಕುಣಿಯುತಿವೆ
ಕಟ್ಟಿದೆ ಚೈತ್ಯಾಲಯ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...