Home / ಕವನ / ಕವಿತೆ / ಚೈತ್ಯಾಲಯ

ಚೈತ್ಯಾಲಯ


ಶಿವನುಂಡ ನಂಜು ತಿಳಿಗೊಂಡು ಮಂಜು-
ಮಂಜಾಗಿದೆ ಈ ಸಂಜಿಗೆ.
ಇದು ಉಷಾಮಿಷದ ಪೊಸನೇಹ ಸೇರಿ ಕಳೆ
ಏರಿದೆ ಹುರಿಮಂಜಿಗೆ.
ಭೌಮಾತ್ಮಭೂತಿ ಚೈತನ್ಯದೂತಿ, ಊ-
ರ್ಜಿತದಾ ಸಿರಿವಂತಿಗೆ.
ಕಥಕ್ಕಳಿಯ ಪುತ್ಥಳಿಯೆ ! ಪೃಥಕ್ ಥತ್
ತಳಿಸಿದೆ ಜೀವಂತಿಗೆ.
ಜಡೆತುಂಬ ಕಣ್ಣು, ಇದು ಯಾವ ಹೆಣ್ಣು ? ಮಾ-
ಪ್ರಾಣದ ಸ್ಯಾವಂತಿಗೆ !


ಯಾವ ಅಚ್ಚರಸಿ ? ಯಾವ ಋಷಿಯರಸಿ ?
ಯಾವ ಭಾವಸರಸಿ ?
ಯಾವ ಘಟ್ಟದಲಿ ? ಯಾವ ಪಟ್ಟದಲಿ ?
ಯಾವ ಮುಹೂರ್ತವಿರಿಸಿ ?
ಯಾವ ನಕ್ಷತ್ರ ? ಯಾವ ಸುಕ್ಷೇತ್ರ ?
ಯಾವ ಪಾತ್ರ ಧರಿಸಿ ?
ಝಂಝಣಣ ಝಣಣ, ಝಂಝುಣತ್ ಝಣಣ, ಜೀ-
ವಾಣುವೃಂದ ಮೆರೆಸಿ,
ಛಂದಛಂದ ನವಬಂಧ ಪಡೆದು ಬಂ-
ದಿಹವು ಹಳತ ಮರೆಸಿ.


ಛಿಳಿಲ್ ಛಟಿಲೆಂದು ಭುಕ್ಕ್ ಭುಗಿಲೆಂದು
ತಟಿತ್ ತಟ್ಟಿತೆಂದೂ
ಕಣ್ಣ ಮುಚ್ಚಣಿಕೆ ಕಣ್ಣ ತೆರೆವಣಿಕೆ
ಕಣ್ಣ ಕಟ್ಟಿತೆಂದೂ
ನವೋನವದ ಭವಭವದ ತವದ ವೈ-
ಭವವ ಒಟ್ಟಿತಂದು
ಕುರುಡು ಬಯಲಿಗಿಗೊ ಕಣ್ಣು ಬರೆವ ಕೈ-
ವಾಡ ಚಿಗುರ್ತಿಂದು
ದುಂದುದುಂದು ದುಂದುಭಿಸುತಿಹುದು ಇಕೊ!
ಹಲವು ಮುಖದಲೊಂದು.


ಬಾರೊ ಇಲ್ಲಿ ಬೈರಾಗಿ ಬಾರೊ, ಬಾ
ಇಲ್ಲಿದೆ ತಂಗುವ ಸ್ಥಲಾ-
ತಣಿವನರಿಯದೇ ದಣಿದುಹೋದೆ, ಬಾ
ಇಲ್ಲಿದೆ ಇಂಗದ ಜಲಾ-
ಏಕೆ ರೋಸಿ, ಭಯಗೊಂಡು ಹೇಸಿ, ನೀ
ಆಕ್ರೋಶಿಸುತಿಹೆ ಎಲಾ !
ಶಿವದ ಭಕ್ತಿಗವತಾರಶಕ್ತಿಗಿಗೊ
ಇದುವೇ ಇಂಗಿತವಲಾ!
ಬ್ರಹ್ಮಸ್ಫುರಣಕೆ ಮರಣವೆಂತು ? ಅದು
ಅದುವೇ ಅಮೃತದ ಬಲಾ.


ಹಿಮಾಲಯದ ಒಳಬಸಿರಲೆ ಕೊರೆದಿದೆ
ಯಾವುದೊ ಬ್ರಹ್ಮಾಭಯಾ-
ಚಿತ್ರನೇತ್ರಗಳು ಉನ್ಮೀಲಿಸುತಿವೆ
ಓಹೊ ತಾರಕಾಮಯಾ !
ಸೃಷ್ಟಿಯ ಕಲೆಯಾ, ಮಾಯೆಯ ಬಲೆಯಾ
ಬೀಸಿದೆ ಉದಯದ ನಯಾ
ಅರವಿಂದ ಮಿಂದ ಅರವಿಂದ ಗಂಧ ಆರಿ-
ವಿಂದಲೆ ಬಂದಿದೆ ಜಯಾ.
ಚಿತ್ತ ಚಿತ್ತಗಳ ಪಾತ್ರ ಕುಣಿಯುತಿವೆ
ಕಟ್ಟಿದೆ ಚೈತ್ಯಾಲಯ
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...