ಚೈತ್ಯಾಲಯ


ಶಿವನುಂಡ ನಂಜು ತಿಳಿಗೊಂಡು ಮಂಜು-
ಮಂಜಾಗಿದೆ ಈ ಸಂಜಿಗೆ.
ಇದು ಉಷಾಮಿಷದ ಪೊಸನೇಹ ಸೇರಿ ಕಳೆ
ಏರಿದೆ ಹುರಿಮಂಜಿಗೆ.
ಭೌಮಾತ್ಮಭೂತಿ ಚೈತನ್ಯದೂತಿ, ಊ-
ರ್ಜಿತದಾ ಸಿರಿವಂತಿಗೆ.
ಕಥಕ್ಕಳಿಯ ಪುತ್ಥಳಿಯೆ ! ಪೃಥಕ್ ಥತ್
ತಳಿಸಿದೆ ಜೀವಂತಿಗೆ.
ಜಡೆತುಂಬ ಕಣ್ಣು, ಇದು ಯಾವ ಹೆಣ್ಣು ? ಮಾ-
ಪ್ರಾಣದ ಸ್ಯಾವಂತಿಗೆ !


ಯಾವ ಅಚ್ಚರಸಿ ? ಯಾವ ಋಷಿಯರಸಿ ?
ಯಾವ ಭಾವಸರಸಿ ?
ಯಾವ ಘಟ್ಟದಲಿ ? ಯಾವ ಪಟ್ಟದಲಿ ?
ಯಾವ ಮುಹೂರ್ತವಿರಿಸಿ ?
ಯಾವ ನಕ್ಷತ್ರ ? ಯಾವ ಸುಕ್ಷೇತ್ರ ?
ಯಾವ ಪಾತ್ರ ಧರಿಸಿ ?
ಝಂಝಣಣ ಝಣಣ, ಝಂಝುಣತ್ ಝಣಣ, ಜೀ-
ವಾಣುವೃಂದ ಮೆರೆಸಿ,
ಛಂದಛಂದ ನವಬಂಧ ಪಡೆದು ಬಂ-
ದಿಹವು ಹಳತ ಮರೆಸಿ.


ಛಿಳಿಲ್ ಛಟಿಲೆಂದು ಭುಕ್ಕ್ ಭುಗಿಲೆಂದು
ತಟಿತ್ ತಟ್ಟಿತೆಂದೂ
ಕಣ್ಣ ಮುಚ್ಚಣಿಕೆ ಕಣ್ಣ ತೆರೆವಣಿಕೆ
ಕಣ್ಣ ಕಟ್ಟಿತೆಂದೂ
ನವೋನವದ ಭವಭವದ ತವದ ವೈ-
ಭವವ ಒಟ್ಟಿತಂದು
ಕುರುಡು ಬಯಲಿಗಿಗೊ ಕಣ್ಣು ಬರೆವ ಕೈ-
ವಾಡ ಚಿಗುರ್ತಿಂದು
ದುಂದುದುಂದು ದುಂದುಭಿಸುತಿಹುದು ಇಕೊ!
ಹಲವು ಮುಖದಲೊಂದು.


ಬಾರೊ ಇಲ್ಲಿ ಬೈರಾಗಿ ಬಾರೊ, ಬಾ
ಇಲ್ಲಿದೆ ತಂಗುವ ಸ್ಥಲಾ-
ತಣಿವನರಿಯದೇ ದಣಿದುಹೋದೆ, ಬಾ
ಇಲ್ಲಿದೆ ಇಂಗದ ಜಲಾ-
ಏಕೆ ರೋಸಿ, ಭಯಗೊಂಡು ಹೇಸಿ, ನೀ
ಆಕ್ರೋಶಿಸುತಿಹೆ ಎಲಾ !
ಶಿವದ ಭಕ್ತಿಗವತಾರಶಕ್ತಿಗಿಗೊ
ಇದುವೇ ಇಂಗಿತವಲಾ!
ಬ್ರಹ್ಮಸ್ಫುರಣಕೆ ಮರಣವೆಂತು ? ಅದು
ಅದುವೇ ಅಮೃತದ ಬಲಾ.


ಹಿಮಾಲಯದ ಒಳಬಸಿರಲೆ ಕೊರೆದಿದೆ
ಯಾವುದೊ ಬ್ರಹ್ಮಾಭಯಾ-
ಚಿತ್ರನೇತ್ರಗಳು ಉನ್ಮೀಲಿಸುತಿವೆ
ಓಹೊ ತಾರಕಾಮಯಾ !
ಸೃಷ್ಟಿಯ ಕಲೆಯಾ, ಮಾಯೆಯ ಬಲೆಯಾ
ಬೀಸಿದೆ ಉದಯದ ನಯಾ
ಅರವಿಂದ ಮಿಂದ ಅರವಿಂದ ಗಂಧ ಆರಿ-
ವಿಂದಲೆ ಬಂದಿದೆ ಜಯಾ.
ಚಿತ್ತ ಚಿತ್ತಗಳ ಪಾತ್ರ ಕುಣಿಯುತಿವೆ
ಕಟ್ಟಿದೆ ಚೈತ್ಯಾಲಯ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಜಾರಾಜ್ಯ
Next post ಸುಭದ್ರೆ – ೧೮

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…