ಬೆನ್ನು ಬಾಗಿಸಿಕೊಂಡು ತಂದುದನ್ನು
ಅಟ್ಟುಕೊಂಡು ಉಟ್ಟುಕೊಂಡು
ಪಾಡು ಪಟ್ಟುಕೊಂಡು
ಜೀ ಹುಜೂರ್ ಹಾಡಿಕೊಂಡು
ಉಸಿರು ಬಿಡಲು
ಅಪಣೆ ಬೇಡಿಕೊಂಡು
ಕೀ ಕೊಟ್ಟ ಗೊಂಬೆಗಳಂತೆ
ಕುಣಿಯುವವರು ನಾವು
ಕುಣಿಸುವವರು ನೀವು.
ನಿಮ್ಮ ಪಾದಕ್ಕೆ ಮೂಗುದಾರಕ್ಕೆ
ಮಣಿದು ತಾಳಕ್ಕೆ ಕುಣಿದು
ಇಷ್ಟಾನಿಷ್ಟಗಳ ಒರೆಹಚ್ಚಿ
ನಿಮ್ಮ ಭಾಗ್ಯದ ಪ್ರಗತಿಗೆ
ಹಿರಿಮೆಗೆ ಗರಿಮೆಗೆ
ಕುಲದ ಉದ್ಧಾರಕ್ಕೆ
ಬೇಡುವವರು ನಾವು
ಬೇಡಿಸುವವರು ನೀವು.
ಕಾಲನ ಪರಿಧಿಯೊಳಗೆ ಏಳುತ್ತಾ
ಬೀಳುತ್ತಾ ಕನಸುಗಳ ಕತ್ತರಿಸುತ್ತಾ
ಬವಣೆಗಳಲ್ಲೇ ಸುಖವನ್ನರಸುತ್ತಾ
ನೋವಿನಲ್ಲೂ ನಗುವ ಕಾಣುತ್ತಾ
ಹಣೆಬರಹವ ಹಳಿಯುತ್ತಾ
ನಿಂತ ನೀರಾಗಿ ನೀರಲ್ಲೇ ಕರಗಿ
ಕೊಳೆಯುವವರು ನಾವು
ಕೊಳೆಯಿಸುವವರು ನೀವು.
ಆರಕ್ಕೇರದೆ ಮೂರಕ್ಕಿಳಿಯದೆ
ಇತ್ತಲೂ ಇಲ್ಲದೇ ಅತ್ತಲೂ ಸಲ್ಲದೇ
ಹಳೆಯದನ್ನು ಬಿಡಲಾಗದೆ
ಹೊಸದನ್ನು ಅಪ್ಪಿಕೊಳ್ಳದೆ
ದ್ವಂದ್ವದಲಿ ಸೆಣಸುತ್ತಾ
ಬದಲಾದರೂ ಕಾಲ ದೇಶ ಸಂಸ್ಕೃತಿ
ಬದಲಾಗದವರು ನಾವು
ಬದಲಾಗಿಸದವರು ನೀವು.
*****
Related Post
ಸಣ್ಣ ಕತೆ
-
ರಾಮಿ
‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…
-
ಮಿಂಚು
"ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…
-
ಬಸವನ ನಾಡಿನಲಿ
೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…
-
ಆವರ್ತನೆ
ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…
-
ಕೊಳಲು ಉಳಿದಿದೆ
ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…