ಬೆನ್ನು ಬಾಗಿಸಿಕೊಂಡು ತಂದುದನ್ನು
ಅಟ್ಟುಕೊಂಡು ಉಟ್ಟುಕೊಂಡು
ಪಾಡು ಪಟ್ಟುಕೊಂಡು
ಜೀ ಹುಜೂರ್ ಹಾಡಿಕೊಂಡು
ಉಸಿರು ಬಿಡಲು
ಅಪಣೆ ಬೇಡಿಕೊಂಡು
ಕೀ ಕೊಟ್ಟ ಗೊಂಬೆಗಳಂತೆ
ಕುಣಿಯುವವರು ನಾವು
ಕುಣಿಸುವವರು ನೀವು.
ನಿಮ್ಮ ಪಾದಕ್ಕೆ ಮೂಗುದಾರಕ್ಕೆ
ಮಣಿದು ತಾಳಕ್ಕೆ ಕುಣಿದು
ಇಷ್ಟಾನಿಷ್ಟಗಳ ಒರೆಹಚ್ಚಿ
ನಿಮ್ಮ ಭಾಗ್ಯದ ಪ್ರಗತಿಗೆ
ಹಿರಿಮೆಗೆ ಗರಿಮೆಗೆ
ಕುಲದ ಉದ್ಧಾರಕ್ಕೆ
ಬೇಡುವವರು ನಾವು
ಬೇಡಿಸುವವರು ನೀವು.
ಕಾಲನ ಪರಿಧಿಯೊಳಗೆ ಏಳುತ್ತಾ
ಬೀಳುತ್ತಾ ಕನಸುಗಳ ಕತ್ತರಿಸುತ್ತಾ
ಬವಣೆಗಳಲ್ಲೇ ಸುಖವನ್ನರಸುತ್ತಾ
ನೋವಿನಲ್ಲೂ ನಗುವ ಕಾಣುತ್ತಾ
ಹಣೆಬರಹವ ಹಳಿಯುತ್ತಾ
ನಿಂತ ನೀರಾಗಿ ನೀರಲ್ಲೇ ಕರಗಿ
ಕೊಳೆಯುವವರು ನಾವು
ಕೊಳೆಯಿಸುವವರು ನೀವು.
ಆರಕ್ಕೇರದೆ ಮೂರಕ್ಕಿಳಿಯದೆ
ಇತ್ತಲೂ ಇಲ್ಲದೇ ಅತ್ತಲೂ ಸಲ್ಲದೇ
ಹಳೆಯದನ್ನು ಬಿಡಲಾಗದೆ
ಹೊಸದನ್ನು ಅಪ್ಪಿಕೊಳ್ಳದೆ
ದ್ವಂದ್ವದಲಿ ಸೆಣಸುತ್ತಾ
ಬದಲಾದರೂ ಕಾಲ ದೇಶ ಸಂಸ್ಕೃತಿ
ಬದಲಾಗದವರು ನಾವು
ಬದಲಾಗಿಸದವರು ನೀವು.
*****
Related Post
ಸಣ್ಣ ಕತೆ
-
ವಾಮನ ಮಾಸ್ತರರ ಏಳು ಬೀಳು
"ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…
-
ವಿಷಚಕ್ರ
"ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…
-
ಹೃದಯದ ತೀರ್ಪು
ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…
-
ಕೊಳಲು ಉಳಿದಿದೆ
ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…
-
ಗೋಪಿ
ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…