Home / ಕವನ / ಕವಿತೆ / ನಾಚಿಕೆ

ನಾಚಿಕೆ

ಜೀವನಪುರಿ


ಪಾಪಿ ನಾ, ತಿಳಿಗೇಡಿ ಅಂದು ಅರಿಯದೆ ಹೋದೆ,
ನಾಚಿಕೆಗೆ ಮೈಮಾರಿ ಮನದಳಲಿಗೀಡಾದೆ.
ಕೈಯ ಹಿಡಿವಾನಿಯ, ಕುಲದೋಜ ನಗೆಯಲ್ಲಿ
ಮೈಯ ಹಿಡಿದಲುಗಿ ಹೇಳಿದರು “ನೋಡೇ ಇಲ್ಲಿ,
ಚೆನ್ನಾಗಿ ಕಂದೆರೆದು ನಿನ್ನವನ ಮೊಗನೋಡು!”
ಎನ್ನುತಿರೆ ನಾಚಿಕೆಯು ಕಣ್ಣ ಮಾಡಿತು ಕುರುಡು;

ತಗ್ಗಿಸಿದ ತಲೆಯ ಮೇಲೆತ್ತಗೊಡಲಿಲ್ಲ,
ಹಿಗ್ಗಿನೂಟವನೆದೆಗೆ ಉಣ್ಣಗೊಡಲಿಲ್ಲ!


ನಲ್ಲನಂದಾಡಿದೊಂದೇ ಒಂದು ಮಾತಿನಾ-
ಮೆಲ್ಲುಲಿಯ ಸವಿಯೆನಿತು . .! ‘ಕನಸಿನೊಳಗಿದ್ದು ನಾ
ವೀಣೆಯಿಂಚರ ಕೇಳುತಿರುವೆನೇನೋ…!’ ಎಂದೆ,
ಗೋಣೆತ್ತಿ ನೋಡಬೇಕೆನುತೊಮ್ಮೆ ಹವಣಿಸಿದೆ;
‘ಗೋಣೆತ್ತಿ ನಾನೀಗ ನೋಡಿದರೆ ನೆರೆದವರು
‘ನಾಣಿಲಿಯು ಇವಳೆಂದು ನಗರೆ..!’ ಎನ್ನುತ ಬಗೆದೆ.

ತಗ್ಗಿಸಿದ ತಲೆಯ ಮೇಲೆತ್ತಲೇ ಇಲ್ಲ,
ಹಿಗ್ಗಿನಾ ನೋಟವನ್ನು ನೋಡಲೇ ಇಲ್ಲ!


ಖೋಡಿ, ನಾಚಿಕೆಯೆ, ಕಿಡುಗೇಡಿಯೆನುತಿರುವೆ ನೀ?
ಮಾಡಿದೆಯಲಾ ಬರಿದೆ ನನ್ನ ಬಾಳಿನ ಹಾನಿ!
ಅಂದು ನೀ ನಡುವೆ ಬರದಿದ್ದರಾತನನೊಂದೆ
ಒಂದು ಸಲ ನೋಡಿ ಕೃತಕೃತ್ಯಳಾಗುತಲಿದ್ದೆ;
ನಿನ್ನ ಜೊತೆಯನು ನೀಡದಿದ್ದರೆನಗೊಬ್ಬಳಿಗೆ
ತನ್ನ ಸೃಷ್ಟಿಯೆ ಬಿದ್ದು ಹೋಗುತಿತ್ತೇ ವಿಧಿಗೆ !

ತಗ್ಗಿಸಿದ ತಲೆಯ ನೀನೆತ್ತಗೊಡಲಿಲ್ಲ,
ಹಿಗ್ಗಿನಾ ನೋಟವನ್ನು ನೋಡತೊಡಲಿಲ್ಲ!
* * * * *

ಏಸು ಜನ್ಮದ ಹಗೆಯೆ ನಾಚಿಕೆಯೆ ನೀ ನನಗೆ?
ಮೀಸಲನ್ನವ ಕಸಿದು ಬಿಸುಡಿದೆ, ಇದೆಂಥ ನಗೆ?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...