Home / ಕವನ / ಕವಿತೆ / ಷಣ್‍ಮುಖ

ಷಣ್‍ಮುಖ


ಕೋಳಿ ಕೂಗೋದು ಕಾದು
ಬಾಳ ತಂಗಳು ತಿಂದು
ಹೊತ್ತಿನ ಜತ್ಯಾಗೆ ಹೊಲದಾಕೆ ಬಂದು
ಬಿತ್ತಿದ್ದು ಒಣ ನವಣೆ
ಬೆಳೆದದ್ದು ಬರೀ ಬವಣೆ.


ಹಾರಕ ತಂದು ನೆಲತುಂಬ ಹೊಯ್ದರೂ
ಸುರಕೊಂಡಿದ್ದು ಮಾತ್ರ ಹತ್ತಾರು ಸೇರು
ತಿಂದು ಕುಂತರೆ ಈಗ
ಮುಂದೆ ಬೀಜಕ್ಕೆ ಕಾಳಿಲ್ಲ
ಹೊಟ್ಟೆ ಕಟ್ಟಿದರೂ ಹಾರಕಕ್ಕೆ ಬೆಲೆಯಿಲ್ಲ.


ಕಡಲೆ ಕಾಯಿಯ ಬೀಜ
ಒಣ ಹೂಲದ ರಾಜ
ಬಿತ್ತಿ, ಬೆಳೆಯಿತು ಆಸೆ.

ಹರಡಿಕೊಂಡು ಗಿಡ
ನೂರು ಬೇರಿನ ಬುಡ
ರೆಪ್ಪೆಯಂಚಿನ ಒಳಗೆ
ಬಿರಿದ ಕಮಲ
ಕಣ್ಣು ತೆರೆದರೆ ಅಲ್ಲಿ
ಉರಿಗಣ್ಣ ಸೂರ್ಯನಿಗೆ
ಸೀದು ಹೋದ ಹಸಿರು
ಹೊಲವೆಲ್ಲ ನಿಟ್ಟುಸಿರು.


ರಾಗಿ ಪೈರಿನ ಬೆಳಸು
ತೂಗಿ ತೊನೆಯುವ ತೆನೆ
ಎದೆಯಾಗೆ ಮೂಡಿದವು
ರಾಶಿರಾಶಿ ಮುದ್ದೆ.

ಕುಣಿದು ಕುಪ್ಪಳಿಸಿ
ಕೈ ಚಾಚಿದರೆ
ಬಂಧನದ ಬೇಡಿ
ತೆನೆ ರುಂಡ ತಂದು
ಒಂದರ ಹಿಂದೊಂದು
ತುಂಬಿದ ಗಾಡಿ.


ಭತ್ತ ಬೆಳೆಯೋಣೆಂದರೆ
ಬಾವಿಯಿಲ್ಲ
ಕೆರೆಯ ಹಿಂದುಗಡೆ
ಗದ್ದೆಯಿಲ್ಲ.

ಅಕ್ಕಿ ಹಕ್ಕಿಯ ರೆಕ್ಕೆ
ಸುಟ್ಟು ಬಿದ್ದಿತು ನೆಲಕೆ
ಅನ್ನ ತಿನ್ನುವ ಆಸೆ
ಬಂಜೆ ಬಯಕೆ.


ನವಣೆ ಹಾರಕವಿಲ್ಲ
ಕಡಲೆಕಾಯಿ ಬೀಜವಿಲ್ಲ
ಅಕ್ಕಿ ರಾಗಿಯ ಹೆಸರು
ಎತ್ತೊ ಹಂಗಿಲ್ಲ.

ಕಂಡೂರ ಹೊಲದಾಗೆ
ಕೂಲಿ ಮಾಡಿದರುಂಟು
ಎತ್ತು ನೇಗಿಲಿಗೆಲ್ಲ
ಬಾಡಿಗೆ ನಂಟು.

ನೋವು ತುಂಬಿದ ನಾನು
ಏನ ಪ್ರೀತಿಸಲಿನ್ನು
ನೆಲವೂ ಇಲ್ಲ, ನೇಗಿಲೂ ಇಲ್ಲ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...