Home / ಕವನ / ಕವಿತೆ / ಎದೆಯಾಳದುಲುಹು

ಎದೆಯಾಳದುಲುಹು

ಋಷಿಗಳ ಮನದಾಗೆ ಓಂಕಾರ ಹರದಂಗೆ
ಬೆಸಲಾಗಿ ನಡೆದಾವೆ ತುಂತುಂಬಿ ಮೋಡ
ನಿಂತಂಗೆ ನಿಂತಲ್ಲಿ ಕುಂತಂಗೆ ಕುಂತಲ್ಲೆ
ಚಿಂತ್ಯಾಗೆ ಮೈಮರೆತ ಹಸಿರಿನ ಕಾಡ || ೧ ||

ಧ್ಯಾನದಾಗ ಸ್ವರ್ಗಾನ ಕಂಡಾಗ ತುಟಿಯಾಗೆ
ಎಳೆನಗೆ ಚಿಗತಂಗ ನಗತಾದ ಹುಲ್ಲು
ಹಗಲೆಲ್ಲ ಗಾಳೆಪ್ಪ ಗೋಳಿಸಿ ಹೋಗ್ಯಾನೆ
ಮೌನಗೌರಿ ಆಗ್ಯಾದೆ ಸೃಷ್ಟಿ ಸೊಲ್ಲು || ೨ ||

ಏನೇನೂ ಭಾವ ಹರದಾಡತಾವೆ
ನಾನೇನ ಬಲ್ಲೆನಮ್ಮ
ಧ್ಯಾನಾದಿ ನೀನು ಕುಳಿತಾಗ ನಾನು
ನನ್ನನ್ನೆ ಮರೆವೆನಮ್ಮಾ || ೩ ||

ಇದು ಬರೀ ಶಾಂತಿ ಇಲ್ಲಿಲ್ಲ ಗುಲ್ಲು
ಸೊಲ್ಲೆಲ್ಲ ಮೌನದಲ್ಲೆ
ಕದಡಿರುವ ನೀರು ತಿಳಿಯಾಗಿ ನಿಂತು
ಆಕಾಶ ಹೃದಯದಲ್ಲೆ || ೪ ||

ನಿನ್ನಿಂದ ದೂರ ಬಲುದೂರ ಹೋದೆ
ಪಡಬಾರದಂಥ ಕಷ್ಟ
ತಾಯನ್ನು ತೊರೆದು ಗಿಳಿಮರಿಯು ಬೀಳೆ
ನಾಯಿನರಿಗದುವೆ ಇಷ್ಟ || ೫ ||

ಬಹುದಿನಕೆ ನಿನ್ನ ಮೊಗನೋಡುವಂಥ
ಸಿಗಲಾರದಂಥ ಸೊಗವು
ಎಂದಾದರೊಮ್ಮೆ ಸಿಕ್ಕಾಗ ಎದೆಯು
ಅಳುವೆಲ್ಲ ಹರಿವ ನಗುವು || ೬ ||

ಒಂಟಿತನ ಸಾಕು ಅದು ನರಕ ಸಮವು
ನಾನಾದೆ ಕೊಳೆತ ಹುಳುವು
ನೀನೇಕೆ ನನ್ನ ಕೈಹಿಡಿಯದಂತೆ
ದೂಡುತಿಹೆ ತುಂಬಲಳುವು || ೭ ||

ನಿನ್ನನ್ನು ಬಿಟ್ಟು ನಾ ಬರಿಯ ನೆರಳು
ಒಳಹೊರಗೆ ಕಪ್ಪು ಕಪ್ಪೆ
ಏನಿದ್ದರೇನು ಪ್ರಾಣವೇ ಇರದೆ
ಕಸವಾಗಿ ಅಳಿವ ಸೊಪ್ಪೆ || ೮ ||

ಬಿಡಬೇಡ ನನ್ನ ನಾನಿನ್ನ ಹಸುವು
ಪಶುವಾಗದಂತೆ ಸಲಹು
ಏರಿಳುವುಗಳಲಿ ತೊಳಲುತ್ತೆ ಸೋತೆ
ಇದೆ ಎದೆಯ ಆಳದುಲುಹು || ೯ ||
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...