Home / ಕವನ / ಕವಿತೆ / ಎದೆಯಾಳದುಲುಹು

ಎದೆಯಾಳದುಲುಹು

ಋಷಿಗಳ ಮನದಾಗೆ ಓಂಕಾರ ಹರದಂಗೆ
ಬೆಸಲಾಗಿ ನಡೆದಾವೆ ತುಂತುಂಬಿ ಮೋಡ
ನಿಂತಂಗೆ ನಿಂತಲ್ಲಿ ಕುಂತಂಗೆ ಕುಂತಲ್ಲೆ
ಚಿಂತ್ಯಾಗೆ ಮೈಮರೆತ ಹಸಿರಿನ ಕಾಡ || ೧ ||

ಧ್ಯಾನದಾಗ ಸ್ವರ್ಗಾನ ಕಂಡಾಗ ತುಟಿಯಾಗೆ
ಎಳೆನಗೆ ಚಿಗತಂಗ ನಗತಾದ ಹುಲ್ಲು
ಹಗಲೆಲ್ಲ ಗಾಳೆಪ್ಪ ಗೋಳಿಸಿ ಹೋಗ್ಯಾನೆ
ಮೌನಗೌರಿ ಆಗ್ಯಾದೆ ಸೃಷ್ಟಿ ಸೊಲ್ಲು || ೨ ||

ಏನೇನೂ ಭಾವ ಹರದಾಡತಾವೆ
ನಾನೇನ ಬಲ್ಲೆನಮ್ಮ
ಧ್ಯಾನಾದಿ ನೀನು ಕುಳಿತಾಗ ನಾನು
ನನ್ನನ್ನೆ ಮರೆವೆನಮ್ಮಾ || ೩ ||

ಇದು ಬರೀ ಶಾಂತಿ ಇಲ್ಲಿಲ್ಲ ಗುಲ್ಲು
ಸೊಲ್ಲೆಲ್ಲ ಮೌನದಲ್ಲೆ
ಕದಡಿರುವ ನೀರು ತಿಳಿಯಾಗಿ ನಿಂತು
ಆಕಾಶ ಹೃದಯದಲ್ಲೆ || ೪ ||

ನಿನ್ನಿಂದ ದೂರ ಬಲುದೂರ ಹೋದೆ
ಪಡಬಾರದಂಥ ಕಷ್ಟ
ತಾಯನ್ನು ತೊರೆದು ಗಿಳಿಮರಿಯು ಬೀಳೆ
ನಾಯಿನರಿಗದುವೆ ಇಷ್ಟ || ೫ ||

ಬಹುದಿನಕೆ ನಿನ್ನ ಮೊಗನೋಡುವಂಥ
ಸಿಗಲಾರದಂಥ ಸೊಗವು
ಎಂದಾದರೊಮ್ಮೆ ಸಿಕ್ಕಾಗ ಎದೆಯು
ಅಳುವೆಲ್ಲ ಹರಿವ ನಗುವು || ೬ ||

ಒಂಟಿತನ ಸಾಕು ಅದು ನರಕ ಸಮವು
ನಾನಾದೆ ಕೊಳೆತ ಹುಳುವು
ನೀನೇಕೆ ನನ್ನ ಕೈಹಿಡಿಯದಂತೆ
ದೂಡುತಿಹೆ ತುಂಬಲಳುವು || ೭ ||

ನಿನ್ನನ್ನು ಬಿಟ್ಟು ನಾ ಬರಿಯ ನೆರಳು
ಒಳಹೊರಗೆ ಕಪ್ಪು ಕಪ್ಪೆ
ಏನಿದ್ದರೇನು ಪ್ರಾಣವೇ ಇರದೆ
ಕಸವಾಗಿ ಅಳಿವ ಸೊಪ್ಪೆ || ೮ ||

ಬಿಡಬೇಡ ನನ್ನ ನಾನಿನ್ನ ಹಸುವು
ಪಶುವಾಗದಂತೆ ಸಲಹು
ಏರಿಳುವುಗಳಲಿ ತೊಳಲುತ್ತೆ ಸೋತೆ
ಇದೆ ಎದೆಯ ಆಳದುಲುಹು || ೯ ||
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...