Home / ಕವನ / ಕವಿತೆ / ಅಣ್ಣ ಬಾರೊ

ಅಣ್ಣ ಬಾರೊ

ಅಣ್ಣ ಬಾರೊ ಬಸವಣ್ಣ ಬಾರೊ
ಈ ಜನರ ಕಣ್ಣ ತೆರೆಯೋ
ಬಣ್ಣ ಬಾಳು ಬರಿ ಹಾಳು ಹಾಳು
ಈ ಕಣ್ಣ ಪೊರೆಯ ಹರಿಯೋ || ೧ ||

ಕೊಳೆತು ನಿಂತು ನೀರಾದ ಭೇದ
ನೂರಾರು ತಳೆದ ಜನರ
ಕೆರಳಿ ಗದ್ದರಿಸಿ ತಿಳಿಸಿ ಉದ್ಧರಿಸಿ
ಕಾಯ್ದೆ ಅಂದು ಅವರ || ೨ ||

ಬ್ರಾಹ್ಮಣಾಗಿ ನೀ ಹುಟ್ಟಿ ಬಂದರೂ
ಕುಲದ ಜಡತೆ ನೋಡಿ
ಬ್ರಹ್ಮವನ್ನೆ ಮರೆತಂಥ ಬ್ರಾಹ್ಮಣರ
ಬಣ್ಣ ಬಯಲು ಮಾಡಿ || ೩ ||

ಕಟ್ಟು ಕಥೆಯ ಹೆಣೆಹೆಣೆದು ಸುಳ್ಳೆ
ತಾವ್ ಹೂಟ್ಟೆ ಹೊರೆಯುವವರ
ತಟ್ಟಿ ಬೈದು ಈ ರಟ್ಟೆ ಮುರಿದು
ದುಡಿಯೆಂದು ಪೇಳ್ದ ಧೀರ || ೪ ||

ಸಂಗಮೇಶ್ವರನ ಸಂಗದಲ್ಲಿ
ಲಿಂಗಾಂಗ ಪರಿಯನರಿತು
ಲಿಂಗಧರಿಸಿ ನಿಸ್ಸಂಗಿಯಾದೆ ನೀ
ಭಂಗ ಭವವ ಮರೆತು || ೫ ||

ಮನುಜರೆಲ್ಲ ಒಂದೆಂದು ಸಾರಿ
ಮನುಕುಲವ ಬೆಳಗ ಬಂದೆ
ಹೊಲಸುಗೈವ ಹೊಲೆಯರನು ಹಳಿದೆ
ಕುಲ ಜನಿಸಿದ್ದಲ್ಲವೆಂದೆ || ೬ ||

ಹುಲ್ಲು ದೇವರು ಕಲ್ಲು ದೇವರೆಂದೆಂದು
ಬೇಧವಿರಲು
ಎಲ ದೇವರೂ ಒಂದೆ ತಾನೆ
ಈಶ್ವರನು ಒಡೆಯನಿರಲು ||೭||

ಅಲ್ಲಿ ಇಹನು ಇಲ್ಲಿಹನು ದೇವ
ವಿಶ್ವವನು ತುಂಬಿದವನು
ಇಲ್ಲಿ ಮನದಿ ಇಹನೆಂದು ತನುವಿನಲಿ
ಲಿಂಗ ಮೆರೆಸಿದವನು (ಮಹಲಿಂಗ ಮೆರೆಸಿದವನು) || ೮ ||

ಕಾಮ ಸುಟ್ಟು ಬೂದಿಯನೆ ಧರಿಸಿ
ಕಾಮಾರಿಯಾದ ಶಿವನ
ನೇಮ ನಡೆಸಲ್ಕೆ ಬೂದಿ ತಳೆದೆ
ವಿಭೂತಿ ಎಂದೆ ಅದನ || ೯ ||

ಇಬ್ಬರ್‌ಹೆಂಡಿರೂ ಎರಡು ಕಣ್ಣಿನೊಲು
ಇರಲು ಗಂಗ ನೀಲಾ
ಬಳಸಿ ಬ್ರಹ್ಮಚಾರ್ಯದೆ ಉಂಡು
ಉಪವಾಸಿ ಬಹ್ಮಶೀಲಾ || ೧೦ ||

ಮುಳ್ಳ ಮಕುಟವದು ಮಂತ್ರಿಪದವಿ
ಬಿಜ್ಜಳನ ನೆರಳಿನಲ್ಲಿ
ಹೂವಿನಂತೆ ಕೈಗೊಂಡೆ ಕಂಡೆ
ಪರತತ್ವ ಇಹದಲಿಲ್ಲಿ || ೧೧ ||

ಹಣದ ಕಣಜವೇ ನಿನ್ನದಾಗಿರಲು
ಜನರ ಸೇವೆಗಾಯ್ತು
ಹಣದ ಭಂಡಾರ ಭಕುತಿ ಭಂಡಾರ
ನಿನ್ನ ಕೈಯಲಾಯ್ತು || ೧೨ ||

ಶಿವನ ದೂತನೇ ಬಂದು ಭುವಿಯ
ಕೈಲಾಸವಾಗಿ ಮಾಡೆ
ಶರಣ ಸಂಕುಳಿಯು ಮೂಲೆ
ಮೂಲೆಯಿಂದಿಲ್ಲಿ ಬಂದು ಕೂಡೆ || ೧೩ ||

ಕರ್ಮ ಮಾಡುವುದೇ ಧರ್ಮವೆಂದೆ
ಕಾಯಕವೆ ಶಿವನ ಕಾರ್ಯ
ತಿಳಿದು ಏಳೆ ಜನ ಮೊಳಗೆ ಎಲ್ಲಿಡೆಗೆ
ಮಹಾಮನೆಯ ತೂರ್ಯ || ೧೪ ||

ತಿಳಿವು ಲಿಂಗ ಮನ ಒಳವು ಲಿಂಗ
ತನು ಮಾಳ್ಪ ಕೆಲಸ ಲಿಂಗ
ಶಾಂತಿ ಶಿವನು ಸಮಬುದ್ಧಿ ಶಿವನು
ಸಹಬಾಳ್ವೆ ಶಿವನ ಸಂಗ || ೧೫ ||

ಜನಮನವು ತೊಳೆದು ತಿಳಿಯಾಯ್ತು ತನುವು
ಕೃತಿಯಲ್ಲಿ ಒಂದೆ ಆಯ್ತು
ಮಾಡಿದ್ದ ಮಡಿಯು ಆಡಿದ್ದ ವಚನ
ಮಹಪೂರ ರಚನೆಗಾಯ್ತು || ೧೬ ||

ಎಲ್ಲ ಜಾತಿಗಳ ಕೂಡಿಸಿಟ್ಟು
ಆದರ್ಶ ಕುಲವ ಮಾಡಿ
ಅನುಭವದ ಕಡೆತ ಅನುಭಾವವಾಗಿ
ಕಲ್ಯಾಣ ನಗರ ನೋಡಿ || ೧೭ ||

ಅಕ್ಕ ಬರಲು ಕಕ್ಕಯ್ಯ ಬಂದ
ಅಲ್ಲಮನು ಒಲಿದು ಬಂದ
ಮಾಚಿದೇವ ಬೌಡಯ್ಯ ಮತ್ತೆ
ಹರಳಯ್ಯರೆಲ್ಲರಿಂದ || ೧೮ ||

ಬೊಮ್ಮಿದೇವನಾ ಚಿಕ್ಕ ದೇವ
ಮಧುವರಸ ಕಿನ್ನರಯ್ಯ
ಮಾರಿದೇವ ಮುಂತಾದ ಮಹಿಮರು
ಎಲ್ಲ ನೆರೆದರಯ್ಯ || ೧೯ ||

ವಚನ ಹಾಡಿದರು ಮಥನ ಮಾಡಿದರು
ಮನದಿ ಶಿವನ ಕಂಡು
ಹೆಣ್ಣು ಮಕ್ಕಳೂ ಸಭೆಯ ಬೆಳಗಿದರು
ಅತ್ಮ ಸಿರಿಯನುಂಡು || ೨೦ ||

ಬೆಳಕು ಹಬ್ಬಿಸಲು ಹೆಣಗುವಂಥ
ದೀಪಕ್ಕೆ ಕಪ್ಪು ಮುಚ್ಚಿ
ಕತ್ತಲಾಯ್ತು ಸಿರಿ ಎತ್ತ ಹೋಯ್ತು
ಬರಿ ಬಯಲ ಭಾವನೆಚ್ಚಿ || ೨೧ ||

ಕಲ್ಯಾಣ ಉರಿದು ಇಲ್ಲಾಣವಾಯ್ತು
ಮತ ಬೇಧ ತೀವ್ರವಾಗಿ
ಕೂಡಲದಿ ನೀನು ಕೂಡಿದೆಯೊ ಶಿವನ
ಹಣ್ಣಾಗಿ ಕೊನೆಗೆ ಮಾಗಿ || ೨೨ ||

ಎಂಟು ನೂರು ವರ್ಷಗಳು ಕಳೆದರು
ಗಂಟಾಗಲಿಲ್ಲ ಬಾಳು
ನಿನ್ನ ಬೋಧ ಬರಿ ಬೂದಿಯಾಗಿ
ಮೈ ಬಳಿಯಲಾಯ್ತು ಧೂಳು || ೨೩ ||

ಮೇಲ್ಮೆ ಸಾಧಿಸುತ ಬಂದ ಪುರೋಹಿತ
ವರ್ಗಗಳ ಒಡೆವ ನೀತಿ
ಹೊಡೆದಾಟಕೊಂದು ನೆಪವಾಗಿ ಲಿಂಗ
ಜನಿವಾರ ಭೇದ ರೀತಿ || ೨೪ ||

ನಿನ್ನ ತತ್ವ ಕೃತಿಗಳನೆ ಮರೆತ
ಬರಿ ಬಾಯಿ ಮಾತಿನಲ್ಲಿ
ಬಣ್ಣಗೆಟ್ಟ ಈ ಜನರನೆತ್ತು ಬಾ
ಜನ್ಮವೆತ್ತಿ ಇಲ್ಲಿ (ನರ ಜನ್ಮವೆತ್ತಿ ಇಲ್ಲಿ) || ೨೫ ||
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್