Home / ಕವನ / ಕವಿತೆ / ಅಣ್ಣ ಬಾರೊ

ಅಣ್ಣ ಬಾರೊ

ಅಣ್ಣ ಬಾರೊ ಬಸವಣ್ಣ ಬಾರೊ
ಈ ಜನರ ಕಣ್ಣ ತೆರೆಯೋ
ಬಣ್ಣ ಬಾಳು ಬರಿ ಹಾಳು ಹಾಳು
ಈ ಕಣ್ಣ ಪೊರೆಯ ಹರಿಯೋ || ೧ ||

ಕೊಳೆತು ನಿಂತು ನೀರಾದ ಭೇದ
ನೂರಾರು ತಳೆದ ಜನರ
ಕೆರಳಿ ಗದ್ದರಿಸಿ ತಿಳಿಸಿ ಉದ್ಧರಿಸಿ
ಕಾಯ್ದೆ ಅಂದು ಅವರ || ೨ ||

ಬ್ರಾಹ್ಮಣಾಗಿ ನೀ ಹುಟ್ಟಿ ಬಂದರೂ
ಕುಲದ ಜಡತೆ ನೋಡಿ
ಬ್ರಹ್ಮವನ್ನೆ ಮರೆತಂಥ ಬ್ರಾಹ್ಮಣರ
ಬಣ್ಣ ಬಯಲು ಮಾಡಿ || ೩ ||

ಕಟ್ಟು ಕಥೆಯ ಹೆಣೆಹೆಣೆದು ಸುಳ್ಳೆ
ತಾವ್ ಹೂಟ್ಟೆ ಹೊರೆಯುವವರ
ತಟ್ಟಿ ಬೈದು ಈ ರಟ್ಟೆ ಮುರಿದು
ದುಡಿಯೆಂದು ಪೇಳ್ದ ಧೀರ || ೪ ||

ಸಂಗಮೇಶ್ವರನ ಸಂಗದಲ್ಲಿ
ಲಿಂಗಾಂಗ ಪರಿಯನರಿತು
ಲಿಂಗಧರಿಸಿ ನಿಸ್ಸಂಗಿಯಾದೆ ನೀ
ಭಂಗ ಭವವ ಮರೆತು || ೫ ||

ಮನುಜರೆಲ್ಲ ಒಂದೆಂದು ಸಾರಿ
ಮನುಕುಲವ ಬೆಳಗ ಬಂದೆ
ಹೊಲಸುಗೈವ ಹೊಲೆಯರನು ಹಳಿದೆ
ಕುಲ ಜನಿಸಿದ್ದಲ್ಲವೆಂದೆ || ೬ ||

ಹುಲ್ಲು ದೇವರು ಕಲ್ಲು ದೇವರೆಂದೆಂದು
ಬೇಧವಿರಲು
ಎಲ ದೇವರೂ ಒಂದೆ ತಾನೆ
ಈಶ್ವರನು ಒಡೆಯನಿರಲು ||೭||

ಅಲ್ಲಿ ಇಹನು ಇಲ್ಲಿಹನು ದೇವ
ವಿಶ್ವವನು ತುಂಬಿದವನು
ಇಲ್ಲಿ ಮನದಿ ಇಹನೆಂದು ತನುವಿನಲಿ
ಲಿಂಗ ಮೆರೆಸಿದವನು (ಮಹಲಿಂಗ ಮೆರೆಸಿದವನು) || ೮ ||

ಕಾಮ ಸುಟ್ಟು ಬೂದಿಯನೆ ಧರಿಸಿ
ಕಾಮಾರಿಯಾದ ಶಿವನ
ನೇಮ ನಡೆಸಲ್ಕೆ ಬೂದಿ ತಳೆದೆ
ವಿಭೂತಿ ಎಂದೆ ಅದನ || ೯ ||

ಇಬ್ಬರ್‌ಹೆಂಡಿರೂ ಎರಡು ಕಣ್ಣಿನೊಲು
ಇರಲು ಗಂಗ ನೀಲಾ
ಬಳಸಿ ಬ್ರಹ್ಮಚಾರ್ಯದೆ ಉಂಡು
ಉಪವಾಸಿ ಬಹ್ಮಶೀಲಾ || ೧೦ ||

ಮುಳ್ಳ ಮಕುಟವದು ಮಂತ್ರಿಪದವಿ
ಬಿಜ್ಜಳನ ನೆರಳಿನಲ್ಲಿ
ಹೂವಿನಂತೆ ಕೈಗೊಂಡೆ ಕಂಡೆ
ಪರತತ್ವ ಇಹದಲಿಲ್ಲಿ || ೧೧ ||

ಹಣದ ಕಣಜವೇ ನಿನ್ನದಾಗಿರಲು
ಜನರ ಸೇವೆಗಾಯ್ತು
ಹಣದ ಭಂಡಾರ ಭಕುತಿ ಭಂಡಾರ
ನಿನ್ನ ಕೈಯಲಾಯ್ತು || ೧೨ ||

ಶಿವನ ದೂತನೇ ಬಂದು ಭುವಿಯ
ಕೈಲಾಸವಾಗಿ ಮಾಡೆ
ಶರಣ ಸಂಕುಳಿಯು ಮೂಲೆ
ಮೂಲೆಯಿಂದಿಲ್ಲಿ ಬಂದು ಕೂಡೆ || ೧೩ ||

ಕರ್ಮ ಮಾಡುವುದೇ ಧರ್ಮವೆಂದೆ
ಕಾಯಕವೆ ಶಿವನ ಕಾರ್ಯ
ತಿಳಿದು ಏಳೆ ಜನ ಮೊಳಗೆ ಎಲ್ಲಿಡೆಗೆ
ಮಹಾಮನೆಯ ತೂರ್ಯ || ೧೪ ||

ತಿಳಿವು ಲಿಂಗ ಮನ ಒಳವು ಲಿಂಗ
ತನು ಮಾಳ್ಪ ಕೆಲಸ ಲಿಂಗ
ಶಾಂತಿ ಶಿವನು ಸಮಬುದ್ಧಿ ಶಿವನು
ಸಹಬಾಳ್ವೆ ಶಿವನ ಸಂಗ || ೧೫ ||

ಜನಮನವು ತೊಳೆದು ತಿಳಿಯಾಯ್ತು ತನುವು
ಕೃತಿಯಲ್ಲಿ ಒಂದೆ ಆಯ್ತು
ಮಾಡಿದ್ದ ಮಡಿಯು ಆಡಿದ್ದ ವಚನ
ಮಹಪೂರ ರಚನೆಗಾಯ್ತು || ೧೬ ||

ಎಲ್ಲ ಜಾತಿಗಳ ಕೂಡಿಸಿಟ್ಟು
ಆದರ್ಶ ಕುಲವ ಮಾಡಿ
ಅನುಭವದ ಕಡೆತ ಅನುಭಾವವಾಗಿ
ಕಲ್ಯಾಣ ನಗರ ನೋಡಿ || ೧೭ ||

ಅಕ್ಕ ಬರಲು ಕಕ್ಕಯ್ಯ ಬಂದ
ಅಲ್ಲಮನು ಒಲಿದು ಬಂದ
ಮಾಚಿದೇವ ಬೌಡಯ್ಯ ಮತ್ತೆ
ಹರಳಯ್ಯರೆಲ್ಲರಿಂದ || ೧೮ ||

ಬೊಮ್ಮಿದೇವನಾ ಚಿಕ್ಕ ದೇವ
ಮಧುವರಸ ಕಿನ್ನರಯ್ಯ
ಮಾರಿದೇವ ಮುಂತಾದ ಮಹಿಮರು
ಎಲ್ಲ ನೆರೆದರಯ್ಯ || ೧೯ ||

ವಚನ ಹಾಡಿದರು ಮಥನ ಮಾಡಿದರು
ಮನದಿ ಶಿವನ ಕಂಡು
ಹೆಣ್ಣು ಮಕ್ಕಳೂ ಸಭೆಯ ಬೆಳಗಿದರು
ಅತ್ಮ ಸಿರಿಯನುಂಡು || ೨೦ ||

ಬೆಳಕು ಹಬ್ಬಿಸಲು ಹೆಣಗುವಂಥ
ದೀಪಕ್ಕೆ ಕಪ್ಪು ಮುಚ್ಚಿ
ಕತ್ತಲಾಯ್ತು ಸಿರಿ ಎತ್ತ ಹೋಯ್ತು
ಬರಿ ಬಯಲ ಭಾವನೆಚ್ಚಿ || ೨೧ ||

ಕಲ್ಯಾಣ ಉರಿದು ಇಲ್ಲಾಣವಾಯ್ತು
ಮತ ಬೇಧ ತೀವ್ರವಾಗಿ
ಕೂಡಲದಿ ನೀನು ಕೂಡಿದೆಯೊ ಶಿವನ
ಹಣ್ಣಾಗಿ ಕೊನೆಗೆ ಮಾಗಿ || ೨೨ ||

ಎಂಟು ನೂರು ವರ್ಷಗಳು ಕಳೆದರು
ಗಂಟಾಗಲಿಲ್ಲ ಬಾಳು
ನಿನ್ನ ಬೋಧ ಬರಿ ಬೂದಿಯಾಗಿ
ಮೈ ಬಳಿಯಲಾಯ್ತು ಧೂಳು || ೨೩ ||

ಮೇಲ್ಮೆ ಸಾಧಿಸುತ ಬಂದ ಪುರೋಹಿತ
ವರ್ಗಗಳ ಒಡೆವ ನೀತಿ
ಹೊಡೆದಾಟಕೊಂದು ನೆಪವಾಗಿ ಲಿಂಗ
ಜನಿವಾರ ಭೇದ ರೀತಿ || ೨೪ ||

ನಿನ್ನ ತತ್ವ ಕೃತಿಗಳನೆ ಮರೆತ
ಬರಿ ಬಾಯಿ ಮಾತಿನಲ್ಲಿ
ಬಣ್ಣಗೆಟ್ಟ ಈ ಜನರನೆತ್ತು ಬಾ
ಜನ್ಮವೆತ್ತಿ ಇಲ್ಲಿ (ನರ ಜನ್ಮವೆತ್ತಿ ಇಲ್ಲಿ) || ೨೫ ||
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...