ಅಣ್ಣ ಬಾರೊ

ಅಣ್ಣ ಬಾರೊ ಬಸವಣ್ಣ ಬಾರೊ
ಈ ಜನರ ಕಣ್ಣ ತೆರೆಯೋ
ಬಣ್ಣ ಬಾಳು ಬರಿ ಹಾಳು ಹಾಳು
ಈ ಕಣ್ಣ ಪೊರೆಯ ಹರಿಯೋ || ೧ ||

ಕೊಳೆತು ನಿಂತು ನೀರಾದ ಭೇದ
ನೂರಾರು ತಳೆದ ಜನರ
ಕೆರಳಿ ಗದ್ದರಿಸಿ ತಿಳಿಸಿ ಉದ್ಧರಿಸಿ
ಕಾಯ್ದೆ ಅಂದು ಅವರ || ೨ ||

ಬ್ರಾಹ್ಮಣಾಗಿ ನೀ ಹುಟ್ಟಿ ಬಂದರೂ
ಕುಲದ ಜಡತೆ ನೋಡಿ
ಬ್ರಹ್ಮವನ್ನೆ ಮರೆತಂಥ ಬ್ರಾಹ್ಮಣರ
ಬಣ್ಣ ಬಯಲು ಮಾಡಿ || ೩ ||

ಕಟ್ಟು ಕಥೆಯ ಹೆಣೆಹೆಣೆದು ಸುಳ್ಳೆ
ತಾವ್ ಹೂಟ್ಟೆ ಹೊರೆಯುವವರ
ತಟ್ಟಿ ಬೈದು ಈ ರಟ್ಟೆ ಮುರಿದು
ದುಡಿಯೆಂದು ಪೇಳ್ದ ಧೀರ || ೪ ||

ಸಂಗಮೇಶ್ವರನ ಸಂಗದಲ್ಲಿ
ಲಿಂಗಾಂಗ ಪರಿಯನರಿತು
ಲಿಂಗಧರಿಸಿ ನಿಸ್ಸಂಗಿಯಾದೆ ನೀ
ಭಂಗ ಭವವ ಮರೆತು || ೫ ||

ಮನುಜರೆಲ್ಲ ಒಂದೆಂದು ಸಾರಿ
ಮನುಕುಲವ ಬೆಳಗ ಬಂದೆ
ಹೊಲಸುಗೈವ ಹೊಲೆಯರನು ಹಳಿದೆ
ಕುಲ ಜನಿಸಿದ್ದಲ್ಲವೆಂದೆ || ೬ ||

ಹುಲ್ಲು ದೇವರು ಕಲ್ಲು ದೇವರೆಂದೆಂದು
ಬೇಧವಿರಲು
ಎಲ ದೇವರೂ ಒಂದೆ ತಾನೆ
ಈಶ್ವರನು ಒಡೆಯನಿರಲು ||೭||

ಅಲ್ಲಿ ಇಹನು ಇಲ್ಲಿಹನು ದೇವ
ವಿಶ್ವವನು ತುಂಬಿದವನು
ಇಲ್ಲಿ ಮನದಿ ಇಹನೆಂದು ತನುವಿನಲಿ
ಲಿಂಗ ಮೆರೆಸಿದವನು (ಮಹಲಿಂಗ ಮೆರೆಸಿದವನು) || ೮ ||

ಕಾಮ ಸುಟ್ಟು ಬೂದಿಯನೆ ಧರಿಸಿ
ಕಾಮಾರಿಯಾದ ಶಿವನ
ನೇಮ ನಡೆಸಲ್ಕೆ ಬೂದಿ ತಳೆದೆ
ವಿಭೂತಿ ಎಂದೆ ಅದನ || ೯ ||

ಇಬ್ಬರ್‌ಹೆಂಡಿರೂ ಎರಡು ಕಣ್ಣಿನೊಲು
ಇರಲು ಗಂಗ ನೀಲಾ
ಬಳಸಿ ಬ್ರಹ್ಮಚಾರ್ಯದೆ ಉಂಡು
ಉಪವಾಸಿ ಬಹ್ಮಶೀಲಾ || ೧೦ ||

ಮುಳ್ಳ ಮಕುಟವದು ಮಂತ್ರಿಪದವಿ
ಬಿಜ್ಜಳನ ನೆರಳಿನಲ್ಲಿ
ಹೂವಿನಂತೆ ಕೈಗೊಂಡೆ ಕಂಡೆ
ಪರತತ್ವ ಇಹದಲಿಲ್ಲಿ || ೧೧ ||

ಹಣದ ಕಣಜವೇ ನಿನ್ನದಾಗಿರಲು
ಜನರ ಸೇವೆಗಾಯ್ತು
ಹಣದ ಭಂಡಾರ ಭಕುತಿ ಭಂಡಾರ
ನಿನ್ನ ಕೈಯಲಾಯ್ತು || ೧೨ ||

ಶಿವನ ದೂತನೇ ಬಂದು ಭುವಿಯ
ಕೈಲಾಸವಾಗಿ ಮಾಡೆ
ಶರಣ ಸಂಕುಳಿಯು ಮೂಲೆ
ಮೂಲೆಯಿಂದಿಲ್ಲಿ ಬಂದು ಕೂಡೆ || ೧೩ ||

ಕರ್ಮ ಮಾಡುವುದೇ ಧರ್ಮವೆಂದೆ
ಕಾಯಕವೆ ಶಿವನ ಕಾರ್ಯ
ತಿಳಿದು ಏಳೆ ಜನ ಮೊಳಗೆ ಎಲ್ಲಿಡೆಗೆ
ಮಹಾಮನೆಯ ತೂರ್ಯ || ೧೪ ||

ತಿಳಿವು ಲಿಂಗ ಮನ ಒಳವು ಲಿಂಗ
ತನು ಮಾಳ್ಪ ಕೆಲಸ ಲಿಂಗ
ಶಾಂತಿ ಶಿವನು ಸಮಬುದ್ಧಿ ಶಿವನು
ಸಹಬಾಳ್ವೆ ಶಿವನ ಸಂಗ || ೧೫ ||

ಜನಮನವು ತೊಳೆದು ತಿಳಿಯಾಯ್ತು ತನುವು
ಕೃತಿಯಲ್ಲಿ ಒಂದೆ ಆಯ್ತು
ಮಾಡಿದ್ದ ಮಡಿಯು ಆಡಿದ್ದ ವಚನ
ಮಹಪೂರ ರಚನೆಗಾಯ್ತು || ೧೬ ||

ಎಲ್ಲ ಜಾತಿಗಳ ಕೂಡಿಸಿಟ್ಟು
ಆದರ್ಶ ಕುಲವ ಮಾಡಿ
ಅನುಭವದ ಕಡೆತ ಅನುಭಾವವಾಗಿ
ಕಲ್ಯಾಣ ನಗರ ನೋಡಿ || ೧೭ ||

ಅಕ್ಕ ಬರಲು ಕಕ್ಕಯ್ಯ ಬಂದ
ಅಲ್ಲಮನು ಒಲಿದು ಬಂದ
ಮಾಚಿದೇವ ಬೌಡಯ್ಯ ಮತ್ತೆ
ಹರಳಯ್ಯರೆಲ್ಲರಿಂದ || ೧೮ ||

ಬೊಮ್ಮಿದೇವನಾ ಚಿಕ್ಕ ದೇವ
ಮಧುವರಸ ಕಿನ್ನರಯ್ಯ
ಮಾರಿದೇವ ಮುಂತಾದ ಮಹಿಮರು
ಎಲ್ಲ ನೆರೆದರಯ್ಯ || ೧೯ ||

ವಚನ ಹಾಡಿದರು ಮಥನ ಮಾಡಿದರು
ಮನದಿ ಶಿವನ ಕಂಡು
ಹೆಣ್ಣು ಮಕ್ಕಳೂ ಸಭೆಯ ಬೆಳಗಿದರು
ಅತ್ಮ ಸಿರಿಯನುಂಡು || ೨೦ ||

ಬೆಳಕು ಹಬ್ಬಿಸಲು ಹೆಣಗುವಂಥ
ದೀಪಕ್ಕೆ ಕಪ್ಪು ಮುಚ್ಚಿ
ಕತ್ತಲಾಯ್ತು ಸಿರಿ ಎತ್ತ ಹೋಯ್ತು
ಬರಿ ಬಯಲ ಭಾವನೆಚ್ಚಿ || ೨೧ ||

ಕಲ್ಯಾಣ ಉರಿದು ಇಲ್ಲಾಣವಾಯ್ತು
ಮತ ಬೇಧ ತೀವ್ರವಾಗಿ
ಕೂಡಲದಿ ನೀನು ಕೂಡಿದೆಯೊ ಶಿವನ
ಹಣ್ಣಾಗಿ ಕೊನೆಗೆ ಮಾಗಿ || ೨೨ ||

ಎಂಟು ನೂರು ವರ್ಷಗಳು ಕಳೆದರು
ಗಂಟಾಗಲಿಲ್ಲ ಬಾಳು
ನಿನ್ನ ಬೋಧ ಬರಿ ಬೂದಿಯಾಗಿ
ಮೈ ಬಳಿಯಲಾಯ್ತು ಧೂಳು || ೨೩ ||

ಮೇಲ್ಮೆ ಸಾಧಿಸುತ ಬಂದ ಪುರೋಹಿತ
ವರ್ಗಗಳ ಒಡೆವ ನೀತಿ
ಹೊಡೆದಾಟಕೊಂದು ನೆಪವಾಗಿ ಲಿಂಗ
ಜನಿವಾರ ಭೇದ ರೀತಿ || ೨೪ ||

ನಿನ್ನ ತತ್ವ ಕೃತಿಗಳನೆ ಮರೆತ
ಬರಿ ಬಾಯಿ ಮಾತಿನಲ್ಲಿ
ಬಣ್ಣಗೆಟ್ಟ ಈ ಜನರನೆತ್ತು ಬಾ
ಜನ್ಮವೆತ್ತಿ ಇಲ್ಲಿ (ನರ ಜನ್ಮವೆತ್ತಿ ಇಲ್ಲಿ) || ೨೫ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೀರ್ತನೆ
Next post ದರ್ಶನ

ಸಣ್ಣ ಕತೆ

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

cheap jordans|wholesale air max|wholesale jordans|wholesale jewelry|wholesale jerseys