Home / ಕವನ / ಕವಿತೆ / ಅಣ್ಣ ಬಾರೊ

ಅಣ್ಣ ಬಾರೊ

ಅಣ್ಣ ಬಾರೊ ಬಸವಣ್ಣ ಬಾರೊ
ಈ ಜನರ ಕಣ್ಣ ತೆರೆಯೋ
ಬಣ್ಣ ಬಾಳು ಬರಿ ಹಾಳು ಹಾಳು
ಈ ಕಣ್ಣ ಪೊರೆಯ ಹರಿಯೋ || ೧ ||

ಕೊಳೆತು ನಿಂತು ನೀರಾದ ಭೇದ
ನೂರಾರು ತಳೆದ ಜನರ
ಕೆರಳಿ ಗದ್ದರಿಸಿ ತಿಳಿಸಿ ಉದ್ಧರಿಸಿ
ಕಾಯ್ದೆ ಅಂದು ಅವರ || ೨ ||

ಬ್ರಾಹ್ಮಣಾಗಿ ನೀ ಹುಟ್ಟಿ ಬಂದರೂ
ಕುಲದ ಜಡತೆ ನೋಡಿ
ಬ್ರಹ್ಮವನ್ನೆ ಮರೆತಂಥ ಬ್ರಾಹ್ಮಣರ
ಬಣ್ಣ ಬಯಲು ಮಾಡಿ || ೩ ||

ಕಟ್ಟು ಕಥೆಯ ಹೆಣೆಹೆಣೆದು ಸುಳ್ಳೆ
ತಾವ್ ಹೂಟ್ಟೆ ಹೊರೆಯುವವರ
ತಟ್ಟಿ ಬೈದು ಈ ರಟ್ಟೆ ಮುರಿದು
ದುಡಿಯೆಂದು ಪೇಳ್ದ ಧೀರ || ೪ ||

ಸಂಗಮೇಶ್ವರನ ಸಂಗದಲ್ಲಿ
ಲಿಂಗಾಂಗ ಪರಿಯನರಿತು
ಲಿಂಗಧರಿಸಿ ನಿಸ್ಸಂಗಿಯಾದೆ ನೀ
ಭಂಗ ಭವವ ಮರೆತು || ೫ ||

ಮನುಜರೆಲ್ಲ ಒಂದೆಂದು ಸಾರಿ
ಮನುಕುಲವ ಬೆಳಗ ಬಂದೆ
ಹೊಲಸುಗೈವ ಹೊಲೆಯರನು ಹಳಿದೆ
ಕುಲ ಜನಿಸಿದ್ದಲ್ಲವೆಂದೆ || ೬ ||

ಹುಲ್ಲು ದೇವರು ಕಲ್ಲು ದೇವರೆಂದೆಂದು
ಬೇಧವಿರಲು
ಎಲ ದೇವರೂ ಒಂದೆ ತಾನೆ
ಈಶ್ವರನು ಒಡೆಯನಿರಲು ||೭||

ಅಲ್ಲಿ ಇಹನು ಇಲ್ಲಿಹನು ದೇವ
ವಿಶ್ವವನು ತುಂಬಿದವನು
ಇಲ್ಲಿ ಮನದಿ ಇಹನೆಂದು ತನುವಿನಲಿ
ಲಿಂಗ ಮೆರೆಸಿದವನು (ಮಹಲಿಂಗ ಮೆರೆಸಿದವನು) || ೮ ||

ಕಾಮ ಸುಟ್ಟು ಬೂದಿಯನೆ ಧರಿಸಿ
ಕಾಮಾರಿಯಾದ ಶಿವನ
ನೇಮ ನಡೆಸಲ್ಕೆ ಬೂದಿ ತಳೆದೆ
ವಿಭೂತಿ ಎಂದೆ ಅದನ || ೯ ||

ಇಬ್ಬರ್‌ಹೆಂಡಿರೂ ಎರಡು ಕಣ್ಣಿನೊಲು
ಇರಲು ಗಂಗ ನೀಲಾ
ಬಳಸಿ ಬ್ರಹ್ಮಚಾರ್ಯದೆ ಉಂಡು
ಉಪವಾಸಿ ಬಹ್ಮಶೀಲಾ || ೧೦ ||

ಮುಳ್ಳ ಮಕುಟವದು ಮಂತ್ರಿಪದವಿ
ಬಿಜ್ಜಳನ ನೆರಳಿನಲ್ಲಿ
ಹೂವಿನಂತೆ ಕೈಗೊಂಡೆ ಕಂಡೆ
ಪರತತ್ವ ಇಹದಲಿಲ್ಲಿ || ೧೧ ||

ಹಣದ ಕಣಜವೇ ನಿನ್ನದಾಗಿರಲು
ಜನರ ಸೇವೆಗಾಯ್ತು
ಹಣದ ಭಂಡಾರ ಭಕುತಿ ಭಂಡಾರ
ನಿನ್ನ ಕೈಯಲಾಯ್ತು || ೧೨ ||

ಶಿವನ ದೂತನೇ ಬಂದು ಭುವಿಯ
ಕೈಲಾಸವಾಗಿ ಮಾಡೆ
ಶರಣ ಸಂಕುಳಿಯು ಮೂಲೆ
ಮೂಲೆಯಿಂದಿಲ್ಲಿ ಬಂದು ಕೂಡೆ || ೧೩ ||

ಕರ್ಮ ಮಾಡುವುದೇ ಧರ್ಮವೆಂದೆ
ಕಾಯಕವೆ ಶಿವನ ಕಾರ್ಯ
ತಿಳಿದು ಏಳೆ ಜನ ಮೊಳಗೆ ಎಲ್ಲಿಡೆಗೆ
ಮಹಾಮನೆಯ ತೂರ್ಯ || ೧೪ ||

ತಿಳಿವು ಲಿಂಗ ಮನ ಒಳವು ಲಿಂಗ
ತನು ಮಾಳ್ಪ ಕೆಲಸ ಲಿಂಗ
ಶಾಂತಿ ಶಿವನು ಸಮಬುದ್ಧಿ ಶಿವನು
ಸಹಬಾಳ್ವೆ ಶಿವನ ಸಂಗ || ೧೫ ||

ಜನಮನವು ತೊಳೆದು ತಿಳಿಯಾಯ್ತು ತನುವು
ಕೃತಿಯಲ್ಲಿ ಒಂದೆ ಆಯ್ತು
ಮಾಡಿದ್ದ ಮಡಿಯು ಆಡಿದ್ದ ವಚನ
ಮಹಪೂರ ರಚನೆಗಾಯ್ತು || ೧೬ ||

ಎಲ್ಲ ಜಾತಿಗಳ ಕೂಡಿಸಿಟ್ಟು
ಆದರ್ಶ ಕುಲವ ಮಾಡಿ
ಅನುಭವದ ಕಡೆತ ಅನುಭಾವವಾಗಿ
ಕಲ್ಯಾಣ ನಗರ ನೋಡಿ || ೧೭ ||

ಅಕ್ಕ ಬರಲು ಕಕ್ಕಯ್ಯ ಬಂದ
ಅಲ್ಲಮನು ಒಲಿದು ಬಂದ
ಮಾಚಿದೇವ ಬೌಡಯ್ಯ ಮತ್ತೆ
ಹರಳಯ್ಯರೆಲ್ಲರಿಂದ || ೧೮ ||

ಬೊಮ್ಮಿದೇವನಾ ಚಿಕ್ಕ ದೇವ
ಮಧುವರಸ ಕಿನ್ನರಯ್ಯ
ಮಾರಿದೇವ ಮುಂತಾದ ಮಹಿಮರು
ಎಲ್ಲ ನೆರೆದರಯ್ಯ || ೧೯ ||

ವಚನ ಹಾಡಿದರು ಮಥನ ಮಾಡಿದರು
ಮನದಿ ಶಿವನ ಕಂಡು
ಹೆಣ್ಣು ಮಕ್ಕಳೂ ಸಭೆಯ ಬೆಳಗಿದರು
ಅತ್ಮ ಸಿರಿಯನುಂಡು || ೨೦ ||

ಬೆಳಕು ಹಬ್ಬಿಸಲು ಹೆಣಗುವಂಥ
ದೀಪಕ್ಕೆ ಕಪ್ಪು ಮುಚ್ಚಿ
ಕತ್ತಲಾಯ್ತು ಸಿರಿ ಎತ್ತ ಹೋಯ್ತು
ಬರಿ ಬಯಲ ಭಾವನೆಚ್ಚಿ || ೨೧ ||

ಕಲ್ಯಾಣ ಉರಿದು ಇಲ್ಲಾಣವಾಯ್ತು
ಮತ ಬೇಧ ತೀವ್ರವಾಗಿ
ಕೂಡಲದಿ ನೀನು ಕೂಡಿದೆಯೊ ಶಿವನ
ಹಣ್ಣಾಗಿ ಕೊನೆಗೆ ಮಾಗಿ || ೨೨ ||

ಎಂಟು ನೂರು ವರ್ಷಗಳು ಕಳೆದರು
ಗಂಟಾಗಲಿಲ್ಲ ಬಾಳು
ನಿನ್ನ ಬೋಧ ಬರಿ ಬೂದಿಯಾಗಿ
ಮೈ ಬಳಿಯಲಾಯ್ತು ಧೂಳು || ೨೩ ||

ಮೇಲ್ಮೆ ಸಾಧಿಸುತ ಬಂದ ಪುರೋಹಿತ
ವರ್ಗಗಳ ಒಡೆವ ನೀತಿ
ಹೊಡೆದಾಟಕೊಂದು ನೆಪವಾಗಿ ಲಿಂಗ
ಜನಿವಾರ ಭೇದ ರೀತಿ || ೨೪ ||

ನಿನ್ನ ತತ್ವ ಕೃತಿಗಳನೆ ಮರೆತ
ಬರಿ ಬಾಯಿ ಮಾತಿನಲ್ಲಿ
ಬಣ್ಣಗೆಟ್ಟ ಈ ಜನರನೆತ್ತು ಬಾ
ಜನ್ಮವೆತ್ತಿ ಇಲ್ಲಿ (ನರ ಜನ್ಮವೆತ್ತಿ ಇಲ್ಲಿ) || ೨೫ ||
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...