Home / ಕವನ / ಕವಿತೆ / ದರ್ಶನ

ದರ್ಶನ

ಅರೆ ನಿದ್ದ ಅರೆ ಅರಿವು,
ಮಂಪರು ದಾರಿ ಹಿಡಿದು
ತೆವಳಿ ಹೋದರೆ ಕೆಳಗೆ ಬೆದರಿಸುವ ಪಾತಾಳ;
ತರ್ಕದ ಸೊಕ್ಕು ಮುರಿದು ಗಣಿತವನೆ ಮಣಿಸಿರುವ
ಜನ ತಿಕ್ಕಲು ಕುಣಿತ;
ಏನೇನೊ ನೋಡಿ ಏನೇನೊ ಹಾಡುವ
ಕನಸ ಕೈಗಾರಿಕಾಶಾಲೆ;
ಕಂಡದ್ದ ಕಲೆಸಿ ಕಾಣದ್ದ ಕಣ್ಣಿಗೆ ತೆರೆವ
ಚಂಡಸೃಷ್ಟಿಯ ಲೀಲೆ.
ನೋಡುತ್ತ ಹೋದೆ.

‘ಹುಗಿದ ಹಳ ಬಾವಿಯೊಳ’ ತಾಳ ಬೇತಾಳ,
ಅರಿಯಬಾರದು ಹೊರಗೆ ಹೂವ ತಳದಾಳ.
ಆಕಾರವೇನೊ ಇದೆ ಆಕೃತಿಯೆ ನಷ್ಟ,
ಜರುಗುತಿದೆ ಏನೇನೊ ತಿಳಿಯುವದೆ ಕಷ್ಟ.

ಹರಿದ ಮೈ ಮುರಿದ ತಲೆ ಬುಡವಿರದ ಬೆಟ್ಟ,
ಹುತ್ತಗಳ ಕರಿಗಣ್ಣು ಕಬಳಿಸಿವೆ ಗುಟ್ಟ.
ಚುಕ್ಕಿಗಳ ಧಿಕ್ಕರಿಸಿ ಇರುಳೊಡೆದ ಕಾಡು,
ತೇಗಿ ಕೂಗುತ್ತಿತ್ತು ಬೆಚ್ಚಿಸುವ ಹಾಡು.
ಆಚೆ ಕಡೆ ಮುದಿ ಆಲ, ಕೆದರುತಲೆ ಕಂಬ,
ಈಚೆ ಈ ಭಾರಿ ಮನೆ, ಮೂಗಿರದ ಜಂಬ.
ಹಿಂದೆ ಎಂದೋ ಕಡಲ ಮೇಲೆಲ್ಲ ನಡೆದು
ಬಿರುಗಾಳಿ ಬಡಿದೋ
ದಾಳಿಯಲಿ ಸಿಡಿದೋ
ತಳ ಸೇರಿ ಎಲ್ಲೆಲ್ಲು ಬಿದ್ದಿರುವ ಹಡಗುಗಳ
ಅವಶೇಷ ಶೈಲಿಯಲಿ ತಂತಿ ಮನೆ ಕಂಬ.

ಹಣ ಚಿಗುರಿ ಹರಿದಿತ್ತು ನದಿಯಂತೆ ಧೂಪ,
ಮಾನವರ ಮೈಯಲ್ಲಿ ಮೃಗದ ಆಲಾಪ.
ಮೈಯಿರದ ಹಕ್ಕಿ ಹಸಿವಿನಲಿ ಸೊಕ್ಕಿ
ಹಿಗ್ಗಿ ಹಾಕುತ್ತಿತ್ತು ಕಿವಿತುಂಬ ಶಾಪ.

ತುಟಿ ಮೂಡಿ ಬಂಡೆಗಳು ಕುಡಿದಂತೆ ಕಳ್ಳು,
ಕೊಂಬೆಯಲಿ ಮುಖವರಳಿ ಹಾಕಿದವು ಸಿಳ್ಳು.
ಮೃಗಗಳಿಗೆ ಒಂದೊಂದು ಅಂಗಕ್ಕು ಒಡವೆ
ಸತ್ಯ ಸುಳ್ಳಿಗೆ ನಡೆದು ಪ್ರತಿಗಳಿಗೆ ಮದುವೆ.

ವಿಶ್ವರೂಪಕ್ಕೆ ಕಂಗಾಲಾದೆ ಪಾರ್ಥ.
ಚೀರಿ ಕಣ್ತೆರೆದೆ.
ಮತ್ತೆ ಪರಿಚಿತ ಗಾಳಿ ನೀರು ಮಣ್ಣಿಗೆ ಮರಳಿ
ಹಾಯೆನಿಸಿ ಉಸಿರಾಡಿದೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...