Home / ಕವನ / ಕವಿತೆ / ಕೋಣ ಮತ್ತು ನಾವು

ಕೋಣ ಮತ್ತು ನಾವು

ಏಕೆ ಜನುವ ಕೊಟ್ಟೆಯಮ್ಮಾ !
ಗಂಡಾಗಿ
ಜನರ ದೇವರಿಗೆ ತಲೆ ಕೆಡಿಸಿಕೊಳ್ಳಲಿಕೆ.

ನಾನು ಹುಟ್ಟಿದ ಕೂಡಲೆ
ಮಾರಿದೇವಿಯ ಒಳಿತು ಕೋರಿ
ಹರಕೆ ಕಟ್ಟಿ, ಕಾಲು ತೊಳೆದು ಬಿಟ್ಟರು
ಸಾಕಿದ್ದಕ್ಕೆ ಸುಂಕವಾಗಿ ಪ್ರಾಣ ಕೇಳುವ ಜನರು.

ನಾನು ಕೋಣ! ಉಬ್ಬಿ ಹೋದೆ
ದುಡಿಸಿ ದಣಿಸದೆ
ತಿಂದು ತಿರುಗಾಡಿಕೊಂಡು ಬೆಳೆಯಲು ಬಿಟ್ಟಿದ್ದಕ್ಕೆ;
ಗೊತ್ತಾಗಲಿಲ್ಲ ಆಗ ಇದರ ಹಿಂದಿನ ಹಿಕ್ಮತ್ತು.

ಮತ್ತನಾದೆ
ಸಿಕ್ಕ ಸಿಕ್ಕ ಕಡೆಗೆ ನುಗ್ಗಿ
ಸಿಕ್ಕ ಸಿಕ್ಕದ್ದು ಮೇದು
ಸಿಕ್ಕ ಸಿಕ್ಕಂಗೆ ಅಡ್ಡಾಡುತ್ತ
ಸಿಕ್ಕ ಸಿಕ್ಕಲ್ಲಿ ಮಲಗಿ ಎದ್ದು
ಸಿಕ್ಕ ಸಿಕ್ಕಂಗೆ ಕೊಬ್ಬಿ ಬೆಳೆದೆ.

ಕಂಬದಂತ ಕಾಲು
ಹಳೇ ರುಬ್ಬು ಗುಂಡಿನಂತ ತಲೆ
ಉಕ್ಕಿನಂತ ಕೋಡು
ಬೆಂಕಿ ಉಂಡೆಯಂತ ಕಣ್ಣು

ಹೊಗೆ ಕಾರುವ ಹೊಳ್ಳೆ
ಕರ್ರಗೆ ಮಿರ ಮಿರ ಮಿಂಚುವ
ಸಣ್ಣ ಗುಡ್ಡದಂತ ದೇಹ
ನಡೆದಾಡುತಿದ್ದ ನೆಲ ನಡುಗುತಿತ್ತು
ಅಂತಕನ ಕೋಣದಂತೆ.

ಊರೊಳಗೆ ನುಗ್ಗಿದರೆ
ಸಾವನ್ನು ಕಂಡಂತೆ
ಓಡಿ ಹೋಗಿ
ಮಕ್ಕಳು ಮರಿ ಬಾಚಿಕೊಂಡು
ಬಯಲಲ್ಲಿ ಕಟ್ಟಿದ್ದ ದನ ಕರು ಕಣ್ಣಿ ಹರಿದು
ಬಾಗಿಲು ಹಾಕಿ ಕೊಳ್ಳುವರು;
ಕನಸಲ್ಲಿ ಕಂಡರೂ ಬೆಚ್ಚಿ ಬೀಳುವರು.

ನನ್ನ ದೇಹ, ಭಾವದಿ
ಮಾರಿದೇವಿ ಪರಿಭಾವಿಸಿ
ಕೇಡಿನ ಭೀತಿಯಲ್ಲಿ
ತಿರುಗಿ ಬೀಳರು
ಸಹಿಸಿ ನಡೆವರು.

ಅಂತ್ಯವಿಲ್ಲದದು ಯಾವುದಿದೆ ಈ ಲೋಕದಲಿ
ನನಗೂ ಬಂತು;
ಜಾತ್ರೆಯು ಗೊತ್ತಾಯಿತು
ಹುಡುಕಿಸಿ ತಂದರು ನನ್ನನ್ನು ಬಿಡದೆ
ಸುತ್ತಿಸಿದರು ಏಳೂರ ಮನೆ, ಮನೆಯನ್ನು.

ಪೂಜೆಯ ಮಾಡಿಸಿ
ಸುಲಭದಿ ಕಡಿಯಲು
ಪಟ್ಟೆ ಶಿರಕೆ ಎಣ್ಣೆ ಹೊಯ್ಯಿಸಿ
ಕೊಡತಿಯಲಿ ಗುದ್ದುತ್ತಿದ್ದರೆ
ಗುದ್ದು ಗುದ್ದಿಗೂ ಎದ್ದದ್ದು ಬೀಳುತಿತ್ತು ಜೀವ.

ಪಾಷಂಡಿಗಳು
ಕತ್ತರಿಸಿ ಎಸೆಯಲೊಲ್ಲರು!
ತೀರಿ ಹೋಗುತ್ತಿತ್ತಲ್ಲ! ಎಲ್ಲಾ!
ಎಚಿದೊರಲುತಿತ್ತು; ತರಹರಿಸುತಿತ್ತು ಜೀವ.

ಇವರವರೇ ಕೆಲವರು ಮಹಾನುಭಾವರು
ಹಿಂಸೆ ಬೇಡವೆಂದು ಸಾರಿ ಸಾರಿ ಹೇಳಿದರು
ಎಂದಿಗೂ ಕೇಳಿಲ್ಲ; ಕೇಳುವುದಿಲ್ಲ!
ಒಳ್ಳೆಯದನ್ನು ಹೇಳಿದ ಯಾರನ್ನೂ
ಸುಖವಾಗಿ ಸಾಯಲು ಬಿಟ್ಟಿಲ್ಲ
ನ್ಯಾಯವು ಇವರಿಗೆ ಒಂದಲ್ಲ; ಹೊಂದುವುದಿಲ್ಲ
ಜೀವ ಚಕ್ರದ ದುರ್ಬಳಕೆ ನಿಂತಿಲ್ಲ.

ಮೂಢ ನಂಬಿಕೆಯ
ಹೊಸ, ಹೊಸ ಬಟ್ಟೆಯುಟ್ಟುಕೊಂಡು
ಬಂಧು, ಬಳಗ ಕೂಡಿಕೊಂಡು
ಅಸಹಜ ಮಿಂಚನು ತುಂಬಿಕೊಂಡು
ವಿಧ, ವಿಧ ವಾದ್ಯಗಳ ಮೇಳದಲಿ
ಹಾಡುತ್ತ, ಕೂಗುತ್ತ, ಕುಣಿಯುತ್ತ,
ಉನ್ಮಾದ ಸೂಸುತ್ತ,
ಮೌರೆವಣಿಗೆಯಲಿ ಸಾಗಿದರು.

ಉತ್ತೇಜಿತ ಉತ್ಸವ ಗುಡಿಯನು ಸಾರಿತ್ತು
ಪೂಜೆಯು ಮೊದಲಾಯಿತು
ಸ್ಮಶಾನ ಮೌನವು ಕವಿಯಿತು
ಆರತಿಯಾಗಿ ಅಪ್ಪಣೆ ಹೊರಬಿತ್ತು
ಬಿದ್ದವು ತಲೆಗಳು ಸಾಲು, ಸಾಲಾಗಿ
ನನ್ನಿಂದ ಶುರುವಾಗಿ
ಕುರಿ, ಕೋಳಿ ತರುವಾಯ.

ನೋಡಿದರೆ…!
ಒಬ್ಬರ ತಲೆಯೂ ತಗ್ಗಿರಲಿಲ್ಲ
ಪಶ್ಚಾತ್ತಾಪದ ಒಂದು ಕ್ಷೀಣ ಶಬ್ಧವೂ ಕೇಳಿ ಬರಲಿಲ್ಲ.

ಸೃಷ್ಟಿಯಲಿ ಶ್ರೇಷ್ಠರೆನ್ನುವರು
ವಿಚಾರಿಸರು
ನಂಬಿಕಯಲಿ ಯಾವುದನ್ನೂ!!
ಸ್ವಹಿತವಾದಿಗಳು ಏನು ಮಾಡಲು ಹೇಸರು
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...