ಕೋಣ ಮತ್ತು ನಾವು

ಏಕೆ ಜನುವ ಕೊಟ್ಟೆಯಮ್ಮಾ !
ಗಂಡಾಗಿ
ಜನರ ದೇವರಿಗೆ ತಲೆ ಕೆಡಿಸಿಕೊಳ್ಳಲಿಕೆ.

ನಾನು ಹುಟ್ಟಿದ ಕೂಡಲೆ
ಮಾರಿದೇವಿಯ ಒಳಿತು ಕೋರಿ
ಹರಕೆ ಕಟ್ಟಿ, ಕಾಲು ತೊಳೆದು ಬಿಟ್ಟರು
ಸಾಕಿದ್ದಕ್ಕೆ ಸುಂಕವಾಗಿ ಪ್ರಾಣ ಕೇಳುವ ಜನರು.

ನಾನು ಕೋಣ! ಉಬ್ಬಿ ಹೋದೆ
ದುಡಿಸಿ ದಣಿಸದೆ
ತಿಂದು ತಿರುಗಾಡಿಕೊಂಡು ಬೆಳೆಯಲು ಬಿಟ್ಟಿದ್ದಕ್ಕೆ;
ಗೊತ್ತಾಗಲಿಲ್ಲ ಆಗ ಇದರ ಹಿಂದಿನ ಹಿಕ್ಮತ್ತು.

ಮತ್ತನಾದೆ
ಸಿಕ್ಕ ಸಿಕ್ಕ ಕಡೆಗೆ ನುಗ್ಗಿ
ಸಿಕ್ಕ ಸಿಕ್ಕದ್ದು ಮೇದು
ಸಿಕ್ಕ ಸಿಕ್ಕಂಗೆ ಅಡ್ಡಾಡುತ್ತ
ಸಿಕ್ಕ ಸಿಕ್ಕಲ್ಲಿ ಮಲಗಿ ಎದ್ದು
ಸಿಕ್ಕ ಸಿಕ್ಕಂಗೆ ಕೊಬ್ಬಿ ಬೆಳೆದೆ.

ಕಂಬದಂತ ಕಾಲು
ಹಳೇ ರುಬ್ಬು ಗುಂಡಿನಂತ ತಲೆ
ಉಕ್ಕಿನಂತ ಕೋಡು
ಬೆಂಕಿ ಉಂಡೆಯಂತ ಕಣ್ಣು

ಹೊಗೆ ಕಾರುವ ಹೊಳ್ಳೆ
ಕರ್ರಗೆ ಮಿರ ಮಿರ ಮಿಂಚುವ
ಸಣ್ಣ ಗುಡ್ಡದಂತ ದೇಹ
ನಡೆದಾಡುತಿದ್ದ ನೆಲ ನಡುಗುತಿತ್ತು
ಅಂತಕನ ಕೋಣದಂತೆ.

ಊರೊಳಗೆ ನುಗ್ಗಿದರೆ
ಸಾವನ್ನು ಕಂಡಂತೆ
ಓಡಿ ಹೋಗಿ
ಮಕ್ಕಳು ಮರಿ ಬಾಚಿಕೊಂಡು
ಬಯಲಲ್ಲಿ ಕಟ್ಟಿದ್ದ ದನ ಕರು ಕಣ್ಣಿ ಹರಿದು
ಬಾಗಿಲು ಹಾಕಿ ಕೊಳ್ಳುವರು;
ಕನಸಲ್ಲಿ ಕಂಡರೂ ಬೆಚ್ಚಿ ಬೀಳುವರು.

ನನ್ನ ದೇಹ, ಭಾವದಿ
ಮಾರಿದೇವಿ ಪರಿಭಾವಿಸಿ
ಕೇಡಿನ ಭೀತಿಯಲ್ಲಿ
ತಿರುಗಿ ಬೀಳರು
ಸಹಿಸಿ ನಡೆವರು.

ಅಂತ್ಯವಿಲ್ಲದದು ಯಾವುದಿದೆ ಈ ಲೋಕದಲಿ
ನನಗೂ ಬಂತು;
ಜಾತ್ರೆಯು ಗೊತ್ತಾಯಿತು
ಹುಡುಕಿಸಿ ತಂದರು ನನ್ನನ್ನು ಬಿಡದೆ
ಸುತ್ತಿಸಿದರು ಏಳೂರ ಮನೆ, ಮನೆಯನ್ನು.

ಪೂಜೆಯ ಮಾಡಿಸಿ
ಸುಲಭದಿ ಕಡಿಯಲು
ಪಟ್ಟೆ ಶಿರಕೆ ಎಣ್ಣೆ ಹೊಯ್ಯಿಸಿ
ಕೊಡತಿಯಲಿ ಗುದ್ದುತ್ತಿದ್ದರೆ
ಗುದ್ದು ಗುದ್ದಿಗೂ ಎದ್ದದ್ದು ಬೀಳುತಿತ್ತು ಜೀವ.

ಪಾಷಂಡಿಗಳು
ಕತ್ತರಿಸಿ ಎಸೆಯಲೊಲ್ಲರು!
ತೀರಿ ಹೋಗುತ್ತಿತ್ತಲ್ಲ! ಎಲ್ಲಾ!
ಎಚಿದೊರಲುತಿತ್ತು; ತರಹರಿಸುತಿತ್ತು ಜೀವ.

ಇವರವರೇ ಕೆಲವರು ಮಹಾನುಭಾವರು
ಹಿಂಸೆ ಬೇಡವೆಂದು ಸಾರಿ ಸಾರಿ ಹೇಳಿದರು
ಎಂದಿಗೂ ಕೇಳಿಲ್ಲ; ಕೇಳುವುದಿಲ್ಲ!
ಒಳ್ಳೆಯದನ್ನು ಹೇಳಿದ ಯಾರನ್ನೂ
ಸುಖವಾಗಿ ಸಾಯಲು ಬಿಟ್ಟಿಲ್ಲ
ನ್ಯಾಯವು ಇವರಿಗೆ ಒಂದಲ್ಲ; ಹೊಂದುವುದಿಲ್ಲ
ಜೀವ ಚಕ್ರದ ದುರ್ಬಳಕೆ ನಿಂತಿಲ್ಲ.

ಮೂಢ ನಂಬಿಕೆಯ
ಹೊಸ, ಹೊಸ ಬಟ್ಟೆಯುಟ್ಟುಕೊಂಡು
ಬಂಧು, ಬಳಗ ಕೂಡಿಕೊಂಡು
ಅಸಹಜ ಮಿಂಚನು ತುಂಬಿಕೊಂಡು
ವಿಧ, ವಿಧ ವಾದ್ಯಗಳ ಮೇಳದಲಿ
ಹಾಡುತ್ತ, ಕೂಗುತ್ತ, ಕುಣಿಯುತ್ತ,
ಉನ್ಮಾದ ಸೂಸುತ್ತ,
ಮೌರೆವಣಿಗೆಯಲಿ ಸಾಗಿದರು.

ಉತ್ತೇಜಿತ ಉತ್ಸವ ಗುಡಿಯನು ಸಾರಿತ್ತು
ಪೂಜೆಯು ಮೊದಲಾಯಿತು
ಸ್ಮಶಾನ ಮೌನವು ಕವಿಯಿತು
ಆರತಿಯಾಗಿ ಅಪ್ಪಣೆ ಹೊರಬಿತ್ತು
ಬಿದ್ದವು ತಲೆಗಳು ಸಾಲು, ಸಾಲಾಗಿ
ನನ್ನಿಂದ ಶುರುವಾಗಿ
ಕುರಿ, ಕೋಳಿ ತರುವಾಯ.

ನೋಡಿದರೆ…!
ಒಬ್ಬರ ತಲೆಯೂ ತಗ್ಗಿರಲಿಲ್ಲ
ಪಶ್ಚಾತ್ತಾಪದ ಒಂದು ಕ್ಷೀಣ ಶಬ್ಧವೂ ಕೇಳಿ ಬರಲಿಲ್ಲ.

ಸೃಷ್ಟಿಯಲಿ ಶ್ರೇಷ್ಠರೆನ್ನುವರು
ವಿಚಾರಿಸರು
ನಂಬಿಕಯಲಿ ಯಾವುದನ್ನೂ!!
ಸ್ವಹಿತವಾದಿಗಳು ಏನು ಮಾಡಲು ಹೇಸರು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎರಡು ಪರಿವಾರಗಳು
Next post ಪ್ರಕೃತಿ ಎನ್ನನ್ಯಾಕೆ ಬರೆಸಿಹುದು ?

ಸಣ್ಣ ಕತೆ

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…