ಧವಳಪುರದ ಪವಾಡ

ಹಾರುವ ವಿಮಾನ ಹಾಗೇ ಹದ್ದಾಗಿ ಹೋದರೆ ಗತಿ?
ಗಡಿ ರಕ್ಷಿಸಿಯಾಯಿತಲ್ಲ!
ತೊಟ್ಟ ಬಟ್ನೆಗಳೇ ಥಟ್ಟನೆ ಇಲ್ಲವೆನ್ನಿ
ಏಕಾಂತದಲ್ಲೆ ಮಾನವೆಲ್ಲ!
ಧವಳಪುರದಲ್ಲಿ ಇಂಥ ಆಟಂಬಾಂಬ್ ಅಲ್ಲದಿದ್ದರೂ
ಚಿನಕುರಳಿ ಸಿಡಿಯುತ್ತವೆ.
ಮಾಮೂಲು ಬದುಕಿನ ಒಂದು ಕೂದಲು ಕೊಂಕದಿದ್ದರೂ
ಬುದ್ಧಿಗೆ ಶೀರ್ಷಾಸನ ಮಾಡಿಸುವ
ಸಾವಿರ ಪವಾಡ ಜರುಗುತ್ತವೆ.

ಕಲ್ಯಾಣನಗರಿಯ ಕಾಲಿಗೇ
ಕೈಜೋಡಿಸಿ ನಿಂತಿದೆ ಧವಳಪುರ,
ಆಳುಕಾಳು ಅದ್ಧೂರಿ ಭವನ
ಚಟಿಕಿ ಸದ್ದಿಗೆ ಸುಳಿವ ಮಣ ಮಣ ಕಾಗದ ಹಣ;
ಖಾಯಿಲೆ ಮಗುವಿನ ತಾಯಿ
ಚುನಾವಣೆಗೆ ನಿಂತ ನಾಯಿ
ಮಾರ್ಕಿನ ತಿಮ್ಮಾಬೋವಿಯ
ಆಕಳಿಸಿದ ಅದೆ ಮಾರ್ಕಿನ ಬಾಯಿ;
ಮೈಲಿ ಕ್ಯೂ ಕಾರು
ಹೊಸಾ ಹೊಸ ಕಾಣಿಕೆ ಮಾಲು
ಸತಿಸುತ ಸರ್ವಿಸುಗಳ ಋಣ ಸಲ್ಲಿಸಿ
ಪಾದಪೂಜೆಗೆ ಕಾದ
ಕನ್ನಡ ಕವಿತಿಲಕಗಳ ಸೀನಿಯಾರಿಟಿ ಪ್ರಕಾರದ ಸಾಲು
ಭಜನೆ ಭಂಗಿಗೆ ಹಠಾತ್ ಪ್ರಾಪ್ತವಾಗಿ
ಕೂಗುತಿದೆ ಭಕ್ತಗಣ ಎತ್ತುಗೊರಳಲ್ಲಿ;
ಎಲ್ಲ ಮಿಥ್ಯ ನೀನೇ ಸತ್ಯ ಸಾಯಿ ಸೋ
ಇಲ್ಲ ಬಾಳಿಸೋ

ಧವಳಪುರದಲ್ಲಿ ದಿನದಿನವು ಭಾರಿಪವಾಡ;
ಹಾವಿಗೆ ಓಡುವ ಗರುಡ
ಕಾಯಿ ಒಡೆದರೆ ಒಳಗೆ ಪರಿಮಳಿಸುವ ಮರುಗ
ಮುಕ್ಕಣ್ಣನಾಗಿ ಮರಳಿದ ಹುಟ್ಟಾ ಕುರುಡ;
ಎಲ್ಲರ ಎದುರೆದುರೇ ಒನಕೆ ಚಿಗುರಿ
ತೆಂಗಿನ ಮರದಿಂದ ಬಾಳೇಹಣ್ಣು ಉದುರಿ
ತೆಂದು ಸುದ್ದಿ :
ಕರೆದ ಚಪ್ಪಲಿ ಶಾಲು ಖಾಲಿಹವೆಯಿಂದ
ಹಾಜರಿಯಾದದ್ದೇನೋ ಸ್ವಂತ ಬಾತ್ಮೀದಾರರ ವರದಿ.
ಮಂತ್ರಿಸಿದ ಬೂದಿ, ಪವಿತ್ರ ಖಾದಿ
ಬಡವರಿಗೆಂದೇ ಗಿರವಿಯಂಗಡಿ ತೆರೆದು
ಹಣ ಮರಳಿ ಪಡೆಯದ ಮಾರ್ವಾಡಿಯ ಗಾದಿ
ಎಲ್ಲ ಎಲೆ ಕಲೆಸಿ ಕೂತ ಆಧ್ಯಾತ್ಮದ ದಿಲ್ಲಿ ಈ ಜಾಗ
ಭಕ್ತಿಯಲ್ಲಿ ತಮ್ಮ ಸಲ್ಲಿಸಿಕೊಂಡ ಬಂಜೆಯರು
ಅಪವಾದವಿಲ್ಲದೆ ಫಲಿಸಿದ್ದಾರೆ ಇಲ್ಲಿ;
ಭದ್ರನಿಂತಿದೆ ಯೋಗಿಯ ಅಮೃತ ಹಸ್ತ
ಇಂದಿಗೂ ಭಕ್ತೆಯರ ಎದೆಯಾಳದಲ್ಲಿ.

ಇಲ್ಲಿ ಬಂದವರಲ್ಲಿ ಬಹಳ ಜನ ಕಳಿತವರು,
ಒಂದುದಿನ ತಡೆದಿದ್ದರೆ ಕೊಳೆತು ಹುಳಿಯುತ್ತಿದ್ದರು,
ಪೇಜು ಪ್ರೂಫಿಗೆ ಬಂದಿದ್ದಾರೆ ಈಗಾಗಲೆ;
ಅಲ್ಲಿ ತಲೆಕಟ್ಟು ಹಾಕಿ ಇಲ್ಲಿ ಹೊಕ್ಕಳು ಎಳೆದು ಉಲ್ಲಿ ಕೊಂಬುಸಿಗಿಸಿ
ಇಷ್ಟು ತಿದ್ದಿದರೆ,
ಅಚ್ಚಾಗಿ ಬೈಂಡಾಗಿ ಕೆಲಸ ಪೂರ್ತಿ ಖೈದಾಗಿ
ತಕ್ಕ ವ್ಯವಹಾರಕ್ಕೆ ಮುಕ್ತರೇ.

ಯುದ್ಧ ಪ್ರವಾಹ ಭಯಂಕರ ಭೂಕಂಪ,
ಹತೋಟಿ ದಾಟಿ ಬೆಳೆಯುವ ಭಾರತ ಜನಗಣ ರಂಪ
ಕ್ಕೆಲ್ಲ ಎಳ್ಳುನೀರು ಹಾಡಿ
ಧವಳಪುರದಲ್ಲಿ ಪಾದ ಹೂಡಿ
ಕಡಲೆಯಿಂದ ಹುರುಳಿ ಹುರುಳಿಯಿಂದ ಕಡಲೆ ತೆಗೆದು
ಕಡೆಗೆ ಎರಡೂ ಸಮವೇ ಉಳಿಯುವ ಜಾದು ನೋಡಿ
ಪುಳಕಿತ ಭಕ್ತವೃಂದ ಜಿಗಿದೆದ್ದು
ಜಯ ಹೇ ಜಯ ಹೇ ಎಂದು ಬೊಬ್ಬಿರಿದು-

ಆಹಾ!
ಎಲ್ಲಿದೆ ಸ್ವಾಮೀ ಇಂಥ ನಿರ್ಲಿಪ್ತತೆ!
ಮೋಕ್ಷಕ್ಕೆ ಒಂದೇ ದಿನ ಹಿಂದೆ ಸಾಧ್ಯ
ಈ ಪ್ರಶಾಂತತೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದುಡ್ಡು
Next post ಪರೀಕ್ಷೆಯಲ್ಲಿ ಪರಾಜಿತನಾದ ವಿದ್ಯಾರ್ಥಿಯ ಪ್ರಲಾಪ

ಸಣ್ಣ ಕತೆ

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…