Home / ಕವನ / ಕವಿತೆ / ಧವಳಪುರದ ಪವಾಡ

ಧವಳಪುರದ ಪವಾಡ

ಹಾರುವ ವಿಮಾನ ಹಾಗೇ ಹದ್ದಾಗಿ ಹೋದರೆ ಗತಿ?
ಗಡಿ ರಕ್ಷಿಸಿಯಾಯಿತಲ್ಲ!
ತೊಟ್ಟ ಬಟ್ನೆಗಳೇ ಥಟ್ಟನೆ ಇಲ್ಲವೆನ್ನಿ
ಏಕಾಂತದಲ್ಲೆ ಮಾನವೆಲ್ಲ!
ಧವಳಪುರದಲ್ಲಿ ಇಂಥ ಆಟಂಬಾಂಬ್ ಅಲ್ಲದಿದ್ದರೂ
ಚಿನಕುರಳಿ ಸಿಡಿಯುತ್ತವೆ.
ಮಾಮೂಲು ಬದುಕಿನ ಒಂದು ಕೂದಲು ಕೊಂಕದಿದ್ದರೂ
ಬುದ್ಧಿಗೆ ಶೀರ್ಷಾಸನ ಮಾಡಿಸುವ
ಸಾವಿರ ಪವಾಡ ಜರುಗುತ್ತವೆ.

ಕಲ್ಯಾಣನಗರಿಯ ಕಾಲಿಗೇ
ಕೈಜೋಡಿಸಿ ನಿಂತಿದೆ ಧವಳಪುರ,
ಆಳುಕಾಳು ಅದ್ಧೂರಿ ಭವನ
ಚಟಿಕಿ ಸದ್ದಿಗೆ ಸುಳಿವ ಮಣ ಮಣ ಕಾಗದ ಹಣ;
ಖಾಯಿಲೆ ಮಗುವಿನ ತಾಯಿ
ಚುನಾವಣೆಗೆ ನಿಂತ ನಾಯಿ
ಮಾರ್ಕಿನ ತಿಮ್ಮಾಬೋವಿಯ
ಆಕಳಿಸಿದ ಅದೆ ಮಾರ್ಕಿನ ಬಾಯಿ;
ಮೈಲಿ ಕ್ಯೂ ಕಾರು
ಹೊಸಾ ಹೊಸ ಕಾಣಿಕೆ ಮಾಲು
ಸತಿಸುತ ಸರ್ವಿಸುಗಳ ಋಣ ಸಲ್ಲಿಸಿ
ಪಾದಪೂಜೆಗೆ ಕಾದ
ಕನ್ನಡ ಕವಿತಿಲಕಗಳ ಸೀನಿಯಾರಿಟಿ ಪ್ರಕಾರದ ಸಾಲು
ಭಜನೆ ಭಂಗಿಗೆ ಹಠಾತ್ ಪ್ರಾಪ್ತವಾಗಿ
ಕೂಗುತಿದೆ ಭಕ್ತಗಣ ಎತ್ತುಗೊರಳಲ್ಲಿ;
ಎಲ್ಲ ಮಿಥ್ಯ ನೀನೇ ಸತ್ಯ ಸಾಯಿ ಸೋ
ಇಲ್ಲ ಬಾಳಿಸೋ

ಧವಳಪುರದಲ್ಲಿ ದಿನದಿನವು ಭಾರಿಪವಾಡ;
ಹಾವಿಗೆ ಓಡುವ ಗರುಡ
ಕಾಯಿ ಒಡೆದರೆ ಒಳಗೆ ಪರಿಮಳಿಸುವ ಮರುಗ
ಮುಕ್ಕಣ್ಣನಾಗಿ ಮರಳಿದ ಹುಟ್ಟಾ ಕುರುಡ;
ಎಲ್ಲರ ಎದುರೆದುರೇ ಒನಕೆ ಚಿಗುರಿ
ತೆಂಗಿನ ಮರದಿಂದ ಬಾಳೇಹಣ್ಣು ಉದುರಿ
ತೆಂದು ಸುದ್ದಿ :
ಕರೆದ ಚಪ್ಪಲಿ ಶಾಲು ಖಾಲಿಹವೆಯಿಂದ
ಹಾಜರಿಯಾದದ್ದೇನೋ ಸ್ವಂತ ಬಾತ್ಮೀದಾರರ ವರದಿ.
ಮಂತ್ರಿಸಿದ ಬೂದಿ, ಪವಿತ್ರ ಖಾದಿ
ಬಡವರಿಗೆಂದೇ ಗಿರವಿಯಂಗಡಿ ತೆರೆದು
ಹಣ ಮರಳಿ ಪಡೆಯದ ಮಾರ್ವಾಡಿಯ ಗಾದಿ
ಎಲ್ಲ ಎಲೆ ಕಲೆಸಿ ಕೂತ ಆಧ್ಯಾತ್ಮದ ದಿಲ್ಲಿ ಈ ಜಾಗ
ಭಕ್ತಿಯಲ್ಲಿ ತಮ್ಮ ಸಲ್ಲಿಸಿಕೊಂಡ ಬಂಜೆಯರು
ಅಪವಾದವಿಲ್ಲದೆ ಫಲಿಸಿದ್ದಾರೆ ಇಲ್ಲಿ;
ಭದ್ರನಿಂತಿದೆ ಯೋಗಿಯ ಅಮೃತ ಹಸ್ತ
ಇಂದಿಗೂ ಭಕ್ತೆಯರ ಎದೆಯಾಳದಲ್ಲಿ.

ಇಲ್ಲಿ ಬಂದವರಲ್ಲಿ ಬಹಳ ಜನ ಕಳಿತವರು,
ಒಂದುದಿನ ತಡೆದಿದ್ದರೆ ಕೊಳೆತು ಹುಳಿಯುತ್ತಿದ್ದರು,
ಪೇಜು ಪ್ರೂಫಿಗೆ ಬಂದಿದ್ದಾರೆ ಈಗಾಗಲೆ;
ಅಲ್ಲಿ ತಲೆಕಟ್ಟು ಹಾಕಿ ಇಲ್ಲಿ ಹೊಕ್ಕಳು ಎಳೆದು ಉಲ್ಲಿ ಕೊಂಬುಸಿಗಿಸಿ
ಇಷ್ಟು ತಿದ್ದಿದರೆ,
ಅಚ್ಚಾಗಿ ಬೈಂಡಾಗಿ ಕೆಲಸ ಪೂರ್ತಿ ಖೈದಾಗಿ
ತಕ್ಕ ವ್ಯವಹಾರಕ್ಕೆ ಮುಕ್ತರೇ.

ಯುದ್ಧ ಪ್ರವಾಹ ಭಯಂಕರ ಭೂಕಂಪ,
ಹತೋಟಿ ದಾಟಿ ಬೆಳೆಯುವ ಭಾರತ ಜನಗಣ ರಂಪ
ಕ್ಕೆಲ್ಲ ಎಳ್ಳುನೀರು ಹಾಡಿ
ಧವಳಪುರದಲ್ಲಿ ಪಾದ ಹೂಡಿ
ಕಡಲೆಯಿಂದ ಹುರುಳಿ ಹುರುಳಿಯಿಂದ ಕಡಲೆ ತೆಗೆದು
ಕಡೆಗೆ ಎರಡೂ ಸಮವೇ ಉಳಿಯುವ ಜಾದು ನೋಡಿ
ಪುಳಕಿತ ಭಕ್ತವೃಂದ ಜಿಗಿದೆದ್ದು
ಜಯ ಹೇ ಜಯ ಹೇ ಎಂದು ಬೊಬ್ಬಿರಿದು-

ಆಹಾ!
ಎಲ್ಲಿದೆ ಸ್ವಾಮೀ ಇಂಥ ನಿರ್ಲಿಪ್ತತೆ!
ಮೋಕ್ಷಕ್ಕೆ ಒಂದೇ ದಿನ ಹಿಂದೆ ಸಾಧ್ಯ
ಈ ಪ್ರಶಾಂತತೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...