Home / ಕವನ / ಕವಿತೆ / ಧವಳಪುರದ ಪವಾಡ

ಧವಳಪುರದ ಪವಾಡ

ಹಾರುವ ವಿಮಾನ ಹಾಗೇ ಹದ್ದಾಗಿ ಹೋದರೆ ಗತಿ?
ಗಡಿ ರಕ್ಷಿಸಿಯಾಯಿತಲ್ಲ!
ತೊಟ್ಟ ಬಟ್ನೆಗಳೇ ಥಟ್ಟನೆ ಇಲ್ಲವೆನ್ನಿ
ಏಕಾಂತದಲ್ಲೆ ಮಾನವೆಲ್ಲ!
ಧವಳಪುರದಲ್ಲಿ ಇಂಥ ಆಟಂಬಾಂಬ್ ಅಲ್ಲದಿದ್ದರೂ
ಚಿನಕುರಳಿ ಸಿಡಿಯುತ್ತವೆ.
ಮಾಮೂಲು ಬದುಕಿನ ಒಂದು ಕೂದಲು ಕೊಂಕದಿದ್ದರೂ
ಬುದ್ಧಿಗೆ ಶೀರ್ಷಾಸನ ಮಾಡಿಸುವ
ಸಾವಿರ ಪವಾಡ ಜರುಗುತ್ತವೆ.

ಕಲ್ಯಾಣನಗರಿಯ ಕಾಲಿಗೇ
ಕೈಜೋಡಿಸಿ ನಿಂತಿದೆ ಧವಳಪುರ,
ಆಳುಕಾಳು ಅದ್ಧೂರಿ ಭವನ
ಚಟಿಕಿ ಸದ್ದಿಗೆ ಸುಳಿವ ಮಣ ಮಣ ಕಾಗದ ಹಣ;
ಖಾಯಿಲೆ ಮಗುವಿನ ತಾಯಿ
ಚುನಾವಣೆಗೆ ನಿಂತ ನಾಯಿ
ಮಾರ್ಕಿನ ತಿಮ್ಮಾಬೋವಿಯ
ಆಕಳಿಸಿದ ಅದೆ ಮಾರ್ಕಿನ ಬಾಯಿ;
ಮೈಲಿ ಕ್ಯೂ ಕಾರು
ಹೊಸಾ ಹೊಸ ಕಾಣಿಕೆ ಮಾಲು
ಸತಿಸುತ ಸರ್ವಿಸುಗಳ ಋಣ ಸಲ್ಲಿಸಿ
ಪಾದಪೂಜೆಗೆ ಕಾದ
ಕನ್ನಡ ಕವಿತಿಲಕಗಳ ಸೀನಿಯಾರಿಟಿ ಪ್ರಕಾರದ ಸಾಲು
ಭಜನೆ ಭಂಗಿಗೆ ಹಠಾತ್ ಪ್ರಾಪ್ತವಾಗಿ
ಕೂಗುತಿದೆ ಭಕ್ತಗಣ ಎತ್ತುಗೊರಳಲ್ಲಿ;
ಎಲ್ಲ ಮಿಥ್ಯ ನೀನೇ ಸತ್ಯ ಸಾಯಿ ಸೋ
ಇಲ್ಲ ಬಾಳಿಸೋ

ಧವಳಪುರದಲ್ಲಿ ದಿನದಿನವು ಭಾರಿಪವಾಡ;
ಹಾವಿಗೆ ಓಡುವ ಗರುಡ
ಕಾಯಿ ಒಡೆದರೆ ಒಳಗೆ ಪರಿಮಳಿಸುವ ಮರುಗ
ಮುಕ್ಕಣ್ಣನಾಗಿ ಮರಳಿದ ಹುಟ್ಟಾ ಕುರುಡ;
ಎಲ್ಲರ ಎದುರೆದುರೇ ಒನಕೆ ಚಿಗುರಿ
ತೆಂಗಿನ ಮರದಿಂದ ಬಾಳೇಹಣ್ಣು ಉದುರಿ
ತೆಂದು ಸುದ್ದಿ :
ಕರೆದ ಚಪ್ಪಲಿ ಶಾಲು ಖಾಲಿಹವೆಯಿಂದ
ಹಾಜರಿಯಾದದ್ದೇನೋ ಸ್ವಂತ ಬಾತ್ಮೀದಾರರ ವರದಿ.
ಮಂತ್ರಿಸಿದ ಬೂದಿ, ಪವಿತ್ರ ಖಾದಿ
ಬಡವರಿಗೆಂದೇ ಗಿರವಿಯಂಗಡಿ ತೆರೆದು
ಹಣ ಮರಳಿ ಪಡೆಯದ ಮಾರ್ವಾಡಿಯ ಗಾದಿ
ಎಲ್ಲ ಎಲೆ ಕಲೆಸಿ ಕೂತ ಆಧ್ಯಾತ್ಮದ ದಿಲ್ಲಿ ಈ ಜಾಗ
ಭಕ್ತಿಯಲ್ಲಿ ತಮ್ಮ ಸಲ್ಲಿಸಿಕೊಂಡ ಬಂಜೆಯರು
ಅಪವಾದವಿಲ್ಲದೆ ಫಲಿಸಿದ್ದಾರೆ ಇಲ್ಲಿ;
ಭದ್ರನಿಂತಿದೆ ಯೋಗಿಯ ಅಮೃತ ಹಸ್ತ
ಇಂದಿಗೂ ಭಕ್ತೆಯರ ಎದೆಯಾಳದಲ್ಲಿ.

ಇಲ್ಲಿ ಬಂದವರಲ್ಲಿ ಬಹಳ ಜನ ಕಳಿತವರು,
ಒಂದುದಿನ ತಡೆದಿದ್ದರೆ ಕೊಳೆತು ಹುಳಿಯುತ್ತಿದ್ದರು,
ಪೇಜು ಪ್ರೂಫಿಗೆ ಬಂದಿದ್ದಾರೆ ಈಗಾಗಲೆ;
ಅಲ್ಲಿ ತಲೆಕಟ್ಟು ಹಾಕಿ ಇಲ್ಲಿ ಹೊಕ್ಕಳು ಎಳೆದು ಉಲ್ಲಿ ಕೊಂಬುಸಿಗಿಸಿ
ಇಷ್ಟು ತಿದ್ದಿದರೆ,
ಅಚ್ಚಾಗಿ ಬೈಂಡಾಗಿ ಕೆಲಸ ಪೂರ್ತಿ ಖೈದಾಗಿ
ತಕ್ಕ ವ್ಯವಹಾರಕ್ಕೆ ಮುಕ್ತರೇ.

ಯುದ್ಧ ಪ್ರವಾಹ ಭಯಂಕರ ಭೂಕಂಪ,
ಹತೋಟಿ ದಾಟಿ ಬೆಳೆಯುವ ಭಾರತ ಜನಗಣ ರಂಪ
ಕ್ಕೆಲ್ಲ ಎಳ್ಳುನೀರು ಹಾಡಿ
ಧವಳಪುರದಲ್ಲಿ ಪಾದ ಹೂಡಿ
ಕಡಲೆಯಿಂದ ಹುರುಳಿ ಹುರುಳಿಯಿಂದ ಕಡಲೆ ತೆಗೆದು
ಕಡೆಗೆ ಎರಡೂ ಸಮವೇ ಉಳಿಯುವ ಜಾದು ನೋಡಿ
ಪುಳಕಿತ ಭಕ್ತವೃಂದ ಜಿಗಿದೆದ್ದು
ಜಯ ಹೇ ಜಯ ಹೇ ಎಂದು ಬೊಬ್ಬಿರಿದು-

ಆಹಾ!
ಎಲ್ಲಿದೆ ಸ್ವಾಮೀ ಇಂಥ ನಿರ್ಲಿಪ್ತತೆ!
ಮೋಕ್ಷಕ್ಕೆ ಒಂದೇ ದಿನ ಹಿಂದೆ ಸಾಧ್ಯ
ಈ ಪ್ರಶಾಂತತೆ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...