Home / ಕವನ / ಕವಿತೆ / ಉದುರಿದೆಲೆಗಳು

ಉದುರಿದೆಲೆಗಳು

ಸುರುಳಿ ಸುತ್ತಿಟ್ಟ ಬಾಳಬೀದಿಯ ನೆನಪು ಕೆರಳಿ
ಮರಳಿ ಬಿಚ್ಚಿ ಹೊರಳ ತೊಡಗುತ್ತೇನೆ ಆಗೀಗ;
ಹಳೆಯ ಅರಳಿಮರ
ಹೊಳೆಮೆಟ್ಟಲು
ಗರುಡಗಂಬ
ಚಿಕ್ಕದೊಡ್ಡದ್ದೆಲ್ಲ ಚಿಮ್ಮಿ ನಿಲ್ಲುತ್ತವೆ ಹುಗಿದ ತಳದಿಂದ
ಹುಟ್ಟಿಕೊಳ್ಳುತ್ತದೆ ಸತ್ತ ಗಿಡ
ಸುತ್ತದಡ ನಡುವೆ
ಕತ್ತರಿಸಿ ತೆಗೆದ ಆಕಾಶದಂತೆ ಕಪ್ಪಗೆ
ಬೆತ್ತಲೆ ಮೈಯ ನುಣುಪು ಜಲ

ಬೆತ್ತಲೆ ಮೈಯ ತುಂಗಾನದಿಯ ಪಿಸುದನಿ
ನೆಕ್ಕಿಬಿಡುತ್ತದೆ ಒಳಗೆ ಮೊಳೆಯುತ್ತಿರುವ ಉರಿಯ
ಹೊರಟುಬಿಡುತ್ತದೆ ಮನಸ್ಸು ಹೊಡೆದುಕೊಂಡು ಮೇವಿಗೆ
ಹಿಂಡು ಕುರಿಯ
ಕೂರುತ್ತೇನೆ ದಡದಲ್ಲಿ
ಕಾಲಾಡುತ್ತ ನೀರಲ್ಲಿ
ಕರೆಯುತ್ತೇನೆ ಒಬ್ಬೊಬ್ಬರಾಗಿ
ಕಾಡಿದ ಕೌರವರ ಕೂಡಿದ ಪಾಂಡವರ
ಕರೆಯುತ್ತೇನೆ ಕಂಪು ಕನಸುಗಳನ್ನು
ಎದೆಗೆ ಹಬ್ಬಿದ್ದ ಚೆಲುವೆಯರ
ಆಸೆಗೆ ಆಕೃತಿ ನೀಡಿದ ಅರುಣೋದಯ ಋಣಗಳ
ಆದರಿಸಿ ಆಲಿಂಗನದಲ್ಲಿ ಅಫಜಲರಾದ ನೆಂಟರ
ನಾಲಿಗೆಯಲ್ಲಿ ಜೆಟ್ ಬಿಡುವ ಕಾಲುನಡಿಗೆ ಕುಂಟರ
ಚೈತ್ರವರಳುತ್ತದೆ
ಜ್ಯೇಷ್ಠ ಕೆರಳುತ್ತದೆ.
ಮುಗಿಯುತ್ತದೆ ಮಾಗಿ ತಾಗಿ ಎಲ್ಲ ಕೋಲಾಹಲ
ಬಿಸಿಲು ಬೆಳುದಿಂಗಳೆಲ್ಲ ಜೊತೆಬೆರಳಂತೆ ನಿಂತು
ಒಂದೇ ಕೈಯಾಗಿದೆ ಅವು ಕಾಲೂರಿದ ನೆಲ

ಇಲ್ಲ ಎಲ್ಲ ಅರ್ಥವಾಗುತ್ತದೆ ಈಗ ನನಗೆ
ಬಿಚ್ಚಿ ನಿಲ್ಲುತ್ತವೆ ಪಾತ್ರಗಳೆಲ್ಲ ಗ್ರೀನ್ ರೂಮಿನಲಿ ತಮ್ಮ ತೊಡಿಗೆ
ಒಂದೇ ದಾರದಿಂದ ಆಗಿದೆ ಕಸೂತಿಯ
ಬಗೆಬಗೆ ಚಿತ್ರ, ಹೆಣಿಗೆ
ಸುಖದುಃಖ ಬ್ಯಾಂಡು ಹೊಡೆಯುತ್ತ ಹೊರಟಿದೆ
ವಿವೇಕದ ಮೆರವಣಿಗೆ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...