ಅಣ್ಣನ ವಿಲಾಪ

(ಚೌಪದಿ)

ಎಲ್ಲಿ ಹೋದನು ಅಮ್ಮ ಪುಟ್ಟಣ್ಣ ನಮ್ಮಾ? |
ನಿಲ್ಲದವನನು ತರುವೆ ಹುಡುಕಿ ನಾನಮ್ಮಾ| ||
ಅಲ್ಲಿಲ್ಲ, ಇಲ್ಲಿಲ್ಲ, ಎಲ್ಲಿಹನು ತಮ್ಮಾ? |
ತಲ್ಲಣಿಸುತಿದೆ ಮನವು; ಹೇಳು ಸೀತಮ್ಮಾ! ||೧||

“ಹಸೆಯ ಮಗುವನು ಮೊನ್ನೆ ಬಂದವರು ನೋಡಿ, |
ಮಸುಕು ಬಿಳಿ ಕಣ್ಣುಗಳ ಕದಗಳನು ಹೂಡಿ, ||
ಹಸಿ ತುಳಸಿದಳ ನೀರ ಒಣ ಬಾಯೊಳೂಡಿ, |
ಬಿಸಿಲುಕನ್ನಡಿಯನ್ನು ಮಾಡಿನಲ್ಲಿ ಮಾಡಿ,” ||೨||

“ಸುದ್ದ ನೀರನು ಮೀಸಿ, ಅರಸಿನವ ಪೂಸಿ, |
ಗದ್ದೆ ಗೋರುವ ಹಲಗೆಯಲ್ಲಿ ಎಲೆ ಹಾಸಿ, ||
ಮುದ್ದು ಪುಟ್ಟನನುಡಿಗೆಯಿಂದ ಸಿಂಗರಿಸಿ, |
ಸದ್ದಿಲ್ಲದೆಲ್ಲಿಗೊಯ್ದರು ಹೆಗಲೊಳಿರಿಸಿ?” ||೩||

ಚೆನ್ನಾಗಿ ಸೇಸೆಮಳೆ ಸೂಸುತಿರೆ ಕನ್ನೆ, |
ನಿನ್ನೊಡನಿರುಳ್ ನಿದ್ದೆಯಲ್ಲಿ ಕಂಡ ನಿನ್ನೆ- ||
‘ಬನ್ನಿ ಬಾ ಬಾ’ ಎಂದು ಮಾಡಿ ಕೈಸನ್ನೆ |
ನನ್ನೆದುರು ಬಂದು ಹೋದಾ ಪುಟ್ಟನನ್ನೆ. ||೪||

ಮಬ್ಬು ತೆರೆ ಹಿಂದುಗಡೆ ಜಾರಿದುದು ತಾರೆ. |
ಹೆಬ್ಬಿಸಿಲ ಉಗುಳುವಂತಿಹುದು ಹೊತ್ತಾರೆ. ||
ಉಬ್ಬಸರಿ ಮೊದಲೆ ಬಾಲನ ಮೈಯು ತಾರೆ, |
ಅಬ್ಬೆ! ನಡೆಯುವನೆಂತು? ಬೇಗ ಕರತಾರೆ. || ೫||

ಬಳ್ಳಿ ಉಯ್ಯಾಲೆಯಲ್ಲಿ ಗಿಳಿಯ ಮರಿ ತೂಗಿ, |
ಉಳ್ಳಲರ ಜೇನ್‌ಗುಡಿದು ಮರಿದುಂಬಿ ಕೂಗಿ, ||
ಬೆಳ್ಳಿ ನೀರ್‌ ಬಿಸಿಲಲ್ಲಿ ಮುಳುಗಿದಂತಾಗಿ |
ಹಳ್ಳಿ ಹಗಲಿರೆ-ಪುಟ್ಟನಾಡುವನೆ ಹೋಗಿ? ||೬||

ತಾಯ್ದನದ ಬಳಿ ಹೋಗದೀ ಕರುವು ನಿಂದು, |
ಕಾಯ್ದನಂ ಕರೆಯುತಿದೆ ನೆನಸಿ ‘ಮ್ಬೇ’ ಎಂದು. ||
ನಾಯ್ದುಗುಡದಲಿ ಬಿಡದೆ ಮಗುವಿದ್ದ ಸ್ಥಲವಾ, |
ಬಾಯ್ದೆರೆಯದಾಗಾಗ ಮೂಸುತಿದೆ ನೆಲವಾ. ||೭||

“ಇವನ ಚಿಲುವಿನ ಪುಂಜ ಹೋಯ್ತೆ ಮರಿಯಲ್ಲೆ! |
ಸವೆಯಿತೇ ಕಾಲವಂಕುರದ ಪರಿಯಲ್ಲೆ! ||
ಕುವರನಾ ಬಾಳೆ ಕಂದಿತೆ ಕಂದಿನಲ್ಲೆ! |
ಸವಿ ಬಂದುಗೇನಾಯ್ತು ನನೆಸಂದಿನಲ್ಲೆ! ||೮||

ದೀಪಾವಳಿಯ ದಿನ ಬಲೀಂದ್ರ ಮರ ನೆಡಿಸಿ, |
ಕೇಪಳಂಬಳ ಕಾಯಿ ಗುಂಡುಸರ ತೊಡಿಸಿ, ||
ಆ ಪೂಜೆಯಾಗುತಿರೆ ತಮ್ಮನನು ಬಿಟ್ಟು, !
ಕೈಪರೆ ಹೊಡೆವುದೆಂತು? ಬರುವುದೇ ಪುಟ್ಟು,? ||೯||

ನರಿಮೊಗರು ಜಾತ್ರೆಯಲಿ ನನ್ನನ್ನು ಕಂಡು, |
ಅರರೆ ತಮ್ಮನನೇಕೆ ನಾನು ಕರಕೊಂಡು |
ಬರಲಿಲ್ಲ? ಎಂದಾ ಗೆಳೆಯರೆನ್ನ ಕೇಳೆ, |
ಮರುಮಾತು ನಾನೇನು ಕೊಡಲಮ್ಮ ನಾಳೆ? ||೧೦||

ಒಬ್ಬನೇ ತಿನಿಸುಣಿಸು ನಾ ಬೇಡಲಾರೆ. |
ಇಬ್ಬರಿಲ್ಲದೆ ಈಗ ನಾನಾಡಲಾರೆ, ||
ತಬ್ಬಿಕೊಂಡೆನ್ನ ನೀಂ ಅಳುವುದೇನಿ೦ತು? |
ಅಬ್ಬೆ, ಅಳದಿರು ಪುಟ್ಟ ಎಲ್ಲಿಹನು ನಿಂತು? ||೧೧||

ತಾಯಿ- ಮುತ್ತಿನಾ ಸರಪಳಿಯೆ! ಮಾತಿನರಗಿಳಿಯೆ! |
ಎತ್ತ ಹೋದನು ತಮ್ಮ ಎಂಬುದು ತಿಳಿಯೆ. ||
ಇತ್ತವನೆ ಎತ್ತಿದನು! ಕೇಳು, ಪುತ್ಥಳಿಯೇ! |
ಬಿತ್ತಿದವ ಒತ್ತರಿಸಿದನು ತನ್ನ ಬಳಿಯೆ? ||೧೨||

ಮುಗುವು ಮುದ್ದಿನ ಮೊಗವು, ಅವನಿಲ್ಲಿ ಬಾರಂ |
ಆಗಲಿ ನಮ್ಮನು ಹೋದ ಹೋದ ಬಹುದೂರಂ ||
ಜಗದಂಬೆ ತೊಡೆಯಲ್ಲಿ ಲಾಲಿ ಕೇಳುತ್ತ |
ಸೋಗನಿದ್ದೆಗೊಂಡವನು ಬರುವನೇ ಇತ್ತ? ||೧೩||

ಮಗು- “ಈಗಲೇ ಹೊರಡುವೆನು, ಕೈ ಬಿಡೌ, ಅಮ್ಮಾ ! |
ಬೇಗ ಅಪ್ಪನು ಬರುವ ಮುಂಚೆಯೇ, ಅಮ್ಮಾ! ||
ಹೋಗುವೆನು, ಹೋಗುವೆನು; ಹೊರ ಹೊರಡು; ಅಮ್ಮಾ! |
ಕೂಗಿ ಅಳದಿರು; ದಾರಿ ತೋರಿಸೌ! ಅಮ್ಮಾ! || ೧೪ ||

ತಾಯಿ-ಚಂದು ಕೇಳ್! ದಾರಿಯಲಿ ನಾ ಪೋಪೆ ಮುಂದೆ |
ಬಂದವನು ಬಳಿಕ ನಿನ್ನಯ ಮುದ್ದು ತಂದೆ ||
ಮಂದಿ ಮಕ್ಕಳು ಪಡೆದು ಬಾ ನೀನು ಹಿಂದೆ. |
ಎಂದವನ ಬಾಯಿ ಬಿಗಿದಳು ಮುದ್ದಿನಿಂದೆ. ||೧೫||

ಆರಲಿಲ್ಲವು; ತಾಯ ಮನದ ಪರಿತಾಪಂ |
ಆರಿದುದು ಮಾತೆಯಾ ಮನೆಯ ಮಣಿದೀಪಂ. ||
ಆರಲಿಲ್ಲವು ತಾಯ ಕಂಬನಿಯ ಕೂಪಂ |
ಆರಿದುದು ಭಾಗ್ಯಾಬ್ಧಿ, ಅಯ್ಯಯ್ಯೋ ಪಾಪಂ! ||೧೬||
*****
(ಪದ್ಯ ಪುಸ್ತಕ)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉದುರಿದೆಲೆಗಳು
Next post ಪರಿವರ್ತನೆ

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

cheap jordans|wholesale air max|wholesale jordans|wholesale jewelry|wholesale jerseys