Home / ಕವನ / ಕವಿತೆ / ಅಣ್ಣನ ವಿಲಾಪ

ಅಣ್ಣನ ವಿಲಾಪ

(ಚೌಪದಿ)

ಎಲ್ಲಿ ಹೋದನು ಅಮ್ಮ ಪುಟ್ಟಣ್ಣ ನಮ್ಮಾ? |
ನಿಲ್ಲದವನನು ತರುವೆ ಹುಡುಕಿ ನಾನಮ್ಮಾ| ||
ಅಲ್ಲಿಲ್ಲ, ಇಲ್ಲಿಲ್ಲ, ಎಲ್ಲಿಹನು ತಮ್ಮಾ? |
ತಲ್ಲಣಿಸುತಿದೆ ಮನವು; ಹೇಳು ಸೀತಮ್ಮಾ! ||೧||

“ಹಸೆಯ ಮಗುವನು ಮೊನ್ನೆ ಬಂದವರು ನೋಡಿ, |
ಮಸುಕು ಬಿಳಿ ಕಣ್ಣುಗಳ ಕದಗಳನು ಹೂಡಿ, ||
ಹಸಿ ತುಳಸಿದಳ ನೀರ ಒಣ ಬಾಯೊಳೂಡಿ, |
ಬಿಸಿಲುಕನ್ನಡಿಯನ್ನು ಮಾಡಿನಲ್ಲಿ ಮಾಡಿ,” ||೨||

“ಸುದ್ದ ನೀರನು ಮೀಸಿ, ಅರಸಿನವ ಪೂಸಿ, |
ಗದ್ದೆ ಗೋರುವ ಹಲಗೆಯಲ್ಲಿ ಎಲೆ ಹಾಸಿ, ||
ಮುದ್ದು ಪುಟ್ಟನನುಡಿಗೆಯಿಂದ ಸಿಂಗರಿಸಿ, |
ಸದ್ದಿಲ್ಲದೆಲ್ಲಿಗೊಯ್ದರು ಹೆಗಲೊಳಿರಿಸಿ?” ||೩||

ಚೆನ್ನಾಗಿ ಸೇಸೆಮಳೆ ಸೂಸುತಿರೆ ಕನ್ನೆ, |
ನಿನ್ನೊಡನಿರುಳ್ ನಿದ್ದೆಯಲ್ಲಿ ಕಂಡ ನಿನ್ನೆ- ||
‘ಬನ್ನಿ ಬಾ ಬಾ’ ಎಂದು ಮಾಡಿ ಕೈಸನ್ನೆ |
ನನ್ನೆದುರು ಬಂದು ಹೋದಾ ಪುಟ್ಟನನ್ನೆ. ||೪||

ಮಬ್ಬು ತೆರೆ ಹಿಂದುಗಡೆ ಜಾರಿದುದು ತಾರೆ. |
ಹೆಬ್ಬಿಸಿಲ ಉಗುಳುವಂತಿಹುದು ಹೊತ್ತಾರೆ. ||
ಉಬ್ಬಸರಿ ಮೊದಲೆ ಬಾಲನ ಮೈಯು ತಾರೆ, |
ಅಬ್ಬೆ! ನಡೆಯುವನೆಂತು? ಬೇಗ ಕರತಾರೆ. || ೫||

ಬಳ್ಳಿ ಉಯ್ಯಾಲೆಯಲ್ಲಿ ಗಿಳಿಯ ಮರಿ ತೂಗಿ, |
ಉಳ್ಳಲರ ಜೇನ್‌ಗುಡಿದು ಮರಿದುಂಬಿ ಕೂಗಿ, ||
ಬೆಳ್ಳಿ ನೀರ್‌ ಬಿಸಿಲಲ್ಲಿ ಮುಳುಗಿದಂತಾಗಿ |
ಹಳ್ಳಿ ಹಗಲಿರೆ-ಪುಟ್ಟನಾಡುವನೆ ಹೋಗಿ? ||೬||

ತಾಯ್ದನದ ಬಳಿ ಹೋಗದೀ ಕರುವು ನಿಂದು, |
ಕಾಯ್ದನಂ ಕರೆಯುತಿದೆ ನೆನಸಿ ‘ಮ್ಬೇ’ ಎಂದು. ||
ನಾಯ್ದುಗುಡದಲಿ ಬಿಡದೆ ಮಗುವಿದ್ದ ಸ್ಥಲವಾ, |
ಬಾಯ್ದೆರೆಯದಾಗಾಗ ಮೂಸುತಿದೆ ನೆಲವಾ. ||೭||

“ಇವನ ಚಿಲುವಿನ ಪುಂಜ ಹೋಯ್ತೆ ಮರಿಯಲ್ಲೆ! |
ಸವೆಯಿತೇ ಕಾಲವಂಕುರದ ಪರಿಯಲ್ಲೆ! ||
ಕುವರನಾ ಬಾಳೆ ಕಂದಿತೆ ಕಂದಿನಲ್ಲೆ! |
ಸವಿ ಬಂದುಗೇನಾಯ್ತು ನನೆಸಂದಿನಲ್ಲೆ! ||೮||

ದೀಪಾವಳಿಯ ದಿನ ಬಲೀಂದ್ರ ಮರ ನೆಡಿಸಿ, |
ಕೇಪಳಂಬಳ ಕಾಯಿ ಗುಂಡುಸರ ತೊಡಿಸಿ, ||
ಆ ಪೂಜೆಯಾಗುತಿರೆ ತಮ್ಮನನು ಬಿಟ್ಟು, !
ಕೈಪರೆ ಹೊಡೆವುದೆಂತು? ಬರುವುದೇ ಪುಟ್ಟು,? ||೯||

ನರಿಮೊಗರು ಜಾತ್ರೆಯಲಿ ನನ್ನನ್ನು ಕಂಡು, |
ಅರರೆ ತಮ್ಮನನೇಕೆ ನಾನು ಕರಕೊಂಡು |
ಬರಲಿಲ್ಲ? ಎಂದಾ ಗೆಳೆಯರೆನ್ನ ಕೇಳೆ, |
ಮರುಮಾತು ನಾನೇನು ಕೊಡಲಮ್ಮ ನಾಳೆ? ||೧೦||

ಒಬ್ಬನೇ ತಿನಿಸುಣಿಸು ನಾ ಬೇಡಲಾರೆ. |
ಇಬ್ಬರಿಲ್ಲದೆ ಈಗ ನಾನಾಡಲಾರೆ, ||
ತಬ್ಬಿಕೊಂಡೆನ್ನ ನೀಂ ಅಳುವುದೇನಿ೦ತು? |
ಅಬ್ಬೆ, ಅಳದಿರು ಪುಟ್ಟ ಎಲ್ಲಿಹನು ನಿಂತು? ||೧೧||

ತಾಯಿ- ಮುತ್ತಿನಾ ಸರಪಳಿಯೆ! ಮಾತಿನರಗಿಳಿಯೆ! |
ಎತ್ತ ಹೋದನು ತಮ್ಮ ಎಂಬುದು ತಿಳಿಯೆ. ||
ಇತ್ತವನೆ ಎತ್ತಿದನು! ಕೇಳು, ಪುತ್ಥಳಿಯೇ! |
ಬಿತ್ತಿದವ ಒತ್ತರಿಸಿದನು ತನ್ನ ಬಳಿಯೆ? ||೧೨||

ಮುಗುವು ಮುದ್ದಿನ ಮೊಗವು, ಅವನಿಲ್ಲಿ ಬಾರಂ |
ಆಗಲಿ ನಮ್ಮನು ಹೋದ ಹೋದ ಬಹುದೂರಂ ||
ಜಗದಂಬೆ ತೊಡೆಯಲ್ಲಿ ಲಾಲಿ ಕೇಳುತ್ತ |
ಸೋಗನಿದ್ದೆಗೊಂಡವನು ಬರುವನೇ ಇತ್ತ? ||೧೩||

ಮಗು- “ಈಗಲೇ ಹೊರಡುವೆನು, ಕೈ ಬಿಡೌ, ಅಮ್ಮಾ ! |
ಬೇಗ ಅಪ್ಪನು ಬರುವ ಮುಂಚೆಯೇ, ಅಮ್ಮಾ! ||
ಹೋಗುವೆನು, ಹೋಗುವೆನು; ಹೊರ ಹೊರಡು; ಅಮ್ಮಾ! |
ಕೂಗಿ ಅಳದಿರು; ದಾರಿ ತೋರಿಸೌ! ಅಮ್ಮಾ! || ೧೪ ||

ತಾಯಿ-ಚಂದು ಕೇಳ್! ದಾರಿಯಲಿ ನಾ ಪೋಪೆ ಮುಂದೆ |
ಬಂದವನು ಬಳಿಕ ನಿನ್ನಯ ಮುದ್ದು ತಂದೆ ||
ಮಂದಿ ಮಕ್ಕಳು ಪಡೆದು ಬಾ ನೀನು ಹಿಂದೆ. |
ಎಂದವನ ಬಾಯಿ ಬಿಗಿದಳು ಮುದ್ದಿನಿಂದೆ. ||೧೫||

ಆರಲಿಲ್ಲವು; ತಾಯ ಮನದ ಪರಿತಾಪಂ |
ಆರಿದುದು ಮಾತೆಯಾ ಮನೆಯ ಮಣಿದೀಪಂ. ||
ಆರಲಿಲ್ಲವು ತಾಯ ಕಂಬನಿಯ ಕೂಪಂ |
ಆರಿದುದು ಭಾಗ್ಯಾಬ್ಧಿ, ಅಯ್ಯಯ್ಯೋ ಪಾಪಂ! ||೧೬||
*****
(ಪದ್ಯ ಪುಸ್ತಕ)

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...