ಅಣ್ಣನ ವಿಲಾಪ

(ಚೌಪದಿ)

ಎಲ್ಲಿ ಹೋದನು ಅಮ್ಮ ಪುಟ್ಟಣ್ಣ ನಮ್ಮಾ? |
ನಿಲ್ಲದವನನು ತರುವೆ ಹುಡುಕಿ ನಾನಮ್ಮಾ| ||
ಅಲ್ಲಿಲ್ಲ, ಇಲ್ಲಿಲ್ಲ, ಎಲ್ಲಿಹನು ತಮ್ಮಾ? |
ತಲ್ಲಣಿಸುತಿದೆ ಮನವು; ಹೇಳು ಸೀತಮ್ಮಾ! ||೧||

“ಹಸೆಯ ಮಗುವನು ಮೊನ್ನೆ ಬಂದವರು ನೋಡಿ, |
ಮಸುಕು ಬಿಳಿ ಕಣ್ಣುಗಳ ಕದಗಳನು ಹೂಡಿ, ||
ಹಸಿ ತುಳಸಿದಳ ನೀರ ಒಣ ಬಾಯೊಳೂಡಿ, |
ಬಿಸಿಲುಕನ್ನಡಿಯನ್ನು ಮಾಡಿನಲ್ಲಿ ಮಾಡಿ,” ||೨||

“ಸುದ್ದ ನೀರನು ಮೀಸಿ, ಅರಸಿನವ ಪೂಸಿ, |
ಗದ್ದೆ ಗೋರುವ ಹಲಗೆಯಲ್ಲಿ ಎಲೆ ಹಾಸಿ, ||
ಮುದ್ದು ಪುಟ್ಟನನುಡಿಗೆಯಿಂದ ಸಿಂಗರಿಸಿ, |
ಸದ್ದಿಲ್ಲದೆಲ್ಲಿಗೊಯ್ದರು ಹೆಗಲೊಳಿರಿಸಿ?” ||೩||

ಚೆನ್ನಾಗಿ ಸೇಸೆಮಳೆ ಸೂಸುತಿರೆ ಕನ್ನೆ, |
ನಿನ್ನೊಡನಿರುಳ್ ನಿದ್ದೆಯಲ್ಲಿ ಕಂಡ ನಿನ್ನೆ- ||
‘ಬನ್ನಿ ಬಾ ಬಾ’ ಎಂದು ಮಾಡಿ ಕೈಸನ್ನೆ |
ನನ್ನೆದುರು ಬಂದು ಹೋದಾ ಪುಟ್ಟನನ್ನೆ. ||೪||

ಮಬ್ಬು ತೆರೆ ಹಿಂದುಗಡೆ ಜಾರಿದುದು ತಾರೆ. |
ಹೆಬ್ಬಿಸಿಲ ಉಗುಳುವಂತಿಹುದು ಹೊತ್ತಾರೆ. ||
ಉಬ್ಬಸರಿ ಮೊದಲೆ ಬಾಲನ ಮೈಯು ತಾರೆ, |
ಅಬ್ಬೆ! ನಡೆಯುವನೆಂತು? ಬೇಗ ಕರತಾರೆ. || ೫||

ಬಳ್ಳಿ ಉಯ್ಯಾಲೆಯಲ್ಲಿ ಗಿಳಿಯ ಮರಿ ತೂಗಿ, |
ಉಳ್ಳಲರ ಜೇನ್‌ಗುಡಿದು ಮರಿದುಂಬಿ ಕೂಗಿ, ||
ಬೆಳ್ಳಿ ನೀರ್‌ ಬಿಸಿಲಲ್ಲಿ ಮುಳುಗಿದಂತಾಗಿ |
ಹಳ್ಳಿ ಹಗಲಿರೆ-ಪುಟ್ಟನಾಡುವನೆ ಹೋಗಿ? ||೬||

ತಾಯ್ದನದ ಬಳಿ ಹೋಗದೀ ಕರುವು ನಿಂದು, |
ಕಾಯ್ದನಂ ಕರೆಯುತಿದೆ ನೆನಸಿ ‘ಮ್ಬೇ’ ಎಂದು. ||
ನಾಯ್ದುಗುಡದಲಿ ಬಿಡದೆ ಮಗುವಿದ್ದ ಸ್ಥಲವಾ, |
ಬಾಯ್ದೆರೆಯದಾಗಾಗ ಮೂಸುತಿದೆ ನೆಲವಾ. ||೭||

“ಇವನ ಚಿಲುವಿನ ಪುಂಜ ಹೋಯ್ತೆ ಮರಿಯಲ್ಲೆ! |
ಸವೆಯಿತೇ ಕಾಲವಂಕುರದ ಪರಿಯಲ್ಲೆ! ||
ಕುವರನಾ ಬಾಳೆ ಕಂದಿತೆ ಕಂದಿನಲ್ಲೆ! |
ಸವಿ ಬಂದುಗೇನಾಯ್ತು ನನೆಸಂದಿನಲ್ಲೆ! ||೮||

ದೀಪಾವಳಿಯ ದಿನ ಬಲೀಂದ್ರ ಮರ ನೆಡಿಸಿ, |
ಕೇಪಳಂಬಳ ಕಾಯಿ ಗುಂಡುಸರ ತೊಡಿಸಿ, ||
ಆ ಪೂಜೆಯಾಗುತಿರೆ ತಮ್ಮನನು ಬಿಟ್ಟು, !
ಕೈಪರೆ ಹೊಡೆವುದೆಂತು? ಬರುವುದೇ ಪುಟ್ಟು,? ||೯||

ನರಿಮೊಗರು ಜಾತ್ರೆಯಲಿ ನನ್ನನ್ನು ಕಂಡು, |
ಅರರೆ ತಮ್ಮನನೇಕೆ ನಾನು ಕರಕೊಂಡು |
ಬರಲಿಲ್ಲ? ಎಂದಾ ಗೆಳೆಯರೆನ್ನ ಕೇಳೆ, |
ಮರುಮಾತು ನಾನೇನು ಕೊಡಲಮ್ಮ ನಾಳೆ? ||೧೦||

ಒಬ್ಬನೇ ತಿನಿಸುಣಿಸು ನಾ ಬೇಡಲಾರೆ. |
ಇಬ್ಬರಿಲ್ಲದೆ ಈಗ ನಾನಾಡಲಾರೆ, ||
ತಬ್ಬಿಕೊಂಡೆನ್ನ ನೀಂ ಅಳುವುದೇನಿ೦ತು? |
ಅಬ್ಬೆ, ಅಳದಿರು ಪುಟ್ಟ ಎಲ್ಲಿಹನು ನಿಂತು? ||೧೧||

ತಾಯಿ- ಮುತ್ತಿನಾ ಸರಪಳಿಯೆ! ಮಾತಿನರಗಿಳಿಯೆ! |
ಎತ್ತ ಹೋದನು ತಮ್ಮ ಎಂಬುದು ತಿಳಿಯೆ. ||
ಇತ್ತವನೆ ಎತ್ತಿದನು! ಕೇಳು, ಪುತ್ಥಳಿಯೇ! |
ಬಿತ್ತಿದವ ಒತ್ತರಿಸಿದನು ತನ್ನ ಬಳಿಯೆ? ||೧೨||

ಮುಗುವು ಮುದ್ದಿನ ಮೊಗವು, ಅವನಿಲ್ಲಿ ಬಾರಂ |
ಆಗಲಿ ನಮ್ಮನು ಹೋದ ಹೋದ ಬಹುದೂರಂ ||
ಜಗದಂಬೆ ತೊಡೆಯಲ್ಲಿ ಲಾಲಿ ಕೇಳುತ್ತ |
ಸೋಗನಿದ್ದೆಗೊಂಡವನು ಬರುವನೇ ಇತ್ತ? ||೧೩||

ಮಗು- “ಈಗಲೇ ಹೊರಡುವೆನು, ಕೈ ಬಿಡೌ, ಅಮ್ಮಾ ! |
ಬೇಗ ಅಪ್ಪನು ಬರುವ ಮುಂಚೆಯೇ, ಅಮ್ಮಾ! ||
ಹೋಗುವೆನು, ಹೋಗುವೆನು; ಹೊರ ಹೊರಡು; ಅಮ್ಮಾ! |
ಕೂಗಿ ಅಳದಿರು; ದಾರಿ ತೋರಿಸೌ! ಅಮ್ಮಾ! || ೧೪ ||

ತಾಯಿ-ಚಂದು ಕೇಳ್! ದಾರಿಯಲಿ ನಾ ಪೋಪೆ ಮುಂದೆ |
ಬಂದವನು ಬಳಿಕ ನಿನ್ನಯ ಮುದ್ದು ತಂದೆ ||
ಮಂದಿ ಮಕ್ಕಳು ಪಡೆದು ಬಾ ನೀನು ಹಿಂದೆ. |
ಎಂದವನ ಬಾಯಿ ಬಿಗಿದಳು ಮುದ್ದಿನಿಂದೆ. ||೧೫||

ಆರಲಿಲ್ಲವು; ತಾಯ ಮನದ ಪರಿತಾಪಂ |
ಆರಿದುದು ಮಾತೆಯಾ ಮನೆಯ ಮಣಿದೀಪಂ. ||
ಆರಲಿಲ್ಲವು ತಾಯ ಕಂಬನಿಯ ಕೂಪಂ |
ಆರಿದುದು ಭಾಗ್ಯಾಬ್ಧಿ, ಅಯ್ಯಯ್ಯೋ ಪಾಪಂ! ||೧೬||
*****
(ಪದ್ಯ ಪುಸ್ತಕ)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉದುರಿದೆಲೆಗಳು
Next post ಪರಿವರ್ತನೆ

ಸಣ್ಣ ಕತೆ

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…