Home / ಕವನ / ಕವಿತೆ / ವಿಷವದನ

ವಿಷವದನ

ಆಗಿನಿಂದಲು ಇವನು ಹೀಗೆಯೇ ರೋಗಿಯೇ,
ಮಾತಲ್ಲಿ ಮಾತ್ರ ಧನ್ವಂತರೀ ಶೈಲಿಯೇ;
ಇಷ್ಟು ದಿನ ಹುಚ್ಚೆದ್ದು ಊದಿರುವ ರಾಗದಲಿ
ಶೋಕ ವ್ಯಭಿಚಾರಿ, ಸ್ಥಾಯಿಯು ಮಾತ್ರ ಟೀಕೆಯೇ.
ಟೀಕೆ ಪರರಿಗೆ, ಆತ್ಮಾರ್ಚನೆಗೆ ನುಡಿಕೇದಗೆ!
ಇವನ ಬೊಜ್ಜು ಪಟಾಕಿ ಸಿಡಿತಕ್ಕೆ ಜಯಕಾರ
ಚಟಪಟಿಸಿ ಅಲೆಯುತಿದೆ ಚಿನಕುರುಳಿ ಮಂದೆ
ಹಿಂದೆ ಮುಂದೆ.

ಕೂದಲಿಗು ಹೆಚ್ಚು ಕನಸಿನ ಗಣಿತ ತಲೆಯಲ್ಲಿ;
ಮೈಯಲ್ಲಿ ಮರೆಸಿರುವ ಅಂಗಿ ಭಂಗಿಗಳೆಲ್ಲ
ತೀರ ಹೊಸಹೊಸದು, ಇಂಗ್ಲಿಷ್ ಪಿಕ್ಚರಲ್ಲಿ
ಕಾಮುವೋ ಭೀಮುವೋ ಬರೆದ ಪುಸ್ತಕದಲ್ಲಿ
ಮೊನ್ನೆ ನೋಡಿದ್ದು.

ಹಾಗಂತಲೇ ಇವನು ಮೂಲಂಗಿ ತಿಂದೂ
ಫರಂಗಿ ತೇಗಿದ್ದು;
ಬಾಳೆಮರ ಲಿಲಿಹೂವು ಬಿಟ್ಟಿತೆಂದದ್ದು;
ನ್ಯೂಯಾರ್ಕಿನಲ್ಲಿ ಮಳೆ ಬಿತ್ತೆಂದು ಶೇಷಾದ್ರಿ-
ಪುರದಲ್ಲಿ ಕೊಡೆಬಿಚ್ಚಿ ಉಳಿದವರ ನಕ್ಕಿದ್ದು.
ಈಗ-
ಬೇರೊಂದು ಹೊಸರಾಗ ಹಾಡುತ್ತಿದ್ದಾನೆ,
ಗುದ್ದಿ ಸುದ್ದಿಗೆ ಜಿಗಿದು, ಚುಟುಕು ಬೆಳಗುವ ರೋಗ
ನರಳುತ್ತಿದ್ದಾನೆ;
ಶಂಖ ಜಾಗಟೆ ಹಿಡಿದು
ನಾಮ ಬಳಿದು
ನಡಿಗೆಯಲಿ ಆಗೀಗ ಲಾಗ ಎಳೆದು
ಬಸ್ಸು ರಿಕ್ಷಾ ಕಾರು ಇಡಿಕಿರಿದ ರಸ್ತೆಯಲಿ
ನಟ್ಟ ನಡುವೆ ನಿಂತು ಕೂಗುತ್ತಿದ್ದಾನೆ.
ಸುತ್ತಲೂ ಮುಕ್ಕಿರಿವ ಜನಮಂದೆ ಕಂಡು
ಮಂಗ ಕುಣಿಸುವ ಕೊಂಗ ಪೂರ ದಂಗಾಗಿ
ಬೆಪ್ಪು ನೋಡಿದ್ದಾನೆ!

ನಿಂತೆಬಿಟ್ಟಿರ! ಅಯ್ಯೋ, ಕೂರಿ ಇವರೆ
ಗೊತ್ತೆ ಏನಾಯ್ತಂತ ಶನಿವಾರ ಬೆಳಗಾಗ?
ಸರ್ಕಲ್ಲ ಹೋಟಲಲಿ ಗುಂಪಲ್ಲಿ ಕಂಡ.
ಎದ್ದವನೆ ಬಳಿ ಬಂದು
“ಹಲೊ ಭಟ್ಟ ಹೊಲಿಸಯ್ಯ ಹೊಸ ಮೆಟ್ಚ” ಎಂದ!
“ಹೇಗಿದೆ ಪ್ರಾಸಗಳ ಗೇಲಿ ಕಂದ?
‘ಅನುಭವದ ಲಯ ಮುರಿದು ಅನುಭಾವಕೇರುವುದೆ
ಎಲ್ಲ ಸಾಹಿತ್ಯಗಳ ಪರಮೋಚ್ಚ ಗುರಿ.’
ಇದು ಖುದ್ದು ನನ್ನದೆ ಮಾತು ಈಗಷ್ಟೆ ಸ್ಫುರಿಸಿದ್ದು”
ಎಂದವನೆ ತನ್ನ ಎರಡೂ ಕೈಗಳನ್ನ
ಪ್ಯಾಂಟಿನೆಡಬಲದ ಎರಡೂ ಜೇಬಲ್ಲಿಟ್ಟು
ತಾಳ ಬಡಿಯುತ್ತ ಎರಡೂ ಕಾಲಿನಿಂದ
ಪ್ರಾಸಶೈಲಿಯಲೆ ಆತ್ಮಾಭಿನಯ ನೀಡಿದ.
ಹುಬ್ಬ ಕೊಂಕಿಸಿ
ಮುಖಕ್ಕೆ ಕೊಂಚ ನಗು ತರಿಸಿ
‘ಕೆಲಬಲದ ಮನ್ನೆಯರ’ ಗತ್ತಿಂದ ನೋಡಿದ.

ಇದ್ದಕ್ಕಿದ್ದಂತೆ ಎದ್ದಿತೊ ಭಾರಿ ಉದ್ಘೋಷ,
ಪತಿಪಾದ ಸೇವೆಯಲ್ಲಿ ಮೈಯ ಸಲ್ಲಿಸಲೆಂದು
ತವಕದಲ್ಲಿ ಕಾದ ಸತಿಭಾವದಾವೇಶ.
ಉಬ್ಬಿ ಚಿನಕುರುಳಿಗಳು ಬಿರುದ ಸಿಡಿಸಿದರಯ್ಯ ಮೆಚ್ಚುಗಣ್ಣಾಗಿ
ನಡೆದ ವಿಷವದನ ಹೊಗಳಲೂ ಬರದ ದಡ್ದರನ್ನು
ಕಾವ್ಯಶೈಲಿಯಲಿ ಚುಚ್ಚುತ್ತ
ಚಿನಕುರುಳಿಗಳ ತಲೆಯ ಸವರುತ್ತ!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...